Pages

Ads 468x60px

Saturday 15 September 2018

ಹಬ್ಬದ ಪಂಚಕಜ್ಜಾಯ




          


ಅಮ್ಮ, ಮುಂದಿನವಾರ ಚೌತಿ ಬರ್ತಾ ಇದೆ, ಗೊತ್ತಲ್ಲ.. “
“ ಗೊತ್ತೂ.. “
“ ನಾವ್ಯಾರೂ ಮನೆಯಲ್ಲಿಲ್ಲ, ಅದೂ ಗೊತ್ತಲ್ಲ... ಮೊದಲಿನ ಹಾಗೆ ಹಬ್ಬದ ಅಡುಗೆ ಮಾಡಿ ಒದ್ದಾಡಬೇಡ. “
“ ಏನೂ ಮಾಡದಿದ್ರೆ ಹೇಗೆ, ಒಂದ್ ಪಾಯಸ ಮಾಡಿ... “
“ ಹ್ಞಾ, ಸರಿ... ನನ್ನ ಮೆಟ್ರೋ ಸ್ಟೇಶನ್ ಬಂತು, ಸಂಜೆ ಮಾತಾಡೋಣ. “ ಎನ್ನುವಲ್ಲಿಗೆ ಮಧು ಹಾಗೂ ನನ್ನ ಮಾತುಕತೆಗೆ ಬ್ರೇಕ್ ಬಿತ್ತು.

ಸಂಜೆಯ ಚಹಾ ಆದ ನಂತರ ಹಾಲು ತರಲಿಕ್ಕೆ ಹೊರಟ ಮನೆ ಯಜಮಾನರ ಕೈಗೆ ನನ್ನ ಲಿಸ್ಟ್ ಬರೆದಿದ್ದನ್ನು ಕೊಟ್ಟೆ.
“ ಇದೇನು ದ್ರಾಕ್ಷಿ ಗೇರುಬೀಜ ಅಂತ ಬರೆದಿದ್ದೀಯಲ್ಲ... “
“ ಅದು ಚೌತಿಗೆ. “
“ ಹುರಿಗಡಲೆ ಬೇಡವೇ ? “
“ ಅದನ್ನೂ ತನ್ನೀ. “

ಮೊದಲಿನಿಂದಲೂ ನಮ್ಮ ಮನೆಯ ಚೌತಿಗೆ ಹುರಿಗಡಲೆಯ ಪಂಚಕಜ್ಜಾಯ ಆಗಲೇಬೇಕು. ಮಾವನವರು ಇದ್ದಾಗ ಕಿಲೋ ಲೆಕ್ಕದಲ್ಲಿ ಹುರಿಗಡಲೆ ಬರುತ್ತಿತ್ತು. ಪಂಚಕಜ್ಜಾಯವು ಮನೆಮಂದಿಗೆ ಮಾತ್ರವಲ್ಲದೆ ಆಳುಕಾಳುಗಳಿಗೂ, ಸಂಜೆಯ ಚಹಾಕೂಟಕ್ಕೆ ಬರುವ ಖಾಯಂ ಅತಿಥಿಗಳಿಗೂ ಹಂಚಲು ವಿನಿಯೋಗವಾಗುತ್ತಿತ್ತು.

ಈಗ ನಾವು ಒಂದು ಲೋಟ ಯಾ ಕುಡ್ತೆ ಅಳತೆಯಲ್ಲಿ ಹುರಿಗಡಲೆಯ ಪಂಚಕಜ್ಜಾಯ ಮಾಡುವವರಿದ್ದೇವೆ.
ಹೇಗೂ ಇದು ಹುರಿಗಡಲೆಯಾಗಿರುವುದರಿಂದ ಪುನಃ ಹುರಿಯಬೇಕಾಗಿಲ್ಲ. ಮಿಕ್ಸಿಯಲ್ಲಿ ತರಿತರಿಯಾಗಿ ಹುಡಿ ಮಾಡಿಕೊಳ್ಳುವುದು ಹಾಗೂ ಶುಭ್ರವಾದ ನೀರ ಹನಿಯೇನೂ ಇಲ್ಲದ ತಪಲೆಗೆ ಹಾಕಿಡುವುದು.
ಅಷ್ಟೇ ಪ್ರಮಾಣದ ಸಕ್ಕರೆ ಅಳೆದು ಹುಡಿ ಮಾಡುವುದು, ಅದೇ ತಪಲೆಗೆ ಹಾಕುವುದು.
ನಾನ್ ಸ್ಟಿಕ್ ಬಾಣಲೆಯಲ್ಲಿ ಒಂದು ಚಮಚ ಎಳ್ಳು ಹುರಿದು, ಗುಂಡುಕಲ್ಲಿನಲ್ಲಿ ಜಜ್ಜಿ ಹಾಕುವುದು.
ಒಂದು ಲೋಟ ತಾಜಾ ಅಂದರೆ ಆಗತಾನೇ ಒಡೆದ ಹಸಿ ತೆಂಗಿನಕಾಯಿಯ ತುರಿ, ಇದನ್ನು ಪರಿಮಳ ಬರುವಂತೆ ಬಾಣಲೆಯಲ್ಲಿ ಹುರಿಯಿರಿ, ತೆಂಗಿನತುರಿಯ ನೀರಿನಂಶವೆಲ್ಲ ಹೋಗಬೇಕು, ಹುರಿಯಲು ಎಣ್ಣೆ ಯಾ ತುಪ್ಪದ ಬಳಕೆ ಇಲ್ಲಿ ಇಲ್ಲ, ತೆಂಗಿನಕಾಯಿಯಲ್ಲಿ ಸ್ವಾಭಾವಿಕವಾಗಿ ಇರುವ ಜಿಡ್ಡು ಸಾಕಾಗುತ್ತದೆ. ಹುರಿದ ತೆಂಗಿನತುರಿಯನ್ನು ತಪಲೆಗೆ ಹಾಕಿಕೊಳ್ಳುವುದು.
ಅದೇ ಬಾಣಲೆಗೆ ಒಂದೆರಡು ಚಮಚ ತುಪ್ಪ ಎರೆದು, ಗೇರುಬೀಜವನ್ನು ಹುರಿದು, ಒಣದ್ರಾಕ್ಷಿ ಗೇರುಬೀಜಗಳಿಗೆ ಇಷ್ಟೇ ಹಾಕಬೇಕೆಂಬ ಲೆಕ್ಕಾಚಾರ ಇಲ್ಲಿಲ್ಲ, ಕೈಯಲ್ಲಿ ಬಂದಷ್ಟು ಹಾಕುವುದು.

ಈಗ ನಮ್ಮ ಪಂಚಕಜ್ಜಾಯದಲ್ಲಿ ಹುರಿಗಡಲೆ, ಸಕ್ಕರೆ, ಎಳ್ಳು, ತೆಂಗಿನತುರಿ ಹಾಗೂ ತುಪ್ಪ ಸೇರಿದಾಗ ಐದು ವಿಧ ವಸ್ತುಗಳು ಕೂಡಿವೆ.  
ಇದ್ದರೆ ಜೇನು ಒಂದೆರಡು ಚಮಚ ಎರೆಯಿರಿ.
 ಏಲಕ್ಕಿಯನ್ನೂ ಗುದ್ದಿ ಹಾಕಲಡ್ಡಿಯಿಲ್ಲ.
ಎಲ್ಲವನ್ನೂ ಮಿಶ್ರಗೊಳಿಸುವಲ್ಲಿಗೆ,
ದೇವರ ಮುಂದೆ ದೀಪ ಹಚ್ಚಿಟ್ಟು,
ನಮಸ್ಕರಿಸಿ,
ಪಂಚಕಜ್ಜಾಯ ತಿನ್ನಿರಿ.

        

ಅಡುಗೆಮನೆಯಲ್ಲಿ ಹುರಿಗಡಲೆ ಯಾವಾಗಲೂ ಇರಬೇಕು. ತೆಂಗಿನತುರಿಯೊಂದಿಗೆ ಹುರಿಗಡಲೆಯನ್ನೂ ಹಾಕಿಕೊಂಡು ಸಾರು, ರಸಂ, ಚಟ್ಣಿ. ಇತ್ಯಾದಿ ಅಡುಗೆಗೆ ಯೋಗ್ಯ ಸಿದ್ಧವಸ್ತು.
ನಿಧಾನಗತಿಯಲ್ಲಿ ಜೀರ್ಣವಾಗುವ ಹುರಿಗಡಲೆ ಡಯಾಬಿಟೀಸ್ ರೋಗಿಗಳಿಗೆ ಆದರ್ಶಪ್ರಾಯವಾದದ್ದು. ಡಯಟಿಂಗ್ ಮಾಡಿ ತೂಕ ಇಳಿಸುವ ಸಾಹಸಿಗಳಿಗೂ ಉತ್ತಮ.
ಕೊಬ್ಬುರಹಿತವಾದ ಹುರಿಗಡಲೆ, ಹೃದಯವ್ಯಾಧಿಯನ್ನೂ ದೂರ ತಳ್ಳುವುದು.
ಹುರಿಗಡಲೆ ತಿನ್ನುವುದರಿಂದ ಕ್ಯಾಲ್ಸಿಯಂ, ಪೊಟಾಶಿಯಂ, ಮ್ಯಾಗ್ನೇಶಿಯಂ ಎಂಬಂತಹ ಖನಿಜಗಳು ಉಚಿತವಾಗಿ ಲಭ್ಯ.
ಪ್ರೊಟೀನ್, ಫೈಬರ್ ಸಮೃಧ್ಧಿಯಿಂದ ದೇಹದ ಶಕ್ತಿವರ್ಧಕ ನಮ್ಮ ಹುರಿಗಡಲೆ.

“ ಅಮ್ಮ, ತಂದಿರೋದನ್ನೆಲ್ಲ ಪಂಚಕಜ್ಜಾಯ ಮಾಡಿ ಇಡಬೇಡ, ನಮಗೆ ಹಾಗೇ ತಿನ್ನಲಿಕ್ಕೂ ಸ್ವಲ್ಪ ಇಟ್ಟಿರು… “ ಮಧು ಚಿಕ್ಕವನಿದ್ದಾಗ ಹೇಳುತ್ತಿದ್ದ ಡಯಲಾಗ್ ಈಗ ನೆನಪಾಯ್ತು.




0 comments:

Post a Comment