ಹಬ್ಬಗಳು ಸಾಲು ಸಾಲಾಗಿ ಬರುತ್ತಲಿವೆ. ಒಂದೊಂದು ಹಬ್ಬಕ್ಕೂ ಅದಕ್ಕೆಂದೇ ವಿಶೇಷ ಹಬ್ಬದಡುಗೆ ಆಗಲೇಬೇಕು, ಹಬ್ಬದೂಟ ಉಣಲೇಬೇಕು, ಏನಿಲ್ಲಾಂದ್ರೂ ಒಂದು ಪಾಯಸ ಮಾಡಿ ಸವಿಯಲೇ ಬೇಕು.
ದವಸಧಾನ್ಯಗಳ ಬೆಲೆ ಗಗನಕ್ಕೇರಿದೆ. ಬೇಳೆಕಾಳುಗಳ ಧಾರಣೆ ಕೇಳಿದ್ರೆ ಬೆಚ್ಚಿ ಬೀಳುವಂತಾಗಿದೆ. ಚೌತಿ ಹಬ್ಬಕ್ಕೆ ನಮ್ಮ ಹಿರಿಯರ ಕಾಲದಲ್ಲಿ ಹೆಸ್ರುಬೇಳೆ ಪಾಯಸವನ್ನೇ ಮಾಡುವ ರೂಢಿ ಇಟ್ಟುಕೊಂಡಿದ್ದೆವು. ನಮ್ಮತ್ತೆ ಹೆಸ್ರುಬೇಳೆ ತರಿಸಿ, ಕೆಂಪಾಗಿ ಘಮ್ಮನೆ ಹುರಿದು ಡಬ್ಬದಲ್ಲಿ ಶೇಖರಿಸಿ ಇಡುತ್ತಿದ್ದರು. ಹಾಳಾಗದಂತೆ ಕಾಪಿಡುವ ಉದ್ಧೇಶವೂ ಆಯ್ತು, ಯಾರೇ ನೆಂಟರು ಬರಲಿ, ಮನೆ ಅಳಿಯಂದಿರೇ ಹಾಜರಾಗಲಿ, ಹೆಸ್ರುಬೇಳೆ ಪಾಯಸ ದಿಢೀರನೆ ಸಿದ್ಧಪಡಿಸುವುದಕ್ಕೂ ಆಯ್ತು. ಇದೆಲ್ಲ ವರ್ಷಗಳ ಹಿಂದಿನ ಮಾತಾಯ್ತು.
ಈಗಲೂ ಪಾಯಸ ತಿನ್ನದಿದ್ದರಾದೀತೇ, ಹಗುರಾಗಿ ಮಿತವ್ಯಯದ ಪಾಯಸ ಮಾಡುವುದು ಹೇಗೆ?
ಮೊದಲಾಗಿ ಅಡುಗೆಮನೆಯಲ್ಲಿ ಏನೇನಿದೆ ಎಂದು ನೋಡಿಟ್ಟುಕೊಳ್ಳುವುದು.
ತೆಂಗಿನಕಾಯಿ ಇದೆ.
ಬೆಲ್ಲ ಒಂದೆರಡು ಅಚ್ಚು ಇದ್ದರೆ ಸಾಕು.
ನಾಲ್ಕಾರು ಬಾಳೆಹಣ್ಣುಗಳೂ,
ಯಾರೂ ಕೇಳುವವರಿಲ್ಲದ ಕ್ಯಾರೆಟ್ಟೂ...
ಅಹಹಾ... ಪಾಯಸ ಮಾಡೇ ಬಿಡೋಣ.
ಬಾಳೆಹಣ್ಣುಗಳನ್ನು ಚೆನ್ನಾಗಿ ನುರಿದು, ಬೆಲ್ಲ ಕೂಡಿ ಬೇಯಿಸಿ.
ತೆಂಗಿನಕಾಯಿ ಸುಲಿದು, ಒಡೆದು, ಕಾಯಿ ತುರಿಯಿರಿ, ಅರೆದು ಹಾಲು ತೆಗೆದಿರಾ,
ನೀರು ಕಾಯಿಹಾಲನ್ನು ಬಾಳೆಹಣ್ಣಿನ ಪಾಕಕ್ಕೆ ಎರೆಯಿರಿ.
ಕ್ಯಾರೆಟ್ ತುರಿಯಿರಿ, ಕ್ಯಾರೆಟ್ ತುರಿಯೂ ಕೂಡಿದ ಬಾಳೆಹಣ್ಣಿನ ರಸಪಾಕ ಬೇಯಲಿ.
ಕುಕ್ಕರ್ ಉತ್ತಮ, ಒಂದು ವಿಸಿಲ್ ಸಾಕು.
ಬೆಂದ ಮಿಶ್ರಣಕ್ಕೆ ರುಚಿಗೆ ಹೊಂದುವಷ್ಟು ಬೆಲ್ಲ ಪುಡಿ ಮಾಡಿ ಹಾಕಿದ್ರಾ, ದಪ್ಪ ಕಾಯಿಹಾಲು ಎರೆದು ಕುದಿಸಿ. ಚಿಟಿಕೆ ಏಲಕ್ಕಿ ಉದುರಿಸಿ, ಘಮಘಮಿಸುವ ತುಪ್ಪ ಎರೆದರೂ ನಡೆದೀತು.
ದ್ರಾಕ್ಷಿ ಗೇರುಬೀಜ ಯಥಾನುಶಕ್ತಿ ಹಾಕುವುದು.
0 comments:
Post a Comment