ಇವತ್ತು ಹೊಸತೊಂದು ಹಲಸಿನಫಲ ತಿಂದೆವು. ತುಳುವ ಹಲಸು, ಹಣ್ಣು ಮೆತ್ತಗಾಗಿ ಕೈಯಿಂದಲೇ ಬಿಡಿಸಿ, ಒಳಗಿನ ಸೊಳೆಯನ್ನು ತೆಗೆದು ಗುಳುಕ್ ಎಂದು ಬಾಯಿಗೆ ಹಾಕಿಕೊಂಡಾಗ ಜೇನಿನ ಸವಿ.
ಅಂದ ಹಾಗೆ ಇದೇನೂ ಹೊಸಫಲವಲ್ಲ, ನಾವು ಕೊಯ್ದಿಲ್ಲ, ತಿಂದಿಲ್ಲ ಅಷ್ಟೇ. ಕಳೆದ ನಾಲ್ಕಾರು ವರ್ಷಗಳಿಂದ ಯಾರೂ ಕೇಳುವವರಿಲ್ಲದೆ ಉದುರಿ ಬಿದ್ದು ಕೊಳೆತು ಮಣ್ಣಿನೊಂದಿಗೆ, ಇಲ್ಲವೇ ಹರಿಯುವ ನೀರಿನೊಂದಿಗೆ ಸೇರುತ್ತಿದ್ದ ಹಲಸಿನ ಹಣ್ಣು. ಹಲಸಿನ ಮರವು ಈಗ ದೇವಾಲಯ ನಿರ್ಮಾಣದೊಂದಿಗೆ ಮನುಷ್ಯ ಸಂಚಾರಯೋಗ್ಯವಾಗಿ ಪರಿವರ್ತಿತವಾದ ಹಿರಣ್ಯದ ದುರ್ಗಾಪರಮೇಶ್ವರಿ ಕ್ಷೇತ್ರ ಹಾಗೂ ನಾಗಬನದ ಆವರಣದೊಳಗೆ ಸುರಕ್ಷಿತವಾಗಿದೆ.
ಈಗ ಆಷಾಢ ಮಾಸ, ನಮ್ಮ ಕಡೆ ಆಟಿ ತಿಂಗಳು, ಹಿಂದಿನ ಕಾಲದಲ್ಲಿ ತಿನ್ನಲು ಆಹಾರ ಸಿಗದ ಸಮಯ ಇದಾಗಿದ್ದು ಆಟಿ ತಿಂಗಳಲ್ಲಿ ಸಿಗುವ ಹಲಸಿನ ಫಲಕ್ಕೆ ವಿಶೇಷ ಮರ್ಯಾದೆ ಇದ್ದ ಕಾಲವೊಂದಿತ್ತು ಎಂಬುದನ್ನೂ ಮರೆಯಲಾಗದು.
ಫುಟ್ ಬಾಲ್ ಚೆಂಡಿನಂತೆ ಗಾತ್ರವೂ ಚಿಕ್ಕದು, ಹೊತ್ತು ತರಲು ಶ್ರಮವೂ ಇಲ್ಲ, ಬಿಡಿಸಿ ತಿನ್ನಲು ತಿಳಿದಿದ್ದರಾಯಿತು. ಚಿಕ್ಕ ಸಂಸಾರಕ್ಕೆ ಚೊಕ್ಕ ಫಲ.
0 comments:
Post a Comment