ಹಲವು ಕುಡಿಗಳ ತಂಬುಳಿಯೂಟದಿಂದ ದೇಹಾರೋಗ್ಯ ಹೆಚ್ಚಿಸಿಕೊಳ್ಳಿ ಎಂಬ ಸಲಹೆ ಸಾರ್ವತ್ರಿಕವಾಗಿ ಕೇಳಿ ಬರುತ್ತಿದೆ. ಮಳೆಗಾಲದಲ್ಲಿ ದೊರೆಯುವ ಚಿಗುರೆಲೆಗಳನ್ನು ಹುರಿದು ಯಾ ಬೇಯಿಸಿ, ತೆಂಗಿನೊಂದಿಗೆ ಅರೆದು, ಜೀರಿಗೆ, ಕಾಳುಮೆಣಸುಕೂಡಿಸಿ, ಮಜ್ಜಿಗೆ ಎರೆದು, ಒಗ್ಗರಣೆ ಕೊಡದಿದ್ದರೂ ಸಿದ್ಧವಾಗುವಂತಹ ವ್ಯಂಜನ ತಂಬುಳಿ.
ನಮ್ಮ ಮನೆಯಂಗಳ ಈ ದಿನ ಬಿಸಿಲು ಕಂಡಿತು. ಹೊರಗಿಣುಕಿದರೆ ಹಸಿರೋ ಹಸಿರು. ಹಸಿರು ಕಾನನದೊಳಗೆ ದೊರೆಯುವ ಎಲ್ಲಸೊಪ್ಪುಗಳೂ ವನಸ್ಪತಿ ಸಸ್ಯಗಳೇ ಆಗಿವೆ. ನಮಗೆ ಅದರ ಹಿಂದು ಮುಂದು ತಿಳಿದಿರುವುದಿಲ್ಲ ಅಷ್ಟೇ.
ನೆಲನೆಲ್ಲಿಯ ಕುಡಿಗಳನ್ನು ಚಿವುಟಿ ತಂದಿದ್ದಾಯ್ತು. ಇದು ತಂಬುಳಿಯಾಗಿ ರೂಪಾಂತರ ಹೊಂದಲಿದೆ.
" ತಂಬುಳಿ ಯಾಕೆ ಸುಮ್ಮನೆ, ಮಜ್ಜಿಗೆ ಕುಡಿದ್ರೆ ಶೀತ.." ಗೌರತ್ತೆಯ ನುಡಿ. ಹಾಗೇ ಒಂದು ಚಟ್ಣಿ ಮಾಡು, ಊಟಕ್ಕಾಗುತ್ತೆ. " ಒಳ್ಳೆಯ ಸಲಹೆ ಸಿಕ್ಕಿತು.
ಚಟ್ಣಿಗಾಗಿ ತೋಟಕ್ಕಿಳಿದು ಗಾಂಧಾರಿ ಮೆಣಸನ್ನು ಹುಡುಕಿದಾಗ ಚೆನ್ನಾಗಿ ಬಲಿತ ಮೆಣಸುಗಳು ಸಿಕ್ಕಿದವು, ನಾಲ್ಕಾರು ದಿನಗಳಿಗೆ ಸಾಕಷ್ಟು ಕುಯ್ದು, ಎಳೆಯ ಕರಿಬೇವಿನೆಸಳುಗಳೂ..
ಒಂದು ಹಿಡಿ ಕಾಯಿತುರಿ
ಒಂದೆರಡು ಗಾಂಧಾರಿ ಮೆಣಸು
ಹುಣಸೆ ಬೀಜದ ಗಾತ್ರದ ಹುಳಿ
ರುಚಿಗೆ ಉಪ್ಪು
ಹ್ಞಾ.. ನೆಲನೆಲ್ಲಿಯನ್ನು ತೊಳೆದು ಹೆಚ್ಚಿಕೊಂಡು ತುಸು ನೀರೆರೆದು ಬೇಯಿಸುವುದು.
ಎಲ್ಲವನ್ನೂ ಹೊಂದಿಸಿಕೊಂಡು ಅರೆಯುವುದು.
ನೆಲನಲ್ಲಿ ಬೇಯಿಸಿದ ನೀರನ್ನೇ ಅರೆಯುವಾಗ ಹಾಕುವುದು, ಬೇರೆ ನೀರು ಬೇಕಿಲ್ಲ.
ಪುಟ್ಟದೊಂದು ಒಗ್ಗರಣೆ ಇರಲಿ.
ವ್ಹಾ.. ನೆಲ್ಲಿಕಾಯಿಯದೇ ರುಚಿ ಕಣ್ರೀ.. ನೆಲನೆಲ್ಲಿ ಇರುವಾಗ ಮಳೆಗಾಲದ ಅಗತ್ಯಕ್ಕಾಗಿ ನೆಲ್ಲಿಕಾಯಿ ಒಣಗಿಸಿ ಇಡೂದು ಸುಮ್ಮನೆ ಎಂದು ಈಗ ತಿಳಿಯಿತು.
ಊಟಕ್ಕೊಂದು ಚಟ್ಣಿ ಆದ್ರೆ ಸಾಕೇ..
ಲಿಂಬೆಯ ಸಾರು ಮಾಡೋಣ.
2 ಲೋಟ ನೀರು, ರುಚಿಗೆ ಉಪ್ಪು ಬೆಲ್ಲ
ಜಜ್ಜಿದ ಶುಂಠಿ ಹಾಗೂ ಹಸಿಮೆಣಸು
ಕುದಿಸಿ.
ತುಪ್ಪದ ಒಗ್ಗರಣೆ ಹಾಕಿ ಸ್ಟವ್ ನಂದಿಸಿ, ಹೋಳು ಮಾಡಿಟ್ಟ ಲಿಂಬೆಯ ರಸ ಹಿಂಡಿರಿ. ಲಿಂಬೆಯ ಹೋಳುಗಳೂ ಸಾರಿನಲ್ಲಿ ತೇಲಲಿ.
ನಮ್ಮ ತಿಳಿಸಾರು ಆಯ್ತು.
ಇನ್ನೂ ಬೇಕಿದ್ರೆ ಹಲಸಿನ ಹಪ್ಪಳ, ಸೊಳೆ ಉಂಡ್ಲುಕ, ಉಪ್ಪಿನಕಾಯಿ ಮೊಸರು...
ಜಾಂಡೀಸ್, ಚರ್ಮರೋಗ, ಗಾಯ, ಕಜ್ಜಿ, ಹುಳಬಾಧೆಗಳಿಗೆ ನೆಲನೆಲ್ಲಿ ಪರಮೌಷಧ.
ಅತಿಸಾರ, ಭೇದಿಯಾಗುತ್ತಿದ್ದಲ್ಲಿ ಹಸಿ ನೆಲನೆಲ್ಲಿಯನ್ನೇ ಅಗಿದು ತಿನ್ನುವುದು, ಶೀಘ್ರ ಉಪಶಮನ.
ಗಾಯಗಳಿಗೆ ಸಮೂಲ ಸಸ್ಯವನ್ನು ಅರೆದು ಲೇಪಿಸುವುದು.
ಕೆಮ್ಮು ದಮ್ಮು ಅಸ್ತಮಾ ವ್ಯಾಧಿಗೂ ನೆಲನೆಲ್ಲಿ ಔಷಧ.
ಅಜೀರ್ಣವಾದರೆ ಕಷಾಯ ಗುಣಕಾರಿ.
ಸಾಂಕ್ರಾಮಿಕ ರೋಗ ಹಾವಳಿ, ಕಾಲರಾ, ಡೆಂಗ್ಯೂ, ಚಿಕುನ್ ಗುನ್ಯ ಇದ್ದರೆ ನೆಲನೆಲ್ಲಿಯ ರಸ ಸೇವನೆಯಿಂದ ರೋಗನಿರೋಧಕ ಶಕ್ತಿಹೆಚ್ಚಳ.
ನೆಲನೆಲ್ಲಿಯ ಕಷಾಯ ಹೇಗೆ?
ನೆಲನೆಲ್ಲಿಯ ಗಿಡಗಳನ್ನು ಬೇರು ಸಹಿತ ಕಿತ್ತು ತೊಳೆದು ಕತ್ತರಿಸಿ ಲೋಟ ಭರ್ತಿ ಆಗಲಿ.
3 ಲೋಟ ನೀರು ಕುದಿಯಲು ಇಡುವುದು.
ನೆಲನೆಲ್ಲಿ ಹಾಕಿ ಕುದಿಸಿ,
ಜೀರಿಗೆ ಹಾಕಬೇಕು, ಎಣಿಸಿ ಹಾಕಿ, ಐದು, ಏಳು, ಒಂಭತ್ತು ಈ ಥರ.. ಒಟ್ರಾಸಿ ಕೈಗೆ ಬಂದಷ್ಟು ಹಾಕುವುದಕ್ಕಿಲ್ಲ.
ರುಚಿಗೆ ಕಲ್ಲುಸಕ್ಕರೆ
3 ಲೋಟದ ಪ್ರಮಾಣ ಒಂದು ಲೋಟದಷ್ಟು ಆದಾಗ ಸ್ಟವ್ ಆರಿಸಿ. ಬೇಗನೇ ಆಗಲಿ ಎಂದು ಗಳಗಳ ಕುದಿಸಬಾರದು, ಮಂದಾಗ್ನಿಯಲ್ಲಿ ಬತ್ತಿಸಬೇಕು.
ಆರಿದ ನಂತರ ಶೋಧಿಸಿ ಕುಡಿಯುವುದು.
ಯಾವುದೇ ವನಸ್ಪತಿ ಕಷಾಯ ಮಾಡುವುದಿದ್ದರೂ ವಿಧಾನ ಒಂದೇ.
ಸಂಸ್ಕೃತದಲ್ಲಿ ಭೂಮ್ಯಾಮಲಕಿ ಎಂದು ಹೆಸರಿಸಲ್ಪಟ್ಟಿದೆ ಈ ನೆಲನೆಲ್ಲಿ.
ಸಸ್ಯವಿಜ್ಞಾನವು Phyllanthus niruri ಎಂದಿದೆ.
ಆಂಗ್ಲ ಭಾಷಾಶಾಸ್ತ್ರ seed-under-leaf ಎಂದು ಅರ್ಥಪೂರ್ಣ ನಾಮಕರಣ ನೀಡಿದೆ.
ಚ್ಯವನಪ್ರಾಶ ಲೇಹ್ಯ ಹಾಗೂ ಇನ್ನೂ ಹಲವು ಆಯುರ್ವೇದಿಕ್ ಉತ್ಪನ್ನಗಳು ನೆಲನೆಲ್ಲಿಯನ್ನು ಒಳಗೊಂಡಿದ್ದಾಗಿರುತ್ತವೆ.
ಕೆಮ್ಮು ಹಾಗೂ ದಮ್ಮು ಚಿಕಿತ್ಸೆಯಲ್ಲಿ ನೆಲನೆಲ್ಲಿಯ ರಸವನ್ನು ಕಲ್ಲುಸಕ್ಕರೆಯೊಂದಿಗೆ ಸೇವಿಸಬೇಕು.
ನೆಲನೆಲ್ಲಿಯ ಕಷಾಯ ರಕ್ತಶುದ್ಧಿಕಾರಕ, ಚರ್ಮವ್ಯಾಧಿಗೂ ಗುಣಕಾರಿ.
ಸ್ತ್ರೀಯರಿಗೆ ಮಾಸಿಕ ರಕ್ತಸ್ರಾವ ಅಧಿಕವಾಗಿದ್ದಲ್ಲಿ ಚಟ್ನಿ ಯಾ ಕಷಾಯ ಸೇವಿಸುವುದು ಪರಿಣಾಮಕಾರಿ.
ಕೆಂಪು ರಕ್ತಕಣಗಳ ವೃದ್ಧಿ, ಅನೀಮಿಯಾ ದೂರ.
ರಕ್ತಸ್ರಾವ ನಿರೋಧಕ.
ಚರ್ಮರೋಗ ನಿರೋಧಕ, ದಾಹಶಾಮಕ, ವಿಷಹರ,
ಡಯಾಬಿಟೀಸ್ ರೋಗಿಗಳಿಗೂ ಉತ್ತಮ.
ಕಿಡ್ನಿ ಕಲ್ಲುಗಳನ್ನು ಕರಗಿಸುವ ಸಾಮರ್ಥ್ಯ, ಲಿವರ್ ಹಾಗೂ ಗಾಲ್ ಬ್ಲಾಡರ್ ಕಾರ್ಯಕ್ಷಮತೆ ಸುದೃಢವಾಗುವುದು.
ತಲೆಗೆ ಹಚ್ಚುವ ಎಣ್ಣೆಗೂ ನೆಲನೆಲ್ಲಿ ಅಗತ್ಯದ ಕಚ್ಚಾವಸ್ತು.
ಬೃಂಗರಾಜ ತೈಲದಲ್ಲಿ ನೆಲನೆಲ್ಲಿ ಇರಲೇ ಬೇಕು.
ಪುಟ್ಟದೊಂದು ಸಸ್ಯ, ಪ್ರಕೃತಿಯಲ್ಲಿ ಇದೊಂದು ಕಳೆ ಸಸ್ಯ.
ಪ್ರಕೃತಿ ನಮಗೆ ಎಲ್ಲವನ್ನೂ ನೀಡುತ್ತ ಬಂದಿದೆ, ಸ್ವೀಕರಿಸಿ ಮುನ್ನಡೆಯೋಣ.