" ಅಬ್ಬಾ ಏನು ಸೆಕೇ... ನೀರು ಕುಡಿದೂ ಕುಡಿದೂ ಸಾಕಾಯ್ತು."
" ಬರೇ ನೀರು ಕುಡಿದ್ರೇನು ಬಂತು, ತಂಪು ಆಹಾರ ತಿನ್ಬೇಕು..." ಅಂದ್ರು ಗೌರತ್ತೆ.
" ಬೆಳಗಾದ್ರೆ ಎದ್ದು ಐಸ್ ಕ್ರೀಂ ತಿನ್ನೂ ಅಂತೀರಾ? "
" ಹಹ... ಹಾಗಲ್ಲ ಮಾರಾಯ್ತಿ... ತಿನ್ನುವ ತರಕಾರಿ ಉಂಟಲ್ಲ, ಬದನೇಕಾಯಿ ನಂಜು, ಹಾಗಲ ಪಿತ್ತ, ಬಾಳೆಕ್ಕಾಯಿ ವಾತ ಹೀಗೆಲ್ಲ ಹೇಳ್ತಾರಲ್ಲ... ಸೌತೆಗೆ ಅಂತಹ ದೋಷ ಯಾವುದೂ ಇಲ್ಲ. ಉಷ್ಣವೂ ಅಲ್ಲ, ಶೀತವೂ ಇಲ್ಲ, ಶರೀರಕ್ಕೂ ತಂಪು ಗೊತ್ತಾ. " ಲೆಕ್ಚರ್ ಬಿಗಿದರು ಗೌರತ್ತೆ, ಮೂಲೆಯಲ್ಲಿ ಸಾಲಾಗಿ ಪೇರಿಸಿಟ್ಟಿದ್ದ ಸೌತೆಕಾಯಿಗಳನ್ನು ನೋಡುತ್ತಾ.
ಸೌತೆಕಾಯಿಗಳನ್ನು ನೆರೆಮನೆಯ ರವೀಂದ್ರನ್ ತಂದ್ಕೊಟ್ಟಿದ್ದ, ನಮ್ಮ ತೋಟದ ಕೆರೆಯಿಂದ ನೀರು ಅವನ ತರಕಾರಿ ಹಿತ್ತಿಲಿಗೆ ಹೋಗುತ್ತೆ, ಅವನೂ ಆಗಾಗ ಏನೇನೋ ತರಕಾರಿ ತಂದಿಟ್ಟಿರುತ್ತಾನೆ. ನನ್ನ ತರಕಾರಿ ಬೆಳೆ ಅಷ್ಟಕ್ಕಷ್ಟೇ, ಬದನೆಕಾಯಿ ಒಂದು ಸಾಲು ಬಿಟ್ರೆ ಮತ್ತೇನಿಲ್ಲ.
" ಹೌದೂ, ಸೌತೇದು ಹುಳಿಮೆಣಸು ಮಾಡೂ ಅಂತೀರಾ? "
" ಅಯ್ಯೋ, ಅದೆಲ್ಲ ಬೇಡ... ಪದಾರ್ಥಕ್ಕೆ ಬದನೆ ಉಂಟಲ್ಲ, ನಾಳೆ ಸೌತೆಕಾಯಿ ದೋಸೆ ಮಾಡಬಹುದಲ್ಲ. "
" ಇವತ್ತು ಉದ್ದಿನ ಕೊಟ್ಟಿಗೆ ತಿಂದಾಯ್ತು, ನಾಳೆ ಪುನಃ ಉದ್ದು ಹಾಕಿ ಸೌತೆಕಾಯಿ ದೋಸೆಯಾ... "
"ಉದ್ದು ಹಾಕ್ಬೇಡ, ಬರೇ ಅಕ್ಕಿ ಮತ್ತು ಸೌತೆ ಹಾಕಿ ಅರೆದಿಡು, ತಿಳೀತಾ... "
ಗೌರತ್ತೆ ಅಂದಂತೆ ಮೂರು ಪಾವು ಅಕ್ಕಿ ನೀರಿನಲ್ಲಿ ನೆನೆ ಹಾಕಿದ್ದಾಯ್ತು.
ಸಂಜೆಯಾಗುತ್ತಲೂ ಸೌತೆಕಾಯಿ ಸಿಪ್ಪೆ ಹಾಗೂ ಬೀಜಗಳನ್ನು ಹೊರಗೆಸೆದು ತುರಿದು ಇಟ್ಕೊಂಡಿದ್ದಾಯ್ತು.
ಬೇಸಿಗೆಯಲ್ವೇ, ಸಂಜೆಯ ವೇಳೆ ಇನ್ನೇನೋ ಕೆಲಸಗಳಿರುತ್ತವೆ. ಮುಖ್ಯವಾಗಿ ಕೈದೋಟದ ಗಿಡಗಳಿಗೆ ನೀರು ಹಾಕೋದು. ಈ ಹೊರಕೆಲಸಗಳನ್ನು ಮುಗಿಸಿ, ಒಳ ಬಂದು ಹಾಲು ಕಾಯಿಸಲಿಟ್ಟು, ಅನ್ನ ಬಿಸಿ ಮಾಡಿ, ದೇವರಿಗೊಂದು ದೀಪ ಹಚ್ಚಿಟ್ಟು, ಸ್ವಲ್ಪ ಹೊತ್ತು ಫೇಸ್ ಬುಕ್ಕು ಓದಿ, ಊಟದ ಟೇಬಲ್ ರಾತ್ರಿಯೂಟಕ್ಕೆ ತಯಾರಾಗಿ ನಿಂತಾಗ ನನ್ನ ದೋಸೆ ಅರೆಯುವ ವೇಳೆ ಬಂದಿತು.
ಅಕ್ಕಿ, ಅಂದ್ರೆ ಬೆಳ್ತಿಗೆ ಅಕ್ಕಿಯನ್ನು ಈಗ ದೋಸೆ ಅಕ್ಕಿ, ಇಡ್ಲಿ ಅಕ್ಕಿ ಎಂದು ವರ್ಗೀಕರಿಸಿ ಹೇಳುತ್ತಿರುವುದು ನನಗೂ ವಿಸ್ಮಯ ತಂದಿದೆ. ಇದೇನು ವಿಚಿತ್ರ ಅಂತಿದ್ದ ಈ ಹೊಸ ಸಬ್ಜೆಕ್ಟು, ಬೆಂಗಳೂರಿಗೆ ಹೋಗಿದ್ದಾಗ ನಿವಾರಣೆ ಆಯ್ತು. ಬೆಂಗಳೂರಿನ ನಮ್ಮದೇ ಮನೆಗೆ ಹೋಗಿದ್ದೆವು, ಪ್ರಕಾಶನ ಹೆಂಡ್ತಿ ಗೀತಾ, ಎರಡೂ ಪ್ರತಿ ಅಕ್ಕಿ ಡಬ್ಬಗಳನ್ನು ಬಿಡಿಸಿ " ಅತ್ತೇ, ಇದು ದೋಸೆ ಅಕ್ಕಿ, ಅರೆಯುವಾಗ ನೊಂಪು ನೊಂಪಾಗಿ ನುಣ್ಣಗಾಗುತ್ತೆ, ಇಡ್ಲಿ ಅಕ್ಕಿ ಉಂಟಲ್ಲ, ಎಷ್ಟೇ ಅರೆದ್ರೂ ತರಿ ತರಿ... " ಅಂದಳು.
" ಅಷ್ಟೇನಾ, ಎರಡೂ ಬೆಳ್ತಿಗೆ ಅಕ್ಕೀನೇ.... "
ಈಗ ನೆನೆ ಹಾಕಿಟ್ಟಿರುವ ದೋಸೆ ಅಕ್ಕಿಯನ್ನು ಚೆನ್ನಾಗಿ ತೊಳೆದು, ಸೌತೆಕಾಯಿ ತುರಿಯೊಂದಿಗೆ ಅರೆಯಿರಿ. ಬೇರೆ ನೀರು ಕೂಡಿಸದಿರಿ, ಸೌತೆಯಲ್ಲಿ ಶೇಕಡಾವಾರು 80 ಕ್ಕೂ ಅಧಿಕ ನೀರು ಇದೆ. ನುಣ್ಣಗಾದ ಹಿಟ್ಟನ್ನು ರುಚಿಗೆ ಉಪ್ಪು ಕೂಡಿಸಿ ಮುಚ್ಚಿಟ್ಟಿರಿ. ಹುದುಗು ಬಂದ ಹಿಟ್ಟನ್ನು ಮಾರನೇ ದಿನ ದೋಸೆ ಎರೆಯಿರಿ. ತೆಂಗಿನಕಾಯಿ ಚಟ್ಣಿ, ಮೊಸರು, ಬೆಲ್ಲದ ಜೇನುಪಾಕ ಕೂಡಿಕೊಂಡು ದೋಸೆ ಸವಿಯಿರಿ. ಹಿಟ್ಟನ್ನು ಅರೆದ ಕೂಡಲೇ ದೋಸೆ ಎರೆಯಬೇಕಿದ್ದರೆ ನೀರು ದೋಸೆ ಥರ ಹಾರಿಸಿ ಎರೆದರಾಯಿತು.
ಸಸ್ಯಶಾಸ್ತ್ರೀಯವಾಗಿ Cucumis sativus ಎಂದಿರುವ ನಮ್ಮ ಊರ ಸೌತೆಗೆ ಎಷ್ಟೊಂದು ನಾಮಧೇಯಗಳಿವೆ ಎಂಬ ವಿಷಯ ಗೂಗಲ್ ರಿಸರ್ಚ್ ಮಾಡಿದಾಗಲೇ ತಿಳಿದದ್ದು.
ಬೆಂಗಳೂರಿಗರು ಇದನ್ನು ಮಂಗಳೂರು ಸೌತೆ ಅಂತಾರೇ, ಬಣ್ಣದ ಸೌತೆಯೂ ಹೌದು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೌತೆಯ ಬೆಳೆ ಕರಾವಳಿಯುದ್ದಕ್ಕೂ ಇರುವುದರಿಂದ ಇದು ಮಲಬಾರ್ ಸೌತೆಯೂ ಹೌದು. ಕೊಂಕಣಿಗರು ಈ ಸೌತೆಯಿಂದ ವಿಧ ವಿಧವಾದ ಖಾದ್ಯಗಳನ್ನೂ ತಯಾರಿಸುತ್ತಾರೆ.
ದೋಸೆ ಮಾಡಿದ ವಿಧಾನ ನೋಡಿದ್ರಲ್ಲ, ಕಡುಬು ಕೂಡಾ ಮಾಡಿಕೊಳ್ಳಬಹುದು. ಈಗ ಇಡ್ಲಿ ಅಕ್ಕಿ ಉಪಯೋಗಿಸಿದ್ರಾಯ್ತು. ಇಲ್ಲಿ ಹಿಟ್ಟನ್ನು ಹುಳಿ ಬರಿಸಬೇಕಾಗಿಲ್ಲ. ತೆಂಗಿನ ತುರಿ ಹಾಗೂ ಬೆಲ್ಲ ಕೂಡಿ ಅರೆದು, ಬಾಡಿಸಿದ ಬಾಳೆ ಎಲೆಯಲ್ಲಿ ಸುತ್ತಿಟ್ಟು, ಅಟ್ಟಿನಳಗೆ ಯಾ ಇಡ್ಲಿ ಪಾತ್ರೆ ಅಥವಾ ಪ್ರೆಶರ್ ಕುಕ್ಕರ್ ಒಳಗೆ ಹಬೆಯಲ್ಲಿ ಬೆಂದಂತಹ ಕಡುಬು ರುಚಿಕರ ತಿನಿಸು.
ಈ ಸೌತೆಯ ಇನ್ನೊಂದು ವಿಶೇಷ ಗುಣ ಏನಪ್ಪಾಂದ್ರೆ ಚೆನ್ನಾಗಿ ಬೆಳೆದ ಸೌತೆಕಾಯಿಗಳನ್ನು ದೀರ್ಘಕಾಲ ಇಟ್ಟುಕೊಳ್ಳಬಹುದು. ಸಾಮಾನ್ಯವಾಗಿ ಮಾರ್ಚ್ ತಿಂಗಳಲ್ಲಿ ಕಟಾವ್ ಆಗುವಂತೆ ಬೆಳೆದರೆ ಮಳೆಗಾಲಕ್ಕೆ ತರಕಾರಿಯ ಕೊರತೆ ಬಾರದಂತೆ ಕಾಪಿಟ್ಟುಕೊಳ್ಳಬಹುದಾಗಿದೆ.
ಅಧಿಕ ನೀರಿನಂಶ ಹೊಂದಿರುವ ಈ ತರಕಾರಿ ಮೂತ್ರವರ್ಧಕ, ಮಲಬದ್ಧತೆಯನ್ನು ಹೋಗಲಾಡಿಸುತ್ತ ಜೀರ್ಣಾಂಗಗಳ ಕಾರ್ಯಕ್ಷಮತೆಯನ್ನು ವೃದ್ಧಿಸುವುದು. ತರಕಾರಿ ತಿನ್ನಲೊಪ್ಪದ ಮಕ್ಕಳಿಗೆ ಈ ತೆರನಾದ ತಿಂಡಿಗಳ ಮೂಲಕ ತರಕಾರಿ ತಿನ್ನಿಸಿದ ಹಾಗೂ ಆಯಿತು.
0 comments:
Post a Comment