Pages

Ads 468x60px

Saturday 31 January 2015

ಉಪ್ಪಿಟ್ಟು ಚಹಾ







ತೋಟದ ತೆಂಗಿನಕಾಯಿ ತೆಗೆಸದೇ ತಿಂಗಳು ಆರಾಗಿತ್ತು. ಪತ್ತನಾಜೆಗೂ ಮೊದಲು ತೆಗೆಸಿದ್ದು, ಈಗ ಮಳೆಗಾಲ ಮುಗಿಯುತ್ತಾ ಬಂದಾಗ, ದಿನನಿತ್ಯದ ಚಟ್ಣಿ, ಕೊದ್ದೆಲ್ ಮಾಡಲು ತೆಂಗಿನಕಾಯಿ ಇಲ್ವಲ್ಲ ಎಂಬ ಪೇಚಾಟಕ್ಕೂ ಮೊದಲಾಗಿ ಮರ ಹತ್ತುವ ಕೆಲಸಗಾರರು ಬರುತ್ತಾರೆಂದು ತಿಳಿಯಿತು.

" ತೆಂಗಿನಕಾಯಿ ಕೀಳಲು ಜನ ಬರ್ತಾರಂತೆ "
" ಹ್ಞಾ, ಹೌದಾ, ಕಾಯಿ ಹೆಕ್ಕಿ ತರಲು ಯಾರೂ ?"
" ಒಟ್ಟಾಗಿ ಮೂರು ಜನ ಇದಾರೇ, ಎಲ್ಲರಿಗೂ ಚಹಾ ತಿಂಡಿ ಮಾಡಿಟ್ಟಿರು " ಅನ್ನುತ್ತಾ ನಮ್ಮಜಮಾನ್ರು ತೋಟದ ಕಡೆ ಪಯಣ ಬೆಳೆಸಿದರು.

ನಮ್ಮ ಮುಂಜಾನೆಯ ತಿಂಡಿ ಚಪಾತಿಯಾಗಿತ್ತು. ಇಬ್ಬರಿಗೆ ಬೇಕಾದಷ್ಟೇ ಮಾಡಿಟ್ಕೊಂಡಿದ್ದೆ. ತೋಟದ ಕೆಲಸದಾಳುಗಳಿಗೆ ಪುಟ್ಟ ಚಪಾತಿಗಳು ಎಲ್ಲಿಗೂ ಸಾಲದು. ಅವಲಕ್ಕಿ ಉಪ್ಕರಿ ಮಾಡಿದ್ರೂ ಆಗದು, ಅವಲಕ್ಕಿಯೂ ಸಾಕಷ್ಟು ಇದ್ದಂತಿಲ್ಲ. ತೋಟದ ತೆಂಗಿನಕಾಯಿಗಳು ಮನೆಯಂಗಳಕ್ಕೆ ಬರುವುದೇ ಒಂದು ಸಂಭ್ರಮ, ಹೀಗಿರುವಾಗ ಅಡುಗೆಮನೆಯ ಡಬ್ಬಗಳು ಬಾಯ್ದೆರೆದುವು. ಓಹೋ ಹೌದಲ್ಲ, ದೋಸೆ ಇಡ್ಲಿಗಳಿಗಾಗಿ ತಂದಿರಿಸಿದ ಕಡಿಯಕ್ಕಿ ಇದೇ, ಐಡಿಯಾ ಬಂದೇ ಬಿಟ್ಟಿತು.

4 ಹಸಿಮೆಣಸು, ಸಿಗಿದು ಇರಿಸತಕ್ಕದ್ದು.
2 ನೀರುಳ್ಳಿ, ಚಿಕ್ಕದಾಗಿ ಕತ್ತರಿಸಿ ಇಟ್ಟುಕೊಳ್ಳತಕ್ಕದ್ದು.
ತೆಂಗಿನ ತುರಿ.
ತೆಂಗಿನ ಎಣ್ಣೆ, ಸಾಸಿವೆ, ಕಡ್ಲೇ ಬೇಳೆ, ಒಣಮೆಣಸು... ಇತ್ಯಾದಿ ಒಗ್ಗರಣೆ ಸಾಹಿತ್ಯ.
ಒಂದು ಪಾವು ಕಡಿಯಕ್ಕಿ, ಚೆನ್ನಾಗಿ ತೊಳೆದು ಇಡಬೇಕಾದ್ದು.
ಇಷ್ಟೆಲ್ಲ ತಯಾರಿಯೊಂದಿಗೆ ಬಾಣಲೆ ಒಲೆಗೇರಿತು.

ಒಂದು ಅಳತೆಯ ಕಡಿಯಕ್ಕಿಗೆ ಅಂದಾಜು 3 ಅಳತೆಯ ನೀರು ಕುದಿದಿದೆ.
ಬಾಣಲೆಯ ಒಗ್ಗರಣೆ ಸಿಡಿದಿದೆ.
ಕರಿಬೇವಿನಸೊಪ್ಪು, ನೀರುಳ್ಳಿ ಇತ್ಯಾದಿ ಬಾಣಲೆಗೆ ಬಿದ್ದು ತಟಪಟನೆ ಸೌಟಿನಲ್ಲಿ ಅತ್ತ ಇತ್ತ ಓಡಿಯಾಡಿವೆ, ಇನ್ನೀಗ ತೊಳೆದಿಟ್ಟ ಕಡಿಯಕ್ಕಿಯ ಸರದಿ, ಕುದಿನೀರೂ ಬಿದ್ದಿದೆ, ರುಚಿಗೆ ಉಪ್ಪು ಹಾಕಲಾಗಿದೆ.
ಮುಚ್ಚಿಟ್ಟು ಚಿಕ್ಕ ಉರಿಯಲ್ಲಿ 5-6 ನಿಮಿಷದಲ್ಲಿ ಬೆಂದಿದೆ.
ಮುಚ್ಚಳ ತೆಗೆದು ನೋಡಿ, ಕಾಯಿತುರಿಯನ್ನು ಹಾಕಿ, ಇನ್ನೊಮ್ಮೆ ಮಗುಚಿ ಹಾಕಿ ಬೆಚ್ಚಗೆ ಇರಲು ಮುಚ್ಚಿ ಇಟ್ಟು ಕೆಲಸದಾಳುಗಳನ್ನು ಕಾಯುವ ಸರದಿ.
ಘಂಟೆ ಹನ್ನೊಂದು ಹೊಡೆಯಿತು.
" ನಾವು ಬಂದೇವ ಚಾಯ ಕುಡಿಯಲಿಕ್ಕ ಽಽಽ "
ಬಾಳೆಲೆ ಸಹಿತವಾಗಿ ಬಂದ ಮೂವರೂ ಕುಳಿತುಕೊಳ್ಳಲು ಸ್ಥಳ ಹೊಂದಿಸುತ್ತಿದ್ದಂತೆ ನನ್ನ ಉಪ್ಪಿಟ್ಟು - ಚಹಾ ಹೊರ ಬಂದಿತು.
ಪರಿಚಿತನೇ ಆಗಿದ್ದುದರಿಂದ ಚಹಾದೊಂದಿಗೆ ಬಿಸಿ ಬಿಸಿ ಉಪ್ಪಿಟ್ಟು ನೋಡುತ್ತ ನಾರಾಯಣ ಆನಂದಿತನಾದ.

ನಮ್ಮ ಪಟ್ಟಾಂಗ ಮುಂದೆ ತುಳು ಭಾಷೆಯಲ್ಲಿ ಮುಂದುವರಿಯಿತು.
" ಅಕ್ಕ, ಬಿರ್ಯಾನೀ ರೈಸ್ ಮಾಡಿದ್ದೋ?"
" ಇದು ಬಿರ್ಯಾನೀ ರೈಸಾ.... ನಂಗೊತ್ತಿಲ್ವಲ್ಲ, ದೋಸೆಗೆ ಕಡೆಯಲಿಕ್ಕೆ ಅಕ್ಕಿ ಅಂತ ಹೇಳಿದ್ರೆ ಇದೇ ಅಕ್ಕಿ ... ಅಂಗ್ಡಿಯೋನೂ ಕೊಡೂದೂ ಇದನ್ನೇ.. "
" ಹೆಹೆ... ಎಲ್ರಿಗೂ ಅಡಿಗೆ ಸುಲಭದಲ್ಲಿ ಆಗ್ತದೆ...."

ಪುಲಾವ್, ಘೀ ರೖಸ್, ವೆಜಿಟೆಬಲ್ ಬಾತ್, ವಾಂಗೀಬಾತ್, ಪುಳಿಯೋಗರೆ, ಚತ್ರಾನ್ನ ಇತ್ಯಾದಿಗಳ ಒಳಗುಟ್ಟು ಈ ಉಪ್ಪಿಟ್ಟಿನಲ್ಲಿದೆ. ಏನೇ ಹೊಸರುಚಿ ಕಲಿಯುವ ಮೊದಲು ಅಚ್ಚುಕಟ್ಟಾಗಿ ಉಪ್ಪಿಟ್ಟು ಮಾಡಲು ತಿಳಿದಿರಲೇ ಬೇಕು. ಉಪ್ಪು+ಹಿಟ್ಟು ಅಂದ್ರೆ ಉಪ್ಪಿಟ್ಟು, ಹಿಟ್ಟು ಅಕ್ಕಿಯದೂ ಆದೀತು, ಗೋಧಿಯದೂ ಆದೀತು. ಗೋಧಿಯ ಕಡಿಹಿಟ್ಟನ್ನು ಸಜ್ಜಿಗೆ ಅನ್ನುವ ವಾಡಿಕೆ ನಮ್ಮ ದಕ್ಷಿಣ ಕನ್ನಡಿಗರಲ್ಲಿದೆ. ಅಕ್ಕಿ ಕಡಿಯ ಉಪ್ಪಿಟ್ಟು ಇಲ್ಲಿ ಅಷ್ಟಾಗಿ ಚಾಲ್ತಿಯಲ್ಲಿಲ್ಲ. ಏನೇ ಗಡಿಬಿಡಿಯ ತಿಂಡಿ ಆಗಬೇಕಿದ್ದರೆ ಸಜ್ಜಿಗೆ ಒಗ್ಗರಿಸುವುದು ರೂಢಿ. ಅದರ ಜೊತೆಗೆ ಮಸಾಲೆ ಅವಲಕ್ಕಿಯೂ, ಕದಳೀ ಬಾಳೆಹಣ್ಣೂ ಕೂಡಿಕೊಳ್ಳಲು ಇದ್ದರಂತೂ ಸ್ವರ್ಗಕ್ಕೆ ಮೂರೇ ಗೇಣು. ನಮ್ಮ ತುಳು ಭಾಷಿಕರು ಇದನ್ನೇ ಸಜ್ಜಿಗೆ-ಬಜಿಲ್ ಅಂದಿದ್ದಾರೆ.


Posted via DraftCraft app

0 comments:

Post a Comment