Pages

Ads 468x60px

Wednesday 14 November 2012

ಕೇಶ ತೈಲ ತಯಾರಿಯ ಕುಶಲ ಕಲೆ



ನೆಲನೆಲ್ಲಿ ,  ಭೃಂಗರಾಜ ,   ಒಂದೆಲಗ ,  ತುಳಸೀ  ಇವಿಷ್ಟು  ಸಸ್ಯಗಳು  ನಿಮ್ಮ  ಕೈದೋಟದಲ್ಲಿವೆಯೇ ,   ಒಮ್ಮೆ  ಗಮನವಿಟ್ಟು  ನೋಡಿ ಬನ್ನಿ .   ತಲೆಗೆ  ಹಾಕುವ  ಎಣ್ಣೆ  ತಯಾರಿಸೋಣ .

ಏನೇನೋ  ಬ್ರಾಂಡ್ ನ   ಕೇಶತೈಲಗಳು  ಮಾರುಕಟ್ಟೆಯಲ್ಲಿ  ಸಿಗುತ್ತವೆ .   ಇಂಥಿಂಥಾ  ಆಯುರ್ವೇದಿಕ್  ಸಸ್ಯಗಳ  ಸಾರದಿಂದ  ಮಾಡಲ್ಪಟ್ಟಿದ್ದು  ಎಂದು  ಬರೆದೂ  ಇರುತ್ತದೆ .   ನಾವು  ಮನೆಯಲ್ಲೇ  ತಯಾರಿಸಿದ್ದು  ಕೊಂಡು ತಂದ  ಬ್ರಾಂಡೆಡ್  ಎಣ್ಣೆಗಿಂತ  ಹೆಚ್ಚು  ಚೆನ್ನಾಗಿರುತ್ತದೆ .

ತೈಲ  ಎಂಬ  ಶಬ್ದ  ಮೂಲತಃ  ಸಂಸ್ಕೃತದಿಂದ  ಬಂದಿದೆ .   ತಿಲ  ಎಂದರೆ  ಎಳ್ಳು  ಎಂದರ್ಥ .   ಎಳ್ಳಿನಿಂದ  ಬಂದದ್ದು  ಎಳ್ಳೆಣ್ಣೆ .   ನಾವು  ತಲೆಕೂದಲಿಗೆ  ತೆಂಗಿನೆಣ್ಣೆಯನ್ನೇ  ಹಾಕುವ  ರೂಢಿ ,   ಹಾಗಾಗಿ  ಎಳ್ಳೆಣ್ಣೆ  ಬೇಡ ,   ತೆಂಗಿನೆಣ್ಣೆಯನ್ನೇ  ಉಪಯೋಗಿಸೋಣ .    ಅದೇ  ಉತ್ತಮ .

ಒಂದು  ಹಿಡಿ  ತುಳಸೀ  ಕುಡಿಗಳನ್ನು  ಚಿವುಟಿ  ಇಡಿ .   ಕೃಷ್ಣ ತುಳಸೀ  ಆದರೆ  ಇನ್ನೂ ಉತ್ತಮ .
ಒಂದು  ಹಿಡಿ  ನೆಲನೆಲ್ಲೀ ,  ಬೇರು  ಸಹಿತ ಕಿತ್ತು  ಇಡಿ .  ಮಣ್ಣು  ಹೋಗಲು  ತೊಳೆಯಿರಿ .
ಇದೇ  ವಿಧವಾಗಿ  ಭೃಂಗರಾಜ  ಹಾಗೂ  ಒಂದೆಲಗಗಳನ್ನು  ಸಂಗ್ರಹಿಸಿ .   ನೆನಪಿಡಿ ,   ಇವಿಷ್ಟೂ  ಕಾರ್ಯಗಳನ್ನು  ಮುಂಜಾನೆಯೇ  ಮಾಡಿಕೊಳ್ಳಿ .    ಮುಂಜಾನೆಯ  ಹೊತ್ತು  ಸಸ್ಯರಾಶಿಗಳು  ರಸಭರಿತವಾಗಿ  ಲಕಲಕಿಸುತ್ತಿರುತ್ತವೆ .




ಸಂಗ್ರಹವಾದ  ಈ  ಪುಟ್ಟ ಸಸ್ಯಗಳನ್ನು  ಚಿಕ್ಕದಾಗಿ  ಕತ್ತರಿಸಿ  ರುಬ್ಬುವ ಕಲ್ಲಿಗೆ  ಹಾಕಿ  ತಿರುಗಿಸಿ .   ಹ್ಞಾಂ ,   ಈಗ ಯಂತ್ರಗಳ  ಯುಗ .   ಮಿಕ್ಸಿಗೇ  ಹಾಕಿ .   ಯಂತ್ರ  ತಿರುಗಲು  ಅವಶ್ಯವಿದ್ದಷ್ಟೇ  ನೀರು  ಹಾಕಿ .  ಹೆಚ್ಚು  ನೀರು  ಹಾಕಬಾರದು .  ಮೆತ್ತಗಾದ  ಈ  ಸಸ್ಯಸಾರವನ್ನು  ಒಂದು  ಬಟ್ಟೆಯಲ್ಲಿ  ಅಥವಾ  ಜಾಲರಿಯಲ್ಲಿ  ಶೋಧಿಸಿ  ಇಟ್ಟುಕೊಳ್ಳಿ .

ಒಂದು ಕಪ್  ರಸಕ್ಕೆ  ಒಂದು ಕಪ್  ತೆಂಗಿನೆಣ್ಣೆಯ  ಅಳತೆಯಲ್ಲಿ  ದಪ್ಪ ತಳದ  ಪಾತ್ರೆಗೆ  ಹಾಕಿಕೊಂಡು  ಉರಿಯಲ್ಲಿಡಿ .    ಸೌಟಿನಲ್ಲಿ  ಕೈಯಾಡಿಸುತ್ತಾ  ಎಣ್ಣೆ  ಹಾಗೂ  ಸಸ್ಯಗಳ  ರಸ  ಕೂಡಿಕೊಳ್ಳುವಂತೆ  ನೋಡಿಕೊಳ್ಳಿ .   ಕುದಿಯಲು  ಪ್ರಾರಂಭವಾದೊಡನೆ  ಉರಿಯನ್ನು  ತಗ್ಗಿಸಿ .   ಹೀಗೆ  ಚಿಕ್ಕ ಉರಿಯಲ್ಲಿ  ಕುದಿಯುತ್ತಿರಲಿ .   ನೀರಿನಂಶ  ಆರಿದೊಡನೆ ಕುದಿಯುವ  ಶಬ್ದ  ನಿಲ್ಲುತ್ತದೆ .   ಕೆಳಗಿಳಿಸಿ  ತಣಿಯಲು  ಬಿಡಿ .  

ಪುನಃ  ಜಾಲರಿಯಲ್ಲಿ  ಶೋಧಿಸಿ  ಶುದ್ಧವಾದ  ಜಾಡಿಗೆ  ತುಂಬಿಸಿ ಭದ್ರವಾಗಿ  ಮುಚ್ಚಿ  ಇಟ್ಟುಕೊಳ್ಳಿ .
ನಿಯಮಿತವಾಗಿ  ಈ  ಎಣ್ಣೆಯನ್ನು  ಉಪಯೋಗಿಸುತ್ತಾ  ಇದ್ದಲ್ಲಿ  ತಲೆ ಹೊಟ್ಟು ,  ಕೂದಲುದುರುವಿಕೆ ,   ನಿದ್ರಾಹೀನತೆಗಳು  ಕ್ರಮೇಣ  ನಿವಾರಣೆಯಾಗುತ್ತವೆ .    ಕೂದಲು  ಕಪ್ಪಾಗಿ  ಹೊಳೆಯುವ ಕೇಶರಾಶಿ  ನಿಮ್ಮದಾಗಿಸಿ .    ಅಕಾಲಿಕ  ಕೂದಲು ನೆರೆಯುವಿಕೆಯನ್ನೂ   ಈ  ಎಣ್ಣೆಯ  ಬಳಕೆಯಿಂದ ತಡೆಗಟ್ಟಬಹುದು .    ಕೂದಲು  ಬೆಳ್ಳಗಾದ ಮೇಲೆ ಎಣ್ಣೆ  ಹಾಕಿ ತಿಕ್ಕುವುದಲ್ಲ ,   ಮೊದಲೇ  ನಿಯಮಿತ  ರೂಢಿ ಮಾಡಿಕೊಳ್ಳಿ .    ಸಣ್ಣ ಪುಟ್ಟ  ಗಾಯಗಳಿಗೆ  ಈ ಎಣ್ಣೆ  ಸವರಿದರೆ ಸಾಕು,  ಬೇರೆ  ಲೋಷನ್,  ಮುಲಾಮು  ಹಚ್ಚಬೇಕಾಗಿಯೇ  ಇಲ್ಲ .





ನೆಲನೆಲ್ಲಿ  ಸಿಗಲಿಲ್ಲವೇ,  ನೆಲ್ಲಿಕಾಯಿ ಬಳಸಬಹುದು.  ಹೇಗೇಂತ ಕೇಳ್ತೀರಾ,   ಧಾರಾಳವಾಗಿ  ನೆಲ್ಲಿಕಾಯಿ ಸಿಗುವ  ಸೀಸನ್ ನಲ್ಲಿ   ಬಿಸಿಲಿಗೆ ಒಣಗಿಸಿ ಇಟ್ಟುಕೊಳ್ಳಿ .   ಈ ಒಣಗಿದ ನೆಲ್ಲಿಕಾಯಿಗಳನ್ನು  ನೀರಿನಲ್ಲಿ  ನೆನೆಸಿ  ಒಂದು ಕಪ್  ನೆಲ್ಲಿಗೆ  ಮೂರು ಕಪ್  ನೀರಿನಂತೆ  ಸೇರಿಸಿ  ಕುದಿಸಿ .   ಮೂರು ಕಪ್ ಇದ್ದದ್ದು  ಒಂದು ಕಪ್ ಗೆ  ಬತ್ತಬೇಕು .   ಈ ರಸವನ್ನು  ಶೋಧಿಸಿ  ಉಪಯೋಗಿಸಿ .

ಈ  ವನಸ್ಪತಿ  ಸಸ್ಯಗಳ  ಅಳತೆಯ  ಪ್ರಮಾಣದಲ್ಲಿ  ಹೆಚ್ಚುಕಮ್ಮಿಯಾದರೂ  ಬಾಧಕವೇನೂ  ಇಲ್ಲ .

ಈ  ಎಣ್ಣೆಗೆ  ತಳಸಿಯನ್ನು  ಸೇರಿಸುವ  ಕ್ರಮ  ವಾಡಿಕೆಯಲ್ಲಿ  ಇಲ್ಲ .   ತುಳಸಿ  ಔಷಧಾಂಶಗಳ  ಆಗರ  ಹಾಗೂ  ಸುವಾಸನಾಯುಕ್ತ  ಸಸ್ಯ .   ಹಾಗಾಗಿ  ನಾನು  ಹೀಗೇ  ಎಣ್ಣೆ  ತಯಾರಿಸುವ  ಪದ್ಧತಿ  ಮಾಡಿಕೊಂಡಿದ್ದೇನೆ .  ಪರಿಮಳಕ್ಕಾಗಿ  ಬೇರೆ  ಸುಗಂಧದ್ರವ್ಯಗಳನ್ನು  ಹಾಕಬೇಕಾಗಿಲ್ಲ .   

ಧಾರಾಳವಾಗಿ  ಲಭ್ಯವಿದ್ದಲ್ಲಿ  ಭೃಂಗರಾಜವೊಂದನ್ನೇ ಹಾಕಿ  ಎಣ್ಣೆ  ತಯಾರಿಸುವ ಕ್ರಮವೂ ಇದೆ .

ಒಂದೆಲಗದಿಂದಲೂ  ಪ್ರತ್ಯೇಕವಾಗಿ  ಎಣ್ಣೆ  ಮಾಡಬಹುದು .   ಆ ಕುರಿತಾಗಿ  ಈ  ಮೊದಲೇ ಬರೆದ   ' ಒಂದೊಂದೇ ಎಲೆಯ  ಒಂದೆಲಗ '  ...ನೋಡಿ .

ನೆನಪಿಡಿ ,   ಸಸ್ಯಗಳ  ರಸಸಾರ ಹೆಚ್ಚಾದಷ್ಟೂ  ಎಣ್ಣೆಯ  ಗುಣಮಟ್ಟವೂ  ಶ್ರೇಷ್ಠವಾಗಿರುತ್ತದೆ .
ಈ  ಎಲ್ಲಾ  ಸಸ್ಯಗಳ  ಸಂಯುಕ್ತ  ಮಿಶ್ರಣವೇ  ಭೃಂಗಾಮಲಕಬ್ರಾಹ್ಮೀ ತೈಲವೆನಿಸಿಕೊಂಡಿದೆ .   

Centella  asiatica  :  ಒಂದೆಲಗ

Eclipta alba  :  ಭೃಂಗರಾಜ

Phyllanthus Niruri  :  ನೆಲನೆಲ್ಲಿ

Ocimum sanctum  :   ಕೃಷ್ಣ ತುಳಸೀ

Posted via DraftCraft app

0 comments:

Post a Comment