Pages

Ads 468x60px

Saturday 6 May 2017

ಮಸಾಲಾ ಮಾವಿನಕಾಯಿ




                 



ನಮ್ಮ ಅಡಿಕೆ ತೋಟದ ಆವರಣದಲ್ಲಿ ಮಾವಿನ ಋತು ಇನ್ನೂ ಆರಂಭವಾಗಿಲ್ಲ,  ಆದರೇನಂತೆ,  ತರಕಾರಿ ಸಂತೆಯಿಂದ ಇನ್ನಿತರ ಮಾಲುಗಳೊಂದಿಗೆ ಒಂದು ತೋತಾಪುರಿ ಮಾವಿನಕಾಯಿ ಬಂದಿತು.   " ಒಂದೇ ಮಾವಿನಕಾಯಿ ಯಾಕೆ ತಂದಿದ್ದು?   ಏಳೆಂಟಾದರೂ ಬೇಕಾಗಿತ್ತು,  ಬೆಂಗಳೂರಿನಲ್ಲಿರುವ ಮಕ್ಕಳಿಗೆ ಉಪ್ಪಿನಕಾಯಿ ಹಾಕಿ ಕೊಡಬಹುದಾಗಿತ್ತು... "


ಇವರು ಉತ್ತರ ಕೊಡಲಿಲ್ಲ.   ನಾನೂ ಮಾವಿನಕಾಯಿಯ ಗೋಜಿಗೇ ಹೋಗಲಿಲ್ಲ.   ತರಕಾರಿಗಳು ಮುಗಿಯುತ್ತಿದ್ದಂತೆ,   ಅಡುಗೆಮನೆಯಲ್ಲಿ ಬಿಡುವು ದೊರೆತಾಗ ಈ ಮಾವಿನಕಾಯಿ ಕತ್ತರಿಸಲ್ಪಟ್ಟಿತು.  ಹೋಳುಗಳನ್ನು ಜಾಡಿಯಲ್ಲಿ ತುಂಬಿಸಿ ಎರಡು ದೊಡ್ಡ ಚಮಚ ಪುಡಿಯುಪ್ಪು ಬೆರೆಸಿದ್ದೂ ಆಯ್ತು.  ಒಂದು ಚಿಟಿಕೆ ಅರಸಿಣವೂ ಬಿದ್ದಿತು.


ನನ್ನ ಬಳಿ ಇದ್ದಂತಹ ಉಪ್ಪಿನಕಾಯಿ ಮಸಾಲೆ,  ವಾರದ ಹಿಂದೆ ಬೀಂಬುಳಿ ಉಪ್ಪಿನಕಾಯಿ ಹಾಕಿದ್ದಾಗ ಮುಗಿದಿತ್ತು,   ಮಾತ್ರವಲ್ಲದೆ ಮಕ್ಕಳೊಂದಿಗೆ ಬೆಂಗಳೂರು ಸೇರಿತ್ತು.  ನಮ್ಮ ದಿನನಿತ್ಯದ ಊಟಕ್ಕೆ ಉಪ್ಪಿನಕಾಯಿ ಇಲ್ಲದಂತಾಗುವ ಮೊದಲೇ ಈ ಮಾವಿನಕಾಯಿಗೆ ಹೇಗಾದರೂ ಮಾಡಿ ಉಪ್ಪಿನಕಾಯಿ ರೂಪ ಕೊಡೋಣಾ ಅಂತಿದ್ರೆ...  ಈಗ ಏನು ಮಾಡೋಣ?


ಒಂದು ಮಾವಿನಕಾಯಿ ಅಲ್ವೇ,  ನಾವೇ ಮಸಾಲೆ ಸಿದ್ಧಪಡಿಸೋಣ.


" ಹೇಗೇ? "


ಏಳೆಂಟು ಒಣಮೆಣಸಿನಕಾಯಿಗಳು 

ಒಂದು ಹಿಡಿ ಸಾಸಿವೆ 

ಕಡ್ಲೆ ಗಾತ್ರದ ಇಂಗು 

ಅರ್ಧ ಚಮಚ ಜೀರಿಗೆ

ನಾಲ್ಕಾರು ಕಾಳುಮೆಣಸು


ಎಣ್ಣೆ ಬಯಸದ ನಾನ್ ಸ್ಟಿಕ್ ಬಾಣಲೆಯಲ್ಲಿ ಬಿಸಿ ಮಾಡಿಕೊಳ್ಳಿ,  ಹುರಿಯುವುದೇನೂ ಬೇಡ.  ಮಿಕ್ಸಿಯಲ್ಲಿ ಬೀಸಬಹುದಾದಷ್ಟು ಬೆಚ್ಚಗಾದರೆ ಸಾಕು.  ಬಿಸಿಯಾರಿದ ನಂತರ ನಾಲ್ಕು ಸುತ್ತು ತಿರುಗಿಸಿದಾಗ ನುಣುಪಾದ ಹುಡಿ ಆಯ್ತು.


ಇದನ್ನು ಈಗಾಗಲೇ ಉಪ್ಪು ಬೆರೆಸಿಟ್ಟ ಮಾವಿನ ಹೋಳುಗಳಿಗೆ ಬೆರೆಸುವುದು.  ಬೇಕಿದ್ದರೆ ಎಳ್ಳೆಣ್ಣೆಯ ಒಗ್ಗರಣೆ ಮೇಲಿಂದ ಹಾಕಬಹುದು,   ನಾನು ಹಾಕಿಲ್ಲ,  ಮನೆಯಲ್ಲಿ ಎಲ್ಲರಿಗೂ ಎಣ್ಣೆ ಹಾಕಿದ ಉಪ್ಪಿನಕಾಯಿ ಹಿಡಿಸುವುದಿಲ್ಲ.   ಏನೇ ನಳಪಾಕ ಮಾಡುವುದಿದ್ದರೂ ಮನೆಮಂದಿಯ ಅಭಿರುಚಿಯನ್ನೂ ಗಮನದಲ್ಲಿಟ್ಟುಕೊಂಡರೆ ಕ್ಷೇಮ.


ಇನ್ನೂ ಒಂದು ಚಮಚ ಉಪ್ಪು ಕೂಡಿಸಿ ಜಾಡಿಯ ಬಾಯಿ ಬಿಗಿಯಿರಿ.  ಎರಡು ಗಂಟೆಗೊಮ್ಮೆ ಜಾಡಿಯನ್ನು ಕುಲುಕಿಸುತ್ತಿರಿ,  ಉಪ್ಪು ಖಾರ ಹೋಳುಗಳಿಗೆ ತಲುಪಬೇಡವೇ...


ರಸ ಒಸರುತ್ತಿರುವ ಮಾವಿನ ಹೋಳುಗಳನ್ನು ಕಂಡಾಗಲಂತೂ ತಟ್ಟೆಗೆ ಬಡಿಸಿ ಊಟಕ್ಕೆ ಸಿದ್ಧರಾಗಿ.   ಉಪ್ಪಿನಕಾಯಿಗಾಗಿ ಅಮ್ಮನ ಮನೆಗೆ ಹೋಗಬೇಕಾಗಿಲ್ಲ ಎಂದು ತಿಳಿದಿರಲ್ಲ.   ಹ್ಞಾ, ಇನ್ನಷ್ಟು ರುಚಿಕರವಾಗಲು ಶುಂಠಿ, ಹಸಿಮೆಣಸು,  ಲಿಂಬೆಹಣ್ಣು ಹಾಕಿರಿ,   


ಹೇಗೇ,  ಶುಂಠಿ ಪೇಸ್ಟ್  ಹಾಕಿದ್ರಾಯ್ತು ಅಂತೀರಾ ?

ಅದೆಲ್ಲ ಚೆನ್ನಾಗಿರದು,  ಒಂದು ಇಂಚು ಉದ್ದದ ಶುಂಠಿಯ ಸಿಪ್ಪೆ ಹೆರೆದು ತೆಳ್ಳಗೆ ಕತ್ತರಿಸಿದರಾಯಿತು.

ಹಸಿಮೆಣಸು ಕೂಡಾ ಉದ್ದುದ್ದ ಕತ್ತರಿಸಿದರೆ ಸಾಕು.

ಲಿಂಬೆ ಹಣ್ಣಿನ ರಸ ಹಿಂಡಿ ಹಾಕುವುದೂ ಇದೆ,  ನಾವು ಚಿಕ್ಕ ಚಿಕ್ಕ ಹೋಳು ಮಾಡ್ಬಿಟ್ಟು ಸೇರಿಸೋಣ,  ಆ್ಯಂಟಿ ಓಕ್ಸಿಡೆಂಟ್ ಗುಣಧರ್ಮದ ಲಿಂಬೆಯಸಿಪ್ಪೆಯನ್ನು ಬಿಸಾಡದಿರೋಣ.


ಈ ಉಪ್ಪಿನಕಾಯಿ  ಸಿದ್ಧಪಡಿಸಿ ಎರಡು ದಿನ ಆಗಿತ್ತಷ್ಟೇ,  ಮಂಗಳೂರಿನಿಂದ ಗಿರೀಶ್ ಬಂದಿದ್ದ,  ಊಟಕ್ಕೆ ಬಡಿಸಿದಾಗ ಸುಮ್ಮನಿದ್ದವನು ಸಂಜೆಯ ಉಪ್ಪಿಟ್ಟು ಚಹಾ ಸ್ವೀಕರಿಸುತ್ತ,   " ಎಲ್ಲಿ ಉಪ್ಪಿನ್ಕಾಯಿ? ಬರಲೀ..  " ಅನ್ನೋದೇ!   




ಟಿಪ್ಪಣಿ:   ಉತ್ಥಾನ ಮಾಸಪತ್ರಿಕೆಯ ಎಪ್ರಿಲ್,  2017ರ ಸಂಚಿಕೆಯಲ್ಲಿ ಪ್ರಕಟಿತ ಬರಹ.

 

0 comments:

Post a Comment