"ಮಳೆ ಬರುವಾಗ ಬಿಸಿ ಬಿಸಿಯಾಗಿ ಹಲಸಿನ ಹಣ್ಣಿನ ಪಾಯಸ ಚಿನ್ನಾಗಿರುತ್ತೆ.."
ಹಲಸಿನ ಹಣ್ಣು ಹಾಳಾಗದಂತೆ ಬೆರಟಿ ಕಾಯಿಸುತ್ತಾ ಇದ್ದಾಗ ಗೌರತ್ತೆಯ ನುಡಿಮುತ್ತುಗಳು ಈ ತೆರನಾಗಿ ಬಂದವು.
ಸುಮ್ಮನೇ ಕಾಯಿಸಿಟ್ಟು ಮಾಡೂದಾದ್ರೂ ಏನು? ನಾಳೆ ಇನ್ನೊಂದು ಹಲಸಿನ ಹಣ್ಣು ಬರುತ್ತೆ ಅಂದ್ಬಿಟ್ಟು ಪಾಯಸ ಮಾಡಿ ಕುಡಿದೆವೂ ಅನ್ನಿ.
ಕಾಯಿಸಿಟ್ಟ ಎಲ್ಲವನ್ನೂ ಪಾಯಸ ಮಾಡಿ ಕುಡಿಯಲು ನಮ್ಮಿಂದಾಗದು, ಒಂದು ಲೋಟದಷ್ಟು ಕಾಯಿಸಿಟ್ಟ ಹಲಸಿನಹಣ್ಣು ಫ್ರಿಜ್ ಒಳಗೆ ಕುಳಿತಿತು. ಇದಕ್ಕೆ ಬೆಲ್ಲವನ್ನೂ ಹಾಕಿಲ್ಲ, ತುಪ್ಪವೂ ಬಿದ್ದಿಲ್ಲ.
ಹೊಸದಾಗಿ ಹಲಸಿನಕಾಯಿಗಳು ತೋಟದಿಂದ ಬಂದಿವೆ.
"ಫ್ರಿಜ್ ಒಳಗಿರೂದು ಹೊರ ಬರಲಿ.." ಎಂದರು ಗೌರತ್ತೆ.
" ಏನು ಮಾಡೂದಂತೀರಾ.. ?
" ಪಾಯಸ ಬೇಡ, ಹಣ್ಣಿನ ಸಾರು ಆದೀತು.."
ತಂಪು ಪೆಟ್ಟಿಗೆಯಿಂದ ಹಲಸಿನಹಣ್ಣಿನ ಮುದ್ದೆ ಹೊರ ನೆಗೆಯಿತು.
ತಪಲೆಗೆ ಇಳಿಯಿತು.
ಒಂದು ಲೋಟ ನೀರಿನೊಂದಿಗೆ ಬೆರೆಯಿತು.
ರುಚಿಗೆ ಉಪ್ಪು ಬಿದ್ದಿತು.
ಒಲೆಯಲ್ಲಿ ಕುದಿಯಿತು.
ತುಪ್ಪದಲ್ಲಿ ಕರಿಬೇವಿನ ಒಗ್ಗರಣೆ ಬಿದ್ದಿತು.
ಭೋಜನಕಾಲೇ.. ಪಾಯಸದಂತೆ ಹಲಸಿನ ಹಣ್ಣಿನ ಗೊಜ್ಜು ಸವಿಯುವ ಯೋಗ ದೊರೆಯಿತು.