Pages

Ads 468x60px

Saturday 19 January 2019

ಜೀರಕ್ಕಿ ಸಾರು





     
         
                           


“ ಬೆಳಿಗ್ಗೆ ಏಳುವಾಗಲೇ ಸೊಂಟ ಹಿಡ್ಕೊಂಡ್ಬಿಟ್ಟಿದೆ, ನಿನ್ನೆ ತಿಂದ ಬಟಾಟೆಯ ಪರೋಟ ಅರಗಲಿಲ್ಲ, ಚಳಿಯಲ್ವೇ... ಜೀರಿಗೆ ಕಷಾಯ ಕುಡಿದ್ರೆ ಸರಿಹೋದೀತು. “ ಎಂದರು ಗೌರತ್ತೆ, “ ಬಗ್ಗಲಿಕ್ಕೂ ಆಗುವುದಿಲ್ಲ, ನೆಟ್ಟಗೆ ನಿಲ್ಲಲಿಕ್ಕೂ ಆಗುವುದಿಲ್ಲ ನೋಡು.. “
“ ಈಗ ಸ್ವಲ್ಪ ಜೀರಿಗೆ ಬಾಯಿಗೆ ಹಾಕ್ಕೊಳ್ಳಿ. “
“ ಅದು ಸರಿಯೇ, ನನ್ನ ಸೆಟ್ ಹಲ್ಲಿಗೆ ಜೀರಕ್ಕಿ ಅಗಿಯಲೂ ಕಷ್ಟ. “
“ ಹಾಗಿದ್ರೆ ಕಷಾಯ ಈಗ್ಲೇ ಮಾಡೋಣ.. “
“ ತುಪ್ಪದಲ್ಲಿ ಮೂರು ಚಮಚಾ ಜೀರಿಗೆ ಪರಿಮಳ ಬರುವಷ್ಟು ಹುರಿದು, ಹುಡಿ ಮಾಡಿ, ಮೂರು ಲೋಟ ನೀರು ಒಲೆ ಮೇಲೆ ಇಡು. ಅದಕ್ಕೆ ಒಂದು ತುಂಡು ಬೆಲ್ಲ ಹಾಕಿ, ಜೀರಿಗೆ ಹುಡಿಯನ್ನೂ ಹಾಕಿ ಕುದಿಸು. ನೀರು ಚೆನ್ನಾಗಿ ಬತ್ತಬೇಕು. “
 “ ಹೌದ, ಎಷ್ಟೂ ? “
“ ಮುಕ್ಕಾಲು ಲೋಟ ಆಗುವಷ್ಟು.. “
“ ಇದಕ್ಕೆ ಕೊತ್ತಂಬರಿ ಹಾಕುವುದಕ್ಕಿಲ್ಲವೇ.. “
“ ಕೊತ್ತಂಬರಿ ಬೇಡ, ಅದು ಶೀತ. “
“ ಓ, ಹಾಗೆ ಸಂಗತಿ ಅನ್ನಿ.. “
“ ನೆಗ್ಗಿಲ ಮುಳ್ಳು ಹಾಕ್ಬೋದಿತ್ತು, ಅದು ಉಂಟೋ ನಿನ್ನ ಭಂಡಾರದಲ್ಲಿ ? “
“ ಇಲ್ಲ. “ ಅನ್ನದೆ ವಿಧಿಯಿಲ್ಲ.
ಅಂತೂ ಗೌರತ್ತೆಯ ನಿರ್ದೇಶಾನುಸಾರ ಕಷಾಯ ತಯಾರಾಯ್ತು.
ಕುದಿದು ಆರಿದ ಜೀರಿಗೆ ಕಷಾಯಕ್ಕೆ ಹಿತವಾಗುವಷ್ಟು ಹಾಲು ಎರೆದು, ಪುನಃ ಕುದಿಸಿ ನೆಲ್ಲಿಕಾಯಿ ಗಾತ್ರದ ಬೆಣ್ಣೆಮುದ್ದೆಯನ್ನು ಕಷಾಯದೊಳಗೆ ಇಳಿಸಿ ಕುಡಿಯುವ ಸಂಪ್ರದಾಯವನ್ನು ಪಾಲಿಸಿ ಫಿಲ್ಟರ್ ಕಾಫಿಯ ಬದಲು ಈ ಔಷಧೀಯ ಜೀರಿಗೆ ಕಾಫಿ ಕುಡಿದು ಸಮಾಧಾನ ಪಟ್ಟರು ಗೌರತ್ತೆ.

“ ನಮ್ಮ ಆಯುರ್ವೇದ ಡಾಕ್ಟ್ರ ಮದ್ದೂ ಬರಲಿ.. “
“ ತರಿಸೋಣ.. “ ಡಾಕ್ಟರು ನಮ್ಮ ಪಕ್ಕದ ಮನೆಯಲ್ಲೇ ಇರೂವಾಗ ಚಿಂತೆಯೇನೂ ಇಲ್ಲ.
ಜೀರಿಗೆ ಕಷಾಯದ ಘಮಲು ನನ್ನ ತಲೆಗೂ ಏರಿತು, ಜೀರಿಗೆ ಸಾರು ಮಾಡಿದ್ರೆ ಹೇಗೆ? ಚಿಂತನೆ ಮೂಡಿದ್ದೇ ತಡ, ಕಾರ್ಯರೂಪಕ್ಕೂ ಇಳಿಯಿತು.

ಮೂರು ಚಮಚ ಜೀರಿಗೆ, ಚಮಚಾ ಅಂದ್ರೆ ಪುಟ್ಟದು ಆಗಿರಬೇಕು. ನಿತ್ಯೋಪಯೋಗಿ ಮಸಾಲಾ ಸಾಮಗ್ರಿಗಳಲ್ಲಿ ಜೀರಿಗೆಯು ದುಬಾರಿ ಕ್ರಯದ್ದು ಎಂಬುದೂ ತಿಳಿದಿರಲಿ.
2 - 3 ಒಣಮೆಣಸು
ಉದ್ದಿನ ಕಾಳಿನಷ್ಟು ಇಂಗು
ಒಂದು ಎಸಳು ಕರಿಬೇವು
ತುಸು ಎಣ್ಣೆ ಯಾ ತುಪ್ಪದ ಪಸೆಯಲ್ಲಿ ಪರಿಮಳ ಬರುವಂತೆ ಹುರಿದು, ಕರಿಬೇವು ಹಾಕುವಲ್ಲಿಗೆ ಹುರಿದಾಯ್ತು.

ಎರಡು ಟೊಮ್ಯಾಟೋ, ಚೆನ್ನಾಗಿ ತೊಳೆದು ಬೇಯಿಸಿ, ಕತ್ತರಿಸುವುದೇನೂ ಬೇಡ.
ಬೆಂದ ಟೊಮ್ಯಾಟೋ ಹಾಗೂ ಮಸಾಲಾ ಸಾಮಗ್ರಿಗಳನ್ನು ಮಿಕ್ಸಿಯಲ್ಲಿ ಅರೆಯಿರಿ, ನೀರು ಹಾಕದಿರಿ, ಟೊಮ್ಯಾಟೋದಲ್ಲಿ ಇರುವ ನೀರು ಸಾಕು.
ತಪಲೆಗೆ ವರ್ಗಾಯಿಸಿ, ಸಾರು ಎಂದು ಹೆಸರು ನೀಡಲು ಅಗತ್ಯದ ನೀರು ಕೂಡಿಸಿ,
ರುಚಿಕರವಾಗಲು ಬೇಕಾದಂತಹ ಉಪ್ಪು, ಬೆಲ್ಲ ಹಾಕಿ,
ಕುದಿಸಿ, ಗಳಗಳ ಕುದಿದಾಗ ಒಗ್ಗರಣೆ ಕೊಡಿ, ಬೇಡವೇ.. ಎರಡು ಚಮಚ ತುಪ್ಪ ಎರೆದರೂ ಸಾಕು. ಸೂಪ್ ತರಹ ಕುಡಿಯಿರಿ.
ಎರಡು ಉದ್ದಿನ ಹಪ್ಪಳ ಹುರಿದು ಅನ್ನದೊಂದಿಗೆ ಕಲಸಿ ತಿನ್ನಿ.

ಭಾರತದ ಸಾಂಬಾರ ಪದಾರ್ಥವಾದ ಜೀರ್ಣಕ್ರಿಯೆಗೆ ನೆರವಾಗುವಂತಹ ಜೀರಿಗೆಯು ಸಂಸ್ಕೃತದಲ್ಲಿ ಜೀರಕ ಎಂದೆನಿಸಿದೆ. ಪಚನಕ್ರಿಯೆ ಸರಿಯಾಗದಿದ್ದಾಗ ಹೊಟ್ಟೆ ಉಬ್ಬರಿಸುವಿಕೆ, ವಾಯುಪ್ರಕೋಪದಂತಹ ತೊಂದರೆ ಮೊದಲಾಗಿ ಕಾಣಿಸಿಕೊಂಡಾಗ ಜೀರಿಗೆಯು ಉತ್ತಮ ಮನೆಮದ್ದು.

ಪೊಂಗಲ್, ತುಪ್ಪದ ಅನ್ನ ( ಘೀರೈಸ್ ), ಉಪ್ಪಿನಕಾಯಿ, ಸಾಂಬಾರ್, ಧಾಲ್ ಇತ್ಯಾದಿಯಾಗಿ ಯಾವುದೇ ಅಡುಗೆಯಿರಲಿ, ಜೀರಿಗೆ ಇರಲೇಬೇಕು.

ಅತಿ ಹೆಚ್ಚು ಕಬ್ಬಿಣಾಂಶದಿಂದ ಕೂಡಿದ ಜೀರಿಗೆಯು ದೇಹದ ಮೆಟಾಬಾಲಿಸಂ ಅನ್ನು ಕಾಯ್ದುಕೊಳ್ಳುವಲ್ಲಿ ಶಕ್ತ. ಮಹಿಳೆಯರಲ್ಲಿ ಋತುಚಕ್ರ ಏರುಪೇರಾಗದಂತೆಯೂ ನೋಡಿಕೊಳ್ಳುವುದು, ರಕ್ತಹೀನತೆಯ ತೊಂದರೆಯೂ ಬಾರದು.

ಉಸಿರಾಟದ ಸೋಂಕು, ಅಸ್ತಮಾ ರೋಗಿಗಳೂ ಜೀರಿಗೆಯ ನೀರನ್ನು ಕುಡಿಯುತ್ತ ಬಂದಲ್ಲಿ ರೋಗಬಾಧೆಯಿಂದ ಮುಕ್ತಿ.

ಇನ್ನೇನು ಬೇಸಿಗೆ ಬರಲಿದೆ, ಬೆವರುಸಾಲೆ, ತುರಿಕಜ್ಜಿಗಳ ಬಳಲಿಕೆ ಬಾರದಂತೆ ಜೀರಾಪಾನಿ ಕುಡಿಯಿರಿ.

ವಿಟಮಿನ್ ಇ ಅನ್ನಾಂಗ ಜೀರಿಗೆಯಲ್ಲಿ ಹೇರಳವಾಗಿದೆ. ಇದು ನಿಮ್ಮ ಚರ್ಮ ಕಾಂತಿಗೆ ಆರೋಗ್ಯದ ಹೊಳಪು ನೀಡುವ ಶಕ್ತಿ. 3 : 1 ರ ಪ್ರಮಾಣದಲ್ಲಿ ಅರಸಿನ ಹುಡಿ, ಜೀರಿಗೆ ಹುಡಿ ಅಳೆದು, ಜೇನು ಯಾ ಹಾಲಿನ ಕೆನೆಯಲ್ಲಿ ಕಲಸಿ ಮುಖಕ್ಕೆ ಸವರಿ, ಗಂಟೆ ಬಿಟ್ಟು ತೊಳೆಯುತ್ತ ಬಂದಲ್ಲಿ ಮೇಕಪ್ ಇಲ್ಲದೇ ಕಂಗೊಳಿಸುವಿರಿ. ಚರ್ಮದ ವಾರ್ಧಕ್ಯವನ್ನೂ ತಡೆಯಿರಿ. ಚರ್ಮ ಸುಕ್ಕುಗಟ್ಟದು, ಕಣ್ಣ ಸುತ್ತ ಕಪ್ಪು ಕಲೆಯೂ ಕಾಣಿಸದು.

ಅಂಗಾಲುಗಳ ಉರಿಯೇ, ಜೀರಿಗೆಯೇ ಔಷಧಿ. ಮಾಡಬೇಕಾಗಿರುವುದೇನು?
ನಾಲ್ಕು ಲೀಟರ್ ನೀರನ್ನು ಒಂದು ಟೀ ಚಮಚ ಜೀರಿಗೆ ಹಾಕಿ ಕುದಿಸಿ.
ಹದವಾಗಿ ಆರಿದ ನಂತರ ಬೇಕೆನಿಸಿದಾಗ ಜೀರಿಗೆ ನೀರನ್ನು ಕುಡಿಯಿರಿ.

ಕೂದಲು ಕಾಂತಿಯಿಂದ ಕೂಡಿರಬೇಕೇ,
ಉದುರುವಿಕೆಯನ್ನು ತಡೆಗಟ್ಟಬೇಕೇ,
ಬೊಕ್ಕತಲೆ ನಮ್ಮದಲ್ಲವೆಂದಾಗಬೇಕೇ,
ಜೀರಾಪಾನಿ ಕುಡಿಯುತ್ತಲಿರಬೇಕು.

ಡಯಾಬಿಟೀಸ್ ರೋಗಿಗಳಿಗೂ ಜೀರಿಗೆನೀರು ಉತ್ತಮ, ರಕ್ತಶುದ್ಧಿಕಾರಕ.

ಜೀರಿಗೆಯಲ್ಲಿರುವ ಎನ್ ಜೈಮ್ ಜೀರ್ಣಕ್ರಿಯೆಗೆ ಪ್ರಚೋದಕ.

ಅತಿಯಾದ ತೂಕ ಹೊಂದಿದ್ದೀರಾ, ಜೀರಾಪಾನಿ ದೇಹತೂಕ ಇಳಿಸುವ ಸಾಮರ್ಥ್ಯ ಹೊಂದಿದೆ.

ಗುಣಮಟ್ಟದ ಜೀರಿಗೆಯನ್ನು ಖರೀದಿಸಿ, ಹುಡಿಯನ್ನು ಕೊಳ್ಳಬೇಡಿ, ಹೆಚ್ಚು ಸಮಯ ಇಟ್ಟುಕೊಳ್ಳಲು ಆಗದು, ಸುವಾಸನೆಯೂ ಹೋದೀತು, ಕಲಬೆರಕೆಯೂ ಇದ್ದೀತು.

ಜೀರಿಗೆಯ ಗುಣಧರ್ಮಗಳನ್ನು ಅರಿತು, ಅಡುಗೆಯಲ್ಲಿ ಹಿತವಾಗುವಂತೆ ಬಳಸಿ, ಆರೋಗ್ಯವಂತರಾಗಿ ಬಾಳೋಣ.


             

             
               

Tuesday 8 January 2019

ಅವಲಕ್ಕಿ ಪೊಂಗಲ್





ಮಕರ ಸಂಕ್ರಾಂತಿ ಬಂದಿದೆ, ಸಿಹಿತಿನಿಸು ಸವಿಯದಿದ್ದರೆ ಹೇಗೆ?
ಬೇಗನೇ ಮಾಡಿಕೊಳ್ಳಬಹುದಾದ ಅವಲಕ್ಕಿ ಪೊಂಗಲ್ ನಮ್ಮ ಆಯ್ಕೆ. ಪೊಂಗಲ್ ಎಂದೊಡನೆ ಹೆಸ್ರುಬೇಳೆ, ಅಕ್ಕಿ, ತೆಂಗಿನತುರಿ, ಬೆಲ್ಲ, ತುಪ್ಪ ಇತ್ಯಾದಿ ಲಿಸ್ಟ್ ಬಂತೇ, ಅವಲಕ್ಕಿ ಹೇಗೆ ಹಾಗೂ ಎಲ್ಲಿ ಹಾಕೋಣ? ಚಿಂತಿಸದಿರಿ, ನಮ್ಮದು ಸರಳವಾಗಿ ಅವಲಕ್ಕಿ ಹಾಗೂ ಅಕ್ಕಿಯಿಂದ ಮಾಡಿದ ಪೊಂಗಲ್.
ಅಕ್ಕಿಯಿಂದ ಗಂಜಿ ಕೂಡಿದ ಅನ್ನ ಮಾಡಿಕೊಳ್ಳೋಣ, ಅಂದಾಜು ಒಂದು ಸೌಟು ಅನ್ನ ಆದರೆ ಸಾಕು. ಎಂದಿನಂತೆ ಮನೆಯೊಳಗೆ ನಾವಿಬ್ಬರೇ, ಬಂದರೆ ಚೆನ್ನಪ್ಪನೂ ಇದ್ದಾನೆ ಅನ್ನಿ.

ಗಂಜಿ ಸಹಿತವಾದ ಅನ್ನ ಮಾಡುವುದು ಹೇಗೆ?
ಮಾಮೂಲಿ ಅನ್ನ ಕುಕ್ಕರ್ ನಲ್ಲಿ ಮಾಡ್ತೀರಾ, ಒಂದು ಲೋಟ ಅಕ್ಕಿಗೆ ಮೂರು ಲೋಟ ನೀರು. ಮೂರು ಸೀಟಿ ಕೂಗಿಸಿದ್ರಾಯ್ತು. ನಾವು ಈಗ ಐದು ಲೋಟ ನೀರು ಹಾಕಿದಾಗ ಗಂಜಿಭರಿತ ಅನ್ನ ದೊರೆಯಿತು.
ನಮಗೆ ಬೇಕಾಗಿರುವುದು ಒಂದೇ ಸೌಟು ಅನ್ನ. ಉಳಿದ ಅನ್ನದ ಗಂಜಿನೀರು ಬಸಿದು ಊಟಕ್ಕೆ ಬಳಸಿಕೊಂಡರಾಯಿತು.

2 ಲೋಟ ಪೇಪರ್ ಅವಲಕ್ಕಿ.
ಒಂದು ಅಚ್ಚು ಬೆಲ್ಲ.
ಒಂದು ಹಿಡಿ ಹಸಿ ತೆಂಗಿನ ತುರಿ.

ಕುಕ್ಕರಿನಲ್ಲಿರುವ ಬಿಸಿ ಗಂಜಿ ಅನ್ನಕ್ಕೆ ಒಂದು ಅಚ್ಚು ಬೆಲ್ಲ ಹಾಕಿ ಕರಗಿಸಿ, ನೀರು ಹಾಕದಿರಿ. ಬೆಲ್ಲ ಕರಗಿ ಪಾಕವಾಗುವ ಹಂತ ಬಂದಾಗ, ಎರಡು ಚಮಚ ತುಪ್ಪ ಎರೆಯಿರಿ, ತೆಂಗಿನ ತುರಿ ಬೀಳಲಿ.

ಗೇರುಬೀಜ ತುಪ್ಪದಲ್ಲಿ ಹುರಿದಿರಬೇಕು, ಒಣದ್ರಾಕ್ಷಿಯೂ ಇರಬೇಕು. ಪುಡಿ ಮಾಡಿದ ಏಲಕ್ಕಿಯೂ ಇರಲೇಬೇಕು.

ತುಪ್ಪ ಎರೆದಾಯ್ತಲ್ಲ. ಪೇಪರ್ ಅವಲಕ್ಕಿಯನ್ನು ಹಾಕಿ ಸೌಟಾಡಿಸಿ, ಅವಲಕ್ಕಿಯನ್ನು ನೀರೆರದು ತೊಳೆಯುವ ಸಾಹಸವೇನೂ ಇಲ್ಲಿ ಬೇಡ. ತೆಳ್ಳಗಿನ ಅವಲಕ್ಕಿಯು ಪಿಚಿಪಿಚಿ ಮುದ್ದೆಯಂತಾದೀತು.

ಆಯ್ತು, ಅವಲಕ್ಕಿ ಹಂಗೇನೇ ಹಾಕಿದ್ದಾಯ್ತು, ಈವಾಗ ಏಲಕ್ಕಿ, ದ್ರಾಕ್ಷಿ, ಗೋಡಂಬಿಗಳನ್ನು ಉದುರಿಸಿ.

ಆಗಿಯೇ ಹೋಯ್ತು, ನಮ್ಮ ಅವಲಕ್ಕಿ ಪೊಂಗಲ್. ರುಚಿರುಚಿಯಾಗಿ ತಿನ್ನಲು ಬೆಲ್ಲ ಸಾಕಷ್ಟು ಹಾಕಲೇಬೇಕು.