Pages

Ads 468x60px

Sunday 17 February 2019

ಪಂಚಾಮೃತ




ಹಿರಣ್ಯದ ಆವರಣದಲ್ಲಿರುವ ಮಹಿಷಂದಾಯ ದೈವಗುಡಿಯಲ್ಲಿ ಸಂಜೆಯ ಹೊತ್ತು ತಂಬಿಲಸೇವೆ, ದೇವಿ ಬಾಲಾಲಯದಲ್ಲಿ ದುರ್ಗಾಪೂಜೆ, ಕುಂಕುಮಾರ್ಚನೆ, ಹೂವಿನಪೂಜೆ, ಭಜನೆ ಕಾರ್ಯಕ್ರಮಗಳ ನಿಮಿತ್ತ ಸಂಬಂಧಿತರಿಗೆ ವಾಟ್ಸಪ್ ಮುಖೇನ ನೆನಪಿನೋಲೆ ಕಳುಹಿಸಿಯೂ ಆಯಿತು.

ಪೂಜೆಯ ಉಸ್ತುವಾರಿ ಹೊತ್ತಿರುವ ಪರಕ್ಕಜೆ ಪುರೋಹಿತರು ಸಂಜೆ ನಾಲ್ಕಕ್ಕೇ ಆಗಮಿಸಿ, ವಿಶ್ರಾಂತಿಗಾಗಿ ಜಮಖಾನ ಹಾಸಿ ತಲೆದಿಂಬಿನೊಂದಿಗೆ ಅಡ್ಡಾದರು.

ನನಗೋ ಎಲ್ಲವನ್ನೂ ಹೊಂದಿಸಿ ಇಡುವ ಆತುರ. ಏನೇನು ಆಗ್ಬೇಕಾಗಿದೆ ಎಂಬ ತಪಾಸಣೆಯೂ,
ತೋಟದಿಂದ ಬಂದ ತೆಂಗಿನಕಾಯಿಗಳನ್ನು ಸುಲಿದು ಇರಿಸಿದೆಯೋ,
ಗುಣಮಟ್ಟದ ಬೆಳ್ತಿಗೆ ಅಕ್ಕಿ - ಪಿಂಡಿ ಪಾಯಸಕ್ಕಾಗಿ,
ಅವಲಕ್ಕಿ, ಹೊದಳು, ಬೆಲ್ಲ - ಪಂಚಕಜ್ಜಾಯಕ್ಕಾಗಿ,
ಹಾಲು, ಮೊಸರು, ತುಪ್ಪ, ಜೇನು, ಸಕ್ಕರೆ - ಪಂಚಾಮೃತಕ್ಕಾಗಿ...

ಎಲ್ಲವನ್ನೂ ಅಚ್ಚುಕಟ್ಟಾಗಿ ಜೋಡಿಸುತ್ತಿರಬೇಕಾದರೆ ಪರಿಕರ್ಮಗಳ ಉಸ್ತುವಾರಿಗಾಗಿ ಮುಳಿಯಾಲು ಭಟ್ಟರು ಬಂದರು.

ಮಿಂದು ಶುಚಿರ್ಭೂತರಾಗಿ ನೈವೇದ್ಯದ ಪಿಂಡಿ ಪಾಯಸ ಮಾಡಬೇಕಲ್ಲವೇ, ಬಚ್ಚಲುಮನೆಯಲ್ಲಿ ಹಂಡೆನೀರು ಕುದಿಯಿತು.

" ಹೌದೂ, ಪಂಚಾಮೃತದ ಸಾಹಿತ್ಯ ಅಲ್ಲಿಗೆ ತೆಗೆದುಕೊಂಡು ಹೋಗುವುದೋ, ಇಲ್ಲಿಂದಲೇ ಹೊಂದಿಸಿ ಒಯ್ಯುವುದೋ ಹೇಗೆ? "

" ನೀವು ನಾನು ಹೇಳಿದಷ್ಟು ಕೊಡಿ, ಹಾಲು ಎಲ್ಲಿದೆ? "

" ಹಾಲು ಈಗ ಡೈರಿಯಿಂದ ತಂದದ್ದು.. " ಸ್ಟೀಲು ಕ್ಯಾನು ಬಾಯ್ದೆರೆಯಿತು. ಅಂದಾಜು ಅರ್ಧ ಲೀಟರು ಹಾಲು ಸ್ಟೀಲು ತಂಬಿಗೆಯ ಪಾಲಾಯ್ತು.

" ಮೊಸರು ಎಲ್ಲಿ? "
" ಪ್ರಿಜ್ ಒಳಗಿಂದ ಎರಡು ಸೌಟು ಮೊಸರು ತಂಬಿಗೆ ಸೇರಿತು.

" ಒಂದೊಂದು ಚಮಚ ಜೇನು ಹಾಗೂ ತುಪ್ಪ... "

" ಸಿಹಿಸಿಹಿ ಆಗ್ಬೇಕಲ್ಲ... " ನಾಲ್ಕು ಸೌಟು ಸಕ್ಕರೆ ಹಾಲು ಮೊಸರೊಳಗೆ ಐಕ್ಯವಾಯಿತು.

" ಪಂಚಾಮೃತ ಆಯಿತು... " ಅನ್ನುತ್ತ ತುಂಬಿದ ತಂಬಿಗೆ ಹಾಗೂ ಇನ್ನಿತರ ಪರಿಕರಗಳೊಂದಿಗೆ ಭಟ್ಟರು ದೇವಿ ಸಾನಿಧ್ಯದ ಕಡೆ ನಡೆದರು.

ತಡರಾತ್ರಿ ಹೊತ್ತಿಗೆ ಪೂಜಾ ಕೈಂಕರ್ಯಗಳೆಲ್ಲ ಮುಗಿದು, ಹೂ ಹಣ್ಣು ಕಾಯಿ ಕುಂಕುಮಗಳನ್ನು ಭಕ್ತ ಜನ ಸಮುದಾಯಕ್ಕೆ ವಿತರಿಸಿ, ನೈವೇದ್ಯ ಪ್ರಸಾದಗಳನ್ನು ಹಂಚಿದ್ದೂ ಆದ ನಂತರ ಉಳಿದ ಪಂಚಾಮೃತ ನನ್ನ ಕೈ ಸೇರಿತು.
ಪಂಚಾಮೃತವನ್ನು ಪ್ರಸಾದ ರೂಪದಲ್ಲಿ ವಿತರಿಸುವಾಗ ಅಂಗೈ ಬೊಗಸೆಯಲ್ಲಿ ಹಿಡಿಸುವಷ್ಟೇ ಪುಟ್ಟ ಸಕ್ಕಣದಲ್ಲಿ ಎರೆಯುವ ಪದ್ಧತಿ, ತಂಬಿಗೆ ಪಂಚಾಮೃತ ಮುಗಿಯದೇ ಹೋಯಿತು.

" ಇದನ್ನು ಮನೆಗೊಯ್ದು ಏನು ಮಾಡಲೀ? "
"ಪ್ರಿಜ್ ಒಳಗಿಟ್ಟು ನಾಳೆ ಐಸ್ ಕ್ರೀಂ ಥರ ಚೆನ್ನಾಗಿರುತ್ತೆ... " ಪುಕ್ಕಟೆ ಸಲಹೆಯೂ ಸಿಕ್ಕಿತು!








0 comments:

Post a Comment