ಏನಾಯ್ತು, ಜೋರಾಗಿ ಮಳೆ ಬರುತ್ತಾ ಇದೆ, ಅಡುಗೆಮನೆಯಲ್ಲಿ ಒಂದೇ ಒಂದು ತರಕಾರಿ ಇಲ್ಲ.. ಇಷ್ಟು ಸಾಲದೇ, ನನ್ನ ಕಿಟಿಕಿಟಿ ಶುರುವಾಯ್ತು.
" ಕಿರಿಕಿರಿ ಮಾಡ್ಬೇಡ, ಮಳೆ ಬರೂದು ಕಾಣಿಸ್ತಾ ಇಲ್ಲವೇ.. "
" ಅಲ್ಲೊಂದು ನಿಂಬೆಹಣ್ಣು ಇದ್ಹಾಂಗಿತ್ತು.. " ಗೌರತ್ತೆ ಒರಲಿದರು.
" ಅದನ್ನೆಂತದು ಮಾಡೂದು, ಮಳೆಗೆ ಶರಬತ್ತು ಕುಡಿಯೋಣ ಅಂತೀರಾ.. ಮತ್ತೆ ಕೆಮ್ಮು ಶುರುವಾಯ್ತು ಅನ್ನಿ.."
" ಒಂದು ಕಟ್ ಸಾರು ಮಾಡಿ, ಹಲಸಿನಹಪ್ಪಳ ಹುರಿದು ಇಡು, ಊಟಕ್ಕೆ ಸಾಕು. "
" ಹೌದಲ್ವೇ, ಈ ನಿಂಬೆಹುಳಿ ಚೆನ್ನಾಗಿಯೇ ಇದೆ.. " ಕಟ್ ಸಾರು ಮಾಡೋಣ.
ಕರಿಬೇವು ನಿನ್ನೆ ಹಿತ್ತಲ ಗಿಡದಿಂದ ತಂದದ್ದು ಇದೆ, ಇಂಗು ಸಾಕಷ್ಟು ಇದೆ, ತೊಗರಿಬೇಳೆಯೂ ಡಬ್ಬ ತುಂಬ ಇದೆ. ಹಸಿಮೆಣಸು ಶುಂಠಿ ಇದ್ದರೆ ಹಾಕಬಹುದಾಗಿತ್ತು,
ಕೊತ್ತಂಬರಿ ಸೊಪ್ಪೂ ಇಲ್ಲ, ಹಿತ್ತಲ ತೋಟದಲ್ಲಿ ಬಿತ್ತಿದ ಕೊತ್ತಂಬರಿ ಬೀಜ ಕುಡಿಯೊಡೆದಿದೆ ಅಷ್ಟೇ..
ಇಲ್ಲದಿರುವುದರ ಬಗ್ಗೆ ಚಿಂತೆ ಮಾಡಬೇಕಿಲ್ಲ, ಈಗ ಇರುವ ಪರಿಕರಗಳನ್ನು ಹೊಂದಿಸಿ ಕಟ್ ಸಾರು ಮಾಡಿಕೊಳ್ಳೋಣ.
ಎರಡು ಹಿಡಿ ತೊಗರಿಬೇಳೆ, ಚೆನ್ನಾಗಿ ತೊಳೆದು, ಮೂರು ಲೋಟ ನೀರು ಎರೆದು ಕುಕ್ಕರಿನಲ್ಲಿ 5 - 6 ಸೀಟಿ ಕೂಗಿಸಿ.
ಒತ್ತಡ ಇಳಿದ ನಂತರ ಮುಚ್ಚಳ ತೆರೆದು ಸೌಟಿನಲ್ಲಿ ತಿರುಗಿಸಿ, ಬೇಳೆ ಹಾಗೂ ನೀರು ಹೊಂದಿಕೊಳ್ಳಲಿ.
ಕಟ್ ಸಾರು ಎಂಬ ಹೆಸರು ಇಡಬೇಕಾಗಿರುವುದರಿಂದ ಎರಡು ಲೋಟ ನೀರು ಎರೆಯಿರಿ, ತೆಳ್ಳಗಾಯ್ತು. ರುಚಿಗೆ ಉಪ್ಪು ಬೆರೆಸಿ ಕುದಿಯಲು ಇಡುವುದು.
ಸಾರು ಕುದಿದಿದೆ, ಸ್ಟವ್ ಆರಿಸಿ,
2 ಚಮಚ ತುಪ್ಪದಲ್ಲಿ ಸಾಸಿವೆ, ಒಣಮೆಣಸು, ಕರಿಬೇವು ಕೂಡಿದ ಒಗ್ಗರಣೆ,
ನೀರಿನಲ್ಲಿ ಕರಗಿಸಿ ಇಟ್ಟ ಉದ್ದಿನಬೇಳೆ ಗಾತ್ರದಇಂಗು,
ನಿಂಬೆಹಣ್ಣಿನ ರಸ ಹಾಗೂ ನಿಂಬೆಯ ಸಿಪ್ಪೆಯನ್ನೂ ಹಾಕಿ ಮುಚ್ಚಿ ಇಡುವುದು.
ಉಣ್ಣುವ ಹೊತ್ತಿಗೆ ಮೆತ್ತಗಾದ ನಿಂಬೆ ಸಿಪ್ಪೆಯನ್ನೂ ಬೇಕಿದ್ದವರು ತಿನ್ನಿ, ಒಳ್ಳೆಯದು.
ಇದಕ್ಕೆ ಬೆಲ್ಲ ಹಾಕುವುದಕ್ಕಿಲ್ಲ, ಅತಿಯಾಗಿ ಮಸಾಲೆಗಳನ್ನೂ ಹಾಕಬೇಕಿಲ್ಲ. ಪುಟ್ಟ ಮಕ್ಕಳಿಗೂ ಅನ್ನದೊಂದಿಗೆ ತಿನ್ನಿಸಬಹುದು. ಮಳೆಗಾಲದ ಶೀತಹವೆಗೆ ಕಟ್ ಸಾರು ಎಲ್ಲ ವಯೋಮಾನದವರಿಗೂ ಹಿತಕರ.
ತೆಂಗಿನ ತುರಿ ಬೇಕಾಗಿಲ್ಲ, ತೆಂಗಿನಕಾಯಿಯೊಂದಿಗೆ ಗುದ್ದಾಟ ಇಲ್ಲಿಲ್ಲ.
ಡಯಟಿಂಗ್ ಸೂತ್ರ ಅನುಸರಿಸುವವರಿಗೂ,
ಡಯಾಬಿಟೀಸ್ ಎನ್ನುತ್ತ ಸಕ್ಕರೆ ಬೆಲ್ಲ ತಿನ್ನದವರಿಗೂ,
ಅನಾರೋಗ್ಯವೆಂದು ಪಥ್ಯದೂಟ ತಿನ್ನುವವರಿಗೂ,
ಅಂತೂ ಇಂತೂ ಏನೇ ಕಾಯಿಲೆಗಳಿದ್ದರೂ ಕಟ್ ಸಾರು ಉಣ್ಣಲು ಚಿಂತೆ ಮಾಡಬೇಕಿಲ್ಲ.
0 comments:
Post a Comment