" ಮಧೂ, ಹಾಲು ತರುವಾಗ ಹಾಗೇ ತರಕಾರೀನೂ ತಾ.. "
" ಅಮ್ಮ, ಇವತ್ತು ಸಂಡೇ, ನಾಳೆ ಬಳಿಗ್ಗೇನೇ ತರಕಾರಿ ತಂದು ಕೊಟ್ಟರಾಯಿತಲ್ಲ. "
ನಾಳೆ ಎಂಬ ಮಂಡೇ ಬಂದಿತು. ಮನೆಯೇ ಕಾರ್ಯಾಲಯ ಆಗಿರುವಾಗ, ಬಿಡುವಿಲ್ಲದ ಸೂಚನೆಯೂ ದೊರೆಯಿತು.
ಮನೆ ಹಿತ್ತಲ ಸೊಪ್ಪೇ ಗತಿ.
ತಪಾಸಣೆಗೆ ಹೊರಟೆ, ತಪಾಸಿಸುವುದೇನು? ಎಲ್ಲೆಲ್ಲೂ ಹಸಿರು. ನೆಲಬಸಳೆ ಕುಡಿ, ಪಕ್ಕದಲ್ಲೇ ಕುಡಿಯೊಡೆದ ಅಂಬಟೆಯ ಚಿಗರುಗಳು, ಎಳೆಯ ಕರಿಬೇವಿನೆಸಳುಗಳು, ನೆಲದಿಂದ ತಲೆಯೆತ್ತುತ್ತಿರುವ ಕಾಡು ಕೆಸುವಿನೆಲೆ, ಚಕ್ರಮುನಿಯ ಚಿಗುರು, ನುಗ್ಗೇಸೊಪ್ಪು, ಸುವಾಸನೆಯ ನೆರುಗಳ ಸೊಪ್ಪು ಎಲ್ಲವೂ ಕೂಡಿದಾಗ ಬಟ್ಟಲು ತುಂಬಿತು.
ಮಾಡೂದೇನು?
ಬೆಂಗಳೂರು ಸೇರಿರುವ ಮಗಳು, " ರಾಗಿ ಮುದ್ದೆಯೂ ಬಸ್ಸಾರೂ ಚೆನ್ನಾಗಿರುತ್ತೆ " ಅಂದಿದ್ದು ನೆನಪಾಗಿ ಇಷ್ಟು ಸೊಪ್ಪುಸದೆ ಕೊಯ್ಯುವಂತಾಯಿತು. "ಎಲ್ಲವನ್ನೂ ಬೇಯಿಸಿ ಅರೆಯಬೇಕು. " ಎಂದು ಮಾಡುವ ವಿಧಾನವನ್ನೂ ತಿಳಿಸಿಕೊಟ್ಟಿದ್ದಳು.
ಈಗ ಸೊಸೆಯೂ ಮನೆಯಲ್ಲಿದ್ದಾಳೆ, ಬೆಂಗಳೂರೇ ಅವಳ ತವರು ಮನೆ, ಹೇಗೂ ಬಸ್ಸಾರು ತಿಳಿದಿದ್ದೀತು.
" ಮೈತ್ರೀ, ತರಕಾರಿ ಏನೂ ಇಲ್ಲ, ಈ ಸೊಪ್ಪಿನ ಬಸ್ಸಾರು ಮಾಡುವ ಕ್ರಮ... "
" ಅಯ್ಯೋ, ಅದಕ್ಕೇನಂತೆ.. ಯೂಟ್ಯೂಬು ನೋಡಿದ್ರಾಯ್ತು.. "
ಸೊಪ್ಪುಗಳನ್ನು ಹೆಚ್ಚಿಟ್ಟು, ಅವಶ್ಯವಿದ್ದಷ್ಟು ತೊಗರಿಬೇಳೆ ಬೇಯಿಸುವುದು. ಅತಿಯಾಗಿ ಬೇಯಿಸಬೇಕಿಲ್ಲ, ಅರೆಯುವುದಿದೆ. ಬೇಯಿಸಿದ ನೀರು ಬಸಿದು ಇಡುವುದು. ಬೇಳೆ ಆರಲಿ.
ಬೇಳೆ ಬೇಯಿಸಿದ ನೀರಿನಲ್ಲಿ ಸೊಪ್ಪು ಬೇಯಿಸಿ. ಬೇಳೆ ಸೊಪ್ಪು ಒಟ್ಟಿಗೆ ಬೇಯಿಸುವಂತಿಲ್ಲ, ಸೊಪ್ಪು ತುಂಬ ಇದ್ದರೆ ಜೊತೆಗೊಂದು ಪಲ್ಯವನ್ನೂ ಮಾಡಬಹುದು.
ಸೊಪ್ಪು ಬೇಗನೆ ಬೆಂದಿತು, ಬೇಯುವಾಗ ಉಪ್ಪು, ಹುಣಸೆಯ ಹುಳಿ ಹಾಕತಕ್ಕದ್ದು. ಇದ್ದವರು ಒಂದು ಟೊಮ್ಯಾಟೋ, ಹಸಿಮೆಣಸು ಕೂಡಾ ಹಾಕುವುದು. ನನ್ನದು ಒಂದೇ ಮೆಣಸು.
ಒಂದು ಹಿಡಿ ತೆಂಗಿನ ತುರಿ ಇರಲೇಬೇಕು.
2 ನೀರುಳ್ಳಿ ಕತ್ತರಿಸಿ,
1 ಬೆಳ್ಳುಳ್ಳಿ ಗೆಡ್ಡೆ ಬಿಡಿಸಿ,
ಅರ್ಧ ಇಂಚು ಶುಂಠಿ, ಸಿಪ್ಪೆ ಹೆರೆಯಿರಿ.
ಇಷ್ಟೇನಾ ಅಂದ್ಬಿಟ್ಟು ಶಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕದಿರಿ.
ಏಳೆಂಟು ಕಾಳುಮೆಣಸು, ಗುಂಡುಕಲ್ಲಿನಲ್ಲಿ ಜಜ್ಜಿ,
ಬೆಂದ ಸೊಪ್ಪಿನ ನೀರು ಪ್ರತ್ಯೇಕಿಸಿ,
ತೆಂಗಿನ ತುರಿ, ನೀರುಳ್ಳಿ ಬೆಳ್ಳುಳ್ಳಿ ಶುಂಠಿ ಕಾಳುಮೆಣಸು ಕೂಡಿ ಸೊಪ್ಪು ಹಾಗೂ ಬೇಳೆ ನುಣ್ಣಗೆ ಅರೆಯಿರಿ.
ಬಾಣಲೆಯಲ್ಲಿ ಒಗ್ಗರಣೆಗಿಟ್ಟು ಸಾಸಿವೆ ಸಿಡಿಸಿ ಕರಿಬೇವು ಹಾಕಿರಿ.
ಅರೆದಂತಹ ಸೊಪ್ಪಿನ ಮಸಾಲೆ ಸುರಿಯಿರಿ.
ಬೇಳೆ ಬೇಯಿಸಿದ ನೀರು, ಸೊಪ್ಪಿನ ನೀರು ಎರೆಯಿರಿ.
ಈಗ ನನಗೆ ಮೈತ್ರಿಯ ನೆರವು ಬೇಕಾಯಿತು.
" ಮೈತ್ರೀ, ಇದಕ್ಕೆ ನೀರು ಸಾಕೋ ಬೇಕೋ? "
" ಇದು ಸಾಂಬಾರ್ ತರಹ ಇರಬೇಕು, ಚಟ್ನಿಯ ಹಾಗೆ ಗಟ್ಟ ಮುದ್ದೆ ಆಗಬಾರದು. "
" ಸ್ವಲ್ಪ ರಸಂಪುಡಿ, ಅರಸಿನ ಹುಡಿ ಬೀಳ್ಬೇಕು.. " ಎಂದು ಅವಳೇ ವಿವಿಧ ಹುಡಿಗಳನ್ನು ಹಾಕಿ, ನೀರನ್ನೂ ಎರೆದು, ತುಸು ಉಪ್ಪು ಬೀಳಿಸಿ ಕುದಿಯಲಿಟ್ಟಳು.
" ಬೆಲ್ಲ ಬೇಡ. "
" ಸರಿ, ಉಪ್ಪು ಹುಳಿ ಮೆಣಸು ಇದ್ದರಾಯಿತು. "
ನನಗಂತೂ ಈ ಹೊಸ ವ್ಯಂಜನ ಇಷ್ಟವಾಯಿತು. ರಾತ್ರಿಯ ಚಪಾತಿಗೂ ಹಿತ. ಬೇಳೆಕಾಳುಗಳ ಪ್ರೊಟೀನ್, ಸೊಪ್ಪುಗಳ ಖನಿಜಾಂಶಗಳೂ ಕೂಡಿ ಸಂಯುಕ್ತ ಆಹಾರ ಪದಾರ್ಥ ಈ ಬಸ್ಸಾರು. ತಂಬುಳಿಗಿಂತ ಒಂದು ಕೈ ಮೇಲೆ ಅನ್ನಿ ಬಸ್ಸಾರು.
ಯಾವುದೇ ಬೇಳೆಕಾಳುಗಳೂ ಆದೀತು, ಸೊಪ್ಪುಗಳೂ ಅಷ್ಟೇ, ಹಿತ್ತಲ ಕಾಡುಬೆಳೆಗಳನ್ನೇ ಆಯ್ದು ಕೊಳ್ಳುವ ಜಾಣತನ ನಮ್ಮಲ್ಲಿದ್ದರಾಯಿತು. ಇನ್ನೊಮ್ಮೆ ಹಲಸಿನ ಬೇಳೆಯ ಬಸ್ಸಾರು ಮಾಡಬೇಕೆಂದಿದೆ. ಈಗ ದಿನವೂ ಹಲಸು ತಿನ್ನುವ ಯೋಗ, ಬೇಳೆಗಳನ್ನು ಸಂಗ್ರಹಿಸಿ ಇಡುವ ಕಾಲ.
0 comments:
Post a Comment