ಏನೋ ಕೊರೋನಾ ಅಂತೆ
ಯಾರನ್ನೂ ಮುಟ್ಟಬಾರದಂತೆ
ಶಾಲೆಗೆಂತು ಹೋಗಲಿ
ಗೆಳೆಯರಿಲ್ಲ ಆಟವಿಲ್ಲ
ಪಾಠ ಓದು ಇಲ್ಲ
ಮೊಬೈಲು ಪಾಠಪಟ್ಟಿ ಓದಲೆಂತು
ತಿಳಿಯಲಾರೆ ಹೇಳಲಾರೆ
ಅಕ್ಕಾ, ಕಾಣೆ ನಾನು ಮೊಬೈಲು
ಏನೋ ಕೊರೋನಾ ಅಂತೆ
ಯಾರನ್ನೂ ಮುಟ್ಟಬಾರದಂತೆ
ಶಾಲೆಗೆಂತು ಹೋಗಲಿ
ಗೆಳೆಯರಿಲ್ಲ ಆಟವಿಲ್ಲ
ಪಾಠ ಓದು ಇಲ್ಲ
ಮೊಬೈಲು ಪಾಠಪಟ್ಟಿ ಓದಲೆಂತು
ತಿಳಿಯಲಾರೆ ಹೇಳಲಾರೆ
ಅಕ್ಕಾ, ಕಾಣೆ ನಾನು ಮೊಬೈಲು
ಅಡುಗೆಯಲ್ಲಿ ಆರೋಗ್ಯಪಾಲನೆ, ಇದು ಗೃಹಿಣಿಯ ಕರ್ತವ್ಯ. ಗಂಡಿನೊಂದಿಗೆ ಸಮಾನತೆ ಹೊಂದಿರುವ ಮಹಿಳೆ ಹೊರಗೂ ಒಳಗೂ ದುಡಿಯುವವಳಾಗಿದ್ದಾಳೆ. ಒತ್ತಡದ ಜೀವನಶೈಲಿಯಿಂದಾಗಿ ಶುಚಿರುಚಿಯಾಗಿ ಅಡುಗೆ ಮಾಡಿ ಇಡುವುದರಲ್ಲಿಯೂ ಪ್ರಾವೀಣ್ಯತೆ ಇರಲೇ ಬೇಕು. ಹೀಗಿರುವಾಗ ಕೆಲವು ಮೂಲಭೂತ ಸೌಕರ್ಯಗಳನ್ನು ನೋಡಿಕೊಳ್ಳೋಣ.
ಕುಡಿಯುವ ನೀರು:
ನೀರನ್ನು ಸ್ವಚ್ವವಾದ ಸ್ಟೀಲ್ ಯಾ ತಾಮ್ರದ ತಂಬಿಗೆಯಲ್ಲಿ ಶೇಖರಿಸಿ ಇಡುವವರಾಗಿ. ಮಣ್ಣಿನ ಹೂಜಿ ಅತ್ಯುತ್ತಮ. ಪ್ಲಾಸ್ಟಿಕ್ ಜಾಡಿ ಯಾ ಬಾಟಲ್ ಸರ್ವಥಾ ಕೂಡದು.
ಪಾತ್ರೆಗಳೇ ಪ್ರಮುಖ ಶತ್ರುಗಳು:
ಇಂದು ಪ್ರತಿ ಮನೆಯಲ್ಲೂ ರಾರಾಜಿಸುತ್ತಿರುವ 'ನಾನ್-ಸ್ಟಿಕ್' (Non-stick) ತವಾಗಳು ಮತ್ತು ಅಲ್ಯೂಮಿನಿಯಂ ಕುಕ್ಕರ್ಗಳು ನಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ. ಇವು ಅತಿಯಾಗಿ ಬಿಸಿಯಾದಾಗ ಆಹಾರದೊಂದಿಗೆ ರಾಸಾಯನಿಕಗಳನ್ನು ಬೆರೆಸುತ್ತವೆ, ಇದು ದೀರ್ಘಕಾಲದಲ್ಲಿ ಕ್ಯಾನ್ಸರ್ ಮತ್ತು ಹಾರ್ಮೋನ್ ಸಮಸ್ಯೆಗಳಿಗೆ ದಾರಿಯಾಗಬಹುದು.
ಪರಿಹಾರವೇನು?
ನಮ್ಮ ಬೇರುಗಳತ್ತ ಮರಳುವುದೇ ಇದಕ್ಕೆ ಏಕೈಕ ಪರಿಹಾರ.
• ಮಣ್ಣಿನ ಪಾತ್ರೆ: ಇದು ಪ್ರಕೃತಿಯ ಕೊಡುಗೆ. ಇದರಲ್ಲಿ ಅಡುಗೆ ಮಾಡಿದರೆ ಆಹಾರದ ಪೋಷಕಾಂಶಗಳು ಶೇ.೧೦೦ ರಷ್ಟು ಉಳಿಯುತ್ತವೆ.
• ಕಬ್ಬಿಣದ ಪಾತ್ರೆ (Cast Iron): ಇವುಗಳಲ್ಲಿ ಅಡುಗೆ ಮಾಡುವುದರಿಂದ ದೇಹಕ್ಕೆ ನೈಸರ್ಗಿಕವಾಗಿ ಕಬ್ಬಿಣದ ಅಂಶ ದೊರೆಯುತ್ತದೆ, ಇದು ರಕ್ತಹೀನತೆಯನ್ನು ತಡೆಯಲು ಸಹಕಾರಿ.
• ಹಿತ್ತಾಳೆ ಮತ್ತು ಕಂಚು: ರೋಗನಿರೋಧಕ ಶಕ್ತಿ ಹೆಚ್ಚಿಸಲು ಇವು ಅತ್ಯುತ್ತಮ.
ಪ್ಲಾಸ್ಟಿಕ್ ಮುಕ್ತವಾಗಲಿ:
ಬಿಸಿ ಆಹಾರವನ್ನು ಪ್ಲಾಸ್ಟಿಕ್ ಡಬ್ಬಗಳಲ್ಲಿ ಹಾಕಿಡುವುದು ಅಥವಾ ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರು ಕುಡಿಯುವುದು ವಿಷ ಸೇವನೆಗೆ ಸಮ. ಇದರ ಬದಲಿಗೆ ಸ್ಟೀಲ್, ಗಾಜು ಅಥವಾ ಪಿಂಗಾಣಿ ಪಾತ್ರೆಗಳನ್ನು ಬಳಸುವುದು ಸುರಕ್ಷಿತ. ಹಾಗೆಯೇ, ಅಡುಗೆಗೆ ಬಳಸುವಾಗ ರಿಫೈನ್ಡ್ (Refined) ಎಣ್ಣೆಯ ಬದಲು 'ಗಾಣದ ಎಣ್ಣೆ', ಬಿಳಿ ಸಕ್ಕರೆಯ ಬದಲು 'ಬೆಲ್ಲ' ಮತ್ತು ಪುಡಿ ಉಪ್ಪಿನ ಬದಲು 'ಕಲ್ಲುಪ್ಪು' ಬಳಸಿದರೆ ಅರ್ಧದಷ್ಟು ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ.
ಮುಕ್ತಾಯ:
ಬದಲಾವಣೆ ರಾತ್ರೋರಾತ್ರಿ ಸಾಧ್ಯವಿಲ್ಲದಿರಬಹುದು. ಆದರೆ, "ಆರೋಗ್ಯವೇ ಭಾಗ್ಯ" ಎಂಬ ಮಾತು ಸತ್ಯವಾಗಬೇಕಾದರೆ, ನಮ್ಮ ಬದಲಾವಣೆ ಅಡುಗೆಮನೆಯಿಂದಲೇ ಆರಂಭವಾಗಲಿ. ಇಂದೇ ಒಂದು ನಾನ್-ಸ್ಟಿಕ್ ಪಾತ್ರೆಯನ್ನು ಅಥವಾ ಪ್ಲಾಸ್ಟಿಕ್ ಡಬ್ಬವನ್ನು ಹೊರಹಾಕಿ, ಆರೋಗ್ಯಕರ ಆಯ್ಕೆಯನ್ನು ಅಳವಡಿಸಿಕೊಳ್ಳೋಣ.
ಕಾಸರಗೋಡಿನವರಾದ ನನ್ನ ವಯೋಮಾನದವರು ಕಲಿತದ್ದು ಕನ್ನಡ ಮಾಧ್ಯಮದಲ್ಲಿ. ನನ್ನ ಹೈಸ್ಕೂಲು ಶಿಕ್ಷಣವೂ ಕನ್ನಡ ಮಾಧ್ಯಮದಲ್ಲಿ ಮುಗಿಯಿತು. ಪ್ರಥಮ ಶ್ರೇಣಿಯಲ್ಲಿ ಪಾಸೂ ಆಯಿತು. ಆನಂದಿತರಾದ ನನ್ನ ತಂದೆಯವರು ಕಾಸರಗೋಡು ಸರಕಾರೀ ಕಾಲೇಜಿನಲ್ಲಿ ವಿಜ್ಞಾನ ಹಾಗೂ ಗಣಿತದಲ್ಲಿ ಪ್ರೀ ಡಿಗ್ರೀ ತರಗತಿಗೆ ಸೇರಿಸಿಯೇ ಬಿಟ್ಟರು.
ಒಂದನೇ ತರಗತಿಯಿಂದ ಹತ್ತರ ತನಕ ಕನ್ನಡದಲ್ಲೇ ಉಸಿರಾಡುತ್ತಿದ್ದ ವಿದ್ಯಾರ್ಥಿಯಾಗಿದ್ದ ನನಗೆ ಕಾಲೇಜಿನ ಇಂಗ್ಲಿಷ್ ಮಾಧ್ಯಮ ತಲೆಯೊಳಗೆ ಇಳಿಯಲೇ ಇಲ್ಲ. ಶೂನ್ಯ ಸಂಪಾದನೆಯೇ ಗತಿಯಾಗುವ ಭಯ ಉಂಟಾದಾಗ, ಅಪ್ಪನೇ ಗುರುವಾಗಿ, ರಸಾಯನಶಾಸ್ತ್ರ, ಗಣಿತದ ತ್ರಿಕೋನಮಿತಿ ಪಾಠ ಸುಲಭವೆಂದು ತಿಳಿಸಿಕೊಟ್ಟರು. ಕನ್ನಡ ವ್ಯಾಕರಣವೆಂದರೆ ಕಬ್ಬಿಣದ ಕಡಲೆಯೆಂದು ತಿಳಿದಿದ್ದೆ, ಅಲ್ಲಿಯೂ ಸುಲಭ ಸೂತ್ರಗಳನ್ನು ತಂದೆಯವರು ತಿಳಿಸಿ ಕೊಟ್ಟರು. ಮನೆಯೆ ಮೊದಲ ಪಾಠಶಾಲೆ, ತಂದೆತಾಯಿ ಮೊದಲ ಗುರುಗಳು.
ಒಂದನೇ ತರಗತಿ ಮೊದಲ್ಗೊಂಡು ಡಿಗ್ರಿ ಕೊನೆಯ ಹಂತದವರೆಗೆ ಅಗಣಿತ ತಾರಾಗಣದಂತೆ ಅಧ್ಯಾಪಕರು ಎದುರಾಗುತ್ತಾರೆ. ಎಲ್ಲರನ್ನೂ ಭಯಭಕ್ತಿಯಿಂದ ಕಾಣುವ ಶ್ರದ್ಧೆ ನಮ್ಮದು. ಪ್ರೊ. ಶ್ರೀಕೃಷ್ಣ ಭಟ್ಟರು ನಮ್ಮ ಎರಡನೇ ವರ್ಷದ ಡಿಗ್ರಿ ತರಗತಿಗೆ ರಾಘವಾಂಕನ ಹರಿಶ್ಚಂದ್ರ ಕಾವ್ಯ ಸಂಗ್ರಹ ಎಂಬ ಪುಸ್ತಕವನ್ನು ತಲಸ್ಪರ್ಶಿಯಾಗಿ ಬೋಧಿಸಿದವರಾಗಿದ್ದಾರೆ. ಹರಿಶ್ಚಂದ್ರ ಕಾವ್ಯ ಈಗಲೂ ನನ್ನ ಬಳಿ ಇದೆ.
ಪದವಿ ಪಡೆದ ನಂತರ ಪ್ರೊ. ಶ್ರೀಕೃಷ್ಣ ಭಟ್ಟರು “ ಬಾ, ಕನ್ನಡ ಎಂ. ಎ. ಕ್ಲಾಸಿಗೆ ಸೇರಿಕೋ. “ ಎಂದು ಆಹ್ವಾನಿಸಿದ್ದರು. ಆದರೆ ನನಗೇಕೋ ಸಾಧ್ಯವಾಗದೇ ಹೋಯಿತು.
ಅವರ ಹಳೆ ವಿದ್ಯಾರ್ಥಿಗಳು ಸೇರಿ ಇಳಿವಯಸ್ಸಿನಲ್ಲಿ ಸನ್ಮಾನಿಸಲು ಹೊರಟಿರುವುದು ಸಂತಸದ ವಿಚಾರ. ನನ್ನದೂ ಒಂದು ಕಿರುಕಾಣಿಕೆ ಇಲ್ಲಿ ಬಂದಿದೆ.
ರಾಘವಾಂಕನ ಪ್ರಸಿದ್ಧ ಕೃತಿ ನಮಗೆ ಕನ್ನಡ ಪಠ್ಯವಾಗಿ ದೊರೆತಿದ್ದು ನಮ್ಮ ಭಾಗ್ಯ ವಿಶೇಷವೇ ಸರಿ. ಹರಿಶ್ಚಂದ್ರನ ಕತೆ ತುಂಬ ಹಳೆಯದು. ಅದರಲ್ಲೂ ವಸಿಷ್ಠ ವಿಶ್ವಾಮಿತ್ರರ ಸಂವಾದವೂ, ಕೊನೆಯಲ್ಲಿ ಹರಿಶ್ಚಂದ್ರ ಮಾತಿಗೆ ಬದ್ಧನಾಗಿ ರಾಜ್ಯ ಬಿಟ್ಟು ತೊಲಗುವ ಪ್ರಸಂಗದ ವರ್ಣನೆ ಈಗಲೂ ಮನದಲ್ಲಿ ಉಳಿದಿದೆ. “ಪುರದ ಪುಣ್ಯಂ ಪುರುಷ ರೂಪಿಂದೆ ಪೋಗುತಿದೆ” ಈ ಸಾಲುಗಳು ಮರೆಯಲಾಗದು. ಪ್ರೊ. ಶ್ರೀಕೃಷ್ಣ ಭಟ್ಟರ ಪಾಠದ ಶೈಲಿಯೇ ಅಂತಹುದು.
ಟಿಪ್ಪಣಿ:
ಈ ಕಿರು ಬರಹ, ಬೃಹತ್ ಹೊತ್ತಗೆಯಲ್ಲಿ ಸೇರಿಕೊಂಡಿದೆ, ಬರೆಯಲು ಉತ್ತೇಜಿಸಿದ ಗೆಳತಿ, ಡಾ. ಮಹೇಶ್ವರಿಗೆ ಕೃತಜ್ಞತೆಗಳು.
ಬೆಂಗಳೂರಿನ ನಮ್ಮ ಪುಟ್ಟಕ್ಕ ರಜೆಯ ದಿನಗಳಲ್ಲಿ ಅಜ್ಜೀ ಮನೆಗೆ ಬಂದಿಳಿದಳು,
“ ಪಾಪೂಗೆ ಎಂತಹ ರಜೆ ಅಂದಿರಾ? “
“ ಈಗ ಪ್ರಿ ನರ್ಸರಿ ಶಾಲೆಗೆ ಹೋಗ್ತಿದಾಳೆ ಕಣ್ರೀ..”
ಬಂದವಳೇ ಅತ್ತ ಇತ್ತ ತಿರುಗಾಡಿ ಬಂದಳು. “ ಅಜ್ಜೀ.. ಅಂಗಳದಲ್ಲಿ ನವಿಲುಗರಿ ಸಿಕ್ಕಿತು. “ ಎಂದಳು.
“ ಹೌದಾ, ಇಟ್ಟುಕೋ.. ಬೆಳಗಾದ್ರೆ ನವಿಲು ಬರುತ್ತೆ ನೋಡು. ಅಂಗಳಕ್ಕೂ ಬರುತ್ತೆ, ಆದ್ರೆ ತುಂಟಿ ಇದಾಳಲ್ಲ, “ ಬೌ ಬೌ “ ಅಂದು ಹಾರಿ ಹೋಗುವ ಹಾಗೆ ಮಾಡುತ್ತೆ..”
ಸಂಜೆಯಾಗುತ್ತಲೂ ನಾನೂ ಪುಟ್ಟಕ್ಕನೂ ನಾಗಬನದ ವರೇಗೆ ಹೋದೆವು, ಜಂಬುನೇರಳೆ ಗಿಡದ ಸಮೀಪ ತುಂಬಾ ನವಿಲು ಗರಿಗಳು! “ ಎಷ್ಟೊಂದು ನವಿಲುಗರಿಗಳು! “ ನವಿಲು ಗರಿ ಯಾಕೆ ಹೀಗೆ ಚಲ್ಲಾಪಿಲ್ಲಿಯಾಗಿ ಬಿದ್ದಿದೆ ಎಂದು ತಿಳಿಯದಾಯಿತು. ನವಿಲಿನ ಪ್ರಾಣಕ್ಕೇನಾದರೂ ಅಪಾಯವಾಯಿತೇ…
“ಗರಿ ಇಲ್ಲದಿದ್ರೆ ನವಿಲಿಗೆ ಏನಾಗುತ್ತೆ ಅಜ್ಜೀ? “
“ ಏನೂ ಆಗೂದಿಲ್ಲ, ಹೊಸಾ ಗರಿ ಬರುತ್ತೆ ಅಷ್ಟೇ..”
ಮನೆಗೆ ಬಂದಾಗ ಪುಟ್ಟಿಯ ಅಜ್ಜನಿಗೂ ವಿಚಾರ ತಿಳಿಯಿತು.
“ಎಲ್ಲಿದೆ ನವಿಲು ಗರಿ.. “ ಅನ್ನುತ್ತ ನವಿಲುಗರಿಗಳನ್ನೆಲ್ಲ ಸಂಗ್ರಹಿಸಿ ತಂದರು. “ ದಿನವೆಷ್ಟಾಯ್ತೋ ಈ ಗರಿಗಳಿಗೆ? ತುಂಬ ಮಣ್ಣು ಮೆತ್ತಿ ಕೊಂಡಿದೆ, ಚೆನ್ನಾಗಿ ತೊಳೆಯಬೇಕು.”
“ ಗರಿಗಳನ್ನು ಇಟ್ಕೊಂಡು ಏನ್ಮಾಡೂದು?”
“ನಿನಗ್ಗೊತ್ತಿಲ್ಲ ಸುಮ್ನಿರು, ನವಿಲುಗರಿ ಐಶ್ವರ್ಯದ ಸಂಕೇತ ಗೊತ್ತಾ..”
ಅಹ! ಜಯ್ ಶ್ರೀಕೃಷ್ಣಾ…
ಅಗಾರೋ ರೈಸ್ ಕುಕ್ಕರ್ ನಮ್ಮ ಸಾಂಪ್ರದಾಯಿಕ ವಿಧಾನದಲ್ಲಿ ಬೆಳ್ತಿಗೆ ಅನ್ನವನ್ನೂ ಕುಚ್ಚುಲಕ್ಕಿ ಅನ್ನವನ್ನೂ ಮಾಡಿಕೊಟ್ಟಿತು. ಎರಡೂ ಕ್ರಮದ ಅಡುಗೆಯನ್ನು ಉಂಡಂತಹ ನಮ್ಮವರು “ಹೇಗಿದ್ದರೂ ರೈಸ್ ಕುಕ್ಕರ್ ಪರಿಣಿತರು ಬೆಳ್ತಿಗೆ ಅನ್ನವನ್ನೇ ದೃಷ್ಟಿಯಲ್ಲಿಟ್ಟು ಇಂತಹ ಕುಕ್ಕರ್ ವಿನ್ಯಾಸಗೊಳಿಸಿದ್ದಾರೆ, ನಾಳೆಯಿಂದ ಬೆಳ್ತಿಗೆ ಅನ್ನವನ್ನೇ ಮಾಡು…” ಅಂದರು.
ನಾನು ಯಾವುದೂ ಆದೀತು ಅಂತಿದ್ದರೆ ಇವರು ಇದೇ ಆದೀತು ಅಂತಿದ್ದಾರಲ್ಲ. ತೊಂದರೆಯೇನಿಲ್ಲ, ಝಟಾಪಟ್ ಅಂತ ಇಪ್ಪತೈದೇ ನಿಮಿಷದಲ್ಲಿ ಅನ್ನ ರೆಡಿ.
ಪೇಚಿಗಿಟ್ಕೊಂಡಿದ್ದು ಏನಪ್ಪಾ ಅಂದ್ರೆ ನಿನ್ನೆ ತಾನೇ ಹತ್ತು ಕಿಲೋ ಕುಚ್ಚಿಲಕ್ಕಿ ತರಿಸಿದ್ದಾಗಿದೆ, ಅದನ್ನು ಅಂಗಡಿಗೆ ವಾಪಸ್ ಮಾಡುವುದೋ, ಕ್ರಿಸ್ಮಸ್ ರಜೆಯಲ್ಲಿ ಮಕ್ಕಳ ಪರಿವಾರ ಬರುವುದಿದೆ, ಅಲ್ಲೀ ತನಕ ಇಟ್ಟುಕೊಳ್ಳುವುದೋ ಒಂದೂ ತಿಳಿಯದಾಯಿತು. ಸೊಸೆಯಂತೂ ಒಂದು ದಿನ ಕುಚ್ಚುಲಕ್ಕಿ ತಿಂದ ಶಾಸ್ತ್ರ ಮಾಡಿ, “ನಾನು ಘೀ ರೈಸ್ ಮಾಡ್ತೇನೆ” ಅನ್ನುವವಳು.
“ಅಮ್ಮ, ನಂಗೆ ಕುಚ್ಚುಲಕ್ಕಿ.. ಬೆಂಗ್ಳೂರಲ್ಲಿ ಬಿಳಿ ಅನ್ನ ತಿಂದು ಸಾಕಾಗ್ಬಿಟ್ಟಿದೆ. “ ಇದು ಮಗಳ ದನಿ.
ಅಂತೂ ಅಕ್ಕಿಯ ಚೀಲ ಮನೆಯಲ್ಲಿ ಉಳಿಯಿತು.
ಕುಚ್ಚುಲಕ್ಕಿ, ಅನ್ನ ಮಾತ್ರ ಮಾಡೋದಲ್ಲ, ದೋಸೆ ಇಡ್ಲಿ ರೊಟ್ಟಿ ಬಗೆ ಬಗೆಯ ತಿಂಡಿಗಳು ನೆನಪಾದವು. ಏನೇ ಆದರೂ ನಮ್ಮ ಮಿಕ್ಸಿಯ ಜಾರ್ ಕುಚ್ಚುಲಕ್ಕಿಯನ್ನು ನುಣ್ಣಗೆ ಅರೆದು ಕೊಡಲಾರದು. ಹಿಂದಿನ ಕಾಲಕ್ಕೆ ಇನ್ನು ಹೋಗುವಂತಿಲ್ಲ, ಚಿಂಥನ ಮಂಥನ ಮಾಡುತ್ತಿದ್ದ ಹಾಗೆ ಸೋಲಾರ್ ಬಿಸಿನೀರ ನೆನಪಾಯಿತು. ಮಧ್ಯಾಹ್ನದ ಹೊತ್ತಿಗೆ ಕೊತಕೊತನೆ ಕುದಿಯುತ್ತಿರುವ ನೀರು. ಆಹ್, ಇದಪ್ಪ ಬುದ್ಧಿವಂತಿಕೆ, ಎರಡು ಲೋಟ ಕುಚ್ಚುಲಕ್ಕಿ ತಪಲೆಗೆ ತುಂಬಿ ಬಿಸಿ ನೀರ ಟ್ಯಾಪ್ ತಿರುಗಿಸಿ ಕುದಿಯುವ ನೀರನ್ನು ಎರೆೆದು ತಪಲೆಯನ್ನು ಮುಚ್ಚಿ ಇರಿಸಲಾಯಿತು.
ಸಂಜೆಯಾಗುತ್ತಲೂ ಅಕ್ಕಿ ನೀರನ್ನು ಹೀರಿ ಉಬ್ಬಿದೆ, ಇದ್ದ ನೀರನ್ನು ಬಸಿದು, ಜರಡಿ ಬಟ್ಟಲಿಗೆ ವರ್ಗಾಯಿಸಿ ಇಟ್ಟು , ಒಂದು ಲೋಟ ಉದ್ದಿನಬೇಳೆ ನೆನೆ ಹಾಕಲಾಯಿತು.
ಮುಂದಿನ ಚಿಂತನೆ ಏನು?
ಅಕ್ಕಿಯನ್ನು ನೀರು ತಾಕಿಸದೆ ಹುಡಿ ಮಾಡುವುದು.
ಮಿಕ್ಸಿ ಕುಚ್ಚುಲಕ್ಕಿಯ ಹುಡಿ ಮಾಡಿ ಕೊಟ್ಟಿತು.
ಎಷ್ಟಾಯ್ತು ಅಕ್ಕಿ ಹುಡಿ?
ಹಿಂದೆ ಕುಚ್ಚುಲಕ್ಕಿಯಿಂದಲೇ ಕಡುಬು (ಇಡ್ಲಿ ) ಮಾಡುತ್ತಿದ್ದೆವು, ಬಾಳೆ ಎಲೆಯಲ್ಲಿ ಎರೆದು, ಮನೆಯ ಸದಸ್ಯರು ಮಾತ್ರವಲ್ಲದೆ, ತೋಟದ ಕೆಲಸಕಾರ್ಯಗಳ ಖಾಯಂ ಸದಸ್ಯರ ಚಹಾ ಸಮಾರಾಧನೆಗೂ ಸಾಕಾಗುತ್ತಿತ್ತು.
ಒಂದು ಅಳತೆ ಉದ್ದಿನಬೇಳೆಗೆ ನಾಲ್ಕು ಅಳತೆ ಅಕ್ಕಿ, ನಮ್ಮ ಹಳೇ ಲೆಕ್ಕಾಚಾರ.
ಈಗ ನಾವು ಒಂದು ಲೋಟ ಉದ್ದಿನಬೇಳೆಗೆ ನಾಲ್ಕು ಅಳತೆ ಅಕ್ಕಿ ತರಿ ಹಾಕಬೇಕು.
ಕೇವಲ ಕುಚ್ಚುಲಕ್ಕಿಯ ತರಿ ಹಾಕಲು ಮನ ಒಪ್ಪಲಿಲ್ಲ, ಇಡ್ಲಿಗೆಂದೇ ತಂದ ಅಕ್ಕಿ ತರಿ ಇರುವಾಗ?
ಹಾಗಾಗಿ ಮೂರು ಲೋಟ ಕುಚ್ಚುಲಕ್ಕಿ ತರಿ + ಒಂದು ಲೋಟ ಇಡ್ಲಿ ಅಕ್ಕಿ ತರಿ ಅಳೆದು, ಅರೆದ ಉದ್ದಿನ ಹಿಟ್ಟಿಗೆ ಬೆರೆಸಲಾಯಿತು. ರುಚಿಗೆ ಉಪ್ಪು ಕೂಡಿತು. ಕುಚ್ಚುಲಕ್ಕಿಗೆ ನೀರು ಈಗಾಗಲೇ ಸೇರಿಕೊಂಡಿದೆ, ಹಿಟ್ಟು ದಪ್ಪವಾಗಿಯೇ ಇರಲಿ. ಇನ್ನೇನಿದ್ದರೂ ನಾಳೆ ಮುಂಜಾನೆ ನೋಡಿಕೊಳ್ಳೋಣ.
ಅಂತೂ ನಮ್ಮ ಸಾಂಪ್ರದಾಯಿಕ ವಿಧಾನದ ತಿಂಡಿಗಳನ್ನು ಈ ಆದುನಿಕ ಯುಗದಲ್ಲಿಯೂ ಮಾಡಬಹುದು.
ಈ ಇಡ್ಲಿ ಹಿಟ್ಟು ಸೋಡ ಹುಡಿಯನ್ನು ಬಯಸದು.
ಹಲಸಿನ ಎಲೆಯ ಕೊಟ್ಟೆ ಕಡುಬು ಕೂಡಾ ಮಾಡಲಡ್ಡಿಯಿಲ್ಲ.
ಬಾಳೆ ಎಲೆಯ ಕಡುಬು, ಅಗಾರೋ ರೈಸ್ ಕುಕ್ಕರಿನಲ್ಲಿ ನಿರಾಯಾಸದಿಂದ ಮಾಡಬಹುದಾಗಿದೆ.
ಈಗ ಏನಾಗ್ಬಿಟ್ಟಿದೆ ಅಂದ್ರೆ ಅಡುಗೆಗೆ ಹಿತವಾಗುವಂತಹ ಮಜ್ಜಿಗೆ ಲಭಿಸುವುದೇ ಇಲ್ಲ. ಎರಡು ದಿನಕ್ಕೊಮ್ಮೆ ತರುವ ಹಾಲು, ಅದು ಚಹಾ ಕಾಫಿ, ಹಾಗೇನೇ ಕುಡಿಯಲುೂ ಆಯ್ತು, ನಂತರ ಮೊಸರು ಆಗಬೇಕು, ಯಾವುದೂ ನಿರರ್ಥಕ ಆಗದ ಹಾಗೆ ಬೆಣ್ಣೆ, ತುಪ್ಪವೂ ಮೇಲೆದ್ದು ಬರಬೇಕು. ಉಳಿದಂತಹ ಮಜ್ಜಿಗೆಯನ್ನು ಗಟಗಟನೆ ಕುಡಿಯಬೇಕು.
ಮನೆಯಲ್ಲೇ ಎಮ್ಮೆ ದನ ಇದ್ದ ಕಾಲದಲ್ಲಿ, ಮನೆಯ ಹೊರಗೂ ನಮ್ಮ ಮಜ್ಜಿಗೆ ಬಟವಾಡೆ ಆಗುತ್ತಿದ್ದ ಕಾಲ ಅದು. ನೆರೆಕರೆಯ ಮನೆಗಳಲ್ಲಿ ವಿಶೇಷ ಸಮಾರಂಭಗಳಿದ್ದಲ್ಲಿ ನಮ್ಮ ಮಾವ ಮೊದಲೇ ತಿಳಿಸಿರುತ್ತಿದ್ದರು, ಏನಂತ? “ ಆ ಮದುವೆ ಮನೆಗೆ ಒಂದು ಕೊಡ ಮಜ್ಜಿಗೆ ಶೇಖರಿಸಿ ಇಡು.. “ ಈಗ ಏನೇ ಇದ್ದರೂ ನಂದಿನಿ ಪ್ಯಾಕೆಟ್ ಹಾಲು, ಮೊಸರು, ಮಜ್ಜಿಗೆಯೂ ಸಿಗುತ್ತೆ ಪ್ಯಾಕೆಟ್ಟು.
ಮಜ್ಜಿಗೆಹುಳಿ ಮಾಡೋಣ ಅಂತ ಆಲೋಚನೆ ಮಾಡುತ್ತ ಇದ್ದ ಹಾಗೆ ಮಜ್ಜಿಗೆ ಮುಗಿಯಿತು. ತಣ್ಣಗೆ ಅರ್ಧ ಲೋಟ ಮೊಸರು ಉಳಿದಿತ್ತು. ಮೊಸರೂ ಆದೀತು. ಸೌತೇ ಕಾಯಿ ಇದೆ. ಯಾವುದೇ ಅಡುಗೆಗಾದೀತು ಎಂದು ನೆನೆಸಿದ ಕಾಬೂಲಿ ಚನಾ ಇದೆ. ತೆಂಗಿನಕಾಯಿ ಅರ್ಧ ಕಡಿ ಇದೆಯಷ್ಟೇ, ಅದೂ ಸಣ್ಣ ಕಡಿ. ಇನ್ನೊಂದು ಕಾಯಿ ಸುಲಿದು ಕೊಡಲಿಕ್ಕೆ ರಂಗಣ್ಣ ಇವತ್ತು ಬಂದಿಲ್ಲ… ಹೀಗೆಲ್ಲ ಚಿಂತಿಸುತ್ತ ಇದ್ದಂತೆ ವಿದ್ಯುತ್ ಕುಕ್ಕರಲ್ಲಿ ಕಾಬೂಲಿ ಚನಾ ಬೇಯಲಿಕ್ಕೆ ಇಟ್ಟಾಯ್ತು. ಸೌತೇಕಾಯಿ ಹೋಳಾಯ್ತು. ಅಗಾರೋ ರೈಸ್ ಕುಕ್ಕರ್ ಅನ್ನ ಬೇಯಿಸುತ್ತ ಇದೆ. ಬೆಳ್ತಿಗೆ ಅನ್ನ ಕೇವಲ ಇಪ್ಪತೈದು ನಿಮಿಷದಲ್ಲಿ ಆಗುತ್ತೆ, ಕುಚ್ಚುಲಕ್ಕಿ ಅನ್ನ ಬೇಯಲಿಕ್ಕೆ ಒಂದೂವರೆಯಿಂದ ಎರಡು ಗಂಟೆಗಳ ಅವಧಿ. ವಿದ್ಯುತ್ ಖರ್ಚು ಕಡಿಮೆ ಎಂದು ನಮ್ಮ ಯಜಮಾನರ ಅಂಬೋಣ.
ಈಗ ಸ್ವಲ್ಪ ಬಿಡುವು, ದೈನಂದಿನ ಇನ್ನಿತರ ಕೆಲಸ ಕಾರ್ಯಗಳನ್ನು ಮುಗಿಸಿ ಅಡುಗೆ ಮನೆಗೆ ಬಂದಾಗ ಅನ್ನ ಬೆಂದಿದೆ, ಕಾಬೂಲಿ ಚನಾ ಹದವಾಗಿ ಬೆಂದಿದೆ. ಆಗ್ಗಿಂದಾಗ್ಗೆ ಮುಚ್ಚಳ ತೆರೆದು ನೋಡಲಡ್ಡಿಯಿಲ್ಲ.
ತೆಂಗಿನತುರಿ ಕಡಿಮೆ ಆದ ಬಾಬ್ತು ಒಂದು ಸೌಟು ಬೆಂದಂತಹ ಕಾಬೂಲಿ ಚನಾ ತೆಗೆದಿರಿಸಲಾಯಿತು.
ಸೌತೆ ಹೋಳುಗಳನ್ನು ಬೇಯಲು ಹಾಕಿ, ರುಚಿಗೆ ಉಪ್ಪು ಕೂಡಿ, ಮುಚ್ಚಿ ಇರಿಸಲಾಯಿತು. ಮರೆತು ಹೋದ ಹಸಿಮೆಣಸನ್ನು ಎರಡಾಗಿ ಸಿಗಿದು ಹಾಕಲಾಯಿತು.
ಬೇಯುತ್ತ ಇರಲಿ, ಈಗ ಅರೆಯುವ ಸಮಯ.
ತೆಂಗಿನತುರಿ, ಕಾಬೂಲಿ ಚನಾ, ಮೊಸರು ಮಿಕ್ಸಿ ಜಾರೊಳಗೆ ತುಂಬಿ, ಒಂದು ಹಸಿಮೆಣಸು, ತುಸು ಜೀರಿಗೆ, ಚಿಟಿಕೆ ಅರಸಿಣ ಕೂಡಿ ಅರೆಯಲಾಯಿತು. ಅರೆದ ಮಿಶ್ರಣ ಸೇರಿದಾಗ ಒಂದು ಪದಾರ್ಥ ಸಿದ್ಧಗೊಂಡಿದೆ. ಹುಳಿ ಹಾಕುವುದಕ್ಕಿಲ್ಲ, ಉಪ್ಪು ಬೆಲ್ಲ, ನೀರು ಹೊಂದಿಸಿದರಾಯಿತು. ಕುದಿದ ನಂತರ ಕರಿಬೇವು ಕೂಡಿದ ಒಗ್ಗರಣೆಯೊಂದಿಗೆ ವಿದ್ಯುತ್ ರೈಸ್ ಕುಕ್ಕರ್ ಅಡುಗೆ ಮುಗಿಯಿತು.