Pages

Ads 468x60px

Saturday 3 January 2015

ಬಾಳೆಕಾೖ ಕೊದ್ದೆಲ್







ಮುಂಜಾನೆಯ ತಿಂಡಿತೀರ್ಥ ಮುಗಿಸಿ, ಹಾಗೇ ಸುಮ್ಮನೆ ಫೇಸ್ ಬುಕ್ ತೆರೆದು, " ಮುಂಜಾನೆಯ ಶುಭಾಶಯಗಳು " ಎಂದು ಸುಂದರ ಚಿತ್ರಗಳಿಗೆ ಕಮೆಂಟ್ ಹಾಕಿ ಎದ್ದೆ. ತೋಟಕ್ಕೆ ಹೋಗಬೇಕಾಗಿದೆ, ಮನೆಯೊಳಗಿನ ಕೆಲಸ ಯಾವಾಗಲೂ ಇದ್ದಿದ್ದೇ, ಚಪ್ಪಲಿ ಮೆಟ್ಟಿ, ಕೈಯಲ್ಲಿ ಕತ್ತಿ ಹಿಡಿದು, ಬಿದ್ದ ಹಣ್ಣಡಿಕೆಗಳನ್ನು ತುಂಬಿಸಿ ತರಲು ಬುಟ್ಟಿಧಾರಿಣಿಯಾಗಿ ತೋಟದ ಕಡೆ ಪ್ರಯಾಣ ಸಾಗಿತು. ಅಡಿಕೆ ಹೆಕ್ಕುತ್ತ, ಕಳೆಹುಲ್ಲುಗಳನ್ನು ಕತ್ತಿಯಿಂದ ಸವರುತ್ತ, ಬುಟ್ಟಿ ತುಂಬಿ ಬಂದಿತೇ, ಇನ್ನು ವಾಪಸ್ ಮನೆಗೆ ಅಂದ್ಕೊಂಡಿದ್ದ ಹಾಗೇ ಬೆಳೆದ ಬಾಳೆಗೊನೆ ಕಣ್ಣಿಗೆ ಬಿದ್ದಿತು. ಸಿಪ್ಪೆ ಬಿರಿದು ಹೊರಗಿಣುಕುತ್ತಿರುವ ಬಾಳೆಕಾಯಿಯ ಕಾರ್ಬೋಹೈಡ್ರೇಟ್, ಬಿ ಕಾಂಪ್ಲೆಕ್ಸ್ ಗಳು.... ಅಂತೂ ಇದನ್ನು ಹಣ್ಣಾಗಿಸಿ ತಿನ್ನುವಂತಿಲ್ಲ. ಅಡುಗೆಯ ಪದಾರ್ಥಕ್ಕೇ ಲಾಯಕ್ಕು. ಬಾಳೆಗೊನೆಯನ್ನೂ ಕಡಿದು ತಂದಾಯಿತು.
" ಏನು ಮಾಡಲೀ ...." ಎಂಬ ಚಿಂತೆ. ಕುಂಬಳೆಯಲ್ಲಿರುವ ತಂಗಿ ಗಾಯತ್ರಿಗೆ ಫೋನ್ ಕರೆ ಹೋಯಿತು. ಅದೂ ಇದೂ ಮಾತಾಡಿ, " ಬಾಳೆಗೊನೆ ಇದೇ, ಮುಳಿಗದ್ದೆಗೆ ಬರುವ ಅಂದಾಜು ಏನಾದ್ರೂ ಇದೆಯಾ " ಎಂದೂ ವಿಚಾರಿಸಲಾಗಿ ಅವಳೂ ಉಚಿತ ಸಲಹೆ ನೀಡಿದಳು. " ಇವತ್ತು ಕೊದಿಲು ಮಾಡಕ್ಕಾ ... ಬಿಸಿಲಿಗೆ ಒಣಗಿಸಿ ಶಾವಿಗೆ ಆಗುತ್ತಂತೆ, ಅದು ರಗಳೆಯ ಕೆಲಸ, ಚಿಪ್ಸ್ ಮಾಡಿಟ್ಕೋ ... ಎಣ್ಣೆಯಲ್ಲಿ ಹುರಿಯುವಾಗ ಉಪ್ಪು, ಮಸಾಲೆ ಹಾಕಿ ಹುರಿದಿಡು..."

 ತೋಟಕ್ಕೆ ಹೋಗಿದ್ರಲ್ಲಿ ಅಡುಗೆಗೆ ಯಥೇಚ್ಛ ತರಕಾರಿ ದೊರೆಯಿತು.   ಇಂದಿನ ದಿನದ ಮಟ್ಟಿಗೆ ಬಾಳೆಕಾಯಿ ಕೊದ್ದೆಲ್ ( ಕೊದಿಲು ) ಮಾಡಿಯೇ ಸಿದ್ಧ.

ಹೇಗೇ ಬಾಳೆಕಾಯಿ ಕೊದ್ದೆಲ್ ?
ಬಾಳೆಕಾಯಿಗಳು 4 ಸಾಕು. ಸಮಗಾತ್ರದ ಹೋಳು ಮಾಡಿ ಇಟ್ಕೊಳ್ಳಿ, ಸಿಪ್ಪೆ ತೆಗೆಯುವುದೇನೂ ಬೇಡ, ನಾರಿನಂಶ ಅಧಿಕವಾಗಿರುವ ಸಿಪ್ಪೆಯೂ ರುಚಿಕರ. ಉಪ್ಪು, ಹುಳಿಯೊಂದಿಗೆ ಬಾಳೆಕಾಯಿ ಹೋಳುಗಳನ್ನು ಬೇಯಿಸಿ. ಸಿಹಿ ಬೇಕಿದ್ದರೆ ಬೆಲ್ಲ ಹಾಕಿದರಾದೀತು.

ಮಸಾಲೆಗೆ ಏನೇನು ಬೇಕು ?
2-3 ಒಣಮೆಣಸು
2 ಚಮಚ ಕೊತ್ತಂಬರಿ
1 ಚಮಚ ಉದ್ದಿನಬೇಳೆ
ಜೀರಿಗೆ ಹಾಗೂ ಮೆಂತೆ ತಲಾ ಅರ್ಧ ಚಮಚ
ಸುವಾಸನೆಗೆ ಇಂಗು
ಅರ್ಧ ಕಡಿ ತೆಂಗಿನತುರಿ
ತುಸು ಎಣ್ಣೆಯಲ್ಲಿ ಹುರಿದು, ತೆಂಗಿನತುರಿಯೊಂದಿಗೆ ಅರೆಯಿರಿ.

ಅರೆದ ತೆಂಗಿನಕಾಯಿ ಅರಪ್ಪನ್ನು ಬೆಂದ ಹೋಳುಗಳಿಗೆ ಕೂಡಿಸಿ. ಸೌಟಿನಲ್ಲಿ ಕೆದಕಿ, ನೀರು ಬೇಕಿದ್ದರೆ ಎರೆದು ಕುದಿಸಿ. ಒಗ್ಗರಣೆ
ಕೊಡುವಲ್ಲಿಗೆ ಕೊದ್ದೆಲ್ ಸಿದ್ಧ. ಬೆಳ್ಳುಳ್ಳಿ ಪ್ರಿಯರು ಬೆಳ್ಳುಳ್ಳಿಯನ್ನೂ ಒಗ್ಗರಣೆಗೆ ಸೇರಿಸಿ.
ಬೇಳೆಕಾಳುಗಳನ್ನೂ ಇಂತಹ ಕೊದ್ದೆಲ್ ಗೆ ಹಾಕಬಹುದಾಗಿದೆ. ಧಾರಾಳವಾಗಿ ತೆಂಗಿನತುರಿ ಇದ್ದಲ್ಲಿ ಬೇಳೆಗಳನ್ನು ಹಾಕುವ ಅಗತ್ಯವಿಲ್ಲ.





ಬಾಳೆಕಾಯಿ ಗೊಜ್ಜು:

ಮಾರನೇ ದಿನದ ಬಾಳೆಕಾಯಿಯ ಸರದಿ ಏನಾದೀತು? ಹಸಿರು ಸಿಪ್ಪೆ ಬಣ್ಣ ಬದಲಾಗುತ್ತಲಿದೆ. ಇವತ್ತು ಗೊಜ್ಜು ಮಾಡಿತಿನ್ನೋಣ, 8 ಬಾಳೆಕಾಯಿಗಳು ಕುಕ್ಕರೊಳಗೆ ಎರಡು ಶೀಟಿ ಕೇಳುವ ತನಕ ಕೂತಿದ್ದು ಹೊರಬಂದುವು. ಆರಿದ ನಂತರ ಸಿಪ್ಪೆ ಸುಲಿದು ಬಟಾಟೆಯ ಥರ ಪುಡಿ ಪುಡಿ ಆಗ್ಹೋಯ್ತೇ, 2 ಹಸಿಮೆಣಸು, ರುಚಿಗೆ ತಕ್ಕಂತೆ ಉಪ್ಪು, 4 ಸೌಟು ಮೊಸರು ಬೆರೆತಂತೆ, ಬೇವಿನೆಸಳು, ಜೀರಿಗೆಯೂ ಸೇರಿದ ಒಗ್ಗರಣೆ ಬಿದ್ದಿತು. ಊಟದೊಂದಿಗೆ ಸಹವ್ಯಂಜನ ಆಗ್ಹೋಯ್ತು.




ಒಟ್ಟಾರೆಯಾಗಿ 8 ಬಾಳೆಕಾಯಿ ಬೇಯಿಸಿದ್ದರಲ್ಲಿ ಕೇವಲ ನಾಲ್ಕು ಕಾಯಿಗಳ ಗೊಜ್ಜು ಆಗಿತ್ತು. ಇನ್ನೂ ನಾಲ್ಕು ಇವೆ, ಸಂಜೆಯ ಸ್ಪೆಶಲ್ ಉಸುಳಿ ಮಾಡೋಣ, ನಾಲ್ಕು ಕಾಯಿಗಳು ಸಾಲದು, ಪುನಃ ಬೇಯಿಸುವ ಉಸಾಬರಿ ಬೇಡ, ಎರಡು ಹಿಡಿ ಅವಲಕ್ಕಿ ಸೇರಿಸೋಣ, ಅವಲಕ್ಕಿ ಆಪತ್ಬಾಂಧವನಲ್ಲವೇ...

ಬಾಳೆಕಾಯಿ ಉಸುಳಿ:

ಬೇಯಿಸಿಟ್ಟ ಬಾಳೆಕಾಯಿಗಳ ಸಿಪ್ಪೆ ತೆಗೆದು ಪುಡಿ ಮಾಡಿದ್ರಾ,
ಎರಡು ಹಿಡಿ ಅವಲಕ್ಕಿ ನೆನೆಸಿಟ್ಕೊಂಡಿರಾ,
ಆಯ್ತು.ಲಿಂಬೆರಸ, ಉಪ್ಪು, ಸಕ್ರೆ ಕೂಡಿಸಿ ಒಂದು ತಟ್ಟೆಯಲ್ಲಿಟ್ಕೊಳ್ಳಿ.
ಒಂದು ಹಿಡಿ ಕಾಯಿತುರಿ ಅವಶ್ಯವಿದೆ.

ಒಗ್ಗರಣೆ ಸಾಹಿತ್ಯ ಏನೇನು ?
3 ಚಮಚ ತೆಂಗಿನೆಣ್ಣೆ
1 ಚಮಚ ಸಾಸಿವೆ
1 ಚಮಚ ಉದ್ದಿನಬೇಳೆ
1 ಚಮಚ ಕಡ್ಲೇ ಬೇಳೆ
ಒಣಮೆಣಸು, ಹಸಿಮೆಣಸು, ಬೇವಿನೆಸಳು ಇತ್ಯಾದಿಗಳ ಸಿದ್ಧತೆ ಆಯ್ತೇ, ಬಾಣಲೆ ಒಲೆಗೇರಿಸಿ ಎಣ್ಣೆ ಎರೆದು ಒಗ್ಗರಣೆ ಸಿಡಿಯಲಿ. ಹಸಿಮೆಣಸು, ಬೇವಿನೆಸಳು ಬೀಳಲಿ, ಲಿಂಬೆರಸ, ಉಪ್ಪು, ಸಕ್ರೆ ಎರೆಯಿರಿ. ಪುಡಿ ಮಾಡಿದ ಬಾಳೆಕಾಯಿ, ನೆನೆಸಿದ ಅವಲಕ್ಕಿ, ಕಾಯಿತುರಿ ಹಾಕಿ ಸೌಟಿನಲ್ಲಿ ಬೆರೆಸಿ, ಕ್ಷಣಕಾಲ ಮುಚ್ಚಿಟ್ಟು ಉರಿ ಆರಿಸಿ. ಬಿಸಿ ಬಿಸಿಯಾಗಿ ಚಹಾ ಅಥವಾ ಕಾಫಿಯೊಂದಿಗೆ ತಿನ್ನಿ.



ಸಂಜೆಯಾಗುತ್ತಲೇ ಗಾಯತ್ರಿಯ ಫೋನ್ ಕಾಲ್ ಬಂದಿತು. " ಚಿಪ್ಸೂ ಮಾಡಿಟ್ಟಾಯ್ತಕ್ಕಾ ...?"
" ಇನ್ನೂ ಇಲ್ಲ " ಅನ್ನುತ್ತ ಮಾಡಿದ ಅಡುಗೆಯ ವರದಿ ಒಪ್ಪಿಸಿದೆ.
" ಹಾಂ, ಇದೂ ಆಗುತ್ತೆ ನೋಡು, ಬಾಳೆಕ್ಕಾಯಿ ಸಿಪ್ಪೆದು ಪಚ್ಚಡಿ..." ಎಂದಳು.
" ನಾಳೆ ಮಾಡಿದ್ರಾಯ್ತು "
ಬಾಳೆಕಾಯಿ ಸಿಪ್ಪೆಯ ಪಚ್ಚಡಿ ಮಾಡದಿದ್ದರಾದೀತೇ, ಇವೆಯಲ್ಲ ಬಾಳೆಕಾಯಿಗಳು. ಆದರೆ ಇವತ್ತು ಬಾಳೆಯ ಹಸಿರು ಬಣ್ಣ ಹೋಗಿ ಬಂಗಾರವರ್ಣ ಬಂದಿತ್ತು, ತೊಂದರೆಯಿಲ್ಲ, ಹಣ್ಣು ಎಂದು ತಿನ್ನುವ ಹಂತ ಬಂದಿಲ್ಲ. ನಾಲ್ಕು ಬಾಳೆಕಾಯಿಗಳನ್ನು ಬೇಯಿಸಿದ್ದಾಯಿತು. ಬೇಕಿದ್ದ ಸಿಪ್ಪೆ ತೆಗೆದಿಟ್ಟು, ಕಾಯಿಗಳ ಪಲ್ಯ ಮಾಡಿಟ್ಟೂ ಆಯ್ತು.

ಪಚ್ಚಡಿ ಹೇಗೇಂತ ನೋಡೋಣ,
ಒಂದು ಹಿಡಿ ಕಾಯಿತುರಿ.
ಒಂದು ಹಸಿಮೆಣಸು.
ರುಚಿಗೆ ಉಪ್ಪು, ಹುಳಿ ( ಬೀಂಬುಳಿ ಇದ್ರೆ ಅದನ್ನೇ ಹಾಕಿ ).ಬೇಯಿಸಿಟ್ಟ ಸಿಪ್ಪೆಯನ್ನು ಕತ್ತರಿಸಿ, ಮಿಕ್ಕ ಸಾಮಗ್ರಿಗಳೊಂದಿಗೆ ಅರೆಯಿರಿ,ಅಗತ್ಯವಿದ್ದಷ್ಟೇ ನೀರೆರೆಯಿರಿ.
ಬೇವಿನೆಸಳು ಹಾಗೂ ಜೀರಿಗೆಯ ಒಗ್ಗರಣೆ ಕೊಡಿ.

ನಮ್ಮೆಜಮಾನ್ರೂ ಎರಡೆರಡು ಬಾರಿ ಹಾಕಿಸಿಕೊಂಡು ಈ ಹೊಸರುಚಿಯನ್ನು ಹೊಗಳಿದ್ದೇ ಹೊಗಳಿದ್ದು. ಸಂಜೆಯ ಹೊತ್ತು, ಗಾಯತ್ರಿಯೊಂದಿಗೆ ಮಾತುಕತೆ ಮುಂದುವರಿಯಿತು. ಪಚ್ಚಡಿ ಮಾಡಿದ ಕಥೆ ಹೇಳಿದ್ದೂ ಆಯ್ತು. ಅವಳಂದಳು, " ಅಕ್ಕ, ಒಗ್ಗರಣೆಗೆ ಬೆಳ್ಳುಳ್ಳಿ ಹಾಕ್ಬೇಕಾಗಿತ್ತು, ಜೀರಿಗೆಯಲ್ಲ..."
" ಹೌದಾ, ಇನ್ನೊಮ್ಮೆ ಮಾಡಿದ್ರಾಯ್ತು.."



Posted via DraftCraft app

0 comments:

Post a Comment