" ಮಧೂ, ಈ ರೇಶನ್ ಅಕ್ಕಿ, ಊಟಕ್ಕೂ ಆಗುತ್ತೆ, ತಿಂಡಿಗೂ ಸರಿ ಹೋಗುತ್ತೆ.. ಆದ್ರೆ ಮೂರೇ ಕಿಲೊ ಕೊಟ್ಟಿದಾರಲ್ಲ, ಯಾವುದಕ್ಕೂ ಸಾಲದು. "
" ಬೇರೆ ಅಕ್ಕಿ ತಂದ್ರಾಯ್ತು."
" ಮೊದಲು ರೇಶನ್ ಶಾಪಿನಲ್ಲಿ ಕೊಡ್ತಾರೇನೊ ಅಂತ ಕೇಳಿ ನೋಡು.. ಗಂಧಸಾಲೆ ಅಕ್ಕಿಯ ಪರಿಮಳ ಉಂಟು ಈ ಅಕ್ಕಿಗೆ. "
ಕಾರು ರಸ್ತೆಯುದ್ದಕೆ ಹೋಯಿತು. ಬರುತ್ತಾ ತರಕಾರಿಗಳೂ ಅಕ್ಕಿಯೂ ಬಂತು. " ಅಮ್ಮ, ರೇಷನ್ ಶಾಪು ಇನ್ನು ಮುಂದಿನ ತಿಂಗಳಿಗೆ ಕೊಡೂದಂತೆ, ಇದೀಗ ಬಾಳಿಗರ ಅಂಗಡಿಯಿಂದ ಅಕ್ಕಿ ತಂದಿದ್ದು.. ಊಟಕ್ಕೂ ಆಗುತ್ತಂತೆ, ದೋಸೆ ಇಡ್ಲಿಗೂ ಫಸ್ಟ್ ಕ್ಲಾಸೂ ಅಂತ ಜಗ್ಗಣ್ಣ ಹೇಳಿದ್ದಾನೆ.."
" ಸರಿ.." ಅಕ್ಕಿ ಚೀಲ ಒಳಗಿಟ್ಟಾಯ್ತು. ಮಧು ಬೆಂಗಳೂರಿಗೆ ತೆರಳುವ ಸಿದ್ಧತೆ. ಮನೆಯ ತುಪ್ಪ ಪ್ಯಾಕ್ ಮಾಡಿ ಕೊಟ್ಟಿದ್ದೂ ಆಯ್ತು.
ದಿನ ಬಿಟ್ಟು ನಾಳೆಯ ತಿಂಡಿಗಾಗಿ ಅಕ್ಕಿ ನೆನೆಯಲು ಹಾಕೋಣ ಅಂದ್ಬಿಟ್ಟು ಚೀಲ ಬಿಡಿಸಿ, ಅಳತೆಯ ಪಾವು ಚೀಲದಿಂದ ಅಕ್ಕಿಯನ್ನು ಹೊರ ತೆಗೆಯಿತು.
ಕುಚ್ಚುಲಕ್ಕಿ ಕಣ್ರೀ.. ನನ್ನ ಮಿಕ್ಸಿಯಲ್ಲಿ ಈ ಅಕ್ಕಿ ಅರೆದು ದೋಸೆ ಮಾಡಿದ ಹಾಗೇ..
ಮಾರನೇ ದಿನ ಬೇರೆ ಗತಿಯಿಲ್ಲದೆ ಸಜ್ಜಿಗೆ ಬಜಿಲ್ ತಿಂದೆವು.
ಮಧ್ಯಾಹ್ನದೂಟಕ್ಕೆ ಈ ಹೊಸ ಕುಚ್ಚುಲಕ್ಕಿಯಿಂದ ಅನ್ನ ಮಾಡಲಾಯಿತು. ಬೆಳ್ಳಗೆ ಮಲ್ಲಿಗೆಯಂತಿದ್ದ ಕುಚ್ಚುಲಕ್ಕಿ ಅನ್ನ ಕಂಡಾಗ ನನ್ನ ಟ್ಯೂಬ್ ಲೈಟ್ ಹೊತ್ತಿ ಉರಿಯಿತು.
ನಾವೂ ಹಿಂದೆ ಗದ್ದೆ ಬೇಸಾಯವಂದಿಗರಾಗಿದ್ದಾಗ ನಮ್ಮ ಭತ್ತದಿಂದಲೇ ತಿಂಡಿತಿನಿಸುಗಳ ವ್ಯವಹಾರಕ್ಕಾಗಿ ಪ್ರತ್ಯೇಕ ಅಕ್ಕಿ ಮಾಡಿ ಇಟ್ಕೊಳ್ತಿದ್ದೆವು. ಅದೇ ತರಹ ಇದೂ..
ಮೊದಲಾಗಿ ಒಂದು ಪಾವು ಅಕ್ಕಿಗೆ ಕುದಿಯುವ ನೀರು ಎರೆದು ನೆನೆ ಹಾಕಿದ್ದಾಯಿತು.
ನೆನೆ ನೆನೆದು ಅಕ್ಕಿ ಉಬ್ಬಿತು.
ನೀರು ಬಸಿದು ಮಿಕ್ಸಿಗೆ ಸ್ವಲ್ಪ ಸ್ವಲ್ಪವೇ ಹಾಕಿ ತಿರುಗಿಸಿ ಹಿಟ್ಟು ಮಾಡಿಟ್ಟು, ತೀರ ನುಣ್ಣಗೂ ಅಲ್ಲ, ತರಿಯಂತಹ ಹುಡಿ ದೊರೆಯಿತು.
ಪರವಾಗಿಲ್ಲ, ಇಡ್ಲಿ, ಪುಂಡಿಗಟ್ಟಿಗೆ ಆದೀತು.
ಇಂತಹ ಅಕ್ಕಿಯಿಂದ ನಾವು ಸಿಹಿಕಡುಬು ಮಾಡಲಿದ್ದೇವೆ, ದೀಪಾವಳಿ ಬಂತಲ್ಲ, ಮುಳ್ಳುಸೌತೆಯ ಕಡುಬು ದೀಪಾವಳಿಯ ವಿಶೇಷ ಖಾದ್ಯ.
ಹದ ಗಾತ್ರದ ಒಂದು ಮುಳ್ಳುಸೌತೆ, ಮಾಡಿಟ್ಟು ಹಸುಕರುಗಳಿಗೆ ತಿನ್ನಿಸುವ ಕಾಲ ಹೋಯ್ತು, ಆಳುಕಾಳು ಅಂತ ಇಲ್ಲ.. ಇದು ಕೋವಿಡ್19ರ ಕಲಿಕಾಲ, ಏನಿದ್ದರೂ ಬೆಳಗಿನ ತಿಂಡಿ ಮಾತ್ರ. ಒಂದು ಪಾವು ಅಕ್ಕಿ ಸಾಕು.
ಪಾವು ಅಂದ್ರೆ ಒಂದು ಲೋಟದ ಅಳತೆ, ಅಂದಾಜು 250ಗ್ರಾಂ ಆದೀತು.
ಮೇಲೆ ಹೇಳಿದಂತೆ ಅಕ್ಕಿ ತರಿ ಮಾಡಿ ಇಡುವುದು.
ಒಂದು ಮುಳ್ಳುಸೌತೆ ತೊಳೆದು ತುರಿದು ಇಡುವುದು. ಹಿಂದಿನಂತೆ ಮನೆಯಲ್ಲಿ ಮುಳ್ಳುಸೌತೆ ಬೆಳೆಸುವುದಕ್ಕಿಲ್ಲ.
ಮುಳ್ಳುಸೌತೆ ತರಕಾರಿ ಮಾರುಕಟ್ಟೆಯಲ್ಲಿ ಸಿಗುವಂತದ್ದು,
ಪುಟ್ಟದಾದರೆ ಎರಡು ಬೇಕಾದೀತು.
ಅರ್ಧ ತೆಂಗಿನಕಾಯಿ ತುರಿ.
ಸಿಹಿಗೆ ತಕ್ಕಷ್ಟು ಹುಡಿ ಬೆಲ್ಲ.
ರುಚಿಗೆ ಉಪ್ಪು.
ಬಾಡಿಸಿ ಇಟ್ಟ ಬಾಳೆ ಎಲೆ, ಒಣ ಬಟ್ಟೆಯಲ್ಲಿ ಒರೆಸಿ ಇಟ್ಟಿರಬೇಕು.
ಒಲೆಯ ಮೇಲೆ ಅಟ್ಟಿನಳಗೆ ( ಇಡ್ಲಿಪಾತ್ರೆ ). ನೀರು ಕುದಿಯುತ್ತಿರಬೇಕು.
ಅಕ್ಕಿತರಿ, ಮುಳ್ಳುಸೌತೆ ಕೊಚ್ಚಲು, ಕಾಯಿತುರಿ ಇತ್ಯಾದಿಗಳನ್ನು ಪರಸ್ಪರ ಹೊಂದಿಕೊಳ್ಳುವಂತೆ ಬೆರೆಸಿಕೊಳ್ಳತಕ್ಕದ್ದು.
ಬೇಕಿದ್ದರೆ ಏಲಕ್ಕಿ ಪುಡಿ ಹಾಕಬಹುದು.
ಬಾಳೆ ಎಲೆಯೊಳಗೆ ತುಂಬಿ, ಸರಿಯಾಗಿ ಮಡಚಿ , ಅಟ್ಟಿನಳಗೆಯೊಳಗೆ ಇಡುತ್ತ ಬನ್ನಿ.
ಒಟ್ಟಾರೆಯಾಗಿ ಆರು ಕಡುಬುಗಳಾಯಿತು.
ನೀರು ಕುದಿದ ನಂತರ ಇಪ್ಪತೈದರಿಂದ ಮೂವತ್ತು ನಿಮಿಷ ಬೇಯಲಿ. ನೀರು ಆರದಂತೆ ಸಾಕಷ್ಟು ನೀರು ಎರೆದಿರಬೇಕು.
ಎಂದಿನಂತೆ ಇಂಡಕ್ಷನ್ ಸ್ಟವ್ ಸಮಯದ ಲೆಕ್ಕಾಚಾರದ ಹೊಂದಾಣಿಕೆಯೊಂದಿಗೆ ಬೇಯಿಸಿ ಕೊಟ್ಟಿತು.
ಕುಚ್ಚುಲಕ್ಕಿಯ ಹಿಟ್ಟು ನನ್ನದಾಗಿದ್ದುದರಿಂದ ಮುಳ್ಳುಸೌತೆ ಬೆರೆಸಿದ ಕೂಡಲೆ ನೀರು ಬಿಟ್ಟುಕೊಳ್ಳಲಿಲ್ಲ. ಅಕ್ಕಿ ಹಿಟ್ಟು ನೀರನ್ನು ಹೀರಿಕೊಂಡಿದೆ ಅನ್ನಿ. ಬೆಳ್ತಿಗೆ ಅಕ್ಕಿಯ ತರಿ ಆಗಿರುತ್ತಿದ್ದರೆ ಮುಳ್ಳುಸೌತೆ ಬೆರೆಸಿದ ಕೂಡಲೆ ಹಿಟ್ಟು ನೀರು ನೀರಾಗಿ ದೋಸೆ ಎರೆದರಾದೀತೆಂಬ ಪಡಿಪಾಟಲು ಇಲ್ಲಿಲ್ಲ.
ಬಾಳೆ ಎಲೆ ಇಲ್ಲದೆಯೂ ಹಿಟ್ಟನ್ನು ಹಾಗೇನೇ ಮುದ್ದೆಯಂತೆ ಇಟ್ಟು ಕೂಡಾ ಬೇಯಿಸಬಹುದು.
ಕೊಟ್ಟಿಗೆಯಂತೂ ಗೆದ್ದಿತು. ಚಟ್ನಿ ಇಲ್ಲದೇನೆ ತಿನ್ನಬಹುದು. ಬಿಸಿ ಬಿಸಿಯಾಗಿ ಕಟ್ ಕಟ್ ಮಾಡಿ ತಿನ್ನಿ. ಕೊಟ್ಟಿಗೆಯ ಕಟ್ಟಿಂಗ್ ಕೂಡಾ ಉಲ್ಲಾಸ ತಂದಿತು. ತಿನ್ನುವಾಗ ಕೇರಳದ ಪುಟ್ಟು ಎಂಬ ತಿಂಡಿ ನೆನಪಾಗಿದ್ದು ಸುಳ್ಳಲ್ಲ.
ಮಕ್ಕಳು ಇರಬೇಕಾಗಿತ್ತು. " ಇದೇನು ಹೊಸ ಬಗೆಯ ಕೇಕ್ ಮಾಡಿದ್ದೀ.." ಎಂದೆಲ್ಲ ಹುರುಪಿನ ಮಾತು ಕೇಳಬಹುದಾಗಿತ್ತು. ಚಿಂತೆಯಿಲ್ಲ, ದೀಪಾವಳಿ ಹಾಗೂ ಸಂಕ್ರಾಂತಿ ಅಂದ್ಬಿಟ್ಟು ಎಲ್ಲರೂ ಬರುವವರಿದ್ದಾರೆ. ಇನ್ನೊಮ್ಮೆ ಮಾಡೋಣ.
0 comments:
Post a Comment