Pages

Ads 468x60px

Saturday 11 January 2014

ಮೈಸೂರಿನ ಆಶ್ರಮ ಸಂದರ್ಶನ





ಅರಮನೆ ಹಾಗೂ ಚಾಮುಂಡಿ ಬೆಟ್ಟಗಳನ್ನು ಸುತ್ತಾಡಿಯೇ ಮದ್ಯಾಹ್ನ ಆಯಿತು.  ಹೋಟಲ್ ಹೊಕ್ಕು ಊಟ ಮುಗಿಸಿದೆವು.   ಮುಂದೆ ನಾವೊಂದು ಆಶ್ರಮಕ್ಕೆ ಭೇಟಿ ನೀಡಲಿದ್ದೇವೆ ಎಂದ ಗಿರೀಶ.   ಈ ಮೈಸೂರು ಗಣೇಶಪುರಿ ಶ್ರೀ ನಿತ್ಯಾನಂದ ಆಶ್ರಮ ಗಿರೀಶ್ ಹೆಚ್ಚಾಗಿ ಭೇಟಿ ನೀಡುವ ಒಂದು ಪ್ರಶಾಂತ ತಾಣ. ಈ ಆಶ್ರಮದ ಮಾತಾಜಿ,  ಶ್ರೀ ರಾಜಯೋಗಿನಿ ಹಸನ್ ಮಾತಾಜಿ ಇಲ್ಲಿ ಸಮಾಧಿಸ್ಥರಾಗಿ ಒಂದು ವರ್ಷವಾಗುತ್ತಾ ಬಂದಿತೆಂಬ ವಿವರ ಶೀಲಾ ತಿಳಿಸಿದಳು.   ಬನ್ನಿ,   ಗಿರೀಶ್ ಜೊತೆಯಲ್ಲಿ ಆಶ್ರಮದ ಒಳ ಹೊರ ಸುತ್ತಾಡಿ ಬರೋಣ. ಒಳಾಂಗಣ  ವಿಶಾಲವಾಗಿಯೂ,  ಅಚ್ಚುಕಟ್ಟಾಗಿಯೂ ಇದೆ.   ಆಶ್ರಮದ ಹೊರಗೆ  ಸಸ್ಯೋದ್ಯಾನ.

ಇಲ್ಲಿ ಸಾಕಷ್ಟು ಹೊತ್ತು ತಂಗಿದ್ದು,  ಸುತ್ತಾಡಿ ಆದಾಗ ಸಂಜೆಯಾಗುತ್ತಾ ಬಂದಿತ್ತು.   ಮಂಡ್ಯ ರಸ್ತೆಯಲ್ಲಿ ಬೆಂಗಳೂರು ತಲಪಲಿದ್ದೇವೆ ಎಂದು ತಂಗಿಯ ಮನೆಗೆ ಕರೆ ಹೋಯಿತು.   ಮಗನ ಮೊಬೈಲ್ ಕರೆ ಆಗಾಗ ಬರ್ತಾ ಇತ್ತು.   ಮಂಡ್ಯ ದಾರಿಯಲ್ಲಿ ಹೋಗುವ ಮೂಲಕ ಮೇಲುಕೋಟೆಯ ಯೋಗನಾರಸಿಂಹ ದೇವಸ್ಥಾನ,  ಚೆಲುವರಾಯ ಸ್ವಾಮಿ ದೇವಸ್ಥಾನಗಳನ್ನು ನೋಡಿಕೊಂಡೇ ಮುಂದುವರಿಯುವ ಇರಾದೆ ಗಿರೀಶನದ್ದು.

" ಇದನ್ನೆಲ್ಲಾ ನೋಡಿ ಬಂದ ಮೇಲೆ ಒಂದೊಂದೇ ಪ್ರವಾಸೀ ಸ್ಥಳದ ಮೇಲೆ ಬ್ಲಾಗ್ ಬರೀರೀ ಶುಭಕ್ಕಾ "

" ಹಾಗಂತೀಯಾದ್ರೆ ಬರೆಯುವಾ "

" ಫೊಟೋ ಬೇಕಾದಷ್ಟು ಸಿಗ್ತದಲ್ಲ,  ಮತ್ಯಾಕೆ ಚಿಂತೆ.." ಅಂದ.   ಇವರು " ಬೀಗದ ಕೈ ಎಲ್ಲಿಟ್ಟಿದ್ದೀ " ಎಂದು ಕೇಳಿದ ಹೊತ್ತಿನಿಂದ ನನ್ನ ಮೂಡ್ ಹಾಳಾಗಿತ್ತು. 
 
 " ಆಗಾಗ ಬರೆದಿಟ್ಕೊಳ್ಳಿ,  ಮರೆತು ಹೋಗಬಾರದಲ್ಲ "

" ಪೆನ್ನು, ಪುಸ್ತಕ ಎಲ್ಲಿದೇ ?"

" ಐ ಪಾ್ಯಡ್ ಇದೆಯಲ್ಲ,  ಅದ್ರಲ್ಲೇ ಬರೆದಿಡಿ "  ಅವನು  ಐ ಪಾ್ಯಡ್ ತಂದಿದ್ದ,   ಗೂಗಲ್ ಮ್ಯಾಪ್ ನೋಡ್ತಾ ಪ್ರಯಾಣ ಮಾಡುವುದುತ್ತಮ ಅಂತ  ಐ ಪಾಡೂ ಜೊತೆಗೆ ಬಂದಿತ್ತು.










ಇಷ್ಟೂ ಬರೆಯುತ್ತಿರಬೇಕಾದರೆ ಗಿರೀಶ್ ಬಗ್ಗೆ ಸ್ವಲ್ಪವೂ ಹೇಳದಿದ್ದರೆ ತಪ್ಪಾದೀತು.   ನಮ್ಮವರು ಹಾಗೂ ಗಿರೀಶ್ ಸ್ನೇಹ ಹಳೆಯದು,  ಹತ್ತು ವರ್ಷಕ್ಕೂ ಮೇಲ್ಪಟ್ಟ ಸ್ನೇಹ ಇವರಿಬ್ಬರದು.   ನಮ್ಮ ಎಚ್.ಟಿ. ಭಟ್,   ಸುರತ್ಕಲ್ ರೀಜನಲ್ ಇಂಜಿನಿಯರಿಂಗ್ ಕಾಲೇಜಿನಿಂದ ಹೊರ ಬಂದ ಮೇಲೆ ಸರ್ಕಾರೀ ಕೆಲಸದ ಹಿಂದೆ ಹೋಗದೆ ಸ್ವತಂತ್ರವಾಗಿ ಇಲೆಕ್ಟ್ರಾನಿಕ್ಸ್ ಉದ್ಯಮಿಯಾಗಿ ಉಪ್ಪಳವನ್ನು ನೆಲೆಯಾಗಿರಿಸಿ ಮಂಗಳೂರು, ಕಾಸರಗೋಡು,  ಪುತ್ತೂರುಗಳಲ್ಲಿ ವ್ಯವಹರಿಸುತ್ತಾ ಬಂದವರು.   ಇಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಇವರಿಂದ ಕಲಿಯಲೆಂದೇ ಎಷ್ಟೋ ಮಂದಿ ಬರುತ್ತಿರುತ್ತಾರೆ.   ಹಾಗೆ ಡಿಜಿಟಲ್ ತಂತ್ರಜ್ಞಾನವನ್ನು ಕಲಿಯುವ ಸ್ಟೂಡೆಂಟ್ ಆಗಿ ಗಿರೀಶ್ ಅಂದು ಬಂದವನು ಇಂದು ಮನೆಯ ಸದಸ್ಯರಲ್ಲೊಬ್ಬನಾಗಿದ್ದಾನೆ.   ಇದಕ್ಕೂ ಕಾರಣವಿದೆ,   ಪಾದರಸದಂತೆ ಚುರುಕಾದ ಗಿರೀಶ್ ಪರಿಚಿತನಾದಾಗ ನನ್ನ ಮಕ್ಕಳಿಬ್ಬರೂ ಚಿಕ್ಕವರು.   ಇಬ್ಬರೂ ಅವನ ಒಡನಾಡಿಗಳಾಗಿ ಮುಂದುವರಿದರು. ಪೈವಳಿಕೆಯ ಸರ್ಕಾರಿ ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದ ನನ್ನ ಮಗ ಕಂಪ್ಯೂಟರ್ ಸಾಧನಗಳೊಂದಿಗೆ ಲೀಲಾಜಾಲವಾಗಿ ವ್ಯವಹರಿಸುವ ಗಿರೀಶ್ ಕುಶಾಗ್ರಮತಿಗೆ ಮಾರು ಹೋದ.   ಮಕ್ಕಳ ಮನೋದೈಹಿಕ ಬೆಳವಣಿಗೆಗೆ ಇಂತಹ ಪೂರಕ ವಾತಾವರಣ ಗಿರೀಶನಿಂದಾಗಿಯೇ ನಮ್ಮ ಮನೆಯೊಳಗೆ ನಿರ್ಮಾಣವಾಯಿತು.

ತಾಂತ್ರಿಕ ಕ್ಷೇತ್ರದಲ್ಲಿ ಬಹಳ ಮುಂದೆ ಇರುವ ಗಿರೀಶ್ ವೃತ್ತಿಯಲ್ಲಿ ಮಂಗಳೂರಿನ ಅಡ್ವೊಕೇಟ್.   ಲಾಯರ್ ಗಿರಿ ವೃತ್ತಿಯಾದರೂ ಅಂತರ್ಜಾಲದ ಮೇಲಿನ ಅವನ ಹಿಡಿತ ಮಂಗಳೂರಿನ ಇತರ ವಕೀಲರಿಗೆ ಇರಲಾರದು.   ಪರಿಚಿತನಾದ ಮೇಲೆ ಹಿಂದು ಮುಂದು ತಿಳಿಯದಿರುತ್ತೇನಾ,  ಗಿರೀಶ್ ಚುಳ್ಳಿಕ್ಕಾನ ಮನೆತನದವನೆಂದು ತಿಳಿದಾಗ ನನಗೂ ಹಿಗ್ಗಾಯಿತು,   ಯಾತಕ್ಕೇಂದ್ರೆ ಚುಳ್ಳಿಕ್ಕಾನ ನನ್ನ ಸೋದರತ್ತೆಯ ಮನೆ.   ಅಲ್ಲಿಗೆ ನಮ್ಮೊಳಗೆ ನೆಂಟಸ್ತನವೂ ಇದೆ ಅಂತಲೂ ಆಯ್ತು.

ಗಿರೀಶ್ ಪತ್ನಿ ಶೀಲಾ ಕೂಡಾ ವಿದ್ಯಾವಂತೆ,  ಬಿ.ಕಾಂ. ಪದವೀಧರೆ,   ಸಂಸ್ಕೃತದಲ್ಲಿ ಸ್ನಾತಕ ಪದವಿ ಪಡೆದಿದ್ದಾಳೆ ಹಾಗೂ ಕಾಲೇಜು ಅಧ್ಯಾಪಕಿ.   ನನ್ನ ಮಗಳಿಗೂ ಶೀಲಾ ಅಚ್ಚುಮೆಚ್ಚಿನ ಸ್ನೇಹಿತೆ.   ನನ್ನ ಬರವಣಿಗೆಯನ್ನು ಉತ್ತೇಜಿಸಿದ ಗಿರೀಶ್,   ಬರಹಗಳ ಪ್ರಕಟಣೆಗೆ  ತನ್ನ ಭಾವ,  ' ಗಲ್ಫ್ ಕನ್ನಡಿಗ '  ಅಂತರ್ಜಾಲ ಪತ್ರಿಕೆಯ ಪದ್ಯಾಣ ರಾಮಚಂದ್ರರನ್ನೂ ಪರಿಚಯಿಸಿ ಕೊಟ್ಟ.    ಆರಂಭಿಕ ಹಂತದ ಬರಹಗಳನ್ನು ಮೇಲ್ ಕಳುಹಿಸಲೂ,  ಫೋಟೋ ಲಗತ್ತಿಸಲೂ ತಿಳಿಯದಿದ್ದ ನಾನು ಮನೆಯೊಳಗಿನ ಪೂರಕ ವಾತಾವರಣದಿಂದಾಗಿಯೇ ಎಲ್ಲವನ್ನೂ ಕಲಿಯುವಂತಾಯಿತು.   ಆರಂಭದ ಬರಹಗಳೆಲ್ಲವೂ ದುಬೈ ಮೂಲದ ಅಂತರ್ಜಾಲ ಪತ್ರಿಕೆಗಳಾದ  ಗಲ್ಫ್ ಕನ್ನಡಿಗ ಹಾಗೂ ವಿಶ್ವ ಕನ್ನಡಿಗದಲ್ಲಿ ಬಂದಿವೆ.   ಪದ್ಯಾಣ ರಾಮಚಂದ್ರ ನನ್ನ ಕಿರು ಬರಹಗಳನ್ನು ದಿನ ಪತ್ರಿಕೆಗಳಲ್ಲೂ ಪ್ರಕಟಿಸಿ ಸ್ಪೂರ್ತಿ ನೀಡಿದರು.  ದುಬೈಯಿಂದಲೇ ಬರವಣಿಗೆಯ ಸೂಕ್ಷ್ಮ ವಿಚಾರಗಳ ಅರಿವು ಮೂಡಿಸಿದರು. ಬರೆದದ್ದನ್ನು ಬ್ಲಾಗ್ ರೂಪದಲ್ಲಿ ಸಂಗ್ರಹಿಸಿಟ್ಟುಕೊಳ್ಳಲೂ ಗಿರೀಶನೇ ಉಮೇದು ಕೊಟ್ಟವನು.

- ಮುಂದುವರಿಯಲಿದೆ.

Posted via DraftCraft app

0 comments:

Post a Comment