ಹಲಸಿನ ಹಣ್ಣಿನ ಕೊಟ್ಟಿಗೆ ನಮ್ಮ ಇಂದಿನ ಮುಂಜಾನೆಯ ತಿನಿಸು, ಚಟ್ಣಿ, ಉಪ್ಪಿನಕಾಯಿ, ತುಪ್ಪ ಹಾಗೂ ಕೊಟ್ಟಿಗೆ ಸಹಿತವಾದ ಅಟ್ಟಿನಳಗೆ ಟೇಬಲ್ ಮೇಲಿಟ್ಟು " ತಿಂಡಿಗೆ ಬನ್ರೀ.. " ಕಾಲ್ ಕೊಟ್ಟಿದ್ದೂ ಆಯ್ತು. ನಮ್ಮೆಜಮಾನ್ರು ಮುಜಾನೆಯ ದಿನಪತ್ರಿಕೆ ಉದಯವಾಣಿ ಓದುತ್ತಿದ್ದ ಐಪ್ಯಾಡ್ ಪಕ್ಕಕ್ಕಿಟ್ಟು " ಇವತ್ತು ಕರೆಂಟ್ ಇಡೀ ದಿನ ಇಲ್ವಂತೆ, ಈಗ್ಲೇ ತಯಾರಾಗಿರು... " ಅಂದ್ರು.
ಯಾವತ್ತೂ ಮಳೆಗಾಲ ಬಂದ್ರೆ ಕರೆಂಟಿನ ಗೋಳು ಇದ್ದಿದ್ದೇ. " ಅಷ್ಟೇ ತಾನೇ, ಈಗ ಕೊಟ್ಟಿಗೆ ತಿಂದ್ಬಿಟ್ಟು ಹೋಗಿ. " ಹಲಸಿನ ಕೊಟ್ಟಿಗೆ ತಿಂದವರಿಗೆ ಹಸಿವಿನ ಬಾಧೆ ಇಲ್ಲ, ಮಧ್ಯಾಹ್ನದೂಟ ಹಗುರಾಗಿದ್ದರೇ ಚೆನ್ನ, ಸಿಂಪಲ್ಲಾಗಿ ಹಲಸಿನಕಾಯಿ ಬೋಳುಹುಳಿ ಮಾಡೋಣ, ಈ ವ್ಯಂಜನವನ್ನು ನಮ್ಮ ಕಡೆ ಸೊಳೆ ಹುಳಿಬೆಂದಿ ಅನ್ನುವ ರೂಢಿ.
ಕೊಟ್ಟಿಗೆ ತಿಂದಾಯ್ತು, " ಇದು ಕೊಟ್ಟಿಗೆಗೆ ಹೇಳಿದಂತಹ ಹಲಸಿನಕಾಯಿ ಅಂತ ನೆನಪಿಟ್ಕೋ..." ಘನಗಾತ್ರದ ಈ ಹಲಸಿನ ಮೊದಲ ಫಲ ಮನೆಗೆ ಬಂದಾಗ, ಹಣ್ಣು ಸಿಹಿಯಾಗಿದೆ ಹಾಗೂ ಇದು ಬಕ್ಕೆ ಹಲಸು ಎಂದು ಸಂಭ್ರಮಪಟ್ಟಿದ್ದೂ ಆಗಿತ್ತು. ಮೊದಲ ಫಲದ ಪಾಯಸವನ್ನೂ ಸವಿದಾಗ " ಪಾಯಸಕ್ಕೆ ಹೇಳಿದ ಹಣ್ಣು " ಎಂಬ ಶಿಫಾರಸು ಈ ಹಣ್ಣಿನದು.
ಪಾಯಸಕ್ಕೆ ಸೊಗಸಾದ ಹಣ್ಣು ಕೊಟ್ಟಿಗೆಗೂ ಚೆನ್ನಾಗಿದ್ದೀತು ಅಂದ್ಬಿಟ್ಟು ಮಾಡಿದ್ದು, ಇದು ಮೂರನೇ ಬಾರಿ. ಇಂತಿಪ್ಪ ಹಲಸಿನ ಮರವನ್ನು ನಾನು ನೋಡದಿದ್ದರೆ ಹೇಗಾದೀತು?
" ಹಲಸಿನ ಮರ ಕೊಳಕೆ ತೋಟದ ಆ ಮೂಲೆಯಲ್ಲಿದೇ... " ಎಂದು ಗುಡುಗಿದ್ದೂ ಅಲ್ಲದೆ "ಹೋಗಿ ನೋಡಿ ಗುರುತಿಟ್ಕೊಂಡು ಬಾ... " ನಮ್ಮೆಜಮಾನ್ರ ಹುಕುಂ ಆಯಿತು.
ಚೆನ್ನಪ್ಪ ಗಂಟೆ ಒಂಭತ್ತು ಆಗುತ್ತಿದ್ದಂತೆ ಬಂದ, " ತೋಟಕ್ಕೆ ಹೋಗ್ತೀಯಾ... ನಾನೂ ಬಂದೆ. " ಅನ್ನುತ್ತ ತೋಟದೆಡೆಗೆ ನನ್ನ ಪಯಣ ಸಾಗಿತು. ಅವನೊಂದಿಗೆ ಹಲಸಿನ ಮರಗಳ ಸರ್ವೇ ಮಾಡುತ್ತಿದ್ದಾಗ ನೆನಪಾಗಿ, " ಕೆರೆಯ ಆ ಬದಿಯ ರಾಗಿಮಜಲು ತೋಟದಲ್ಲಿ ಹಲಸಿನ ಮರ ಉಂಟಲ್ಲ, ಅಲ್ಲೊಂದು ಉಂಡೆ ಹಲಸಿನ ಕಾಯಿ ಮರ... " ಅನ್ನುತ್ತಿದ್ದ ಹಾಗೆ ಚೆನ್ನಪ್ಪ ಅಂದ, " ಅದರಲ್ಲಿ ಮೇಲಿಂದ ಕೆಳಗಿನವರೇಗೆ ಹಲಸಿನಕಾಯಿ ಉಂಟು. "
" ಅದೂ ಬೋಳು ಕಜಿಪ್ಪು ಮಾಡ್ತೀವಲ್ಲ, ಅದಕ್ಕೆ ಫಸ್ಟಾಗ್ತದೆ, ನೀನು ಬರುವಾಗ ಒಂದು ಕಾಯಿ ಕೊಯ್ದು ತಾ. " ಅಂದ್ಬಿಟ್ಟು ಮನೆಯ ಕಡೆ ಹೊರಟೆ. ಅವನೂ ಬಿದ್ದ ತೆಂಗಿನಕಾಯಿಗಳನ್ನು ಹೆಕ್ಕಿ ತರಲು ಗೋಣಿಯೊಂದಿಗೆ ಮೇಲಿನ ತೋಟಕ್ಕೆ ಹತ್ತಿದ.
ಇವತ್ತು ಕರೆಂಟಿಲ್ಲದ ಬಾಬ್ತು ಹಲಸಿನ ಬೋಳು ಬೆಂದಿ ಯಾ ಹುಳಿ ಬೆಂದಿ ಮಾಡೋಣ. ಚೆನ್ನಪ್ಪ ತಂದ ಉಂಡೆಹಲಸು ಮೆಟ್ಟುಗತ್ತಿಯಲ್ಲಿ ಪ್ರಹರಿಸಲ್ಪಟ್ಟು ಹೋಳು ಹೋಳಾಯಿತು, ಹಲಸಿನ ಸೊಳೆಗಳನ್ನು ಬಿಡಿಸಿದ್ದೂ ಆಯ್ತು. ಈ ಹಲಸಿನಲ್ಲಿ ಮಯಣವೂ ಕಡಿಮೆ, ಗಾತ್ರದಲ್ಲೂ ಪುಟ್ಟದು, ಬೇಳೆಯೂ ಪುಟ್ಟದಾಗಿ ಆಕರ್ಷಕವಾಗಿದ್ದಿತು. ಆಷಾಢಮಾಸದ ಅಡುಗೆಗೆ ಬೇಕಾದೀತು ಅಂದ್ಕೊಂಡು ಬೇಳೆಗಳನ್ನೂ ಆಯ್ದು ಇಟ್ಟಾಯ್ತು.
ಹುಳಿ ಬೆಂದಿ ಮಾಡುವುದು ಹೇಗೆ?
ಬೇಳೆ, ಸಾರೆ, ಪೊದುಂಕುಳುಗಳಿಂದ ಮುಕ್ತವಾದ ಹಲಸಿನ ಸೊಳೆಗಳು, ಅಡುಗೆಯ ತಪಲೆಯಲ್ಲಿ ಹಿಡಿಸುವಷ್ಟು.
ಹಲಸಿನ ಸೊಳೆಗಳು ಉಪ್ಪು ಕೂಡಿ ಬೇಯಲಿ. ಕುಕರ್ ಬೇಕಾಗಿಲ್ಲ, ಒಂದೆರಡು ಕುದಿ ಬಂದೊಡನೆ ಬೆಂದಿದೆ ಎಂದು ತಿಳಿಯಿರಿ.
ಲಿಂಬೆ ಗಾತ್ರದ ಹುಣಸೇ ಹಣ್ಣು, ಗಿವುಚಿ ಇಟ್ಕೊಳ್ಳಿ.
ಹತ್ತಾರು ಬೆಳ್ಳುಳ್ಳಿ ಗುದ್ದಿ ಸಿಪ್ಪೆ ತೆಗೆಯಿರಿ.
ಎರಡು ಕಣೆ ಕರಿಬೇವು ಇರಲಿ.
ಬಾಣಲೆಯಲ್ಲಿ ಒಗ್ಗರಣೆಗಿಟ್ಟು, ತೆಂಗಿನೆಣ್ಣೆ ತುಸು ಜಾಸ್ತಿ ಇರಲಿ, ಬೆಳ್ಳುಳ್ಳಿ ಘಂ ಸುವಾಸನೆ ಬಂತೇ, ಸಾಸಿವೆ ಚಟಪಟ ಅಂದಾಗ, ಚಿಟಿಕೆ ಅರಸಿಣ, ಕರಿಬೇವು ಬೀಳಲಿ. ಖಾರ ಮಾಡಲಿಕ್ಕಿಲ್ಲ, ಒಗ್ಗರಣೆಯ ಮೆಣಸು ಮಾತ್ರ ಖಾರದ ಅಂಶವಾಗಿದೆ.
ಹಲಸಿನ ಸೊಳೆಗಳು ಬೆಂದಿವೆ, ಹುಣಸೆ ಹಣ್ಣಿನ ರಸ ಎರೆಯಿರಿ.
ಅವಶ್ಯಕತೆ ಇದ್ದಲ್ಲಿ ನೀರು ಕೂಡಿಸಿ. ರುಚಿಗೆ ಉಪ್ಪು ಹಾಗೂ ಬೆಲ್ಲ (ಬೇಕಿದ್ದಲ್ಲಿ ಮಾತ್ರ).
ಕುದಿಸಿ, ಒಗ್ಗರಣೆ ಹಾಕುವಲ್ಲಿಗೆ ಸೊಳೆ ಹುಳಿಬೆಂದಿ ತಯಾರಾಗಿ ಬಿಟ್ಟಿತು!
ಸೊಳೆ ಹುಳಿಬೆಂದಿ ಸವಿಯುತ್ತ ಗೌರತ್ತೆಯ ಲಹರಿ ಹಿಂದಿನಕಾಲದ ಅಡುಗೆಯತ್ತ ಸರಿಯಿತು. " ನನ್ನಮ್ಮ ಹಲಸಿನ ಹಣ್ಣಿನ ಸಾರು ಮಾಡ್ತಿದ್ರೂ.."
ನನ್ನ ಬಾಯಲ್ಲೂ ನೀರು, "ಹೌದಾ.. ಹೀಗೆ ಹುಳಿಬೆಂದಿ ಥರಾ... ? "
" ಹಲಸಿನ ಹಣ್ಣು ತೀರ ಸಪ್ಪೆಯಾಗಿದ್ದರೆ ಮತ್ತು ಮಳೆ ಬರುವಾಗ ಹಸಿ ಹಸಿ ಹಣ್ಣು ಬೇಡಾ ಅಂತಿದ್ರೆ ಹಣ್ಣಿನ ಸಾರು ಮಾಡೋರು ಆವಾಗ, ನೀರು ಹಾಕಿ ಬೇಯ್ಸೋದು, ಹುಳಿ ಗಿಳಿ ಬೇಡ, ಬೆಲ್ಲ ಗಿಲ್ಲ ಬೇಡ, ರುಚಿಗೆ ಉಪ್ಪು ಹಾಕ್ಬಿಟ್ಟು ಒಗ್ಗರಣೆ ಹಾಕಿದ್ರೆ ಮುಗೀತು, ಬೆಳ್ಳುಳ್ಳಿ ಗಿಳ್ಳುಳ್ಳಿ ಏನೂ ಬೇಡಾ ತಿಳೀತಾ... "
ಅಂತೂ ಹಳೇಕಾಲದ ಹೊಸರುಚಿ ಸಿಕ್ಕಿತು. ನಾವೂ ಮಾಡಿ ಸವಿದೂ ಆಯಿತು. ಸಪ್ಪೆಯಾದ ಹಲಸಿನ ಸೊಳೆಗಳಿಗೂ ಸಿಹಿರುಚಿ ಬಂದಿತಲ್ಲ!
0 comments:
Post a Comment