Pages

Ads 468x60px

Saturday 8 November 2014

ಒಡೆದ ಹಾಲು




ಹಾಲು  ಕಾಯಿಸಲಿಟ್ಟು,  ಅಡುಗೆಮನೆಯ ಒಳಗೆ ಅತ್ತಿತ್ತ ಹರಡಿದ್ದ ಪಾತ್ರೆಪರಡಿಗಳನ್ನು ಯಥಾಸ್ಥಾನದಲ್ಲಿಟ್ಟು,  ತೊಳೆಯಬೇಕಾಗಿದ್ದ ಲೋಟ, ತಟ್ಟೆಗಳನ್ನು ಸಿಂಕಿಗೆ ಹಾಕಿ,   ಒದ್ದೆಬಟ್ಟೆಯಲ್ಲಿ ಚೆಲ್ಲಿದ್ದ ನೀರು,  ಇನ್ನೂ ಏನೇನೋ ಇರ್ತವೆ,  ಎಲ್ಲವನ್ನೂ ಒರೆಸುತ್ತಾ ಬಂದಂತೆ ಹಾಲು ಕುದಿಯಲಾರಂಭಿಸಿತು.   ಎಷ್ಟಾದ್ರೂ ಪ್ಯಾಕೆಟ್ ಹಾಲು,  ತಂದ ಕೂಡಲೇ ಕಾಯಿಸಿ ಇಡುವ ಪದ್ಧತಿ.   ಹಾಲನ್ನು ಒಲೆ ಮೇಲೆ ಇಟ್ಟು ಅತ್ತಿತ್ತ ಹೋಗೋ ಹಾಗಿಲ್ಲ.   ಟೀವಿ ನೋಡ್ತಾ ಕೂತ್ಬಿಟ್ರೆ ಮುಗೀತು,  ಮತ್ತೆ ಇಹಲೋಕದ ಪರಿವೆಯೇ ಇಲ್ಲ,  ಅಲ್ಲಿಂದ ಹಾಲು ಸೀದ ವಾಸನೆ ಬಂದಾಗಲೇ ಭೂಮಿಗಿಳಿದು ಬರ್ತೀವಿ,  ಏನು ಮಡೋದು,  ನಮ್ಮ ಜೀವನಶೈಲಿಯೇ ಹಾಗಾಗಿದೆ.

" ಹ್ಞಾ,  ಹಾಲು ಕುದಿ ಬಂದಿದೆ,   ಚಿಕ್ಕ ಉರಿಯಲ್ಲಿರಲಿ.   ದಪ್ಪ ಕೆನೆಕಟ್ಟದಿದ್ದರೆ ಬೆಣ್ಣೆ ಬರಬೇಕಲ್ಲ "  ಅಂದುಕೊಳ್ಳುತ್ತ ತಟ್ಟೆ ಲೋಟಗಳನ್ನು ತೊಳೆದಿರಿಸಿ ಆಯ್ತು.   ಇನ್ನು ಅನ್ನ ಬಿಸಿ ಮಾಡಿಕೊಳ್ಳೋಣ ಅಂತ ನೋಡಿದ್ರೆ ಒಲೆಯಲ್ಲಿದ್ದ ಹಾಲು ಒಡೆದು ಹೋಗಿದೆ.   ಭರ್ತಿ ಒಂದು ಲೀಟರಿತ್ತು.  ನಾಳೆ ರಜಾದಿನ,  ಮಕ್ಕಳಿಬ್ಬರೂ ಮನೆಯಲ್ಲಿರ್ತಾರೆ ಅಂತಿದ್ರೆ ಕಾಫಿಗೇನ್ಮಾಡ್ಲಿ,  ಮೊಸರಿನ ಕಥೆಯೇನು ಚಿಂತೆ ಒಂದೆಡೆಯಾದರೆ,  ಈ ಒಡೆದ ಹಾಲನ್ನೇನ್ಮಾಡ್ಲಿ ಎಂಬ ಚಿಂತೆ ಇನ್ನೊಂದೆಡೆ.

" ಪ್ಯಾಕೆಟ್ ಬಿಚ್ಚೋ ಮೊದಲು ನೋಡ್ಬೇಕಾಗಿತ್ತು... ವಾಪಸ್ ಮಾಡಿ ಬೇರೆ ತರ್ತಿದ್ದೆ,  ಈಗ ರಾತ್ರಿ ಪುನಃ ಹೋಗಿ ಬೇರೆ ಹಾಲು ತರಲು ನನ್ನಿಂದಾಗದು "

" ಹಾಗಿದ್ರೆ ಈ ಹಾಲನ್ನೇ ಕುಡಿಯೋಣ ಅಂತೀರಾ "

" ನಂಗೆ ಬೇಡ,  ನೀನೇ ಕುಡಿ "

ನಾವು ಚಿಕ್ಕವರಿದ್ದಾಗ ಯಾರಿಗೆ ಏನೇ ಕಾಯಿಲೆಕಸಾಲೆ ಬರಲಿ,  ನನ್ನಮ್ಮ ಹಾಲನ್ನು ಹಾಗೇ ಕುಡಿಯಲು ಕೊಡ್ತಿರಲಿಲ್ಲ.   ಬಿಸಿಹಾಲಿಗೆ ಲಿಂಬೆರಸ ಹಿಂಡಿ ಅದರ ತಿಳಿನೀರಿಗೆ ಗ್ಲುಕೋಸ್ ಹಾಕಿ ಕೊಡ್ತಾ ಇದ್ದರು,  ಹಾಲಿನ ಕಣಗಳು ಲ್ಯಾಕ್ಟೋಸ್ ಆಗಿ ಪರಿವರ್ತಿತವಾಗುವುದರಿಂದ ಜೀರ್ಣ ಆಗಲು ಸುಲಭ ವಿಧಾನ.   ಇದೂ ಈಗ ಹಾಗೇನೇ ಅಲ್ವೇ,  ಲಿಂಬೆರಸ ಹಾಕದೇ ಹಾಲು ಒಡೆದಿದೆ ಅಷ್ಟೇ ಅಂದ್ಕೊಂಡು ನಾನೇ ವೇ ನೀರು ( whey water ) ಕುಡಿದಾಯ್ತು. ಎಲ್ಲವನ್ನೂ ಗುಳುಂಕರಿಸಲು ಸಾಧ್ಯವಿಲ್ಲ,   ಉಳಿದ ವೇ ನೀರು ಒಂದು ಬಾಟ್ಲಿಯೊಳಗೆ ಭದ್ರವಾಯಿತು.   ನಾಳೆ ಕಾಫಿ,  ಚಹಾ ಬದಲಾಗಿ ವೇ ನೀರನ್ನೇ ಕುಡಿದರಾಯಿತು.   ಬೇಕಿದ್ರೆ ಸಕ್ರೆ ಹಾಕೋಣಾ...





ಒಂದು ಶುಭ್ರವಾದ ಬಟ್ಟೆಯಲ್ಲಿ ಒಡೆದ ಹಾಲನ್ನು ಸೋಸಿ,  ವೇ ನೀರು ತೆಗೆದಿರಿಸಿ,  ಬಟ್ಟೆಯನ್ನು ಗಂಟು ಕಟ್ಟಿ ನೇತಾಡಿಸಿ,  " ಉಸ್ಸಪ್ಪಾ... ಒಂದ್ಕೆಲ್ಸ ಮುಗೀತು,  ನಾಳೆ ಶ್ರೀಖಂಡ ಮಾಡಿ ದೋಸೆ ಜೊತೆ ತಿನ್ನೂದು...."





ಬೆಳಗ್ಗೆ ದೋಸೆ ಎರೆಯುವ ಮೊದಲೇ ಗಂಟು ಬಿಡಿಸಿದಾಗ,  ಪನೀರ್ ಸಿದ್ಧವಾಗಿತ್ತು.   ತೆಗೆದು ಒಂದು ತಟ್ಟೆಗೆ ಹಾಕಿ ಆಯ್ತು.  ಅದಕ್ಕೆ ರುಚಿಗೆ ಬೇಕಾದ ಸಕ್ಕರೆಯನ್ನು ಮಿಕ್ಸಿಯಲ್ಲಿ ಪುಡಿ ಮಾಡಿ,  ಪರಿಮಳ ಹಾಗೂ ಬಣ್ಣ ಬರಲು ಬಾದಾಮ್ ಮಾಲ್ಟ್ ಕೂಡಿಸಿ,  ಚೆನ್ನಾಗಿ ಚಮಚಾದಲ್ಲಿ ಕಲಸಿ....." ವ್ಹಾವ್,  ವ್ಹಾವ್ ದೋಸೆ ಜೊತೆ ನಾನೂ ರೆಡಿ "  ಅನ್ನೋದೇ ಈ ಶ್ರೀಖಂಡ!






ಪನೀರ್ ಬಳಸಿಕೊಂಡು ರಸಗುಲ್ಲಾ,  ಜಾಮೂನ್,  ಜಿಲೇಬಿಗಳನ್ನೂ ಮಾಡಬಹುದಾಗಿದೆ.   ಜಿಲೇಬಿಯನ್ನು ಹಿಂದೊಮ್ಮೆ ಟೀವಿ ಮಾಧ್ಯಮದಲ್ಲಿ ನೋಡಿಕೊಂಡು ಮಾಡಿದ್ದು,  ಚೆನ್ನಾಗಿಯೇ ಬಂದಿತ್ತು.    ಇನ್ನೂ ಏನೇನೋ ತಿಂಡಿಗಳನ್ನು ಮಾಡಬಹುದು.    ಉತ್ತರ ಭಾರತೀಯರು ಪನೀರ್ ಖಾದ್ಯ ತಯಾರಿಯಲ್ಲಿ ಪ್ರವೀಣರು.

ಸೂಚನೆ:  ಒಡೆದ ಹಾಲು ಕೆಟ್ಟ ವಾಸನೆ ಬರುತ್ತಿದೆಯಾದರೆ ಯಾವ ಸಿಹಿಯನ್ನೂ ಮಾಡಲಾಗದು.  ಚೆಲ್ಲುವುದೊಂದೇ ದಾರಿ.




Posted via DraftCraft app

0 comments:

Post a Comment