Pages

Ads 468x60px

Friday 27 September 2019

ಖಾರಾ ಪೊಂಗಲ್








ಹಿರಣ್ಯದ ನಾಗಬನ ಹಾಗೂ ಶ್ರೀದೇವಿ ದೇವಸ್ಥಾನಗಳಿಗೆ ಹೊಂದಿಕೊಂಡಂತೆ ಇರುವ ಸ್ಥಳದಲ್ಲಿ ಒಂದು ಕೆರೆ, ಇದುವರೆಗೆ ಪೊಟ್ಟು ಕೆರೆ ಆಗಿ ಇದ್ದಿತು.

" ಹೇಗೂ ನಾಗಬನದ ಎದುರುಗಡೆ ಇದೆ, ಸ್ತ್ರೀಯರ ಶೋಕನಾಶಕವಾದ ಅಶೋಕೆಯೂ ಇಲ್ಲಿ ಇರುವುದರಿಂದ ಈ ಕೆರೆಯನ್ನು ಚಂದ ಮಾಡಿದರಾದೀತು, ಈ ಜಾಗಕ್ಕೇ ಒಳ್ಳೆಯ ನೋಟ ಬಂದೀತು... " ಎಂದು ನಮ್ಮ ಮನೆ ಯಜಮಾನರ ಚಿಂತನೆ.

ಹ್ಞೂಗುಟ್ಟಲು ನಮ್ಮ ಬಳಗ ಸಾಕಷ್ಟು ದೊಡ್ಡದಾಗಿಯೇ ಇದೆ. ದೇಗುಲದ ಅನತಿ ದೂರದಲ್ಲಿ ಪರಿವಾರ ದೈವಗಳಿಗೆ ಚಾವಡಿಮನೆಯೂ, ಅಣ್ಣಪ್ಪಪಂಜುರ್ಲಿ ದೈವಗಳ ಕಟ್ಟೆಯೂ ಎದ್ದು ನಿಂತಿವೆ. ದೈವಗಳಿಗೆ ಸಂಧ್ಯಾಕಾಲದಲ್ಲಿ ದೀಪ ಬೆಳಗಿಸಿ ಇಡಬೇಕು. ಅದಕ್ಕಾಗಿ ನಿಯೋಜಿತರಾದವರಿಗೆ ವಾಸ್ತವ್ಯದ ವ್ಯವಸ್ಥೆ, ಆಧುನಿಕ ಪರಿಭಾಷೆಯಲ್ಲಿ ಔಟ್ ಹೌಸ್ ಅನ್ನೋಣ, ಅತ್ಯಾಧುನಿಕ ಸೌಲಭ್ಯಗಳಿಂದ ಕೂಡಿದೆ.

ಇಲ್ಲಿರುವ ವೆಂಕಪ್ಪ ಶೆಟ್ಟಿ, ನುರಿತ ಕೆಲಸಗಾರನೂ ಆಗಿರುವುದರಿಂದ ಕೂಡಲೇ ಕಾರ್ಯತತ್ಪರನಾದ.
" ನೋಡೂ, ನಾಳೆ ಪೊಟ್ಟುಕೆರೆಯ ರಿಪೇರಿಗೆ ಇನ್ನೂ ಇಬ್ಬರು ಬರುತ್ತಾರೆ. ಹತ್ತೂ ಗಂಟೆಗೆ ಚಹಾ ತಿಂಡಿ ಕೊಟ್ಬಿಡು, ಮದ್ಯಾಹ್ನಕ್ಕೆ ಸಾಂಬಾರ್, ಮಜ್ಜಿಗೆ, ಉಪ್ಪಿನಕಾಯಿ ಸಾಕು.. ಕುಚ್ಚುಲಕ್ಕಿ ಅನ್ನ ಅವರೇ ಮಾಡಿಕೊಳ್ತಾರೆ..."

" ಆಯಿತು.. " ನಾನು ಹಿರಣ್ಯ ಮನೆಗೆ ಬಂದಾಗ, ಇವತ್ತಿಗೆ ಅಂದಾಜು ಮೂವತ್ತೈದು ವರ್ಷ ಅಂತಿಟ್ಕೊಳ್ಳಿ, ಆ ಕೆರೆ ಕೆಸರಿನಿಂದ ತುಂಬಿದ್ದರೂ ತಾವರೆಯ ಹೂಗಳು ಅರಳಿ ನಳನಳಿಸುತ್ತ ಇದ್ದದ್ದು ಈಗಲು ಹಸಿರು ನೆನಪು. ಇಂತಹ ಕೆರೆಗೆ ಕಾಯಕಲ್ಪವಾಗಲಿದೆ ಎಂದಾಗ ಮನ ತುಂಬಿ ಬಂದಿತು, ಹೊಸ ಹುರುಪಿನಿಂದ ನನ್ನ ಅಡುಗೆಯ ಸಿದ್ಧತೆ ಆರಂಭ ಆಯ್ತು.

ಏನಾಯ್ತಪಾ ಅಂದ್ರೆ ಅಡುಗೆಯ ಪ್ರಮಾಣ ಹೆಚ್ಚಾಗಿ ಅನ್ನ ಉಳಿಯಿತು.
ನಾಳೆ ಈ ಉಳಿದ ಅನ್ನದ ಚಿತ್ರಾನ್ನ ಮಾಡೂದು, ಬೇಕಿದ್ದರೆ ಮಸಾಲೆ ಅವಲಕ್ಕೀ, ಬಾಳೆಹಣ್ಣು.. ಹತ್ತು ಗಂಟೆಯ ಚಹಾದೊಂದಿಗೂ ಸಾಕಾಗುವಂತೆ ಮಾಡಬೇಕಿದೆ, ಇರಲಿ ಎಂದು ಮಲಗುವ ಮೊದಲು ಒಂದು ಲೋಟ ಪಚ್ಚೆಸ್ರುಕಾಳು ನೀರೆರೆದು ಇಟ್ಟೆ.

" ಏನಾಯ್ತೂ ಹೆಸ್ರುಕಾಳು? "
ರುಚಿಗೆ ಉಪ್ಪು ಸಹಿತವಾಗಿ ಕುಕ್ಕರಿನಲ್ಲಿ ತುಂಬಿಸಿ, ನೀರೆರೆದು ಎರಡು ಸೀಟಿ ಕೂಗಿಸಿದ್ದಾಯ್ತು.
ನನ್ನ ಇಲೆಕ್ಟ್ರಿಕ್ ರೈಸ್ ಕುಕ್ಕರಿನಲ್ಲಿ ಉಳಿದ ಅನ್ನ ಸಾಕಷ್ಟು ಇತ್ತು, ಚೆನ್ನಾಗಿಯೇ ಇತ್ತು ಅನ್ನಿ.

ತೆಂಗಿನಕಾಯಿ ತುರಿಯಿರಿ.
ನಾಲ್ಕಾರು ಹಸಿಮೆಣಸು ಸಿಗಿಯಿರಿ.
ಶುಂಠಿ, ಸಿಪ್ಪೆ ಹೆರೆದು, ಚಿಕ್ಕದಾಗಿ ಹೆಚ್ಚಿರಿ.
ಕೊತ್ತಂಬರಿ ಸೊಪ್ಪು ಕತ್ತರಿಸಿ.
ಕರಿಬೇವು ಸಿದ್ಧಪಡಿಸಿ,

ಬಾಣಲೆಯಲ್ಲಿ ನಾಲ್ಕು ಚಮಚ ತೆಂಗಿನೆಣ್ಣೆ ಎರೆದು ಒಲೆಯ ಮೇಲಿರಿಸಿ,
ಸಾಸಿವೆ ಸಿಡಿದಾಗ,
ಮೇಲೆ ಸಿದ್ಧಪಡಿಸಿದಂತಹ ಸಾಹಿತ್ಯಗಳನ್ನು ಹಾಕುತ್ತ ಬನ್ನಿ.

ಕುಕ್ಕರಿನಲ್ಲಿರುವ ಪಚ್ಚೆಸ್ರು ಬೆಂದಿದೆ, ನೀರು ಬಸಿಯಿರಿ. ಚೆಲ್ಲದಿರಿ, ಮಧ್ಯಾಹ್ನದ ಅಡುಗೆಗೆ ಬಳಸಿರಿ.
ಹೆಸ್ರುಕಾಳನ್ನು ಕೊತ್ತಂಬರಿ ಸೊಪ್ಪು ಕೂಡಿ ಅನ್ನವನ್ನೂ ಸುರಿಯಿರಿ.
ರುಚಿಗಾಗಿ ಉಪ್ಪಿನ ಹುಡಿ, ಬೇಕಿದ್ದರೆ ಸಕ್ಕರೆ ಯಾ ಬೆಲ್ಲ ಹಾಕಬಹುದು.
ತುಸು ತೆಂಗಿನತುರಿ ಹಾಕಲೇಬೇಕು, ಸೌಟಾಡಿಸಿ, ಕೆದಕಿ ಬಿಸಿಯೇರುವಷ್ಟು ಹೊತ್ತು ಉರಿಯಲ್ಲಿ ಮುಚ್ಚಿ ಇಡಬೇಕು, ನಂತರ ಕೆಳಗಿಳಿಸಿ ಬಿಸಿ ಕಾಫಿಯೊಂದಿಗೆ ಹಾಯಾಗಿ ತಿನ್ನುತ್ತಿರಬೇಕು.
ಆ ವೇಳೆಗೆ ಬೆಂಗಳೂರಿಂದ ಫೋನ್ ಬರಬೇಕು.
" ತಿಂಡಿ ಆಯ್ತಾ.."
" ಆಯ್ತು ನೋಡು, ಮಾಡಿದ್ದು ಹೇಗೆ ಗೊತ್ತುಂಟೋ.. " ವರದಿ ಒಪ್ಪಿಸಲೇ ಬೇಕು.
" ಓ, ಖಾರಾ ಪೊಂಗಲ್ ! ನಂಗೆ ತುಂಬ ಇಷ್ಟ.. "



ಬ್ಲಾಗ್ ಓದುಗರಿಗೆ ನವರಾತ್ರಿಯ ಶುಭಾಶಯಗಳು, ಶ್ರೀದೇವಿಯ ಕರುಣೆ ಸದಾ ನಮ್ಮೊಂದಿಗಿರಲಿ.

0 comments:

Post a Comment