Pages

Ads 468x60px

Monday 30 November 2020

ಹೂವು - ಮಾವು

 

ಎದುರುಗಡೆ ಎತ್ತರದ ದರೆ ಅದರಲ್ಲಿಯೂ ಬೆಳೆದಂತಹ ಏನೇನೋ ಹೆಸರೇ ತಿಳಿಯದ ಕುರುಚಲು ಸಸ್ಯಗಳು ಅವುಗಳೆಡೆಯಿಂದ ಇಣುಕುತ್ತಿರುವ ಹೂವುಗಳು.   ಯಾವ ಹೂವೂ ಅಂತ ತಲೆ ತುರಿಸುವುದಕ್ಕಿಲ್ಲ.   ವಿಶೇಷವಾಗಿ  ಶ್ರೀದೇವಿಯ ಪೂಜೆಗೆ ಬಳಸುವ ಅಪೂರ್ವ ಹೂವು ಕಿಸ್ಕಾರ.

ನಾಳೆಯೇನೂ ಸಂಕ್ರಾಂತಿ ಪೂಜೆಯ ದಿನವಲ್ಲ  ಎರಡು ಹೂ ಗೊಂಚಲು  ದಿನಕ್ಕಾಗುವಾಗ ಉದುರಿ ಹೋದೀತು ಅಂತೂ ಹೂ ಗೊಂಚಲು ನನ್ನೊಂದಿಗೆ ಮನೆಯೊಳಗೆ ಬಂದಿತು.





ತೋಟದ ನಿರ್ಮಲೀಕರಣದೊಂದಿಗೆ ಮನೆ ಹಿತ್ತಲು ಕೂಡಾ ಕತ್ತಿ ಪಿಕ್ಕಾಸುಗಳ ಹಾರಾಟದಿಂದ ಶುಚಿಯಾಗಿದೆ ಮಣ್ಣಿನೊಳಗೆ ಹುದುಗಿದ್ದ ಅರಸಿಣ ಗೆಡ್ಡೆಗಳು ಮಾವಿನ ಶುಂಠಿ ಗೆಡ್ಡೆಗಳು ಮೇಲೆದ್ದು ಅಡುಗೆ ಮನೆ ಪ್ರವೇಶದೊಂದಿಗೆ ಗೆಡ್ಡೆ ಗೆಣಸುಗಳನ್ನು ಅಡುಗೆಯಲ್ಲಿ ಬಳಸುವ ವ್ಯವಹಾರವೂ ನನ್ನದಾಗಿದೆ.


ಒಂದು ಹೊಸ ವಿನ್ಯಾಸದ ತಂಬುಳಿ ಮಾಡೋಣ.


ಕಿಸ್ಕಾರದ ಹೂವುಗಳು ಶುಚಿಗೊಳಿಸಲ್ಪಟ್ಟುವು ದೇವರ ಪೂಜೆಗೆಂದು ಆಯ್ದು ಇಡುವುದಿಲ್ಲವೇ ಅದೇ ಥರ ಅನ್ನಿ.

ಎರಡಿಂಚು ಉದ್ದದ ಮಾವಿನಶುಂಠಿಯನ್ನು ಮಣ್ಣು ಹೋಗಲು ತಿಕ್ಕಿ ತಿಕ್ಕಿ ತೊಳೆದು ವೃತ್ತಾಕಾರದ ಬಿಲ್ಲೆಗಳಂತೆ ಕತ್ತರಿಸಿಟ್ಟು,

ಒಂದು ಹಿಡಿ ತೆಂಗಿನತುರಿ ತೆಗೆದಿರಿಸಲಾಯಿತು.

ತಾಜಾ ಮಜ್ಜಿಗೆ ಫ್ರಿಜ್ ಪೆಟ್ಟಿಗೆಯಿಂದ ಹೊರ ಬಂದಿತು ಅರ್ಧ ಲೋಟ ಸಾಕು.

ಎಲ್ಲವನ್ನೂ ನುಣ್ಣಗೆ ಅರೆದು.

ಮಜ್ಜಿಗೆ ಎರೆದು,

ಹೊಂದುವಷ್ಟು ನೀರನ್ನೂ ಎರೆದು,

ರುಚಿಗೆ ಬೇಕಾದ ಉಪ್ಪೂ,

ಪುಟ್ಟದೊಂದು ಒಗ್ಗರಣೆಯೂ ಬೀಳುವಲ್ಲಿಗೆ 

ಮಾವಿನ ಪರಿಮಳದ ತಂಬುಳಿ ಬಂದಿತಲ್ಲ.

ಹೂವಿನ ಬಣ್ಣವೂ ಕೂಡಿತಲ್ಲ..

 ತಂಬುಳಿಗೆ ನಾವು ಮಾಮೂಲಿಯಾಗಿ ಹಾಕುವಂತಹ ಜೀರಿಗೆ ಯಾ ಕಾಳುಮೆಣಸನ್ನು ನಾನು ಹಾಕಿಲ್ಲ ಮಾವಿನಶುಂಠಿಯ ತಾಜಾ ಸುವಾಸನೆಯೇ ಸಾಕು.


ಮಾವಿನಶುಂಠಿ ಯಾ ಮಾಂಙನ್ನಾರಿಯ ಬಗ್ಗೆ ಸವಿವರ ಬರಹ  ಬ್ಲಾಗ್ ನಲ್ಲಿ ಹಿಂದೆಯೇ ಬರೆದಿದ್ದೇನೆ.

ಕಿಸ್ಕಾರ ಯಾ ಕೇಪುಳ ಹೂವು ಕೂಡಾ ಬ್ಲಾಗ್ ಬರಹವಾಗಿ  ಮೊದಲೇ ಬಂದಿದೆ ಪುನರಪಿ ಬರೆಯವ ಅವಶ್ಯಕತೆಯಿಲ್ಲ ಆಸಕ್ತರು  ಹುಡುಕಿ ಓದಿರಿ.






Tuesday 24 November 2020

ತಿಳಿಸಾರು

 


ಏನಾಯ್ತು ಮಾಡಿದ್ದ ಸಾಂಬಾರ್ ಮುಗಿದೇ ಹೋಯ್ತು ರಾತ್ರಿಯೂಟಕ್ಕೆ ಹೊಸದಾಗಿ ಸಾಂಬಾರ್ ಅಟ್ಟಣೆ ಮಾಡುವುದೇ ಎಲ್ಲಾದ್ರೂ ಉಂಟೇ..  ತೆಳ್ಳಗಿನ ಒಂದು ತಿಳಿಸಾರು ಮಾಡಿ ಬಿಡೋಣ.


ಅಷ್ಟಕ್ಕೂ ಸಾಂಬಾರು ಮುಗಿಯಲಿಕ್ಕೆ ಊಟದ ಹೊತ್ತಿಗೆ ನೆಂಟರ ಆಗಮನವಾಗಿರಲಿಲ್ಲ ನಾವೇ ಇದ್ದಿದ್ದು.    “ ತೋಟದಲ್ಲಿ ಇಬ್ಬರು ಕೆಲಸ ಮಾಡ್ತಿದಾರೆ ಅನ್ನ ತಂದಿದಾರಂತೆ ಸ್ವಲ್ಪ ಉಪ್ಪಿನಕಾಯಿ ಕೊಟ್ರೆ ಸಾಕಂತೆ ಇದ್ದರೆ ಮಜ್ಜಿಗೆ ಕೊಡು.. "


ಉಪ್ಪಿನಕಾಯಿ ಮಜ್ಜಿಗೆಗಿಂತ ಸಾಂಬಾರೇ ವಾಸಿ ಅಂದ್ಬಿಟ್ಟು ನಾನೇ ಸಾಂಬಾರ್ ಕೊಟ್ಟು ಇದೀಗ ರಾತ್ರಿಯಡುಗೆಯ ಚಿಂತೆಯೂನನ್ನದೇ..


ಸಂಜೆಗೂ ಮುಂಚೆ ಸಾರು ಮಾಡ್ಬೇಕಾದ್ರೆ ಪುನಃ ತೊಗರಿಬೇಳೆ ಬೇಯಿಸುವುದೇ ವ್ಯರ್ಥ ಕೆಲಸ.


ಬಾಣಲೆ ಒಲೆಗೇರಿತು ಬಿಸಿಯೇರಿತು.

ಒಂದು ಚಮಚ ಎಣ್ಣೆ ಬಿದ್ದಿತು.

ಅನುಕ್ರಮವಾಗಿ,

ಉದ್ದಿನ ಬೇಳೆ ಗಾತ್ರದ ಇಂಗು

ಒಂದು ಚಮಚ ತೊಗರಿಬೇಳೆ

ಎರಡು ಒಣಮೆಣಸು

ಎರಡು ಚಮಚ ಕೊತ್ತಂಬರಿ

ತುಸು ಜೀರಿಗೆ

ಕೊನೆಗೆ ಒಂದೆಸಳು ಕರಿಬೇವು

ಹುರಿಯಲ್ಪಟ್ಟಿತು,   ಘಮ್ ಘಮ್ ಪರಿಮಳ ಎದ್ದಿತು.


ಬಿಸಿ ಆರಿದ ನಂತರ ಮಿಕ್ಸಿ ಪುಡಿ ಮಾಡಿ ಕೊಟ್ಟಿತು.

ಇನ್ನೇನು ಮಾಡೋಣಾ ಅಂದರೆ,

ಒಂದು ತಪಲೆಯಲ್ಲಿ  ಅಂದಾಜು ಒಂದೂವರೆ ಲೋಟ ನೀರು ಎರೆದು ರುಚಿಕರವಾಗುವಷ್ಟು ಉಪ್ಪು ಹಾಗೂ ಬೆಲ್ಲ ಹಾಕುವುದು.  

ಮಧ್ಯಾಹ್ನದ ಅಡುಗೆಗೆ ಗಿವುಚಿದ ಹುಣಸೆಯ ಹುಳಿ ಇತ್ತು ಅದಕ್ಕೇ ಪುನಃ ನೀರೆರೆದು ರಸ ಶೋಧಿಸಿ ಎರೆಯಲಾಯಿತು 

 ರಸದ್ರವವನ್ನು ಒಲೆಯ ಮೇಲೆ ಇಡುವುದು 

ಕುದಿಯಲಿ,

ಈಗ ಮಾಡಿದಂತಹ ತಾಜಾ ಸಾರಿನ ಹುಡಿ ಬೀಳಲಿ.  

ಚಿಟಿಕೆ ಅರಸಿಣ ಪುಡಿ ಹಾಕಲೇ ಬೇಕು.  

ಫ್ರಿಜ್ ಒಳಗೆ ಇದ್ದಂತಹ ಕೊತ್ತಂಬರಿ ಸೊಪ್ಪು ಹೆಚ್ಚಿ ಹಾಕುವುದು.   

ಹುರಿಯುವಾಗ ಇಂಗು ಹಾಕಿದ್ರೂ ಕುದಿಯುವಾಗ ಇನ್ನೊಮ್ಮೆ ಇಂಗಿನ ನೀರು ಎರೆಯುವುದು.

ಕೊನೆಗೆ ತುಪ್ಪದಲ್ಲಿ ಒಗ್ಗರಣೆ ಕೊಟ್ಟು ತಿಳಿ ಸಾರು ಆಯ್ತು ಅನ್ನಿ.

 

ಊಟ ಮಾಡುವಾಗ ಮದುವೆಮನೆಯ ಸಾರು ದೇವಸ್ಥಾನಗಳಲ್ಲಿ ಅನ್ನಪ್ರಸಾದ ಉಣ್ಣುವಾಗ ಬಡಿಸುವ ಸಾರು ನೆನಪಾಗದಿರಲಿಲ್ಲ...


ಬೆಲ್ಲ ಹಾಕಲೇ ಬೇಕೆಂದಿಲ್ಲ ನಾವು ಬೆಲ್ಲ ಪ್ರಿಯರಾಗಿರುವುದರಿಂದ ಬೆಲ್ಲ ಹಾಕಲಾಗಿದೆ.


ಹಾಗೇನೇ ಕುಡಿಯಲೂ ಯೋಗ್ಯ  ತಿಳಿಸಾರು.

ಕರಿದ ಹಪ್ಪಳ ಸಂಡಿಗೆ ಇದ್ದರಂತೂ ತಿಳಿಸಾರಿನೂಟ ರಸವತ್ತಾಗಿರುತ್ತೆ.


ತೆಂಗಿನಕಾಯಿ ತುರಿಯುವ ಶ್ರಮ ಇಲ್ಲಿಲ್ಲ.

ಟೊಮ್ಯಾಟೋ ಹಸಿಮೆಣಸಿನಕಾಯಿ ಶುಂಠಿ ಬೇಕಿಲ್ಲ.

ಕೊತ್ತಂಬರಿ ಸೊಪ್ಪು ಕಡ್ಡಾಯವಲ್ಲ.




Thursday 12 November 2020

ಕುಚ್ಚುಲಕ್ಕಿ ಕಡುಬು

 


ಮಧೂ ರೇಶನ್ ಅಕ್ಕಿಊಟಕ್ಕೂ ಆಗುತ್ತೆತಿಂಡಿಗೂ ಸರಿ ಹೋಗುತ್ತೆ..  ಆದ್ರೆ ಮೂರೇ ಕಿಲೊ ಕೊಟ್ಟಿದಾರಲ್ಲ ಯಾವುದಕ್ಕೂ ಸಾಲದು. "

ಬೇರೆ ಅಕ್ಕಿ ತಂದ್ರಾಯ್ತು."

ಮೊದಲು ರೇಶನ್ ಶಾಪಿನಲ್ಲಿ  ಕೊಡ್ತಾರೇನೊ ಅಂತ ಕೇಳಿ ನೋಡು..  ಗಂಧಸಾಲೆ ಅಕ್ಕಿಯ ಪರಿಮಳ ಉಂಟು  ಅಕ್ಕಿಗೆ. "

 

ಕಾರು ರಸ್ತೆಯುದ್ದಕೆ ಹೋಯಿತು ಬರುತ್ತಾ ತರಕಾರಿಗಳೂ ಅಕ್ಕಿಯೂ ಬಂತು ಅಮ್ಮರೇಷನ್ ಶಾಪು ಇನ್ನು ಮುಂದಿನ ತಿಂಗಳಿಗೆ ಕೊಡೂದಂತೆ ಇದೀಗ ಬಾಳಿಗರ ಅಂಗಡಿಯಿಂದ ಅಕ್ಕಿ ತಂದಿದ್ದು..  ಊಟಕ್ಕೂ ಆಗುತ್ತಂತೆ ದೋಸೆ ಇಡ್ಲಿಗೂ ಫಸ್ಟ್ ಕ್ಲಾಸೂ ಅಂತ ಜಗ್ಗಣ್ಣ ಹೇಳಿದ್ದಾನೆ.."

 

ಸರಿ.." ಅಕ್ಕಿ ಚೀಲ ಒಳಗಿಟ್ಟಾಯ್ತು ಮಧು ಬೆಂಗಳೂರಿಗೆ ತೆರಳುವ ಸಿದ್ಧತೆ.   ಮನೆಯ ತುಪ್ಪ ಪ್ಯಾಕ್ ಮಾಡಿ ಕೊಟ್ಟಿದ್ದೂ ಆಯ್ತು.


ದಿನ ಬಿಟ್ಟು ನಾಳೆಯ ತಿಂಡಿಗಾಗಿ ಅಕ್ಕಿ ನೆನೆಯಲು ಹಾಕೋಣ ಅಂದ್ಬಿಟ್ಟು ಚೀಲ ಬಿಡಿಸಿಅಳತೆಯ ಪಾವು ಚೀಲದಿಂದ ಅಕ್ಕಿಯನ್ನು ಹೊರ ತೆಗೆಯಿತು.


ಕುಚ್ಚುಲಕ್ಕಿ ಕಣ್ರೀ..  ನನ್ನ ಮಿಕ್ಸಿಯಲ್ಲಿ  ಅಕ್ಕಿ ಅರೆದು ದೋಸೆ ಮಾಡಿದ ಹಾಗೇ..


ಮಾರನೇ ದಿನ ಬೇರೆ ಗತಿಯಿಲ್ಲದೆ ಸಜ್ಜಿಗೆ ಬಜಿಲ್ ತಿಂದೆವು.

ಮಧ್ಯಾಹ್ನದೂಟಕ್ಕೆ  ಹೊಸ ಕುಚ್ಚುಲಕ್ಕಿಯಿಂದ ಅನ್ನ ಮಾಡಲಾಯಿತು ಬೆಳ್ಳಗೆ ಮಲ್ಲಿಗೆಯಂತಿದ್ದ ಕುಚ್ಚುಲಕ್ಕಿ ಅನ್ನ ಕಂಡಾಗ ನನ್ನ ಟ್ಯೂಬ್ ಲೈಟ್ ಹೊತ್ತಿ ಉರಿಯಿತು.


ನಾವೂ ಹಿಂದೆ ಗದ್ದೆ ಬೇಸಾಯವಂದಿಗರಾಗಿದ್ದಾಗ  ನಮ್ಮ ಭತ್ತದಿಂದಲೇ ತಿಂಡಿತಿನಿಸುಗಳ ವ್ಯವಹಾರಕ್ಕಾಗಿ ಪ್ರತ್ಯೇಕ ಅಕ್ಕಿ ಮಾಡಿ ಇಟ್ಕೊಳ್ತಿದ್ದೆವು ಅದೇ ತರಹ ಇದೂ.. 


ಮೊದಲಾಗಿ ಒಂದು ಪಾವು ಅಕ್ಕಿಗೆ ಕುದಿಯುವ ನೀರು ಎರೆದು ನೆನೆ ಹಾಕಿದ್ದಾಯಿತು.

ನೆನೆ ನೆನೆದು ಅಕ್ಕಿ ಉಬ್ಬಿತು.

ನೀರು ಬಸಿದು ಮಿಕ್ಸಿಗೆ ಸ್ವಲ್ಪ ಸ್ವಲ್ಪವೇ ಹಾಕಿ ತಿರುಗಿಸಿ ಹಿಟ್ಟು ಮಾಡಿಟ್ಟುತೀರ ನುಣ್ಣಗೂ ಅಲ್ಲ ತರಿಯಂತಹ ಹುಡಿ ದೊರೆಯಿತು.

ಪರವಾಗಿಲ್ಲ ಇಡ್ಲಿ ಪುಂಡಿಗಟ್ಟಿಗೆ ಆದೀತು.


ಇಂತಹ ಅಕ್ಕಿಯಿಂದ ನಾವು ಸಿಹಿಕಡುಬು ಮಾಡಲಿದ್ದೇವೆ ದೀಪಾವಳಿ ಬಂತಲ್ಲ ಮುಳ್ಳುಸೌತೆಯ ಕಡುಬು ದೀಪಾವಳಿಯ ವಿಶೇಷ ಖಾದ್ಯ.


ಹದ ಗಾತ್ರದ ಒಂದು ಮುಳ್ಳುಸೌತೆ ಮಾಡಿಟ್ಟು ಹಸುಕರುಗಳಿಗೆ ತಿನ್ನಿಸುವ ಕಾಲ ಹೋಯ್ತು ಆಳುಕಾಳು ಅಂತ ಇಲ್ಲ.. ಇದು ಕೋವಿಡ್19 ಕಲಿಕಾಲ ಏನಿದ್ದರೂ ಬೆಳಗಿನ ತಿಂಡಿ ಮಾತ್ರ ಒಂದು ಪಾವು ಅಕ್ಕಿ ಸಾಕು.

ಪಾವು ಅಂದ್ರೆ ಒಂದು ಲೋಟದ ಅಳತೆ ಅಂದಾಜು 250ಗ್ರಾಂ ಆದೀತು.


ಮೇಲೆ ಹೇಳಿದಂತೆ ಅಕ್ಕಿ ತರಿ ಮಾಡಿ ಇಡುವುದು.

ಒಂದು ಮುಳ್ಳುಸೌತೆ ತೊಳೆದು ತುರಿದು ಇಡುವುದು ಹಿಂದಿನಂತೆ ಮನೆಯಲ್ಲಿ ಮುಳ್ಳುಸೌತೆ ಬೆಳೆಸುವುದಕ್ಕಿಲ್ಲ

ಮುಳ್ಳುಸೌತೆ ತರಕಾರಿ ಮಾರುಕಟ್ಟೆಯಲ್ಲಿ ಸಿಗುವಂತದ್ದು

ಪುಟ್ಟದಾದರೆ ಎರಡು ಬೇಕಾದೀತು.

ಅರ್ಧ ತೆಂಗಿನಕಾಯಿ ತುರಿ.

ಸಿಹಿಗೆ ತಕ್ಕಷ್ಟು ಹುಡಿ ಬೆಲ್ಲ.

ರುಚಿಗೆ ಉಪ್ಪು.


ಬಾಡಿಸಿ ಇಟ್ಟ ಬಾಳೆ ಎಲೆ ಒಣ ಬಟ್ಟೆಯಲ್ಲಿ ಒರೆಸಿ ಇಟ್ಟಿರಬೇಕು.

ಒಲೆಯ ಮೇಲೆ ಅಟ್ಟಿನಳಗೆ ( ಇಡ್ಲಿಪಾತ್ರೆ ).  ನೀರು ಕುದಿಯುತ್ತಿರಬೇಕು.


ಅಕ್ಕಿತರಿಮುಳ್ಳುಸೌತೆ ಕೊಚ್ಚಲು ಕಾಯಿತುರಿ ಇತ್ಯಾದಿಗಳನ್ನು ಪರಸ್ಪರ ಹೊಂದಿಕೊಳ್ಳುವಂತೆ ಬೆರೆಸಿಕೊಳ್ಳತಕ್ಕದ್ದು.

ಬೇಕಿದ್ದರೆ ಏಲಕ್ಕಿ ಪುಡಿ ಹಾಕಬಹುದು.


ಬಾಳೆ ಎಲೆಯೊಳಗೆ ತುಂಬಿ ಸರಿಯಾಗಿ ಮಡಚಿ , ಅಟ್ಟಿನಳಗೆಯೊಳಗೆ ಇಡುತ್ತ ಬನ್ನಿ.

ಒಟ್ಟಾರೆಯಾಗಿ ಆರು ಕಡುಬುಗಳಾಯಿತು.

ನೀರು ಕುದಿದ ನಂತರ ಇಪ್ಪತೈದರಿಂದ ಮೂವತ್ತು ನಿಮಿಷ ಬೇಯಲಿನೀರು ಆರದಂತೆ ಸಾಕಷ್ಟು ನೀರು ಎರೆದಿರಬೇಕು.

ಎಂದಿನಂತೆ ಇಂಡಕ್ಷನ್ ಸ್ಟವ್ ಸಮಯದ ಲೆಕ್ಕಾಚಾರದ ಹೊಂದಾಣಿಕೆಯೊಂದಿಗೆ ಬೇಯಿಸಿ ಕೊಟ್ಟಿತು.





ಕುಚ್ಚುಲಕ್ಕಿಯ ಹಿಟ್ಟು ನನ್ನದಾಗಿದ್ದುದರಿಂದ ಮುಳ್ಳುಸೌತೆ ಬೆರೆಸಿದ ಕೂಡಲೆ ನೀರು ಬಿಟ್ಟುಕೊಳ್ಳಲಿಲ್ಲ ಅಕ್ಕಿ ಹಿಟ್ಟು ನೀರನ್ನು ಹೀರಿಕೊಂಡಿದೆ ಅನ್ನಿಬೆಳ್ತಿಗೆ ಅಕ್ಕಿಯ ತರಿ ಆಗಿರುತ್ತಿದ್ದರೆ ಮುಳ್ಳುಸೌತೆ ಬೆರೆಸಿದ ಕೂಡಲೆ ಹಿಟ್ಟು ನೀರು ನೀರಾಗಿ ದೋಸೆ ಎರೆದರಾದೀತೆಂಬ ಪಡಿಪಾಟಲು ಇಲ್ಲಿಲ್ಲ


ಬಾಳೆ ಎಲೆ ಇಲ್ಲದೆಯೂ ಹಿಟ್ಟನ್ನು ಹಾಗೇನೇ ಮುದ್ದೆಯಂತೆ ಇಟ್ಟು ಕೂಡಾ ಬೇಯಿಸಬಹುದು.


ಕೊಟ್ಟಿಗೆಯಂತೂ ಗೆದ್ದಿತುಚಟ್ನಿ ಇಲ್ಲದೇನೆ ತಿನ್ನಬಹುದು ಬಿಸಿ ಬಿಸಿಯಾಗಿ ಕಟ್ ಕಟ್ ಮಾಡಿ ತಿನ್ನಿ ಕೊಟ್ಟಿಗೆಯ ಕಟ್ಟಿಂಗ್ ಕೂಡಾ ಉಲ್ಲಾಸ ತಂದಿತು.  ತಿನ್ನುವಾಗ ಕೇರಳದ ಪುಟ್ಟು ಎಂಬ ತಿಂಡಿ ನೆನಪಾಗಿದ್ದು ಸುಳ್ಳಲ್ಲ.


ಮಕ್ಕಳು ಇರಬೇಕಾಗಿತ್ತು ಇದೇನು ಹೊಸ ಬಗೆಯ ಕೇಕ್ ಮಾಡಿದ್ದೀ.."  ಎಂದೆಲ್ಲ ಹುರುಪಿನ ಮಾತು ಕೇಳಬಹುದಾಗಿತ್ತು.   ಚಿಂತೆಯಿಲ್ಲ,   ದೀಪಾವಳಿ ಹಾಗೂ ಸಂಕ್ರಾಂತಿ ಅಂದ್ಬಿಟ್ಟು ಎಲ್ಲರೂ ಬರುವವರಿದ್ದಾರೆ.   ಇನ್ನೊಮ್ಮೆ ಮಾಡೋಣ.