Pages

Ads 468x60px

Tuesday 1 January 2013

ಎತ್ತಣ ಮಾಮರ ಎತ್ತಣ ಗಜಲಿಂಬೇ....



ಆಗ ಸಂಜೆಯಾಗಿತ್ತು. ಅನಿರೀಕ್ಷಿತವಾಗಿ ಮಾಣಿಪ್ಪಾಡಿಯಿಂದ ನಾರಾಯಣ ಮಾವ ಬಂದರು. ಅವರ ಟೀವಿ ಕೆಟ್ಹೋಗಿತ್ತು. ಕೆಲಸದವನ ಜೊತೆ ಹೊರಿಸಿಕೊಂಡೇ ಬಂದರು.

" ಆಸರಿಗೆ ಏನು ತರಲೀ "

" ತಣ್ಣಗೆ ಜ್ಯೂಸ್ ಕೊಟ್ಬಿಡು, ಅಬ್ಬ, ಏನು ಖಾರ ಈ ಬಿಸಿಲು "

ಒಳಗೆ ಹೋದೆ. ತೋಟದಿಂದ ಚೆನ್ನಪ್ಪ ತಂದ್ಕೊಟ್ಟಿದ್ದ ಗಜಲಿಂಬೆ ಇತ್ತು. ಅದನ್ನೇ ರಸ ಹಿಂಡಿ ಶರಬತ್ತು ಮಾಡಿ, ಬಂದೋರ ಜೊತೆ ಮನೆಮಂದಿಯೆಲ್ಲ ಕುಡಿದೂ ಆಯ್ತು.

ಕೆಲಸದವನಿಗೂ ಒಂದು ಲೋಟ ಕೊಟ್ಟು, " ಇನ್ನೂ ಇದೆಯಾ ಗಜಲಿಂಬೆ ಗಿಡದಲ್ಲಿ ? " ಕೇಳದಿದ್ದರಾಗುತ್ತದೆಯ,

" ಎಲ್ಲಿಂದ, ಒಂದೇ ಇದ್ದಿದ್ದು "

ಚೆನ್ನಪ್ಪ ಹಾಗೆ ಹೇಳ್ತಿರೂದು ಹೊರ ಚಾವಡಿಗೂ ಪ್ರತಿಧ್ವನಿಸಿ, ಮಾವ ಅಲ್ಲಿಂದಾನೇ ಪ್ರತ್ಯುತ್ತರ ಕೊಟ್ಟರು

" ನಮ್ಮ ಮನೆಯಲ್ಲಿದೆ, ಎಷ್ಟು ಬೇಕಾದ್ರೂ ನಿಂಬೆಹಣ್ಣು ಆಗ್ತದೆ. ನಾನೇ ಗಿಡ ತಂದ್ಕೊಡ್ತೇನೆ. ಅದೂ ತೋಟದೊಳಗೆ ಎಲ್ಲಿಯೋ ಮೂಲೆಯಲ್ಲಿ ಇದ್ದರಾಗದು. ಮನೆಯ ಹಿಂದೆ ಬಚ್ಚಲುಮನೆಯ ನೀರು ಹೋಗುವಲ್ಲಿ ನೆಟ್ಟಿರು ಆಯ್ತಾ, ಚೆನ್ನಾಗಿ ಬಿಸಿಲೂ ಬೀಳಬೇಕು "

" ಹಂಗಿದ್ರೆ ಹೀಗೆ ಮಾಡುವಾ...ನಮ್ಮದೇ ಗಿಡದ ಬುಡದಲ್ಲಿ ಬೇರಿನಿಂದಾನೇ ಎರಡ್ಮೂರು ಸಸಿ ಮೇಲೆ ಬಂದಿದೆ, ಅದನ್ನೇ ಕಿತ್ತು ನೆಡುವಾ..." ಚೆನ್ನಪ್ಪನ ಮಾರುತ್ತರ ಹೋಯಿತು.

ಮಾರನೇ ದಿನವೇ ಚೆನ್ನಪ್ಪ ತೋಟದೊಳಗಿದ್ದ ಪುಟ್ಟ ಸಸಿಯನ್ನು ಬೇರುಸಮೇತವಾಗಿ ಕಿತ್ತು ಮನೆಯ ಹಿಂದೆ ಆಯಕಟ್ಟಿನ ಜಾಗ ಆಯ್ಕೆ ಮಾಡಿ ನೆಟ್ಟ.

ಗಿಡವೇನೋ ದೊಡ್ಡದಾಯಿತು. ಗೆಲ್ಲುಗಳೂ ಬೇಕಾದಷ್ಟು ಬಂದವು. ಆದರೆ ಫಲವೇನೂ ಕಾಣದೆ ಹೋಯಿತು.

" ನೆಟ್ಟು ವರ್ಷ ಎರಡಾದರೂ ಹಾಗೇ ಸುಮ್ಮನಿದೆ, ಏನು ಕರ್ಮವೋ..." ಗೊಣಗುಟ್ಟುವಿಕೆಗೆ ಗೌರತ್ತೆ ಪುಕ್ಕಟೆ ಸಲಹೆ ನೀಡಿದರು,

" ದಿನಾ ಮಜ್ಜಿಗೆ ಎರೆದು ನೋಡು ಗಿಡದ ಬುಡಕ್ಕೆ " ಸದಾ ಏನಾದರೊಂದು ಪುಸ್ತಕ ಕೈಲಿ ಹಿಡಿದು ಓದುತ್ತಲೇ ಇರುವ ಗೌರತ್ತೆ ತಾವು ಎಲ್ಲೋ ಓದಿಕೊಂಡಿದ್ದನ್ನು ಹೇಳಿಯೇ ಬಿಟ್ಟರು.

" ಮಜ್ಜಿಗೆ ಹಾಗೆಲ್ಲ ಚೆಲ್ಲೋದಿಕ್ಕಾಗುತ್ಯೇ "




ಮಾವಿನ ಹಣ್ಣಿನ ಕಾಲವೂ ಆರಂಭವಾಯಿತು. ದಿನಾ ಕಾಟ್ ಮಾವು ಹೆಕ್ಕಿ ತರೂದು, ಗೊಜ್ಜು, ಸಾಸಿವೆ ಇತ್ಯಾದಿ ಮಾಡೂದು, ಊಟದ ತಟ್ಟೆ ತುಂಬಾ ಗೊರಟುಗಳೂ, ಸಿಪ್ಪೆಗಳೂ....

" ಇದನ್ನೆಲ್ಲ ಎಲ್ಲಿ ಎಸಿಯೋದು..." ಗೌರತ್ತೆ ಕೇಳಿದ್ದು,

ಐಡಿಯಾ... ಸಿಕ್ಕೇಬಿಡ್ತು.

" ಹಾಕೋಣ ಗಜಲಿಂಬೆ ಬುಡಕ್ಕೆ "

ಅಂತೂ ಮಾವಿನ ಋತು ಮುಗಿಯುವಷ್ಟರಲ್ಲಿ ಲಿಂಬೇ ಬುಡದಲ್ಲಿ ಗೊರಟುಗಳ ರಾಶಿಯೇ ಬಿದ್ದಿತು. ಕಸಿ ಕಟ್ಟುವ ತಜ್ಞರು ಮನೆಗೆ ಬಂದವರೇ ಈ ಗೊರಟುಗಳ ರಾಶಿ ನೋಡಿ " ಮಳೆಗಾಲದಲ್ಲಿ ಈ ಕಾಟ್ ಮಾವಿನ ಸಸಿ ಹುಟ್ಟಲಿ, ಆಗ ಬರ್ತೇನೆ " ಅಂದರು. ಕಾಟ್ ಮಾವಿನ ಸಸಿಯಿಂದಲೇ ಹೊಸ ಕಸಿಮಾವಿನ ಗಿಡ ಮಾಡುವುದು ಹೇಗೆಂಬುದನ್ನು ಅವರೂ ಒಂದಷ್ಟು ಹೊತ್ತು ಕೊರೆದು, ಚಹಾ ಕುಡಿದು ಹೋದರು.

ವರ್ಷಋತು ಪ್ರಾರಂಭ ಆಯ್ತು. ಇನ್ನೇನು ಈ ಮಾವಿನ ಗೊರಟುಗಳು ಹುಟ್ಟುತ್ತವೋ ಎಂದು ತಪಾಸಣೆ ಮಾಡುವ ವೇಳೆಗೆ ಗಜಲಿಂಬೇ ಗಿಡ ಹೂವರಳಿಸಿ ನಗುತಲಿದೆ !

ಸಿಟ್ರಸ್ ಜಾತಿಯ ಲೆಮೆನ್ ಎಂದು ವರ್ಗೀಕೃತವಾಗಿರುವ ಸಸ್ಯಪ್ರಭೇದಗಳು ನಿಸರ್ಗದಲ್ಲಿ ಧಾರಾಳವಾಗಿ ಇವೆ. ಲೈಮ್ ಹಾಗೂ ಲೆಮೆನ್ ಶಬ್ದಗಳೂ ನಮ್ಮ ಸಂಸ್ಕೃತದ ' ಲಿಂಬಾ ' ದಿಂದಲೇ ಉಗಮವಾಗಿವೆ ಎಂಬುದೂ ಗಮನಾರ್ಹ. ಸಸ್ಯಶಾಸ್ತ್ರೀಯವಾಗಿ Rutaceae ಕುಟುಂಬಕ್ಕೆ ಸೇರಿದ ಗಿಡ. ಆಂಗ್ಲ ಭಾಷೆಯಲ್ಲಿ ಲೆಮೆನ್ ಎಂದಾಗಿರುವ ಇದು ಸಸ್ಯಶಾಸ್ತ್ರಜ್ಞರ ಪ್ರಕಾರ citrus limon.

ಲಿಂಬೇಹಣ್ಣಿಗಿಂತ ತುಸುವೇ ದೊಡ್ಡದಾದ ಮತ್ತು ದಪ್ಪ ಸಿಪ್ಪೆಯ ಈ ಹಣ್ಣು ' ಗಜ ' ಯಾಕಾಗಿದೆಯೆಂಬುದೇ ನನಗೆ ಅರ್ಥವಾಗಿಲ್ಲ. ಅರ್ಥ ಹೇಗೇ ಇರಲಿ, ನಾವು ಅಡುಗೆ ಉಪಯೋಗ ನೋಡಿಕೊಳ್ಳೋಣ.





ಜ್ಯೂಸ್ : ಇದನ್ನೇನು ಬರಿಯೋದು ಅಂತೀರಾ, ತಿಳಿಯದವರೂ ಇರುತ್ತಾರೆ. ಜ್ಯೂಸ್ ತಯಾರಿಯಲ್ಲಿ, ನೀರಿನಲ್ಲಿ ಸಕ್ಕರೆ ಕರಗಿಸಿ ಇಡಬೇಕಾದ್ದು ಮೊದಲನೇ ಸಿದ್ಧತೆ. ಒಂದು ಲೋಟದಲ್ಲಿ ನಿಂಬೇರಸ ಹಿಂಡುವುದು, ಬೀಜಗಳನ್ನು ಆರಿಸಿ ತಗೆದು ಸಕ್ಕರೆ ಕರಗಿದ ನೀರಿಗೆ ಎರೆದು, ರುಚಿ ನೋಡಿ ಬೇಕಿದ್ದರೆ ಇನ್ನಷ್ಟು ನಿಂಬೇರಸ ಎರೆಯಿರಿ. ತಣ್ಣಗೆ ಕುಡಿಯಿರಿ.

ಲಿಂಬೇ ಸಾರು : ಎರಡು ಲೋಟಾ ನೀರನ್ನು ಉಪ್ಪು, ಬೆಲ್ಲ ಹಾಕಿ ಕುದಿಸಿ ಕೆಳಗಿಳಿಸಿ ಲಿಂಬೇರಸ ಹಿಂಡಿ, ಒಗ್ಗರಣೆ ಕೊಡಿ. ಬೆಳ್ಳುಳ್ಳಿ ಜಜ್ಜಿ ಹಾಕಿ, ಕೊತ್ತಂಬರೀ ಸೊಪ್ಪು ಸೇರಿಸಿ, ಇಲ್ಲಾಂದ್ರೆ ಬೇವಿನೆಸಳು ಸಾಕು. ಚಿಟಿಕೆ ಅರಸಿನ ಇರಲಿ. ತೊಗರೀಬೇಳೆ ಸಾರು, ತೊವ್ವೆಗಳಿಗೂ ಲಿಂಬೇರಸ ಎರೆದು ಆಹ್ಲಾದಕರ ಸ್ವಾದ ಪಡೆಯಿರಿ.

ಲಿಂಬೇ ತೊಕ್ಕು : ಶರಬತ್ತು ತಯಾರಿಸಿ ಉಳಿದ ಸಿಪ್ಪೆಗಳನ್ನು ಉಪ್ಪು ಬೆರೆಸಿ ಜಾಡಿಯಲ್ಲಿ ತುಂಬಿಸಿಟ್ಟುಕೊಳ್ಳಿ. ಜಾಡಿ ಭರ್ತಿ ಆಗೋ ತನಕ ತುಂಬಿಸುತ್ತಾ ಬನ್ನಿ. ಸಿಪ್ಪೆಗಳೆಲ್ಲಾ ಮೆತ್ತಗಾಯ್ತೇ, ಮಿಕ್ಸೀಗೆ ಹಾಕಿ, ಲಿಂಬೇಗಾತ್ರದ ಹುಣಸೇಹಣ್ಣು, ಬೇಕಿದ್ದರೆ ಇನ್ನಷ್ಟು ಉಪ್ಪು ಸೇರಿಸಿ ನಾಲ್ಕು ಸುತ್ತು ತಿರುಗಿಸಿ. ನೀರು ಹಾಕಬಾರದು. ಮುದ್ದೆಯಾದ ಮಿಶ್ರಣವನ್ನು ತಗೆದಿಡಿ. ಉಪ್ಪಿನಕಾಯಿ ಹುರಿದ ಮಸಾಲೆ ಹುಡಿ ಕೊಂಡು ತನ್ನಿ. ಅದನ್ನು ಈ ಮಿಶ್ರಣಕ್ಕೆ ಅವಶ್ಯವಿದ್ದಷ್ಟು ಅಂದರೆ ಖಾರ ಹಾಗೂ ಪರಿಮಳಕ್ಕೆ ತಕ್ಕಂತೆ ಹಾಕಿಕೊಳ್ಳಿ. ಎಳ್ಳೆಣ್ಣೆಯಲ್ಲಿ ಸಾಸಿವೆ ಹಾಗೂ ಇಂಗು ಹಾಕಿದ ಒಗ್ಗರಣೆ ಕೊಟ್ಟು ಬಿಡಿ. ಲಿಂಬೇ ತೊಕ್ಕು ರೆಡಿ. ಜಾಡಿಯಲ್ಲಿ ತುಂಬಿಸಿ ಇಡಿ.


ಚಿತ್ರಾನ್ನ : ಅವಶ್ಯವಿದ್ದಷ್ಟು ಅನ್ನ ಉದುರುದುರಾಗಿ ಮಾಡಿಕೊಳ್ಳಿ.
ಗಜಲಿಂಬೇರಸ ಒಂದು ಕಪ್ ನಲ್ಲಿ ಹಿಂಡಿ ಇಟ್ಟುಕೊಳ್ಳಿ.
ಒಂದು ಕಪ್ ತೆಂಗಿನ ತುರಿ, ಚಿಟಿಕೆ ಅರಸಿನ, 2 - 3 ಒಣಮೆಣಸು, ಅರ್ಧ ಚಮಚ ಸಾಸಿವೆ, ಉಪ್ಪು, ಬೆಲ್ಲ ಇವಿಷ್ಟನ್ನು ನೀರು ಹಾಕದೆ ತರಿತರಿಯಾಗಿ ರುಬ್ಬಿ ತೆಗೆಯಿರಿ.
ಬಾಣಲೆಯಲ್ಲಿ ಒಗ್ಗರಣೇಗಿಟ್ಟಾಯಿತೇ , ನೆಲಕಡಲೇ ಬೀಜ ಬೀಳಲಿ. ಒಗ್ಗರಣೆ ಚಟಪಟ ಕೇಳಲಿ. ಕರಿಬೇವಿನೆಸಳು ಮರೆಯದಿರಲಿ. ಹಾಗೂ ರುಬ್ಬಿದ ಮಸಾಲೆ, ಲಿಂಬೇರಸ ಹಾಕಿ, ಸೌಟಿನಲ್ಲಿ ಕೈಯಾಡಿಸುತ್ತಾ ಮಾಡಿಟ್ಟ ಅನ್ನ ಸೇರಿಸಿ ಕ್ಷಣಕಾಲ ಮುಚ್ಚಿಟ್ಟು ಕೆಳಗಿಳಿಸಿ. ಚಿತ್ರಾನ್ನ ನಾನಾ ವಿಧವಾಗಿ ಮಾಡಬಹುದಾದ ಪಾಕಶಾಸ್ತ್ರೀಯ ಕಲೆ. ಇದು ನಮ್ಮೂರಿನ ಸಾಂಪ್ರದಾಯಿಕ ಕ್ರಮದ ಚಿತ್ರಾನ್ನ, ಔತಣಕೂಟಗಳಲ್ಲಿ ಕಡ್ಡಾಯವಾಗಿ ಇರಲೇಬೇಕಾದ ಸಹವ್ಯಂಜನ.

ಲಿಂಬೇ ಉಪ್ಪಿನಕಾಯಿ : ಗಜಲಿಂಬೆಯನ್ನು ಕತ್ತರಿಸಿ ಹೋಳು ಮಾಡಿಕೊಳ್ಳಿ. ಒಂದು ಗಜಲಿಂಬೆಯಲ್ಲಿ 8 -10 ತುಂಡುಗಳು ಲಭ್ಯ. ಶುಂಠಿ, ಹಸಿಮೆಣಸು, ಮಾಂಙನಾರಿ ( ಮಾವಿನಶುಂಠಿ ) ಇದ್ದರೆ ಹಾಕಬಹುದು. ಉಪ್ಪು ಬೆರೆಸಿ ಜಾಡಿಗೆ ತಂಬಿಸಿ. ಎರಡು ದಿನಕ್ಕೊಮ್ಮೆ ಒಣ ಸೌಟಿನಲ್ಲಿ ತಿರುಗಿಸಿ. ವಾರವಾಗುತ್ತಲೇ ಉಪ್ಪು ಹೀರಿದ ಲಿಂಬೇ ಹೋಳುಗಳು ಮೆತ್ತಗಾಗಿ ಉಪಯೋಗಕ್ಕೆ ಸಿದ್ಧ. ಬೇಕಿದ್ದಲ್ಲಿ ಹುರಿದ ಉಪ್ಪಿನಕಾಯಿ ಹುಡಿ ಸೇರಿಸಿ ಇನ್ನಷ್ಟು ಘರಂ ಮಾಡಿಕೊಳ್ಳಿ. ಬಾಯಿರುಚಿ ಕೆಟ್ಟಿರುವಾಗ, ಜಡ್ಡಾದಾಗ ಇಂತಹ ಉಪ್ಪಿನಕಾಯಿಗಳು ಹಿತವಾಗಿರುತ್ತವೆ.

ಮೆಣಸ್ಕಾಯಿ : ಇದರ ಸಿಪ್ಪೆ ಸ್ವಲ್ಪ ಕಹಿ. ರುಚಿಕರವಾದ ವ್ಯಂಜನ ತಯಾರಿಸಬಹುದು. ನಾಲ್ಕನೇ ಒಂದರಷ್ಟು ಸಿಪ್ಪೆ ಸಾಕು. ಮೆತ್ತಗೆ ಬೇಯಿಸಿ, ನೀರು ಚೆಲ್ಲಿ.
ಒಂದು ಕಪ್ ಕಾಯಿತುರಿ,
3 - 4 ಒಣಮೆಣಸು, ಒಂದು ಚಮಚ ಉದ್ದಿನಬೇಳೆ, 3 ಚಮಚ ಕೊತ್ತಂಬರಿ, 6 ಚಮಚ ಎಳ್ಳು, ಇಂಗು ಸ್ವಲ್ಪ, ಹುರಿಯಿರಿ.
ಕಾಯಿತುರಿ, ಹುರಿದ ಮಸಾಲೆಯನ್ನು ಬೇಯಿಸಿದ ಸಿಪ್ಪೆಯೊಂದಿಗೆ ಅರೆದಿಡಿ.
ಹುಣಸೇರಸ, ಬೆಲ್ಲ, ಉಪ್ಪು, ಅರೆದ ಮಸಾಲೆಗೆ ಅವಶ್ಯವಾದ ನೀರು ಸೇರಿಸಿ ಕುದಿಸಿ. ತೆಳ್ಳಗಾಗಕೂಡದು. ಒಗ್ಗರಣೆ ಕೊಡಿ.
ಕಿತ್ತಳೆ ಸಿಪ್ಪೆಯಿಂದಲೂ ಹೀಗೇ ಮೆಣಸ್ಕಾಯಿ ತಯಾರಿಸಬಹುದು.

ದುಡ್ಲ ಹುಳಿ, ಕಂಚು ಹುಳಿಗಳಿಂದಲೂ ಇದೇ ತೆರನಾದ ಪಾಕ ವೈವಿಧ್ಯಗಳನ್ನು ಮಾಡಬಹುದು.

ಅಜೀರ್ಣದಿಂದ ಹೊಟ್ಟೆನೋವೇ, ಹಾಗಿದ್ದಲ್ಲಿ ಉಪ್ಪಿನಲ್ಲಿ ಹಾಕಿಟ್ಟ ಮೆತ್ತಗಾದ ಲಿಂಬೇಸಿಪ್ಪೆಯನ್ನು ಮಜ್ಜಿಗೆಯಲ್ಲಿ ಚೆನ್ನಾಗಿ ಗಿವುಚಿ ಕುಡಿಯಿರಿ.

ಬೆಳಗೆದ್ದಂತೇ ತಲೆಸುತ್ತು ಬಂದಂತಾಗುತ್ತಿದೆಯೇ, ಲಿಂಬೇರಸಕ್ಕೆ ಚಿಟಿಕೆ ಉಪ್ಪು ಸೇರಿಸಿ ಕುಡಿಯಿರಿ.

ಹಲವರಿಗೆ ಬಸ್ ಪ್ರಯಾಣವೆಂದರೆ ವಾಂತಿ ಮಾಡುವ ಹವ್ಯಾಸ, ತಪ್ಪದೇ ಲಿಂಬೇಹಣ್ಣು ಅಥವಾ ಲಿಂಬೇ ಸೊಪ್ಪು ಕೈಯಲ್ಲಿ ಇಟ್ಟುಕೊಳ್ಳಿ. ಆಗಾಗ ಆಘ್ರಾಣಿಸುತ್ತಾ ಇದ್ದಲ್ಲಿ ಸುಖಪ್ರಯಾಣ ಮಾಡಬಹುದು.

ಮನೆ ಹಿತ್ತಲಿನಲ್ಲಿ ಒಂದು ಗಿಡವಿದ್ದರೆ ಸಾಕು, ವರ್ಷಪೂರ್ತಿ ಲಿಂಬೆಗೆ ಕೊರತೆಯಿಲ್ಲ. ನಿರ್ವಹಣೆಗೆ ಏನೂ ಖರ್ಚಿಲ್ಲ. ರೋಗರುಜಿನಗಳ ಬಾಧೆಯೂ ಈ ಸಸ್ಯಕ್ಕಿಲ್ಲ. ಲಿಂಬೇಹಣ್ಣನ್ನು ಸಿಪ್ಪೆಯ ಬಣ್ಣ ಹಸಿರಿನಿಂದ ಹಳದೀ ವರ್ಣಕ್ಕೆ ತಿರುಗುವುದನ್ನು ಗಮನಿಸಿ ಕೀಳಬೇಕು. ಕಿತ್ತ ಕೂಡಲೇ ಗಜಲಿಂಬೆಯನ್ನು ಕತ್ತರಿಸುವುದು ಸರಿಯಲ್ಲ. ಶೀತಲ ಪೆಟ್ಟಿಗೆಯಲ್ಲಿ ಇಡುವ ಅವಶ್ಯಕತೆಯೇನೂ ಇಲ್ಲ.

ವಿಟಾಮಿನ್ Cಯಿಂದ ಸಂಪದ್ಭರಿತವಾಗಿದೆ ನಿಂಬೇರಸ, ಸಿಪ್ಪೆ ನೈಸರ್ಗಿಕ ಆಂಟಿಆಕ್ಸಿಡಾಂಟ್. ಶರೀರದ ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿ. ಕ್ಯಾನ್ಸರ್ ಕಾಯಿಲೆಯನ್ನು ಪ್ರತಿಬಂಧಿಸುವ ವಿಶೇಷ ಗುಣ ಲಿಂಬೇಸಿಪ್ಪೆಯಲ್ಲಿದೆಯೆಂದು ವೈದ್ಯಕೀಯ ಲೇಖನಗಳೂ ಬಂದಿವೆ. ದಿನನಿತ್ಯದ ಊಟ ಉಪಾಹಾರಗಳಲ್ಲಿ ಹಿತವಾಗಿ ಬಳಸಿ ಪ್ರಕೃತಿ ನೀಡಿದ ಸಸ್ಯಸಂಪತ್ತಿನಿಂದ ಆರೋಗ್ಯಭಾಗ್ಯವನ್ನು ಉಳಿಸಿಕೊಳ್ಳೋಣ.

.

Posted via DraftCraft app

0 comments:

Post a Comment