Pages

Ads 468x60px

Saturday 28 December 2013

ಮಗನ ಮನೆಗೆ, ಬೆಂಗಳೂರಿಗೆ ಹೊರಟ ಘಳಿಗೆ....







" ಅಮ್ಮ, ಅಪ್ಪನೂ ಗಿರೀಶ್ ಮಾವನೂ ಬೆಂಗಳೂರಿಗೆ ಹೋಗೋ ಪ್ಲಾನ್ ಹಾಕ್ತಾ ಇದಾರೆ, ನೀನೂ ಈ ಚಾನ್ಸ್ ಬಿಡ ಬೇಡ, ಹೊರಟು ಬಾ " ಅಂದ ಮಗ.

ನೋಡುವಾ, ಅಪ್ಪ ಇನ್ನೂ ಹೇಳಿಲ್ಲ "

" ಹೇಳೂದೆಂಥದು, ನೀನು ಬಾ, ನನ್ನ ಆಫೀಸ್, ಮನೆ ನೋಡ್ಬೇಡ್ವಾ, ಚಿಕ್ಕಮ್ಮನ ಮನೆಗೆ ಹೋಗದೇ ವರ್ಷ ಎಷ್ಟಾಯ್ತು? ಲೆಕ್ಕ ಹಾಕೂ....."

ಹೌದು, ಅವನಂದಂತೆ ನಾನು ತಂಗಿ ಮನೆಗೆ ಹೋಗದೇ ಕೆಲವು ವರ್ಷಗಳೇ ಆಯ್ತು. ನಾಗರಬಾವಿಯಲ್ಲಿ ಹೊಸ ಮನೆ ಆದಾಗ ಹೋಗಿದ್ದು.

ಗಿರೀಶ್ ಜೊತೆ ಸಂಪರ್ಕಿಸಿದಾಗ ಅವನೂ ಪ್ರವಾಸದ ದೃಢೀಕರಣ ನೀಡಿದ. ಶೀಲಾ ಕೂಡಾ ಬರುತ್ತಿದ್ದಾಳೆ ಎಂಬ ಸುಳಿವನ್ನೂ ಬಿಟ್ಟು ಕೊಟ್ಟ.

ನಿಮ್ಮ ಜೊತೆ ನಾನೂ ಬರಲಿದ್ದೇನೆ ಎಂಬ ಬಾಂಬ್ ಸಿಡಿಸದಿದ್ದರಾಗುತ್ತಾ, " ಸರಿ, ನೀನೂ ಹೊರಡು "
ಹೊರಡುವ ಸಿದ್ಧತೆ ನಡೆಯಿತು. " ನೋಡೂ, ಇಲ್ಲಿಂದ ಮಂಗಳೂರು ತನಕ ನಮ್ಮ ಬೈಕು ಗೊತ್ತಾಯ್ತಾ..."

ನಮ್ದು ಹೊಸ ಬೈಕು ಬಂದಿತ್ತು, ಇವರಿಗೋ ಬೈಕಿನಲ್ಲೇ ಲೋಕಸಂಚಾರದ ಹುಮ್ಮಸ್ಸು. " ಓ, ಹಾಗೋ, ಸಂಗ್ತಿ..." ನಮ್ಮ ಲಗ್ಗೇಜ್, ಅದೂ ಇದೂ ಹ್ಯಾಗೆ ಬೈಕ್ ನಲ್ಲಿ....!!

ಬೈಕಿನಲ್ಲೇ ಮಂಗಳೂರು ವರೆಗೆ ಹೋಗೂದಂದ್ರೇನು ಹುಡುಗಾಟವೇ, ಮನೆಯಿಂದ ಪೈವಳಿಕೆ ತನಕ ಹೋಗಬಹುದು, ಕೆಟ್ಟು ಹೊಂಡ ಬಿದ್ದಿರುವ ರಸ್ತೆಯಲ್ಲಿ ಉಪ್ಪಳದ ವರೆಗೆ ಹೇಗೋ ಸುಧರಿಸಿಕೊಂಡು ಹೋಗಬಹುದು. ಈ ಸುದ್ದಿ ಮಗನ ಕಿವಿಗೆ ಬಿತ್ತು.

" ಅಷ್ಟೇ ತಾನೇ, ನೀನು ಬೈಕಿನಲ್ಲೇ ಕೂತಿರು, ಲಗ್ಗೇಜ್ ಯಾವ್ದೂ ನೀನು ಹಿಡ್ಕೋ ಬೇಡ ತಿಳೀತಾ "

ನನಗೋ ಉಪ್ಪಿನಕಾಯಿ, ತುಪ್ಪ, ಕರಿದ ತಿಂಡಿಗಳನ್ನು ಒಯ್ಯಬೇಕೆಂದಿತ್ತು. ಈಗ ಆ ಉತ್ಸಾಹವನ್ನು ಅದುಮಿಟ್ಟುಕೊಂಡು ಕೇವಲ ನನ್ನ ಬಟ್ಟೆಬರೆಗಳನ್ನು ಜೋಡಿಸಲು ತೊಡಗಿದೆ. ಗಿರೀಶನ ವೈಬರ್ ಫೋನ್ ಕರೆ ಹೆಚ್ಚಾಗಿ, ಆಗಾಗ ಗಂಟೆ ಬಾರಿಸಿದಂತೆ ಕಿವಿಗೆ ಬಡಿಯುತ್ತಿರುತ್ತದೆ. ಆ ಹೊತ್ತಿಗೆ " ಸೀರೆ ಎಷ್ಟು ಹಿಡ್ಕೊಳ್ಳಲೀ ಗಿರೀಶಾ..." ಕೇಳದಿದ್ರಾಗುತ್ತಾ.

" ತಗೊಳ್ಳಿ ಒಂದೈದಾರು " ಅಂದ್ಬಿಟ್ಟ. ಅಲ್ಲಿಗೆ ಇದು ದೀರ್ಘ ಪ್ರಯಾಣವೆಂದು ಖಾತ್ರಿ.

" ಈಗ ಚಳಿ ಶುರುವಾಗಿದೆ, ಸ್ವೆಟ್ಟರು, ಕೋಟು ಇರಲೀ " ಫೋನು ತಂಗಿಯದ್ದು. ಮಧು ಡೆಲ್ಲಿಯಿಂದ ತಂದಿದ್ದ ತರಹೇವಾರಿ ಕೋಟುಗಳು ಹೊರ ಬಂದವು.

" ಮುಗ್ಗುಲು ವಾಸನೆ ಬರ್ತಿದೆ, ತೊಳೆಯುವುದೊಳ್ಳೆದು "

ವಾರದ ಹಿಂದೆ ಬಂದಿದ್ದ ಅಟೋಮ್ಯಾಟಿಕ್ ವಾಶಿಂಗ್ ಮೆಶೀನ್ ತೊಳೆದು, ಒಣಗಿಸಿಯೇ ಕೊಟ್ಟಿತು. ನಮ್ಮ ಸಿದ್ಧತೆಯ ಸುದ್ದಿ ಆಗ್ಗಿಂದಾಗ್ಗೆ ಗಿರೀಶನನ್ನೂ ತಲಪುತಿತ್ತು. " ಹಾಗಿದ್ರೆ ನಂಗೂ ಕೋಟು ತೆಕ್ಕೊಳ್ಳಿ " ಅಂದ.

" ಇನ್ನೂ ಒಂದು ಕೋಟು ಆಗ್ಬೇಕಲ್ಲ "

" ಇದ್ದೀತು ಕಪಾಟಿನಲ್ಲಿ " ಅನ್ನುತ್ತಾ ಹುಡುಕಿದಾಗ ಭರ್ಜರಿ ಕೋಟು ಸಿಕ್ಕಿತು.

" ಇದನ್ನೂ ತೊಳೆಯುವುದುತ್ತಮ, ಇಷ್ಟು ಚೆನ್ನಾಗಿ ಹಳೇ ಮೆಶೀನು ತೊಳೆದದ್ದು ನಾನು ಕಂಡಿಲ್ಲ " ಅಂದರು ನಮ್ಮವರು.

" ನಾಳೆ ಬೆಳ್ಳಂಬೆಳಗ್ಗೆ ಹೊರಡೂದಂತೆ, ಈ ರಾತ್ರಿ ತೊಳೆಯುವ ಕೆಲಸವೇ ಆಯ್ತು " ಗೊಣಗುಟ್ಟುತ್ತಾ ವಾಶಿಂಗ್ ಮೆಶೀನ್ ಒಳಗೆ ಹಾಕಿ, ತೆಗೆದು ಮಾಡಿದ್ದೂ ಆಯಿತು.

ಶಿರಾಡಿಘಾಟ್ ರಸ್ತೆ ಏನೂ ಚೆನ್ನಾಗಿಲ್ಲ, ನಾವು ಮಡಿಕೇರಿ, ಮೈಸೂರು ರಸ್ತೆಯಲ್ಲಿ ಪ್ರಯಾಣಿಸುವುದುತ್ತಮ ಎಂಬ ಸಲಹೆ ಬಂದಿತು. ಮೈಸೂರಿನಲ್ಲಿ ನಮ್ಮತ್ತಿಗೆ ಮನೆಯೂ ಇದೆ. ನಮ್ಮವರು ಅವರಕ್ಕನಿಗೂಂದು ಫೋನಾಯಿಸಿ ಬರುವ ಸೂಚನೆ ಕೊಟ್ಟೂ ಆಯಿತು.

" ಹಾಗಿದ್ರೆ ನಾವು ಹಿರಣ್ಯಕ್ಕೆ ಬರ್ತೇವೆ.." ಇಲ್ಲಿಂದಾನೇ ಪುತ್ತೂರು ರಸ್ತೆಯಿಂದ ಹೋಗುವ ತೀರ್ಮಾನಕ್ಕೆ ಬಂದ ಗೆಳೆಯರ ವ್ಯವಹಾರದಿಂದ ನನ್ನ ಬೈಕ್ ಪ್ರಯಾಣ ಉಳಿಯಿತು, ಆದರೆ ಮಗನಿಗಾಗಿ, ತಂಗಿಗಾಗಿ ಇನ್ನು ಏನನ್ನೂ ಅಡುಗೆಮನೆಯ ಪ್ರಯೋಗಶಾಲೆಯಲ್ಲಿ ತಯಾರಿಸಿ ಒಯ್ಯಲು ಸಮಯವಿಲ್ಲ. ಚಕೋತಾ ಕಿತ್ತದ್ದು ಇದ್ದಿತು. ಅದನ್ನೇ ಚೀಲಕ್ಕೇರಿಸಿದ್ದು ನನ್ನ ತೃಪ್ತಿ ....

ಸುದೀರ್ಘ ಪ್ರಯಾಣದ ಇನ್ನಷ್ಟು ವಿವರ ಹಾಗೂ ಪ್ರೇಕ್ಷಣೀಯ ತಾಣಗಳ ಚಿತ್ರಣ ಬರಲಿದೆ.... ನಿರೀಕ್ಷಿಸಿ!



Posted via DraftCraft app

0 comments:

Post a Comment