ಸಂಕ್ರಾಂತಿ ಬಂತೆಂದರೆ ಹಬ್ಬದಡುಗೆ, ಪಾಯಸವೊಂದು ಇರಲೇಬೇಕು.
ಹಿರಣ್ಯದ ದುರ್ಗಾಪರಮೇಶ್ವರಿ ದೇಗುಲದಲ್ಲಿ ಮುಂಜಾನೆಯೇ ಪೂಜಾದಿಗಳು ಆರಂಭ, ನನ್ನದು ಮದ್ಯಾಹ್ನದ ಅಡುಗೆಯ ಸುವ್ಯವಸ್ಥೆಯ ಕಾರುಭಾರು.
ನಾಲ್ಕಾರು ಮಂದಿಗೆ ಬಡಿಸಲು ಸಾಕಾಗುವಷ್ಟು ಪಾಯಸ ಮಾಡಬೇಕಿದೆ. ಅನ್ನಸಂತರ್ಪಣೆಯ ಭೂರಿಭೋಜನ ರಾತ್ರಿ ಆಗಮಿಸುವ ಭಕ್ತಾದಿಗಳಿಗೆ, ಅಮ್ಮನ ದರ್ಶನಕ್ಕೆ ಬಂದವರು ಹಾಗೇನೇ ಉಪವಾಸ ತೆರಳಬಾರದೆಂದು ಈ ಕ್ರಮ ನಡೆದುಕೊಂಡು ಬಂದಿದೆ. ಗಣಪಣ್ಣನ ಉಸ್ತುವಾರಿಯಲ್ಲಿ ಅನ್ನದಾನದ ದೊಡ್ಡ ಅಡುಗೆ.
ಪಾಯಸಕ್ಕಾಗಿ ಒಂದು ತೆಂಗಿನಕಾಯಿ, ತುರಿದು, ಅರೆದು ಹಾಲು ತೆಗೆದಿರಿಸುವುದು. ನೀರು ಕಾಯಿಹಾಲು ಕೂಡಾ ತೆಗೆದಿರಿಸುವುದು.
ಒಂದು ಲೋಟ ಶ್ಯಾವಿಗೆ, ನಾನ್ ಸ್ಟಿಕ್ ಬಾಣಲೆಯಲ್ಲಿ ನಸು ಬಣ್ಣ ಬರುವಂತೆ ಹುರಿಯಿರಿ, ತುಪ್ಪ ಹಾಕಿ ಹುರಿಯುವ ಅಗತ್ಯವಿಲ್ಲ, ಕರಟಬಾರದು ಅಷ್ಟೇ. ಶ್ಯಾವಿಗೆಗೆ ತನ್ನದೇ ಸುವಾಸನೆ ಏನೂ ಇಲ್ಲ. ಏಲಕ್ಕಿಯಂತಹ ಸುವಾಸನಾ ದ್ರವ್ಯಗಳನ್ನು ಹಾಕಿದ್ರೇನೇ ಘಮಘಮಿಸುವ ಪಾಯಸ ನಮ್ಮದು.
ಅದೇನೇ ಪದಾರ್ಥ ಮಾಡುವುದಿದ್ದರೂ ಕುಕ್ಕರ್ ನನ್ನ ಆಯ್ಕೆ, ರಗಳೆಯಿಲ್ಲದೆ ಬೇಯಿಸಿ ಕೊಡುತ್ತೆ.
ನೀರು ಕಾಯಿಹಾಲು ಎರೆದು ಕುಕ್ಕರ್ ಒಲೆಗೇರಿತೇ, ಹುರಿದ ಶ್ಯಾವಿಗೆ ಸುರಿಯಿರಿ, ಕುದಿಯುವ ತನಕ ಬಿಡದೆ ಸೌಟಾಡಿಸಿ, ನಂತರ ಕುಕ್ಕರ್ ಮುಚ್ಚಿ ಒಂದು ಸೀಟಿ ಕೂಗಿಸಿ.
ಒತ್ತಡ ಇಳಿದ ನಂತರ ಮುಚ್ಚಳ ತೆರೆಯಿರಿ, ಬೆಂದಿದೆ.
ಒಂದೂವರೆ ಲೋಟ ಸಕ್ಕರೆ ಅಳೆದು ಹಾಕಿರಿ, ಸಕ್ಕರೆ ಕರಗುತ್ತಿರಲಿ.
ಗೋಡಂಬಿ ದ್ರಾಕ್ಷಿಗಳನ್ನು ತುಪ್ಪದಲ್ಲಿ ಹುರಿಯಿರಿ.
ಏಲಕ್ಕಿ ಪುಡಿ ಮಾಡಿಟ್ಟಾಯ್ತೇ,
ಆಯಿತು.
ಈಗ ದಪ್ಪ ಕಾಯಿಹಾಲು ಎರೆದು ಕುದಿಸಿ.
ಏಲಕ್ಕಿ ಹಾಕುವ ಸಮಯ,
ಕೆಳಗಿಳಿಸಿ, ದ್ರಾಕ್ಷಿ ಗೋಡಂಬಿಗಳನ್ನು ಹಾಕುವುದು, ಇಷ್ಟೇ ಹಾಕಬೇಕೆಂಬ ಅಳತೆ ಪ್ರಮಾಣ ಇದಕ್ಕಿಲ್ಲ, ಅಡುಗೆಮನೆಯ ಡಬ್ಬದಲ್ಲಿ ಇದ್ದಂತೆ ಬಳಸಿರಿ.
ಊಟದ ಹೊತ್ತಿಗೆ ಪಾಯಸ ತಣಿಯಿತೇ, ದಪ್ಪ ಹಲ್ವದಂತಾಯ್ತೇ,
ಚಿಂತಿಸದಿರಿ...
ಡೈರಿ ಹಾಲು ಇದೆಯಲ್ಲ,
ಬಿಸಿ ಹಾಲು ಎರೆದು ಪಾಯಸದ ಹದಕ್ಕೆ ತರುವುದು.
ತೆಂಗಿನ ಹಾಲು, ಡೈರಿ ಹಾಲು ಕೂಡಿದ ಪಾಯಸದ ರುಚಿ ಕುಡಿದವರಿಗೇ ಗೊತ್ತು ಕಣ್ರೀ...
0 comments:
Post a Comment