ಸಂಕ್ರಾಂತಿಯ ದಿನ ಹತ್ತಿರವಾದಂತೆ ತೋಟದಿಂದ ಬಾಳೆಗೊನೆಗಳನ್ನು ಕಡಿದಿರಿಸಬೇಕಾಗಿದೆ. ಹಿರಣ್ಯ ದುರ್ಗಾಪರಮೇಶ್ವರಿಯ ಪೂಜಾದಿನ, ಊರ ಪರವೂರ ಭಕ್ತಾದಿಗಳ ಸೇವೆ, ಹರಕೆಗಳಿಗೆ ದೇವಿ ಓಗೊಟ್ಟು ಬೇಡಿಕೆಗಳಿಗೆ ಪ್ರತಿಸ್ಪಂದನೆ ಸಿಗಲು ಮುಂಜಾನೆಯಿಂದ ರಾತ್ರಿಯ ತನಕ ಪೂಜಾಕೈಂಕರ್ಯ.
ನಾನೇನೂ ಕತ್ತಿ ಹಿಡಿದು ಬಾಳೆಯ ತೋಟಕ್ಕೆ ಹೋಗಬೇಕಾದ್ದಿಲ್ಲ. ಅದರ ಉಸ್ತುವಾರಿಯ ಹೊಣೆ ರಘು ತನ್ನದಾಗಿಸಿಕೊಂಡಿದ್ದಾನೆ, ರಘು ಬಂದ. " ಅಕ್ಕ, ಕತ್ತಿ ಕೊಡಿ, ಹಾಗೇ ಎರಡು ಊದುಬತ್ತಿ, ಬೆಂಕೆಪೆಟ್ಟಿಗೆ.. "
ಊದುಬತ್ತಿ ಹಚ್ಚಿಟ್ಟು, ಕಟಾರದೊಳಗೆ ಬಾಳೆಗೊನೆಗಳನ್ನು ಇಟ್ರೆ ಮುಗೀತು, ಎರಡೇ ದಿನದಲ್ಲಿ ಹಣ್ಣುಗಳು ಲಭ್ಯ.
" ಹೌದೂ, ಬಾಳೆಗೊನೆ ಕಡಿದು ಪೂಂಬೆ ಅಲ್ಲೇ ಬಿಸಾಡಿ ಬರಬೇಡ, ಚಟ್ಟಣಿ ಮಾಡಲಿಕ್ಕೆ ತಾ... "
ಮೂರು ಪೂಂಬೆಗಳು ಬಂದುವು. ಪೂಂಬೆ ಅಂದ್ರೇನಪಾ ಎಂದು ತಲೆ ತುರಿಸ್ಕೋ ಬೇಡಿ. ನಮ್ಮ ಆಡು ಭಾಷೆ ತುಳುವಿನಲ್ಲಿ ಬಾಳೆಹೂವನ್ನು ಪೂಂಬೆ ಅನ್ನುವ ವಾಡಿಕೆ. ಕನ್ನಡದಲ್ಲಿ ಕುಂಡಿಗೆ ಅಂತಲೂ, ಬಾಳೆ ಮೋತೆ ಎಂದೂ ಹೆಸರು ಸಿಗುತ್ತದೆ. ಉಳಿದಂತೆ ಬಾಳೆಹೂವು ಅಂದರಾಯಿತು. ಬಾಳೆ ಹೂ ಅಂದ್ರೆ ಅಲಂಕಾರಿಕ ಸಸ್ಯವರ್ಗವೂ ಇದೆ. ನಮ್ಮ ಅಡುಗೆಗೆ ಬೇಕಾಗಿರೋದು ಬಾಳೆಗೊನೆಯ ತುದಿಯಲ್ಲಿ ನೇತಾಡುತ್ತಿರುವ ಹೂವು.
ಬಂದ ಕುಂಡಿಗೆಗಳಲ್ಲಿ ಒಂದು ಪುಟ್ಟದು, ಕೆಂಬಣ್ಣದ ಎಸಳುಗಳೆಲ್ಲ ಉದುರಿ, ಬೆಳ್ಳಗಿನ ತಿರುಳು ಮಾತ್ರ ಉಳಿದಿತ್ತು. ನಮಗೆ ಬೇಕಾಗಿರೋದೂ ಇದೇ, ಚಿಕ್ಕದಾಗಿ ಹೆಚ್ಚಿ, ಸ್ವಲ್ಪವೇ ನೀರಿನಲ್ಲಿ ಕುಕರ್ ಒಂದು ಸೀಟಿ ಹಾಕುವಲ್ಲಿಗೆ ಬೆಂದಿತು. ರುಚಿಗೆ ಉಪ್ಪು ಹಾಗೂ ಚಿಟಿಕೆ ಅರಸಿಣ ಬೇಯುವಾಗಲೇ ಹಾಕಲು ಮರೆಯಬಾರದು.
ಎರಡು ಚಮಚ ಕಾಯಿತುರಿ ತುಸು ಜೀರಿಗೆಯೊಂದಿಗೆ ಅರೆಯಲ್ಪಟ್ಟಿತು. ನೀರು ಎರೆಯದಿರಿ. ನಮ್ಮಅಡುಗೆಯೋ ಲಘುಪ್ರಮಾಣದ್ದು. ತೆಂಗಿನ ಮಸಾಲೆ ಬೆರೆಸಿ, ಒಂದು ಸೌಟು ಮೊಸರು ಎರೆದು, ಒಗ್ಗರಣೆಯ ಸಾಸಿವೆಕಾಳು ಉದುರಿಸುವಲ್ಲಿಗೆ ಮೊಸರುಗೊಜ್ಜು ಸಿದ್ಧ. ಬೆಂಗಳೂರಿಗರು ಇಂತಹ ಹಸಿ ಅಡುಗೆಯನ್ನು ಬಾಳೆಹೂವಿನ ರಾಯಿತ ಅನ್ನಿರಿ, ನಮ್ಮದೇನೂ ಅಡ್ಡಿಯಿಲ್ಲ. ಬೇಸಿಗೆಯ ತಾಪವನ್ನು ಎದುರಿಸಲು ಇಂತಹ ಗೊಜ್ಜಡುಗೆಗಳೂ ನಮಗೆ ತಿಳಿದಿರಬೇಕು. ಅರೆಯುವಾಗ ಸಾಸಿವೆ, ಹೆಚ್ಚೇನೂ ಬೇಡ, ಹತ್ತು ಕಾಳು ಸಾಕು, ಹಾಕಿಕೊಂಡು ಅರೆದರೆ ಸಾಸಮೆ ಆಯ್ತು. ಅಲ್ಪಸ್ವಲ್ಪ ವ್ಯತ್ಯಾಸದಲ್ಲಿ ಅಡುಗೆಯಲ್ಲಿ ಭಿನ್ನತೆ ತರುವುದು ನಮ್ಮಕೈಯಲ್ಲಿದೆ.
ಮಾರನೇ ದಿನವೂ ಇದೇ ಮಾದರಿಯಲ್ಲಿ ಇನ್ನೊಂದು ಪೂಂಬೆಯ ಗೊಜ್ಜು ಎದ್ದು ಬಂದಿತು. ತೆಂಗಿನತುರಿ ಅರೆಯುವಾಗ ಮಾವಿನಶುಂಠಿ ಹಾಗೂ ಹಸಿಮೆಣಸು ಕೂಡಿದುದರಲ್ಲಿ ಹೊಸರುಚಿ ದೊರೆಯಿತು.
ಇನ್ನೂ ಒಂದು ಪೂಂಬೆ ಇದೆ. ದೋಸೆ ಆಗುತ್ತೇಂತ ಗಾಯತ್ರಿ ಹೇಳಿದ್ದು ನೆನಪಾಯ್ತು. ಅವಳಿಗೊಂದು ಫೋನಿನ ಗಂಟೆ ಬಾರಿಸಿ ಕೇಳಿ ದೋಸೆ ಮಾಡುವ ಅಂದಾಜು, ಏನಂತೀರಾ?
ದೋಸೆ ರುಚಿರುಚಿಯಾದ್ರೆ ಇಲ್ಲಿಗೂ ಬರುತ್ತೆ ಅಲ್ವೇ..
0 comments:
Post a Comment