Pages

Ads 468x60px

Sunday 9 August 2015

ಹಲಸು - ಪಲ್ಯ




ಮೇ 24ನೇ ತಾರೀಕು,  ಎಂದಿನಂತೆ ಪತ್ತನಾಜೆ ಬಂದಿದೆ.  ಕೃಷಿಕರು ಮಳೆಗಾಲದ ಸಿದ್ಧತೆಗೆ ತೊಡಗುವ ಸಮಯ.  ಯಕ್ಷಗಾನ ಕಲಾವಿದರು ಕಾಲಿನ ಗೆಜ್ಜೆ ಬಿಡಿಸಿ ಇಡುವ ದಿನ... ಪತ್ತನಾಜೆ ಅಂದರೆ ಇನ್ನೂ ಏನೇನೋ ವಿಶೇಷದ ದಿನ.  ಆದಿನ ವರ್ಷಂಪ್ರತಿ ನಮ್ಮ ಹಿರಣ್ಯಮನೆಯ ವತಿಯಿಂದ ಊರಿನ ಬಾಯಾರು ಪಂಚಲಿಂಗೇಶ್ವರ ದೇವಳದಲ್ಲಿ ಸಮಾರಾಧನೆ ಇದೆ,  ಹಿಂದಿನಿಂದಲೇ ನಡೆದುಕೊಂಡು ಬಂದಿದೆ,  ನಾವೂ ಮುಂದುವರಿಸುತ್ತಾ ಬಂದಿದ್ದೇವೆ. 

ಸಮಾರಾಧನೆ ಅಂದ್ರೇ ಭೂರಿಭೋಜನದ ವ್ಯವಸ್ಥೆ ಆಗಲೇಬೇಕಲ್ಲ,  ಸಣ್ಣಕ್ಕಿ ಅನ್ನ,  ಸಾರು,  ಪಲ್ಯ,  ಸಾಂಬಾರು,  ಪರಮಾನ್ನ ಇವೆಲ್ಲ ಆಗ್ಬೇಕಾಗಿದೆ.  ಅದಕ್ಕಾಗಿ ನಿಯೋಜಿಸಲ್ಪಟ್ಟ ಅಡುಗೆಯವರೇ ಮಾಡ್ತಾರೇ ಬಿಡಿ,  ನಮಗೇನೂ ಚಿಂತೆಯಿಲ್ಲ.  ಮಜ್ಜಿಗೆ,  ಉಪ್ಪಿನಕಾೖ,  ಘಮಘಮಿಸುವ ತುಪ್ಪ ಇವಿಷ್ಟು ಮನೆಯೊಳಗಿಂದ ಕಟ್ಟಿ ತಂದರಾಯಿತು.

ಹೇಳಿಕೇಳಿ ಈ ಋತು ಹಲಸಿನಕಾೖ ಸುಗ್ಗಿ ಆಗಿರೋದ್ರಿಂದ ಹಲಸಿನ ಪಲ್ಯ ಖಾಯಂ.  ನಮ್ಮ ಮಾವನವರ ಆಳ್ವಿಕೆಯಲ್ಲಿ ಊರಿಂದೂರೇ ಪತ್ತನಾಜೆ ಊಟಕ್ಕೆ ಹಾಜರಾಗುತ್ತಿತ್ತಂತೆ,  ಅರೆಹೊಟ್ಟೆ ಉಣ್ಣುತ್ತಿದ್ದ ರೈತಮಕ್ಕಳು ಈ ಒಂದು ದಿನ ಸಮೃದ್ಧಿಯನ್ನು ಕಾಣುತ್ತಿದ್ದರಂತೆ.  ಒಮ್ಮೆ ಏನಾಗಿತ್ತೆಂದರೆ,  ಎಂದಿನಂತೆ ಹಿರಣ್ಯಮನೆಯಿಂದ ದೇವಳಕ್ಕೆ ಹಲಸಿನಕಾಯಿಗಳು ಬಂದುವು.  ದೇವಸ್ಥಾನದ ಕೆಲಸಗಿತ್ತಿಯರು ಹಲಸಿನಸೊಳೆ ಬಿಡಿಸುವ ಧಾವಂತದಲ್ಲಿ ಹಲಸಿನ ಬೇಳೆಗಾಗಿ ಹೊಡೆದಾಡಿಕೊಂಡರಂತೆ.   ಈ ಪ್ರಕರಣದ ತರುವಾಯ ನಮ್ಮ ಮಾವ ಹಲಸಿನಕಾಯಿ ಸೊಳೆಗಳನ್ನು ಮನೆಯಿಂದಲೇ ಆಯ್ದು ಕಳುಹಿಸಲು ಪ್ರಾರಂಭಿಸಿದರಂತೆ.  ಇದನ್ನೆಲ್ಲ ನಮ್ಮತ್ತಿಗೆ ಹೇಳಿದುದರಿಂದ ನನಗೂ ತಿಳಿದಿದೆ.

ಈ ವರ್ಷವೂ ಪತ್ತನಾಜೆ ಬಂದಿದೆ.  ಹಲಸಿನಕಾಯಿಗಳನ್ನು ಚೆನ್ನಪ್ಪ ಕೊಯ್ದು ಇಟ್ಟ.  ಪಲ್ಯ ಮಾಡಬೇಕಾಗಿರುವ ಸೊಳೆಗಳನ್ನು ದಿನಮುಂಚಿತವಾಗಿ ಬಿಡಿಸಿಟ್ಟರೆ ಚೆನ್ನಾಗಿರುವುದಿಲ್ಲ.  ಬೆಳ್ಳಂಬೆಳಗ್ಗೆ ನಾವಿಬ್ಬರೂ ಎದ್ದು ಹಲಸಿನಸೊಳೆಗಳನ್ನು ಆಯ್ದು ಇಡಬೇಕೆಂಬ ತೀರ್ಮಾನಕ್ಕೆ ಬರಲಾಯಿತು.  ನಮ್ಮ ಕಾರ್ಯ ಸುಲಭವಾಗಲು ಚೆನ್ನಪ್ಪ ಹಲಸಿನಕಾಯಿಗಳನ್ನು ಕೈಮಡು ( ಕೊಡಲಿ ) ವಿನಲ್ಲಿ ನಾಲ್ಕು ಭಾಗಗಳಾಗಿಸಿ ಇಟ್ಟು ಹೋದ.

ಅಂತೂ ನಾವು ದೇವಸ್ಥಾನದ ಪೂಜಾವಿಧಿಗಳನ್ನೂ ಮುಗಿಸಿ,  ಸಮಾರಾಧನೆ ಊಟದಲ್ಲಿ ಪಾಲ್ಗೊಂಡು ಮನೆಗೆ ಮರಳಿದೆವು.   ಹಲಸಿನಕಾಯಿ ಪಲ್ಯವಂತೂ ಬಹಳ ಚೆನ್ನಾಗಿತ್ತು.

ಹಲಸಿನಕಾಯಿ ಪಲ್ಯ ಮಾಡೋದು ಹೇಗೆ ?

ಹಲಸಿನಕಾಯಿಯನ್ನು ಅದರ ಬೆಳವಣಿಗೆಯ ಎಲ್ಲ ಹಂತಗಳಲ್ಲೂ ಅಡುಗೆಯಲ್ಲಿ ಬಳಸಬಹುದಾಗಿದೆ.   ಹಲಸಿನ ಗುಜ್ಜೆ,  ಬೇಳೆ ಯಾ ತಿರುಳು ಇನ್ನೂ ಮೂಡಿರದ ಹಂತದಲ್ಲಿಯೂ ಅಡುಗೆಗೆ ಸೊಗಸು,  ಆದರೆ ಬೇಯುವುದು ತುಸು ನಿಧಾನ ಅಷ್ಟೇ.  ಪ್ರೆಶರ್ ಕುಕ್ಕರ್ ಬೇಕಾಗುತ್ತದೆ. 

ಎಳೆಯ ಬೇಳೆ ಮೂಡಿದಂತಹ ಹಲಸು, ಬೇಳೆಚಕ್ಕೆ ಎಂಬ ಹೆಸರಿನಿಂದ ಜನಪ್ರಿಯತೆ ಗಳಿಸಿದೆ,  ಇದನ್ನೂ  ಪಲ್ಯ,  ಕೂಟು ಇತ್ಯಾದಿ ಮಾಡಿ ಸವಿಯುವವರು ನಾವು.  ಈಗ ನಾವು ಚೆನ್ನಾಗಿ ಬೆಳೆದ  ಹಲಸನ್ನು ಪಲ್ಯಕ್ಕಾಗಿ ಆಯ್ದು ಇಟ್ಟಿದ್ದೇವೆ.

ಹಲಸಿನ ಸೊಳೆಗಳನ್ನು ಆಯ್ದು ತುಂಡರಿಸಿ ಇಟ್ಟುಕೊಳ್ಳಿ.   ಚಿಕ್ಕದಾಗಿರಬೇಕೆಂದೇನೂ ಇಲ್ಲ.
ಬಾಣಲೆಗೆ ಎಣ್ಣೆ ಎರೆಯಿರಿ,  ದೊಡ್ಡ ಚಮಚದಲ್ಲಿ ನಾಲ್ಕೈದು ಚಮಚ ಎಣ್ಣೆ ಬೇಕಾದೀತು,  ಮಯಣ ನಿವಾರಕವಾದ ತೆಂಗಿನೆಣ್ಣೆ ಅತ್ಯುತ್ತಮ.


ಬಾಣಲೆ ಒಲೆಗೇರಿಸಿ,  
ಸಾಸಿವೆ,  ಉದ್ದಿನಬೇಳೆ,  ಕಡ್ಲೆಬೇಳೆ,  2 ಒಣಮೆಣಸು ಹಾಕಿದ್ರಾ,  
ಸಾಸಿವೆಯ ಚಟಪಟಗುಟ್ಟುವಿಕೆ ನಿಂತಾಗ ಬೇವಿನೆಸಳು ಹಾಕಿದ್ರಾ, 
 ಚಿಟಿಕೆ ಅರಸಿನ ಬಿದ್ದಿತೇ,  
ಈಗ ಹಲಸಿನ ಸೊಳೆಗಳನ್ನು ಹಾಕಿರಿ.  
ರುಚಿಕರವಾಗಲು ಬೇಕಾದ ಉಪ್ಪು ಹಾಕಿದ್ರಾ, 
 ಖಾರವಾಗಲು ಮೆಣಸಿನಹುಡಿ ಹಾಕ್ಕೊಳ್ಳಿ. 

 ಬಲಿತ ಹಲಸಿನ ಸೊಳೆಗಳು ಬೇಗನೇ ಬೇಯುವುದರಿಂದ ಅಗತ್ಯವಿರುವಷ್ಟೇ ನೀರು ಕೂಡಿಸಿ ಮುಚ್ಚಿಟ್ಟು ಬೇಯಿಸಿರಿ.  ತಳ ಹಿಡಿಯದಂತೆ ಆಗಾಗ ಸೌಟಿನಲ್ಲಿ ಕೈಯಾಡಿಸಿ.  ಅನ್ನದೊಂದಿಗೆ ಉಣಲೂ ಚೆನ್ನ,  ಚಹಾದೊಂದಿಗೆ ಸವಿಯಲೂ ಬಹುದು.



0 comments:

Post a Comment