Pages

Ads 468x60px

Monday 8 July 2019

ಬಸಳೆಯ ಮಜ್ಜಿಗೆಹುಳಿ








ಬೇಸಿಗೆಯಲ್ಲಿ ತಂದು ನೆಟ್ಟ ಬಸಳೆ, ಚಪ್ಪರಕ್ಕೆ ಹಬ್ಬಿಸಲು ವ್ಯವಧಾನವಿಲ್ಲದೆ ಈಗ ಮಳೆ ಪ್ರಾರಂಭವಾದ ಮೇಲೆ ನೆಲದಲ್ಲೇ ಎತ್ತೆತ್ತಲೋ ಸಾಗುತ್ತಿರುವುದನ್ನು ಕಂಡು ಮರುಗಿದ ಚೆನ್ನಪ್ಪ, ಬಿಸಿಲು ಬಂದಾಗ ನಾಲ್ಕು ಗೂಟ ನೆಟ್ಟು ಚಪ್ಪರ ಹಾಕಲು ಉದ್ಯುಕ್ತನಾದ.

ಅವನು ಚಪ್ಪರದ ಸಿದ್ಧತೆ ಮಾಡುತ್ತಿದ್ದಾಗ ನಾನು ಅಡುಗೆಮನೆಯಲ್ಲಿ ಟೊಮ್ಯಾಟೋ ರಸಂ ಮಾಡಲೋ, ಬೀನ್ಸ್ ಪಲ್ಯಕ್ಕೆ ಕೊಚ್ಚಲೋ ಎಂಬ ಚಿಂತನೆಯಲ್ಲಿದ್ದಾಗ ಬಸಳೆ ಕುಡಿಗಳು ಅಡುಗೆಮನೆಗೆ ಬಂದವು.
" ಅದೇನಿಲ್ಲಕ್ಕ, ಎಲ್ಲವನ್ನೂ ಚಪ್ಪರಕ್ಕೆ ಎತ್ತಿ ಕಟ್ಟುವುದಕ್ಕಾಗುವುದಿಲ್ಲ ಅಂತ ಇಷ್ಟು ಕುಯ್ದು ತಂದೆ. " ಎಂದ ಚೆನ್ನಪ್ಪ.
" ಚೆನ್ನಾಯ್ತು ಬಿಡು, ಈಗ ಪದಾರ್ಥಕ್ಕಾಯ್ತು. " ಟೊಮ್ಯಾಟೋ ಮೂಲೆಗೆ ಒತ್ತರಿಸಲ್ಪಟ್ಟಿತು.

ಬಸಳೆ, ಏನಿದ್ರೂ ಮಳೆಗಾಲದ್ದು, ಅಲ್ಲದೇ ನೆಲದಲ್ಲಿ ತೆವಳಿಕೊಂಡು ಹೋದಂತಾದ್ದು, ಸೊಪ್ಪು ದಂಟುಗಳನ್ನು ಪರೀಕ್ಷಿಸಿಯೇ ಅಡುಗೆ ಮಾಡಬೇಕಾಗಿದೆ.

ದಪ್ಪ ಹಾಗೂ ದೊಡ್ಡ ಎಲೆಗಳನ್ನು ನಾಳೆಯ ಪತ್ರೊಡೆಗಾಗಿ ತೆಗೆದಿರಿಸಲಾಯಿತು. ಎಳೆಯ ದಂಟು ಹಾಗೂ ಕುಡಿಎಲೆಗಳು ಇವತ್ತಿನ ಪದಾರ್ಥ ತಯಾರಿಯಲ್ಲಿ ಭಾಗಿಯಾದುವು.

" ಹೌದು, ಏನು ಪದಾರ್ಥ ಹಾಗಿದ್ರೆ? " ಗೌರತ್ತೆಯ ಪ್ರಶ್ನೆ.
" ಸಾಂಬಾರು ಮಾಡಲಿಕ್ಕೆ ಪಚ್ಚೆಸ್ರು ಕಾಳು ಅಥವಾ ಹುರುಳಿಕಾಳು ಹಾಕಿದ್ರೆ ಚೆನ್ನಾಗಿರೋದು, ಯಾವ್ದೂ ಇಲ್ವಲ್ಲ..."
" ಬಸಳೆ ಮೇಲಾರ ಮಾಡು.." ಗೌರತ್ತೆಯ ಸೂಚನೆ, ಅನುಮೋದಿತವೂ ಆಯ್ತು.
" ಹ್ಞೂ, ದೊಡ್ಡದಾದ ತೆಂಗಿನಕಾಯಿ ಇದೆ, ಈಗ ಕಡೆದ ಸಿಹಿ ಮಜ್ಜಿಗೆಯೂ ಇದೆ.. "
ಮೂಲೆಯಿಂದ ಹಸಿ ಅರಸಿಣ, " ನಾನೂ ಇದ್ದೇನೆ.. " ಅಂದಿತು. " ತೆಂಗಿನಕಾಯಿ ಅರೆಯುವಾಗ ಒಂಚೂರು ಅರಸಿಣ ತುಂಡು ಮಾಡಿ ಹಾಕು, ಹಾಗೇ ಆ ತರಕಾರಿ ಬುಟ್ಟಿಯಲ್ಲಿ ದೊಡ್ಡ ಮೆಣಸು ಕಾಣ್ತಾ ಇದೆ, ಅದನ್ನೂ ಹಾಕು.. ಪರೀಮಳ. " ಎಂದರು ಗೌರತ್ತೆ.
" ಹೌದಲ್ವೇ, ಕ್ಯಾಪ್ಸಿಕಂ ಇದ್ರೆ ಮೇಲಾರದ ರುಚಿ ಜಾಸ್ತಿ. "

ಈಗ ಬಸಳೆಯ ಮೇಲಾರ ಮಾಡೋಣ. 

ಪಚ್ಚೆಸ್ರು ಇಲ್ಲದ ಬಾಬ್ತು ಈಗ ಎರಡು ಹಿಡಿ ತೊಗರಿಬೇಳೆ ಬೇಯಿಸೋಣ. ಕುಕ್ಕರ್ ಮೂರು ಸೀಟಿ ಹಾಕಲಿ.

ತದನಂತರ ಹೆಚ್ಚಿಟ್ಟ ಬಸಳೆಯನ್ನು ಹಾಕಿ, ರುಚಿಗೆ ಉಪ್ಪು ಸಹಿತವಾಗಿ ಅದೇ ಕುಕ್ಕರಿನಲ್ಲಿ ಬೆಂದ ತೊಗರಿಯೊಂದಿಗೆ ಬೇಯಿಸುವುದು. ಬಸಳೆ ದಂಟು ನಿಧಾನಗತಿಯಲ್ಲಿ ಬೇಯುವ ವಸ್ತು. ಒಂದು ಸೀಟಿ ಹಾಕಿದ ನಂತರ ಗಂಟೆ ನೋಡುವುದಾದರೆ 15 ನಿಮಿಷ, ಸೀಟಿಯನ್ನೇ ಕೇಳಬೇಕೆಂದಿದ್ದರೆ 7ಸೀಟಿ. ಈ ಥರ ಲೆಕ್ಕಾಚಾರ ಇಟ್ಕೊಳ್ಳಿ.

ಬಸಳೆ ಬೇಯುವುದರ ಒಳಗಾಗಿ ತೆಂಗಿನ ಅರಪ್ಪು ಸಿದ್ಧವಾಗಬೇಕಿದೆ. ದೊಡ್ಡ ತಂಗಿನಕಾಯಿ ಇತ್ತಲ್ಲ, ಅರ್ಧ ಹೋಳು ತೆಂಗಿನ ತುರಿ ಸಾಕು, ತುರಿದಾಯ್ತು.

ಮಗಳು ತಂದಿಟ್ಟ ಮಿಕ್ಸೀ ಇದೆ, " ತುಂಬ ನುಣ್ಣಗೆ ಅರೆದು ಕೊಡುತ್ತೆ.. " ಅಂದಿದ್ಳು. ನೋಡೇ ಬಿಡೋಣ, ಮಜ್ಜಿಗೆಹುಳಿಯ ತೆಂಗಿನಕಾಯಿ ನುಣ್ಣಗಾದಷ್ಟೂ ಚೆನ್ನ.

ತೆಂಗಿನತುರಿ, ಚಿಕ್ಕತುಂಡು ಹಸಿ ಅರಸಿಣ, ಒಂದು ಲೋಟ ಸಿಹಿಮಜ್ಜಿಗೆ ಅರೆಯಲು ಬೇಕಿದ್ದಷ್ಟೇ ಎರೆದು ಅರೆಯುವುದು.

ಬಸಳೆ ಬೆಂದಿದೆ,  
ಗೌರತ್ತೃ ಕ್ಯಾಪ್ಸಿಕಂ ಹೋಳು ಮಾಡಿಟ್ಟಿದ್ರು, 
ಅದನ್ನು ಬೇಯಸಿಟ್ಟ ಬಸಳೆಗ ಬೆರೆಸಿ, 
ಪುನಃ ಗ್ಯಾಸ್ ಉರಿಯ ಮೇಲಿರಿಸುವುದು,
ತೆಂಗಿನ ಅರಪ್ಪು ಕೂಡಿಸಿ,
ಸಾಂದ್ರತೆಯ ಅನುಸಾರ ಮಜ್ಜಿಗೆ ಯಾ ನೀರು ಎರೆಯುವುದು.
ಉಪ್ಪು ಬೇಕಿದ್ದರೆ ಹಾಕುವುದು.
ಬೆಲ್ಲ ಹಾಕುವುದಕ್ಕಿಲ್ಲ.
ಕ್ಯಾಪ್ಸಿಕಂ ಇಲ್ಲದಿದ್ದರೆ ಹಸಿಮೆಣಸು ಸಿಗಿದು ಹಾಕಿ. ಖಾರ ಆಗಬಾರದು, ಮೆಣಸಿನ ಪರಿಮಳ ಬಂದರೆ ಸಾಕು.
ಕುದಿಸಿ, ಒಂದು ಕುದಿ ಬಂದಾಗ ಕೆಳಗಿಳಿಸಿ.
ಕರಿಬೇವಿನ ಒಗ್ಗರಣೆ ಬೀಳಲಿ, ಒಗ್ಗರಣೆಗೆ ಒಂದು ಒಣಮೆಣಸು ಮುರಿದು ಹಾಕಿ.
ಮಜ್ಜಿಗೆ ಹುಳಿ ಖಾರವೂ ಆಗಬಾರದು, ಹುಳಿಯೂ ಇರಬಾರದು, ಸಾರಿನಂತೆ ನೀರು ಎರೆದಂತಿರಬಾರದು. ಪಲ್ಯದಂತೆ ಗಟ್ಟಿಮುದ್ದೆಯೂ ಆಗುವಂತಿಲ್ಲ. ಇವಿಷ್ಟು ಸೂಕ್ಷ್ಮಗಳನ್ನು ಅರಿತರೆ ಮಜ್ಜಿಗೆಹುಳಿಯ ಮರ್ಮ ತಿಳಿದಂತೆ ಎಂದು ತಿಳಿಯಿರಿ.







0 comments:

Post a Comment