Pages

Ads 468x60px

Friday 21 August 2015

ಭಾವಚಿತ್ರ - ಅನಾವರಣ







" ಅಪ್ಪನ ಫೊಟೋ ಬೇಕಂತಲ್ಲ ಲೈಬ್ರರಿಗೇ..."
" ಯಾಕೇ... ?" ಪ್ರಶ್ನೆ ಎಸೆದೆ.
" ಲೈಬ್ರರಿ ಸ್ಥಾಪನೆ ಆಗಿ 60 ವರ್ಷ ಆದ ಲೆಕ್ಕದಲ್ಲಿ ....."
" ಓ,  ಹಾಗೋ.... ಹಳೇ ಆಲ್ಬಂ ಹುಡುಕಿದರಾಯ್ತು ",  ಅನ್ನುತ್ತಿದ್ದಂತೆ ನೆನಪಾಯಿತು,  " ಮಾವ ಪುಸ್ತಕ ಹಿಡಿದು ಓದುತ್ತಾ ಇರೋ ಚಿತ್ರ ಇದೇ..."
" ಹೌದ,  ಲೈಬ್ರರಿಗೆ ಅದೇ ಚೆನ್ನ " ಅಂದ್ರು ನಮ್ಮೆಜಮಾನ್ರು.

ಆಲ್ಬಂಗಳನ್ನು ತಪಾಸಣೆಗೊಳಪಡಿಸಿದಾಗ ಉದ್ದೇಶಿತ ಭಾವಚಿತ್ರ ಸಿಕ್ಕಿತಾದರೂ,  ಯಾರೋ ಅಜ್ಜನ ಮೊಮ್ಮಕ್ಕಳು ಅಜ್ಜನ ಬೆಳ್ಳಗಿನ ಅಂಗಿ ಮೇಲೆ ಏನೋ ಕಲೆ ಮಾಡ್ಬಿಟ್ಟಿದ್ದಾರೇ,  ಅದೂ ಅಲ್ಲದೆ ಚಿತ್ರವೂ ಕಪ್ಪು ಬಿಳುಪಿನದು.
" ಫೊಟೋ ಚೆನ್ನಾಗಿದೆ,  ಕಲೆ ತೆಗೆಯಬಹುದಲ್ಲ "
" ಹ್ಞೂ, ತೆಗೆಯಬಹುದು " ಫೊಟೋ ಎಡಿಟಿಂಗ್ ಆ್ಯಪ್ ಮೂಲಕ, ಹಿಂದೊಮ್ಮೆ ನನ್ನಜ್ಜ ಕುಕ್ಕಿಲ ಕೃಷ್ಣ ಭಟ್ಟರ ಮೇಲೆ ಆಗಿದ್ದ ಶಾಯಿಕಲೆಯನ್ನು ಅಳಿಸಲು ಸಾದ್ಯವಾಗಿತ್ತು.

ಈ ಪಟ್ಟಾಂಗ ಆಗಿ ಕೆಲವೇ ದಿನಗಳಲ್ಲಿ ನಮ್ಮ ಕುಟುಂಬವರ್ಗ ಒಂದೆಡೆ ಅಂದ್ರೆ ನಮ್ಮನೆಯಲ್ಲಿ ಕಲೆಯುವ ಸಂದರ್ಭ ಒದಗಿ ಬಂತು.  ಯಥಾಪ್ರಕಾರ ಅಪ್ಪನ ಫೊಟೋ ಮಾತಿಗೆ ವಸ್ತುವಾಯಿತು.
" ಫೊಟೋ ಕಟ್ಟು ಹಾಕಿದ್ದೇ ಇದೆ, ಅದೂ ಮಾವ ಮಲಗುತ್ತಿದ್ದ ಉಗ್ರಾಣ*ದಲ್ಲೇ ನೇತಾಡುತ್ತಿದೆಯಲ್ಲ " ಎಂದಳು ನಮ್ಮನೆ ಹಿರಿಯಕ್ಕ.  " ಅದೂ ಹಾಳಾಗುವ ಸ್ಥಿತಿಗೆ ಬಂದಿದೆ "
*ಉಗ್ರಾಣ  =  ಕೋಣೆ, room.

ಸಂಜೆಯಾಗುತ್ತಲೂ ಚಿತ್ರಪಟ ಹಿಡಿದುಕೊಂಡು ನಮ್ಮಕ್ಕ ಬಂದಳು.
" ನೋಡೇ ನಮ್ಮಪ್ಪನ ಪಟ ಬಂತು, ಒಂದು ಇಮೇಜ್ ತೆಗೆದಿಡು..." ನಮ್ಮೆಜಮಾನ್ರ ಹುಕುಂ.
ಕೈಯಲ್ಲಿದ್ದ iPad Air 2  ಫೊಟೋ ಕ್ಲಿಕ್ಕಿಸಿ ಕೊಟ್ಟಿತು.  ಅಕ್ಕ ಅಂದಂತೆ ಚಿತ್ರದ ಹಿನ್ನಲೆ ತೀರಾ ಕೆಟ್ಟು ಹೋಗಿತ್ತು.   ಪೂರಕವಾಗಿ ಇನ್ನೊಂದು ಹಿನ್ನಲೆ ಚಿತ್ರ ಇದ್ದರೆ super imposing ಮಾಡಬಹುದು,  ಇದು ನನ್ನ ತರ್ಕ.

" ಇನ್ನೊಂದು ಬ್ಯಾಗ್ರೌಂಡ್ ಫೊಟೋ ಸಿಲೆಕ್ಟ್ ಮಾಡು..."
" ಆಯ್ತು,  ಈ ಟೇಬಲ್ ಮೇಲಿರೋ ಲ್ಯಾಪ್ಟಾಪ್ ಆದೀತು.." ಮಿರಮಿರನೆ ಮಿಂಚುತ್ತ ಇದ್ದಿತು ಆ ಆ್ಯಪಲ್ MacBook !
ಫೊಟೋ ಎಡಿಟಿಂಗ್ ಆ ಕೂಡಲೇ ಶುರು ಮಾಡಿದ್ದೂ ಆಯಿತು.  2 ನಿಮಿಷದಲ್ಲಿ ನಮ್ಮ ಮಾವನವರು ಹೊಸ ಗೆಟಪ್ ನಲ್ಲಿ ಪ್ರತ್ಯಕ್ಷ ಆಗ್ಬಿಟ್ರು.

ಅಂತೂ ನನ್ನ ಕೆಲಸ ಮುಗಿಯಿತೇ,  ಛೇ ... ಇಲ್ಲಾಪ್ಪ.  ಜಾಣಾತಿಜಾಣರಾದ ಮೊಮ್ಮಕ್ಕಳಿಗೆ ಅವರಜ್ಜನನ್ನು ತೋರಿಸದಿದ್ದರೆ ಹೇಗಾದೀತು?  ಮಂಗಳೂರು, ಬೆಂಗಳೂರು ನಗರಗಳಲ್ಲಿ ಸ್ವತಂತ್ರ ಉದ್ಯೋಗಿಗಳೂ, ಸಾಪ್ಟ್ ವೇರ್ ತಂತ್ರಜ್ಞರೂ ಆಗಿರುವ ಅಜ್ಜನ ಮುದ್ದಿನ ಕಂದಮ್ಮಗಳ ಕೈಲಿ  "ಭಲೇ" ಎಂದು ಶಿಫಾರಸ್ಸು ಆ ಕೂಡಲೇ ಬಂದೇ ಬಂದಿತು.

ಇವಿಷ್ಟೂ ಕೆಲ್ಸ ಆಯ್ತಲ್ಲ,  ಮಾವ ಹಿರಣ್ಯ ಗಣಪತಿ ಭಟ್, ಊರಿಗೇ ದೊಡ್ಡ ಜಮೀನ್ದಾರರು ಮಾತ್ರವಲ್ಲ ಗ್ರಾಮದ ಏಳಿಗೆಗಾಗಿ ಶ್ರಮಿಸಿದವರೂ ಹೌದು,  ಕೊಡುಗೈದಾನಿಗಳೂ ಆದ ಅವರು  " ದೇಹಿ " ಎಂದು ಬಂದವರಿಗೆ ಇಲ್ಲವೆಂದವರಲ್ಲ.  'ಈ ಕೈಯಲ್ಲಿ ಕೊಟ್ಟಿದ್ದು ಆ ಕೈಗೆ ತಿಳಿಯಬಾರದು' ಇಂತಹ ನೀತಿಯಲ್ಲಿ ಬದುಕಿದವರು.  

ಬಾಯಾರು ಗ್ರಾಮದ ಮುಳಿಗದ್ದೆಯಲ್ಲಿರುವ ಹೆದ್ದಾರಿ ಶಾಲೆ,  ಈ ಶಾಲೆ ಶತಮಾನೋತ್ಸವವನ್ನೂ ಕಂಡಿದೆ.  ಶಾಲೆಯ ಹಳೆವಿದ್ಯಾರ್ಥಿಗಳ ಕೂಟದಿಂದ ಸ್ಥಾಪಿತವಾದದ್ದು  " ಹೆದ್ದಾರಿ ಶಾಲಾ ಮಿತ್ರಮಂಡಳಿ ಗ್ರಂಥಾಲಯ ಹಾಗೂ ವಾಚನಾಲಯ "

ವಾಚನಾಲಯ ಅಂದ್ರೇ ಲೈಬ್ರರಿ ಸ್ಥಾಪಿತವಾದ ಅರುವತ್ತು ವರ್ಷಗಳ ನೆನಪಿಗಾಗಿ ಒಂದು ಕಾರ್ಯಕ್ರಮವನ್ನೂ ಹಮ್ಮಿಕೊಂಡು,  ಹಿರಿಯರ ನೆನಪನ್ನು ಲೈಬ್ರರಿಯಲ್ಲಿ ಶಾಶ್ವತವಾಗಿರಿಸುವ ಯೋಜನೆಗಾಗಿ ಭಾವಚಿತ್ರದ ಅನಾವರಣವೂ ಸೇರಿದೆ.   ವಿಷಯ ಏನಪ್ಪಾಂದ್ರೆ,  ಪುಸ್ತಕಪ್ರೇಮಿಗಳಾದ ಹಿರಣ್ಯ ಗಣಪತಿ ಭಟ್,  ತಮ್ಮಲ್ಲಿದ್ದ ಅಮೂಲ್ಯ ಪುಸ್ತಕ ಸಂಗ್ರಹ,  ಅದೂ ಸುಮಾರು ಐದು ಸಾವಿರಕ್ಕೂ ಮೇಲ್ಪಟ್ಟು ಪುಸ್ತಕಗಳು ಇದ್ದುವಂತೆ,  ಲೈಬ್ರರಿಗೆ ಉದಾರವಾಗಿ ದೇಣಿಗೆ ಕೊಟ್ಟಿರುತ್ತಾರೆ.




ಐವತ್ತರ ದಶಕದಲ್ಲಿ ಕುಗ್ರಾಮವಾಗಿದ್ದ ನಮ್ಮ ಬಾಯಾರು ಮುಳಿಗದ್ದೆ,  ವಿದ್ಯಾಭ್ಯಾಸಕ್ಕಾಗಿ ಶಾಲೆಗೆ ಹೋಗುವುದಿರಲಿ,  ಅರೆಹೊಟ್ಟೆ ಉಣ್ಣುತ್ತಿದ್ದ ರೈತಮಕ್ಕಳಿಗೂ,  ಸರ್ಕಾರೀ ಅಧಿಕಾರಿಗಳಿಗೂ,  ಕಲಾಸೇವೆಗೈಯುತ್ತಿದ್ದ ಯಕ್ಷಗಾನ ಮೇಳಗಳಿಗೂ ಹಿರಣ್ಯ ಗಣಪತಿ ಭಟ್ಟರ ಮನೆಯೇ ಆಶ್ರಯತಾಣವಾಗಿತ್ತು.   ಹಿರಣ್ಯಮನೆಯಲ್ಲಿ ಏನೇ ವಿಶೇಷ ಹಬ್ಬ ಹರಿದಿನ ಬಂದರೂ ಆ ದಿನ ಹೆದ್ದಾರಿ ಶಾಲೆಗೆ ಅಘೋಷಿತ ರಜೆ !

ಭಾನುವಾರ  ಬಂದಿತು,  ಎಂದಿನಂತೆ ಮನೆಕೆಲಸಗಳಲ್ಲೇ ತೊಡಗಿಸಿಕೊಂಡಿದ್ದ ನನ್ನನ್ನು  " ಹತ್ತು ಗಂಟೆಯ ಚಹಾ ಲೈಬ್ರರಿಯಲ್ಲೇ ಕುಡಿಯೋಣ " ಅಂದು ಅಡುಗೆಮನೆಯಿಂದ ಹೊರಗೆಳೆದಳು ಮಗಳು.  " ಹೌದಲ್ವೇ,  ಭಾವಚಿತ್ರ ಅನಾವರಣ ಕಂಡ ಹಾಗೂ ಆಯ್ತು "  ಹೊರಟು ಸಭೆಯಲ್ಲಿ ಲಕ್ಷಣವಾಗಿ ಕೂತಿದ್ದೂ ಆಯಿತು.




ನಾನು ಒಳ ಬಂದ ಹೊತ್ತಿಗೆ ಡಾ. ತಾಳ್ತಜೆ ವಸಂತಕುಮಾರ ಉದ್ಘಾಟನಾ ಭಾಷಣ ಆರಂಭಿಸಿದ್ದರು.   ನಮ್ಮ ಕುಟುಂಬದವರಾದ ತಾಳ್ತಜೆ ವಸಂತಕುಮಾರ,  ಬಾಯಾರು ಗ್ರಾಮದ ಇದೇ ಹೆದ್ದಾರಿ ಶಾಲೆಯಲ್ಲಿ ಕಲಿತ ತಮ್ಮ ನೆನಪಿನ ಬುತ್ತಿಗಳನ್ನು ಬಿಚ್ಚಿಟ್ಟರು.

ಹೆದ್ದಾರಿ ಶಾಲೆಯ ವಿದ್ಯಾಭ್ಯಾಸದಿಂದ ತೊಡಗಿ, ಯಕ್ಷಗಾನ ನಾಟಕಗಳ ಕಲಿಯುವಿಕೆಯ ವಿಸ್ತಾರ ನಮ್ಮ ಹಳ್ಳಿ ಶಾಲೆಯದ್ದು,  ಇದಕ್ಕೆಲ್ಲ ಸಾಥ್ ಕೊಟ್ಟಿದ್ದು ಹೆದ್ದಾರಿ ಶಾಲಾ ಮಿತ್ರಮಂಡಳಿ.

ಸಮಾರಂಭದ ಅಧ್ಯಕ್ಷತೆ ವಹಿಸಿದ ಡಾ. ಬಿ. ಎಸ್.ರಾವ್,  ಕಾಸರಗೋಡಿನ ಖ್ಯಾತ ಹೃದಯತಜ್ಞ ವೈದ್ಯರೂ ಆಗಿರುವ ಇವರು ಕೂಡಾ ಶಾಲಾ ವ್ಯಾಸಂಗ ಮಾಡಿದ್ದು ಇದೇ ಹಳ್ಳಿ ಶಾಲೆಯಲ್ಲಿ.  ಲೈಬ್ರರಿಯ ಬಗ್ಗೆ ಮಾತನಾಡುವಾಗ ತುಸು ವಿಷಾದದ ಛಾಯೆಯೂ ಅವರಲ್ಲಿತ್ತು,  ಡಿಜಿಟಲ್ ಲೈಬ್ರರಿಯ ಕನಸು ಅವರ ಕಂಗಳಲ್ಲಿತ್ತು.

ಊರಿನ ಹಿರಿಕಿರಿಯರನೇಕರಿಗೆ ಸನ್ಮಾನವೂ ದೊರೆಯಿತು,  ಪುಸ್ತಕಪ್ರೇಮಿಗಳಿಂದ ಲೈಬ್ರರಿಗೆ ಉದಾರವಾಗಿ ಪುಸ್ತಕಗಳೂ ಬಂದವು.  ಮದ್ಯಾಹ್ನದ ಹೊತ್ತು,  ಭೋಜನ ವಿರಾಮ.   ಅಂತೂ ಚಹಾ ಕುಡಿಯ ಬಂದವಳಿಗೆ ಭೂರಿಭೋಜನವೂ ಸಿಕ್ಕಿತೆಂದು ಬೇರೆ ಹೇಳಬೇಕಿಲ್ಲ ತಾನೇ...   ಅನ್ನ, ಸಾರು, ಪಲ್ಯ, ಗಸಿ, ಸಾಂಬಾರ್, ಮಜ್ಜಿಗೆ,  ಉಪ್ಪಿನಕಾೖ,  ಕಡಲೆಬೇಳೆ+ಸಬ್ಬಕ್ಕಿ ಪಾಯಸ, ಲಡ್ಡೂ !   ನನ್ನನ್ನು ಚಹಾ ಕುಡಿದು ಬರಲು ಕಳುಹಿಸಿದ ಮಗಳು ಊಟದ ಸಮಯದಲ್ಲಿ ಬಂದು ಕೂತಿದ್ದಳು !   ಅವಳೂ ಕಲಿತದ್ದು ಇದೇ ಶಾಲೆಯಲ್ಲಿ ಅಲ್ವೇ. 

"ಹೌದೂ, ನೀನು ಬಂದಿದ್ದೀ...  ಚೆನ್ನಪ್ಪನಿಗೆ ಊಟ ಕೊಟ್ಟು ಬಂದಿದ್ದೋ ಹೇಗೇ ?"
" ಅವನಿಗೂ ಇಲ್ಲಿಗೆ ಬರಲು ಹೇಳಿದ್ದೇನೆ " ಎಂದಳು ನಮ್ಮ ಜಾಣೆ.

ಊಟದ ತರುವಾಯ ಸಾಂಸ್ಕತಿಕ ಕಾರ್ಯಕ್ರಮ,  ಶಾಲಾ ಮಕ್ಕಳ ಯಕ್ಷಗಾನ - ಗಧಾಯುದ್ಧ.



ಟಿಪ್ಪಣಿ: 29/8/2015ರಂದು ಸೇರಿಸಿದ ಉದಯವಾಣಿ ದಿನಪತ್ರಿಕೆಯ ವರದಿ.



0 comments:

Post a Comment