Featured Posts
Saturday 24 February 2024
ಮಾಡರ್ನ್ ಮೇಲಾರ
Monday 12 February 2024
ಬಾರೋ ಬೆಳ್ಳಿ ಬಟ್ಟಲೇ
Sunday 15 October 2023
ಬಂದಿದೆ ಶ್ರಾವಣಾ
ಬೇಸಿಗೆಯೆಂದರೆ ಬಿಸಿಲ ಸ್ನಾನ, ಬೆವರಿನಿಂದಲೇ ಮೈ ತೊಯ್ದು ತೊಪ್ಪೆಯಾಗುವ ಕಾಲ. ಸಿಹಿ ಸಿಹಿ ಹಣ್ಣುಗಳ ಕಾಲ. ಗುಡ್ಡದಅಂಚಿನಲ್ಲಿರುವ ಮಾವಿನ ಮರ ಹಿರಿಕರಿಯರ ಆಶ್ರಯ ತಾಣ. ಮಾವಿನ ಹಣ್ಣುಗಳ ರಸರುಚಿ ಸವಿಯುತ್ತ ಹಾಯಾಗಿರುವ ಸಮಯ.
ಈ ಸಂತಸ ನಮ್ಮ ಬಾಲ್ಯದ್ದು, ಕಾಲ ಉರುಳಿದಂತೆ ಅಂದಿನ ಮಾಮರಗಳಿಲ್ಲವಾಗಿವೆ. ರಸ್ತೆ ಪಕ್ಕದಲ್ಲಿ ನೆರಳು ನೀಡುತ್ತಿದ್ದ ಮರಗಳು ಕಾಂಕ್ರೀಟ್ ಕಾಡುಗಳೆಡೆಯಲ್ಲಿ ಮರಳಿ ಬಾರದ ಲೋಕಕ್ಕೆ ತೆರಳಿವೆ. ಆಧುನಿಕತೆಯೆಂಬ ರಕ್ಕಸ ನಮಗೆ ಹವಾನಿಯಂತ್ರಿತ ಕೊಠಡಿಗಳನ್ನು ನೀಡಿರುವಾಗ ಗಿಡಮರಗಳು ಅನಗತ್ಯ ಅನ್ನೋಣ. ಇಂದಿನ ಮಕ್ಕಳು ಪ್ರಕೃತಿಯ ಒಡನಾಟದಿಂದ ವಂಚಿತರುಎಂದೆನ್ನಲೇ ಬೇಕಾಗಿದೆ.
ಬಿಸಿಲಿನ ಝಳದಿಂದ ಬೆವರಿದ ಮೈಗೆ ವರ್ಷಧಾರೆ ತಂಪನ್ನು ನೀಡಿದೆ. ಮನೆಯೊಳಗೆ ಗುಬ್ಬಚ್ಚಿಗಳಂತೆ ಇರುವ ಕಾಲ. ಏನೇನೋ ತರೋಣ, ಬೇಕೆನಿಸಿದ್ದನ್ನು ತಿನ್ನೋಣ ಅನ್ನುವ ಹಾಗೇ ಇಲ್ಲ. ಅಡುಗೆಮನೆಯಲ್ಲಿ ದಾಸ್ತಾನು ಇದೆಯಾ? ಉಪ್ಪುಸೊಳೆ, ಉಪ್ಪಿನಲ್ಲಿಅದ್ದಿಟ್ಟ ಮಾವಿನಕಾಯಿ…. ಯಾವುದೂ ನಮ್ಮ ಇಂದಿನ ಜೀವನಶೈಲಿಗೆ ಒಗ್ಗದು.
“ ಅಮ್ಮ, ಅದೆಲ್ಲ ಬೇಡ. “ ಭರಣಿಯಿಂದ ಹೊರ ತೆಗೆಯುವುದಕ್ಕಿಲ್ಲ. “ಮತ್ಯಾಕೆ, ಇದನ್ನೆಲ್ಲ ಉಪ್ಪು ಹಾಕಿ ಇಟ್ಟಿದ್ದು ದಂಡ ಆಯ್ತಲ್ಲ.”
“ ಅದರ ವಾಸ್ನೆ ನಂಗಾಗಲ್ಲ. “
ಬೇಕಿದ್ದವರಿಗೆ ಇಂತಹ ಪರಿಕರಗಳೆಲ್ಲ ಮಾರುಕಟ್ಟೆಯಲ್ಲಿ ಲಭ್ಯವಿದೆ. ಅಮೆಝಾನ್ ಕೂಡಾ ಕಳಿಸಿ ಕೊಟ್ಟೀತು ಅನ್ನಿ.
ಹಿಂದೆ ಮನೆ ತುಂಬ ಜನ, ಕೆಲಸದಾಳುಗಳೂ, ಬಂದು ಠಿಕಾಣಿ ಹೂಡುತ್ತಿದ್ದ ನೆಂಟರಿಷ್ಟರೂ ಸೇರಿ ಹದಿನೈದು ಇಪ್ಪತ್ತು ಜನಕ್ಕೆದಿನವೂ ಅಂಗಡಿ ಸಾಮಾನು ತರುವುದಕ್ಕಿಲ್ಲ, ಪರಿಸರದಲ್ಲಿ ದೊರೆಯುವ ತಜಂಕ್, ಕೆಸು, ಬಸಳೆ, ಹರಿವೆ ಸೊಪ್ಪುಗಳು, ಹಲಸಿನಬೇಳೆ ಇತ್ಯಾದಿ ಮುಖ್ಯ ಆಹಾರ ಪದಾರ್ಥವಾಗಿರುತ್ತಿದ್ದುವು. ಹಲಸು ತಿಂದ ಹಾಗೇ ಬೇಳೆಯನ್ನು ಬೇರ್ಪಡಿಸಿ, ತೊಳೆದು ಸಂಗ್ರಹಿಸಿ, ಮಳೆಗಾಲ ಆರಂಭಕ್ಕೆ ಮೊದಲು ಕೆಂಪು ಮಣ್ಣಿನ ಲೇಪನ ನೀಡಲಾಗುತ್ತಿತ್ತು, ಸಪ್ಪಗಿನ ಹಲಸಿನ ಬೇಳೆಗೆ ಸಿಹಿ ರುಚಿ ಬಂದ ನಂತರವೇ ತಿನ್ನುವುದು. ಹೇಗೇ? ನಿಗಿನಿಗಿ ಕೆಂಡದಲ್ಲಿ ಸುಟ್ಟ ಬೇಳೆಯ ಪರಿಮಳವೂ, ರುಚಿಯೂ, ಇಂದಿನ ಮಕ್ಕಳಿಗೆ ಆ ಭಾಗ್ಯ ಹೋಯ್ತು.
ಸೊಪ್ಪು, ಹಣ್ಣು ಸೌತೇಕಾಯಿಗಳೊಂದಿಗೆ ಬೆರಕೆ ಈ ಹಲಸಿನ ಬೇಳೆ, ಪದಾರ್ಥವೂ ಮಸ್ತ್ ರುಚಿ. ಇವೆಲ್ಲ ಈಗ ನೆನಪುಗಳಾಗಿ ಉಳಿದಿವೆ.
ಮಳೆಯ ವಾತಾವರಣದಲ್ಲಿ ಸೊಂಪಾಗಿ ಬೆಳೆದಂತಹ ಹಸಿರು, ಯಾವುದೇ ಸಸ್ಯವಾಗಿರಲಿ ಕುಡಿ ಎಲೆಗಳನ್ನು ಸಂಗ್ರಹಿಸಿ, ಹಲವು ಕುಡಿಗಳಿಂದ ತಂಬುಳಿ ತಯಾರಿಸಿ ಉಣ್ಣದಿದ್ದರೆ ಹೇಗಾದೀತು. ಮಳೆಗಾಲದ ರೋಗರುಜಿನಗಳಿಂದ ತಪ್ಪಿಸಿಕೊಳ್ಳಲು ಇದೂ ಒಂದು ದಾರಿಯಾಗಿದ್ದಿತು. ಈಗ ಹಾದಿಬೀದಿಗೊಂದರಂತೆ ಆಸ್ಪತ್ರೆಗಳಿವೆ. ಸೊಪ್ಪುಸದೆಗಳ ಉಸಾಬರಿ ನಮಗೆ ಬೇಡವಾಗಿದೆ. ಬೇಕೆನಿಸಿದರೂ ಹೈಟೆಕ್ ಮನೆಗಳಲ್ಲಿ ವಾಸಿಸುವ ನಮಗೆ ದುರ್ಲಭ. ಮನೆಯಿಂದ ಅಂಗಳಕ್ಕೆ ಇಳಿಯಬೇಕಾದರೆ ಇಂಟರ್ ಲಾಕ್, ಗೃಹಾಲಂಕಾರಕ್ಕೆ ಕುಂಡಗಳಲ್ಲಿ ನೆಟ್ಟಂತಹ ರಂಗುರಂಗಿನ ಎಲೆಗಳ ಗಿಡಗಳು, ಪರಿಮಳ ರಹಿತ ಹೂವುಗಳು. ಪ್ರಕೃತಿಯ ಅಂಗಣದಲ್ಲಿ ಸ್ವಚ್ಛಂದವಾಗಿ ಬೆಳೆಯುವ ಗಿಡಬಳ್ಳಿಗಳ ಕಾಲ ಮರೆಗೆ ಸರಿದಿದೆ.
ಇದೀಗ ಹಬ್ಬಗಳ ಮಾಸ ಎನಿಸಿದಂತಹ ಶ್ರಾವಣ ಬಂದಿದೆ. ಮೊದಲ ಹಬ್ಬವೇ ನಾಗಪಂಚಮಿ. ನಾಗನೆಂದರೆ ಪ್ರಕೃತಿಯ ಮಡಿಲು, ಗುಡಿಗೋಪುರಗಳು ಬೇಕಿಲ್ಲ, ಸುತ್ತಲೂ ಜಲಾವೃತ ಭೂಮಿ, ಕೇದಗೆಯ ವನ, ಸಂಪಿಗೆಯ ಮರದ ಸುಗಂಧ, ಔಷಧೀಯ ವೃಕ್ಷಗಳಿಂದ ಕೂಡಿದ ಸಸ್ಯಸಂಪತ್ತು. ಇಂತಹ ಪರಿಸರ ಈಗ ಕಾಣೆವು, ಕಾಂಕ್ರೀಟ್ ಕಟ್ಟಡದೊಳಗೆ ದೇವರನ್ನು ಇಟ್ಟು ಪೂಜೆಮಾಡಿದರಾಯಿತು. ನಾಗಪಂಚಮಿಯ ಸಿಹಿ ಹೇಗೆ? ಬೆಲ್ಲ, ತೆಂಗಿನಕಾಯಿ, ಅಕ್ಕಿ ಹಿಟ್ಟು ಸೇರಿದ ಮಿಶ್ರಣವನ್ನು ಅರಸಿಣ ಎಲೆಯಲ್ಲಿಸುತ್ತಿ ಇಟ್ಟು ಮಾಡುವ ಕಡುಬು ನಾಗಪಂಚಮಿಯ ವಿಶೇಷ. ಅರಸಿಣ ಎಲೆ ಕೂಡಾ ಈಗ ಮಾರ್ಕೆಟ್ಟಲ್ಲಿ ಸಿಗುತ್ತದೆ.
ಶ್ರಾವಣ ಬಂತೆಂದರೆ ಕರಾವಳಿಯ ಗೌಡ ಸಾರಸ್ವತ ಸಮಾಜದಲ್ಲಿ ಸಂಭ್ರಮದ ಕಾಲ, ನನ್ನ ಬಾಲ್ಯದ ದಿನಗಳಲ್ಲಿ ನೆರೆಮನೆಯ ಮಹಿಳೆಯರ ಚೂಡಿ ಪೂಜೆಯ ಆಚರಣೆಯ ನಂತರ ಪ್ರಸಾದವೆಂದು ಸಿಹಿ ತಿನಿಸು ಸಿಗುತ್ತಿತ್ತು. ಬೆಲ್ಲ ತೆಂಗಿನಕಾಯಿ ಬಾಳೆಹಣ್ಣುಗಳ ಮಿಶ್ರಣದ ಪ್ರಸಾದ ರುಚಿಕರವಾಗಿರುತ್ತಿತ್ತು. ಅದನ್ನೂ ಮನೆಯ ಮಹಿಳೆಯರೇ ತಯಾರಿಸುತ್ತಿದ್ದರು. ಜೊತೆಗೆ ಚೂಡಿಯೂ. ನೆಲದಲ್ಲಿ ಬೆಳೆಯುವ ಹಲ ಬಗೆಯ ಹುಲ್ಲುಗಳನ್ನು ಆಕರ್ಷಕವಾಗಿ ರತ್ನಗಂಧಿ, ಕರವೀರ ಹೂಗಳ ಜೋಡಣೆಯೊಂದಿಗೆ ಬಾಳೆಯನಾರಿನಲ್ಲಿ ಕಟ್ಟಿದ ಅತ್ಯಾಕರ್ಷಕ ಪುಷ್ಪಗುಚ್ಛ ಅದು. ಈಗ ಬಾಳೆಯ ನಾರೂ ಕಾಣೆವು, ಗರಿಕೆ ಹುಲ್ಲೂ ಸಿಗದು.
ಇದರೊಂದಿಗೆ ಕೇರಳದ ಓಣಂ, ಇಲ್ಲಿಯೂ ನೈಸರ್ಗಿಕವಾಗಿ ಬೆಳೆಯುವ ಹೂಗಳಿಂದಲೇ ಪೂಕಳಂ ರಚಿಸುವ ಸಂಭ್ರಮ ಹಿಂದೆ ಇತ್ತು. ಕಳೆ ಸಸ್ಯವಾಗಿರುವ ರಥ ಹೂವನ್ನೇ ಕೊಯ್ದು ತಂದರೆ ಸಾಕಾಗುತಿತ್ತು. ಈಗ ಹೂವಿನ ಮಾರ್ಕೆಟ್ ಕಡೆ ಚೀಲ ಕೊಂಡೊಯ್ಯುವ ಕಾಲ ಬಂದಿದೆ. ಕಾಲಾಯ ತಸ್ಮೈ ನಮಃ ಅನ್ನಬೇಕಷ್ಟೆ.
ಟಿಪ್ಪಣಿ: ಸದಭಿರುಚಿಯ ಮಾಸಪತ್ರಿಕೆ ಉತ್ಥಾನದಲ್ಲಿ, ಪ್ರಕಟಿತ ಕಿರು ಬರಹ.
Wednesday 20 September 2023
ಚಿನ್ನ ಚಿನ್ನ ದೋಸೈ
ಜ್ವರ ಬಂದಾಗ ಬಾಯಿ ರುಚಿ ಕೆಡುವುದೂ, ಕೇವಲ ಗಂಜಿಯೂಟ ಸಾಕೆನ್ನುವುದು ವಾಡಿಕೆಯ ಮಾತು. ಕಳೆದ ಎರಡು ದಿನಗಳಿಂದ ನಮ್ಮಲ್ಲಿ ಗಂಜಿಯೂಟ. ಮಾಡಿದ ಗಂಜಿ ಮುಗಿಯದೇ ಹೋಯಿತು. ಉಳಿದ ಗಂಜಿ ಅನ್ನವನ್ನು ಅಕ್ಕಿಯೊಂದಿಗೆ ತಿರುಗಿಸಿ ದೋಸೆಹಿಟ್ಟು ಎಂದು ಹೆಸರಿಟ್ಟು, ಮಾರನೇ ದಿನ ದೋಸೆ ಎರೆಯಲಾಯಿತು. ಬ್ರೆಡ್ ನಂತಹ ದೋಸೆ ಎದ್ದು ಬಂದಿತು. ತೆಂಗಿನತುರಿ, ಹುರಿಗಡಲೆ, ಹಸಿಮೆಣಸು ಸೇರಿದ ಚಟ್ಣಿ.
ಮಾರನೇ ದಿನ ಗಂಜಿಯೂಟದ ಜೊತೆಗೆ ಕೂಡಿಕೊಳ್ಳಲು ಪುನರ್ಪುಳಿ ಸಾರು ಹಾಗೂ ಬೀಟ್ರೂಟ್ ಪಲ್ಯ ತಯಾರಾದುವು.
ರಾತ್ರಿ ಮಲಗುವ ಮೊದಲು ದೋಸೆಗೆ ಅರೆಯುವುದಿದೆ. ಎರಡು ಲೋಟಾ ದೋಸೆ ಅಕ್ಕಿ ಹಾಗೂ ಎರಡು ಚಮಚಾ ಮೆಂತ್ಯನೆನೆದಿದ್ದುವು. ಉಳಿದ ಪಲ್ಯವೂ, ಉಳಿದ ಗಂಜಿಯೂ ಸೇರಿ ದೋಸೆ ಹಿಟ್ಟನ್ನು ಸಂಪನ್ನಗೊಳಿಸುವಲ್ಲಿ ನೆರವಾದುವು. ತೆಂಗಿನತುರಿ, ಹುರಿಗಡಲೆ, ಹಸಿಮೆಣಸು, ಕೊತ್ತಂಬರಿ ಸೊಪ್ಪು ಸೇರಿದಾಗ ಒಂದು ಚಟ್ಣಿ ಆಯಿತು.
ಗಂಜಿ ಅನ್ನ ಹಾಗೂ ಅಕ್ಕಿಯ ಅಳತೆ ಒಂದೇ ಪ್ರಮಾಣದಲ್ಲಿರಲಿ. ಪಲ್ಯವೂ ಸರಳವಾಗಿರಲಿ, ಅತಿಯಾದ ಮಸಾಲೆಸಾಮಗ್ರಿಯೇನೂ ನಾನು ಹಾಕಿಲ್ಲ.
Monday 4 September 2023
ಹುರಿಯಕ್ಕಿ ತಿನಿಸು
ಅಡಿಕೆ ಸುಲಿಯಬೇಕಾಗಿದೆ. ಒಬ್ಬ ಕೆಲಸಗಾರನ ಆಗಮನ ಆಯಿತು. ಸಂಜೆಯಾಗುವಾಗ ಅಂದಾಜು ಮೂವತ್ತು ಕಿಲೋ ಅಡಿಕೆಸುಲಿದ. “ ನಾಳೆ ಬರುವಾಗ ಇನ್ನೂ ಸಿಕ್ಕಿದವರನ್ನು ಕರೆದು ಕೊಂಡು ಬಾ. “ ಎಂದರು ಮನೆ ಯಜಮಾನ್ರು. ಮೂರನೇ ದಿನಕ್ಕಾಗುವಾಗ ಮೂರು ಜನ ಆಯ್ತು. ಈವಾಗ ಸುಲಿದ ಅಡಿಕೆ ಗೋಣಿ ತುಂಬಿ ತುಳುಕಿತು.
“ಇವತ್ತು ಸಂಜೆ ಹುರಿಯಕ್ಕಿ ಮಾಡಿ ತೋರಿಸ್ತಾನಂತೆ ನಿನಗೆ.. “ ಎಂದರು ನಮ್ಮವರು. ವಾರದ ಹಿಂದೆ ಸಂಜೆ ಹಾಲು ತರುವಾಗನನಗಾಗಿ ಮಂಡಕ್ಕಿಪುರಿ ಬಂದಿತ್ತು. “ ಎಷ್ಟು ಚೆನ್ನಾಗಿ ಮಾಡಿ ಮಾರಾಟ ಮಾಡ್ತಾರೆ ನೋಡು. ಇಷ್ಟು ಮಂಡಕ್ಕಿಗೆ ಮೂವತ್ತು ರೂಪಾಯಿ. ಈಗಲೇ ತಿನ್ನು, ಮತ್ತೆ ಮೆತ್ತಗಾದೀತು. “
ಇವತ್ತು ಅಡಿಕೆ ಸುಲಿಯಲು ಬಂದವನು ಅದೇ ಮಂಡಕ್ಕಿ ಸೇಲ್ ಮಾಡಿತ್ತಿದ್ದವನೇ ಆಗಿರಬೇಕು. ಬೆಳಗ್ಗೆ ಬಂದವನೇ ನನ್ನ ಬಳಿ ಹುರಿಯಕ್ಕಿ ಇದೆಯಾ ಎಂದೂ ವಿಚಾರಿಸ್ಕೊಂಡಿದ್ದ. “ಇದೆ ನೋಡು ಎರಡು ಮುಷ್ಠಿ.. ಟೊಮೇಟೋ ನೀರುಳ್ಳಿ ಹಸಿಮೆಣಸು ಇದೆ, ಕೊತ್ತಂಬರಿ ಸೊಪ್ಪು ಪುಲಾವ್ ಮಾಡಿ ಮುಗಿದಿದೆ. ಜಾಸ್ತಿ ಖಾರ ಏನೂ ಬೇಡ. “
ಸಂಜೆ ಚಹಾ ಮಾಡಬೇಕಾದರೇ ಮಂಡಕ್ಕಿ ಪುರಿಗೆ ಬೇಕಾದ ಸಾಹಿತ್ಯಗಳೊಂದಿಗೆ ಒಳಗೆ ಬಂದ.
“ಅಕ್ಕ, ಒಂದು ಪೀಸಕತ್ತಿ ಕೊಡಿ.. “
“”ಅಲ್ಲೇ ಉಂಟು ನೋಡು ಟೇಬಲ್ ಮೇಲೆ.. “
“ ಇದು ನನ್ನ ಹುರಿಯಕ್ಕಿ. “ ತಂದಿಟ್ಟೆ.
“ ಅದು ಬೇಡ, ನಾನು ತಂದಿದೇನೆ ಫ್ರೆಶ್. “
ಕೊತ್ತಂಬರಿ ಸೊಪ್ಪು, ಕ್ಯಾರೆಟ್, ಹಸಿಮೆಣಸು ಇತ್ಯಾದಿ ಅವನೊಂದಿಗೆ ಬಂದಿತ್ತು.
“ ಒಂದು ನೀರುಳ್ಳಿ ಕೊಡಿ. “ ನೀರುಳ್ಳಿ ಕೊಚ್ಚಲ್ಪಟ್ಟಿತು.
“ ಟೊಮೇಟೋ ಇಲ್ವ? “
ಇಲ್ಲದೇ ಉಂಟೇ, ಫ್ರಿಜ್ಜಿನಿಂದ ಹೊರ ಬಂದಿತು.
“ ಶುಂಠಿ, ಬೆಳ್ಳುಳ್ಳಿ ? “
“ಅದೆಲ್ಲ ಬೇಡ. “ ಎಂದ ನಾರಾಯಣ.
ಕೊಚ್ಚುವ ಕಾರ್ಯ ಮುಗಿಯಿತು.
ನಮ್ಮ ಊರ ಭಾಷೆ ತುಳು, ನಮ್ಮ ತುಳು ಸಂವಹನ ಇಲ್ಲಿಗೆ ಕನ್ನಡದಲ್ಲಿ ಬಂದಿದೆ.
“ ಅಕ್ಕ, ಒಂದು ದೊಡ್ಡ ತೋಪು (ತಪಲೆ ) ಬೇಕಲ್ಲ.. “
“ ಅಲ್ಲೇ ಮೇಲೆ ಉಂಟು ನೋಡು. “
ಕೆಳಗಿಳಿಸಿ, ತೊಳೆದು ತಂದ.
ಹೆಚ್ಚಿಟ್ಟ ಸಾಮಗ್ರಿಗಳೆಲ್ಲ ತಪಲೆ ಸೇರಿದುವು.
“ ಉಪ್ಪು, ಎಣ್ಣೆ… “
“ ಒಳ್ಳೆ ಎಣ್ಣೆಯನ್ನೇ ಕೊಡು.. “ ವೀಕ್ಷಕರಾಗಿ ನಿಂತಿದ್ದ ನಮ್ಮವರು ಅನ್ನೋದೇ.
“ ಒಳ್ಳೆಯ ತೆಂಗಿನೆಣ್ಣೆ ಮಧು ಪುತ್ತೂರಿನಿಂದ ತಂದದ್ದೇ ಇದೆ, ಇನ್ನೂ ಪ್ಯಾಕ್ ಬಿಡಿಸಿಲ್ಲ. “
ನಾರಾಯಣ ಚಾಕುವಿನಲ್ಲಿ ಪ್ಯಾಕ್ ಬಿಡಿಸಿ ಜಾಡಿಗೆ ತುಂಬಿಸಿ ಕೊಟ್ಟ. ಅಂದಾಜು ಮೂರು ಚಮಚ ಎಣ್ಣೆ ತಪಲೆಗೆ ಎರೆದ.
ಮೆಣಸಿನ ಹುಡಿಯೂ ಖಾರದ ಬಾಬ್ತು ಬಿದ್ದಿತು.
ಅವನೇ ತಂದಿದ್ದ ಹುರಿಯಕ್ಕಿ ಸುರಿದ, ಒಂದು ಸೇರು ಆದೀತು.
“ ಇಷ್ಟೂ ಹುರಿಯಕ್ಕಿ ಯಾರು ತಿನ್ನೂದು? “
“ ಅಡಿಕೆ ಸುಲೀತಿದಾರಲ್ಲ, ಎಲ್ಲರೂ ಸೇರಿ ತಿಂತಾರೆ… ಹಹ. “
“ಅಕ್ಕ, ಒಂದು ಸೌಟು ಕೊಡಿ. “
ಸೌಟು ಗಿರಗಿರ ತಿರುಗಿದ್ದೇ ತಿರುಗಿದ್ದು, ನಮ್ಮ ಮಂಡಕ್ಕಿ ಪುರಿ ತಯಾರಾಯ್ತು.
ಹಸಿ ಸಾಮಗ್ರಿಗಳಿಂದ ತಯಾರಾದ ಈ ತಿನಸು, ಮೆತ್ತಗಾಗುವ ಮೊದಲೇ ತಿನ್ನಿರಿ. ತುಂಬ ಮಾಡಿಟ್ಟು ದಾಸ್ತಾನು ಇಡುವುದಕ್ಕಿಲ್ಲ, ಮನೆ ತುಂಬ ಜನ ಇರಬೇಕು, ಸಂಜೆಯ ಹೊತ್ತು ಬಾಯಾಡಿಸಲಿಕ್ಕೆ ಸೊಗಸಾದ ತಿನಿಸು.
ಇದು ನಮ್ಮೂರ ಸ್ಪೆಶಲ್ ಹುರಿಯಕ್ಕಿ ತಿನಿಸು. ಜಾತ್ರೆ, ಸಂತೆ ಬಂದಾಗ ಮಾತ್ರ ಈ ತಿನಿಸು ನಮಗೆ ಸಿಗುತ್ತಿದ್ದ ಕಾಲವೊಂದಿತ್ತು. ಅದರೊಂದಿಗೆ ಕಬ್ಬಿನ ಹಾಲು ಇರಲೇಬೇಕು. ಖಾರ ಖಾರ ಹುರಿಯಕ್ಕಿ ತಿಂದು ದೊಡ್ಡ ಲೋಟ ತುಂಬ ಕಬ್ಬಿನಹಾಲು ಕುಡಿದಾಗ ಸಿಗುವ ಸುಖ, ಸ್ವರ್ಗಸಮಾನ.
ಖಾರ ಜಾಸ್ತಿ ಹಾಕುವುದಿದ್ದರೆ ಮಾವಿನಕಾಯಿ ತುರಿ, ನಿಂಬೆಹಣ್ಣಿನ ರಸ ಸೇರಿಸುವುದು. ಹುರಿದ ನೆಲಕಡಲೆ ಬೀಜಗಳನ್ನೂ ಅಲ್ಪಪ್ರಮಾಣದಲ್ಲಿ ಹಾಕಿದಲ್ಲಿ ರುಚಿ ಜಾಸ್ತಿ.