Pages

Ads 468x60px

Saturday 14 June 2014

ಕಾಟ್ ಗಿಡದ ಗಿಜಿಗಿಜಿ ಸದ್ದು...




" ಆ ಕಾಲ ಎಷ್ಟು ಚೆನ್ನಾಗಿತ್ತು,  ಮನೆಯ ವಠಾರದೊಳಗೇ ತಗತೇ ಸೊಪ್ಪು,   ರಸ್ತೆ ಅಕ್ಕಪಕ್ಕದಲ್ಲೂ ಅದೇ,  ಶಾಲೆ ಕಂಪೌಂಡ್ ಒಳಗೂ ಬೆಳೀತಾ ಇತ್ತು,  ಈಗ ಒಂದು ತಂಬ್ಳಿ ಮಾಡ್ಬೇಕಾದ್ರೂ ....."
ಗೌರತ್ತೆ ನನ್ನ ಮಾತನ್ನು ಮೌನವಾಗಿ ಆಲಿಸ್ತಾ ಕೂತಿದ್ರು.
" ಸ್ಲೇಟು ಒರೆಸ್ಬೇಕಾದ್ರೂ ನಾವು ತಗತೆ ಸಾಲು ಇದ್ದಲ್ಲಿ ಹೋಗಿ ಎಲೆಗಳ ಮೇಲೆ ಸ್ಲೇಟ್ ಆಡಿಸಿ ಬರ್ತಿದ್ದೆವು,  ಎಲೆಗಳ ಮೇಲಿದ್ದ ಮಳೆಹನಿ ಸಾಕಾಗ್ತಿತ್ತು "
" ಅದ್ಯಾಕೆ ಹಂಗೆ ಬೇಜಾರು ಮಾಡ್ಕೋತೀಯ,   ಎದುರ್ಗಡೆ ಅಂಗಳದಲ್ಲಿ ಇರೂದನ್ನು ನೀನು ನೋಡಿಲ್ಲಾಂತಾಯ್ತು "
" ಹ್ಞ,  ಅದೆಂತ ಕಾಟ್ ಗಿಡವೋ,  ಯಾರಿಗ್ಗೊತ್ತು.."
" ಅದೂ ಕೂಡಾ ತಗತೆಯೇ,  ನಾನೇ ಸೊಪ್ಪು ತಂದು ತಂಬ್ಳಿ ಮಾಡ್ತೇನೆ, ನೋಡ್ತಾ ಇರು "

ತಂಬುಳಿಯೇನೋ ಸಿದ್ಧವಾಯಿತು.   ಊಟದೊಂದಿಗೆ ಸುರಿದು ತಿಂದೂ ಆಯಿತು.   
ಮನೆಯಂಗಳದಲ್ಲಿ ಇದ್ದಿದ್ದು ಒಂದೆರಡು ಗಿಡಗಳು,     ಗೌರತ್ತೆ ಈ ಗಿಡವನ್ನು ದೊಡ್ಡ ತಗತೆ ಅಂದು ಬಿಟ್ಟಿದ್ದರು.   ಚಿಗುರೆಲೆಗಳು ದೊರೆತಂತೆ ರಸಂ,  ಪಲ್ಯ,  ಸಾರುಗಳಿಗೆ ಆಗಾಗ ಹಾಕುವ ರೂಢಿಯನ್ನೂ ಇಟ್ಟುಕೊಂಡಿದ್ದಾಯಿತು.   ದಿನವೂ ಗಮನಿಸುತ್ತಿದ್ದಂತೆ ಸುಕೋಮಲ ಬಂಗಾರವರ್ಣದ ಹೂಗಳೂ ಬಿರಿದುವು.   ಹೂಗಳು ಕಾಯಾಗಿ,   ಬಲಿತ ಕೋಡುಗಳು ಒಣಗಿ ಗಿಡ ಗಾಳಿಗೆ ತೊನೆದಾಡುವಾಗ ಗೆಜ್ಜೆಯ ನಾದದಂತೆ ಗಿಜಿಗಿಜಿ ಸದ್ದು ಮಾಡುವ ಸೊಗಸೇನು,   ಅಂತೂ ನನ್ನ ಬೇಸರ ತೊಲಗಿಯೇ ಹೋಯ್ತು ಅನ್ನಿ.   ಮತ್ತೂ ಒಂದು ವಿಶೇಷ ಏನಪ್ಪಾಂದ್ರೆ ಇದು ಮಳೆಗಾಲದಲ್ಲಿ ಮಾತ್ರ ಲಭ್ಯ ಅಂದ್ಕೊಂಡ್ಬಿಡಬೇಡಿ,  ವರ್ಷವಿಡೀ ಸಿಗುವ ಹಸಿರು ಸೊಪ್ಪು ಮಾತ್ರವಲ್ಲ,  ಸೊಗಸಾದ ಹೂಗಳಿಂದ ಕೈದೋಟದ ಶೋಭೆಯನ್ನೂ ಹೆಚ್ಚಿಸುವಂಥದು.  ನೀರಾವರಿಯನ್ನೂ ಈ ಗಿಡ ಬಯಸದು.

ಗೌರತ್ತೆಯ ಈ ದೊಡ್ಡ ತಗತೆ ಗಿಡ ಸಸ್ಯವಿಜ್ಞಾನಿಗಳ ಹೇಳಿಕೆಯಂತೆ Crotalaria pallida,  ಒಂದು  ಔಷಧೀಯ ಸಸ್ಯ.   ಯಾವ ಆತಂಕವೂ ಇಲ್ಲದೆ ಅಡುಗೆಯಲ್ಲಿ ಚಿಗುರೆಲೆಗಳನ್ನು ಬಳಸಬಹುದು.    ಎಳೆಯ ಚಿಗುರುಗಳನ್ನು ತುಪ್ಪದಲ್ಲಿ ಬಾಡಿಸಿ,  ಜೀರಿಗೆ,  ತೆಂಗಿನತುರಿಯೊಂದಿಗೆ ಅರೆದು ಮಜ್ಜಿಗೆ ಎರೆದು ತಂಬ್ಳಿ ಮಾಡ್ಕೊಳ್ಳಿ.   ಇನ್ನಿತರ ಸೊಪ್ಪು ತರಕಾರಿಗಳ ಹಾಗೆ ರಸಂ ಮಾಡ್ಕೊಳ್ಳಿ,  ಪಲ್ಯದೊಂದಿಗೆ ಸೇರಿಸಿಕೊಳ್ಳಿ....

ಇದೇ Crotalaria ಪ್ರವರ್ಗಕ್ಕೆ ಸೇರಿದ ಸುಮಾರು ಐನೂರಕ್ಕೂ ಮೇಲ್ಪಟ್ಟ ಸಸ್ಯಗಳನ್ನು ಸಸ್ಯಶಾಸ್ತ್ರಜ್ಞರು ಗುರುತಿಸಿದ್ದಾರೆ.   ಮೂಲತಃ ಆಫ್ರಿಕಾ ದೇಶದ್ದಾದರೂ ಭಾರತದ ಎಲ್ಲಾ ಪ್ರದೇಶಗಳಲ್ಲಿ ರಸ್ತೆ ಪಕ್ಕಗಳಲ್ಲಿ,  ಪಾಳು ಬಿದ್ದಿರುವ ಭೂಮಿಯಲ್ಲಿ ಈ ಸಸ್ಯ ಕಾಣಸಿಗುತ್ತದೆ.  ಸದಾ ಕಾಲ ಹೂ ತುಂಬಿ ನಿಂತಿರುವ ಈ ಜಾತಿಯ ಸಸ್ಯಗಳು ಹೂದೋಟಗಳಲ್ಲೂ ನೆಟ್ಟು ಬೆಳೆಸುವಂಥವು.   

Fabaceae ಕುಟುಂಬವಾಸಿ,  ತಗತೆ ಗಿಡ (Cassia tora ) ಕೂಡಾ ಇದೇ ಕುಟುಂಬದಿಂದ ಬಂದಿದೆ.  ಇಲ್ಲಿಗೆ ನಮ್ಮ ಗೌರತ್ತೆಯ ಫಾರ್ಮುಲಾ ಗೆದ್ದಿತು.

ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವ ಹಸಿರೆಲೆ ಗೊಬ್ಬರವಾಗಿ ತೆಂಗಿನಮರಗಳಿಗೆ ಹಾಕಬಹುದು.   ಮಣ್ಣಿನ ಸವಕಳಿಯನ್ನು ತಡೆಯುವ ಸಸ್ಯ,  ಭೂಮಿಯ ನೈರ್ಮಲ್ಯವನ್ನೂ ಕಾಪಾಡುವಂತಹದು.   ಕೆಲವು ವರ್ಗದ ಸಸ್ಯಗಳನ್ನು ಮಣ್ಣಿಗೆ ಬೇಕಾದ ಸಾರಜನಕವನ್ನು ಒದಗಿಸುವಂಥವುಗಳೆಂದು ಸಸ್ಯವಿಜ್ಞಾನಿಗಳು ಗುರುತಿಸುತ್ತಾರೆ.   ಇದು ಕೂಡಾ ನಿಸ್ಸಂಶಯವಾಗಿ ಅಂತಹ ಒಂದು ಸಸ್ಯವಾಗಿರುತ್ತದೆ.

ಹೂಗಳನ್ನೂ ಅಡುಗೆಯಲ್ಲಿ ಬಳಕೆಯಿದೆ.   ಒಣಗಿದ ಬೀಜಗಳನ್ನು ಹುರಿದು,  ಕಾಫಿಯಂತೆ ಕುಡಿಯುವ ವಾಡಿಕೆಯೂ ಇದೆ.   ಬೇರು ಕೂಡಾ ಎಲೆ ಅಡಿಕೆ ಜೊತೆ ಅಗಿಯುವಂಥದ್ದು.

 ಬೇರುಗಳನ್ನು ಅರೆದ ಲೇಪ ಗಂಟುನೋವು ನಿವಾರಕ.    ಹಸಿ ಎಲೆಗಳ ರಸ ಸೇವನೆಯಿಂದ ಜಂತುಹುಳಗಳ ಬಾಧೆಯಿಂದ ಮುಕ್ತಿ.   ಮೂತ್ರಸಂಬಂಧೀ ಸಮಸ್ಯೆಗಳಿಗೂ,  ಜ್ವರದ ತಾಪವನ್ನು ಇಳಿಸಲೂ ಈ ಗಿಡದ ಬಳಕೆ.    ಇವೆಲ್ಲ ಪರಂಪರೆಯಿಂದ ಆಯಾ ದೇಶಕಾಲಗಳಲ್ಲಿ ನಡೆದು ಬಂದ ಚಿಕಿತ್ಸಾ ಕ್ರಮಗಳು.




Posted via DraftCraft app

0 comments:

Post a Comment