Pages

Ads 468x60px

Tuesday 5 February 2013

ಬದನೇ ಹುಳಿ






ಅದ್ಯಾಕೋ ಬದನೆ ನನಗೆ ಸೇರುತ್ತಾ ಇರಲಿಲ್ಲ. ಅಮ್ಮ ಬದನೆಹುಳಿ ಮಾಡಿದ ದಿನ ನನಗೊಂದು ಟೊಮ್ಯಾಟೋ ಸಾರು ಮಾಡಿ ಹಾಕ್ತಿದ್ದರು. ಉಳಿದವರೆಲ್ಲ ಬದನೆ ವೈವಿಧ್ಯಗಳನ್ನು ತಿಂದು ಬಾಯಿ ಚಪ್ಪರಿಸುತ್ತಿದ್ದರೆ " ಛೀ, ಥೂ, ನಂಗೆ ಬೇಡಾ " ಅನ್ನುತ್ತಿರಬೇಕಾದರೆ ಬಾಲ್ಯ ಕಳೆದು ಯುವತಿಯಾಗಿ, ಮದುವೆಯಾಗಿ ಅತ್ತೆಮನೆಗೆ ಬಂದೆ.

ನನ್ನ ಮಾವ ಬದನೆ ಪ್ರಿಯರು. ಮನೆಯಂಗಳದಲ್ಲಿ ನೆಟ್ಟು, ತಾವೂ ತಿಂದು ಉಳಿದವರಿಗೂ ಹಂಚುವ ಸ್ವಭಾವದವರು. ಒಮ್ಮೆ ಪುತ್ತೂರಿನಿಂದ ಬರುತ್ತಿರಬೇಕಾದರೆ ಸಂತೆಯಲ್ಲಿ ಗುಳ್ಳಬದನೆ ಕಂಡು ಚೀಲ ತುಂಬಾ ಹೊತ್ತು ತಂದರು. ಹೊಸ ಸೊಸೆಯಾಗಿ ಬಂದಿದ್ದ ನಾನು " ಈ ಬದನೆ ಏಕೆ ತಂದಿರಿ " ಎಂದು ಕೇಳಲುಂಟೇ ? ಮಾತನಾಡದೇ ಸಾಂಬಾರು ಮಾಡಬೇಕಾಯಿತು. ಒಗ್ಗದ ತರಕಾರಿ, ಹಾಗೂ ಹೀಗೂ ಕತ್ತರಿಸಿ, ಏನೋ ಮಸಾಲೆ ಹುರಿದು, ಕಾಯಿತುರಿಯೊಂದಿಗೆ ಅರೆದು ' ಸಾಂಬಾರಾಯಿತು ' ಅನ್ನಿಸಿ ಊಟಕ್ಕೆ ಸಿದ್ಧ ಪಡಿಸಿ ಆಯ್ತು. ಅವರ ಬಾಯಿರುಚಿಗೆ ಹಿತವಾಗುವಂತೆ ಆಗಿರಲಿಲ್ಲ ಆ ದಿನದ ಹುಳಿ. ಹೇಗೋ ತಿಂದರು ಪಾಪ...

ನಾನೇ ಮಾಡಿದ ಹುಳಿಯನ್ನು ನಿರ್ವಾಹವಿಲ್ಲದೆ ತಿನ್ನಬೇಕಾಯಿತು. ನನ್ನದೂ ಊಟವಾದ ಮೇಲೆ ಕೆಲಸದಾಕೆ ಕಲ್ಯಾಣಿಗೂ ಊಟ ಬಡಿಸುತ್ತಾ, ಈ ತರಕಾರಿ ತಿನ್ನುವುದೇ ಇಲ್ಲವೆಂದು ಆಕೆಗೆ ಹೇಳಿದ್ದು ಮಾವನವರ ಕಿವಿಗೂ ಬಿತ್ತು. ನಾನೇ ತಯಾರಿಸಿದ ಬದನೆಹುಳಿಯನ್ನು ಯಾವಾಗ ತಿಂದೆನೋ ಆಗಲೇ ನನ್ನೊಳಗಿದ್ದ ಅದೇನೋ ತಪ್ಪುಕಲ್ಪನೆ ಹೋಗಿ ಬಿಟ್ಟಿತು. ಬದನೇಕೃಷಿಯಲ್ಲಿ ನಾನೂ ತೊಡಗಿಸಿಕೊಂಡು ವರ್ಷಪೂರ್ತಿ ಬದನೇಹುಳಿ ತಿಂದು ತೇಗಿದ್ದೇ ತೇಗಿದ್ದು.


<><><> <><><> <><><>


ಮಳೆಗಾಲ ಆರಂಭವಾಗುತ್ತಿದ್ದ ಹಾಗೇ ಬದನೇ ಗಿಡಗಳ ಅವಲೋಕನ. ಒಮ್ಮೆ ಫಲರಹಿತ ಗೆಲ್ಲುಗಳನ್ನು ಕತ್ತರಿಸಿ, ಬುಡಕ್ಕೆ ಸ್ವಲ್ಪ ನೈಸರ್ಗಿಕ ಗೊಬ್ಬರ ಹಾಕಿ ಬಿಟ್ಟರೆ ಸೈ, ದೊಡ್ಡ ಗಾತ್ರದ ಬದನೆ ಫಸಲು ನಿಶ್ಚಿತ.
ಅರೆ, ತನ್ನ ಪಾಡಿಗೆ ಹೊಸ ಗಿಡ ಈ ಗುಳ್ಳಬದನೆ ಸಾಲಿನಲ್ಲಿ ತಲೆಯೆತ್ತುತ್ತಾ ಇದೆ, ಯಾರು ಬೀಜ ಬಿತ್ತಿದವರು ? ಇರಲಿ, ನೋಡಿಕೊಳ್ಳೋಣ, ಬಹುಶಃ ಕುದನೆಯಿರಬೇಕು. ಮನಸ್ಸಿನಲ್ಲೇ ಮಂಥನ. ಅತ್ತೆಯವರಿದ್ದಾಗ ಕುದನೆಕಾಯಿ ಸಾರು, ಗೊಜ್ಜು ತಿಂದಿದ್ದೇ ಬಂತು.

ಗಿಡ ನಿರಾತಂಕವಾಗಿ ದೊಡ್ಡದಾಯಿತು. ಬದನೆಹೂವಿನಂತಹ ಬಿಡಿ ಬಿಡಿ ಹೂಗಳು ಅರಳಿದವು. ಕಾಯಿ ಮೂಡಿತೇ, ಕಾಣಬೇಕಲ್ಲ, ಗೆಲ್ಲು ಎತ್ತಿ ನೋಡೋಣಾಂದ್ರೆ ಮುಳ್ಳಿನ ಮಾರಿ. ಎಲೆಯೂ ಮುಳ್ಳು. ಏನೋ ಸಂದೇಹ, ಇದ್ಯಾವ ಕಾಯಿ?

ದೊಡ್ಡ ನೆಲ್ಲಿಕಾಯಿ ಗಾತ್ರದ ಕಾಯಿಗಳು ಕಂಡ ಕೂಡಲೇ ಒಂದು ಫೋಟೋ ನಮ್ಮ Agriculturist ಗುಂಪಿನ ಸ್ನೇಹಿತರಿದ್ದಲ್ಲಿಗೆ ಹೋಯಿತು. ಕ್ಷಣ ಮಾತ್ರದಲ್ಲಿ ಉತ್ತರವೂ ದೊರೆಯಿತು.




" ಇದು ಕುದನೆಯಲ್ಲ, ಉಮಿಗುಳ್ಳ "

" ಉಪಯೋಗಿಸಬಹುದೇ ?"

" ರುಚಿಕರವಾದ ಅಡುಗೆ ಮಾಡಬಹುದು "

" ನಮ್ಮ ಬೆಂಗಳೂರು ರಸ್ತೆ ಪಕ್ಕದಲ್ಲಿ ಈ ಗಿಡಗಳೇ ಇರೂದು, ನಾವು ಮೊನ್ನೆ ಬೋಳುಹುಳೀ ಮಾಡಿ ತಿಂದೆವು "

ಅಬ್ಬ, ಧೈರ್ಯ ಬಂದಿತು.

" ಹಣ್ಣಾದಾಗ ಹಳದೀ ಬಣ್ಣ ಬರುವಂತಾದ್ದು ಮಾತ್ರ ತಿನ್ನಬಹುದು " ಇನ್ನೊಬ್ಬರು ಎಚ್ಚರಿಕೆಯ ಗಂಟೆ ಹೊಡೆದರು.

ಮೊದಲನೇ ಪ್ರಯತ್ನವಾಗಿ ಗೊಜ್ಜು ತಯಾರಾಯಿತು. ತುಸು ಕಹಿ ರುಚಿ. ಇನ್ನೊಮ್ಮೆ ಮಾಡುವಾಗ ಅಚ್ಚುಕಟ್ಟಾಗಿ ಬೀಜಗಳನ್ನು ತೆಗೆದು ಮೆಣಸ್ಕಾಯಿ ಪ್ರಯೋಗ ನಡೆಯಿತು. ಏನೂ ತೊಂದರೆಯಿಲ್ಲ, ಹುಳಿಮೆಣಸು ಕೂಡಾ ಮಾಡಬಹುದು.

ಅಪ್ಪಟ ಭಾರತೀಯ ಸಸ್ಯವಾಗಿರುವ ಬದನೆಯಲ್ಲಿ ಲೆಕ್ಕವಿಲ್ಲದಷ್ಟು ಪ್ರಬೇಧಗಳಿವೆ. ಕಾಡುಸಸ್ಯದ ಬದನೆ ಜಾತಿಯಲ್ಲಿ ವೈದ್ಯಕೀಯ ಗುಣಧರ್ಮಗಳೂ ಇವೆ. ಉಮಿಗುಳ್ಳವೂ ಅಂತಹ ಒಂದು ವಿಶಿಷ್ಟ ಸಸ್ಯ. ಕೆಲವು ಧಾರ್ಮಿಕ ವಿಧಿಗಳಲ್ಲೂ ಇದರ ಬಳಕೆ ಸಾಮಾನ್ಯ.

ಉಮಿಗುಳ್ಳದ ಕಥೆ ಹಾಗಿರಲಿ, ಈಗ ಬಿಟಿ ಬದನೆ ಎಂಬ ಆಧುನಿಕ ತಂತ್ರಜ್ಞಾನದ ಬದನೆ ಬರಲಿದೆಯಂತೆ. ಅದನ್ನು ತಿನ್ನುವುದು ಹೇಗೇ ಎಂದು ಸಂಶೋಧನೆ ಮಾಡುವುದು ಒತ್ತಟ್ಟಿಗಿರಲಿ, ಯಾಕೋ ಗೊತ್ತಿಲ್ಲ, ನಮ್ಮ ದೇಸೀ ತಳಿಗಳನ್ನು ನಿರ್ನಾಮ ಮಾಡಲಿದೆಯಂತೆ, ತಿಂದೋರಿಗೂ ಸುಖವಿಲ್ಲವಂತೆ, ಬೆಳೆದೋನ ಪಾಡು ದೇವರಿಗೇ ಪ್ರೀತಿಯಂತೆ, ಹಾಗಂತೆ, ಹೀಗಂತೆ..... ನಮ್ಮ ಸರ್ಕಾರೀ ಕೃಷಿ ಮಂತ್ರಿಗಳಿಗೆ ಆಗೊಮ್ಮೆ ಈಗೊಮ್ಮೆ ಹೇಳಿಕೆ ಕೊಡುವ ಅಭ್ಯಾಸ, ಕೃಷಿ ಪಂಡಿತರಿಗೆ ಈ ಹೇಳಿಕೆಗಳನ್ನು ವಿರೋಧಿಸುವ ಅಭ್ಯಾಸ. ಹೌದೂ, ನನಗೂ ಒಂದು ಸಂದೇಹ, ನಮ್ಮ ದೇಸೀಯ ಕಾಡುಸಸ್ಯವಾಗಿದ್ದ ಈ ಬದನೆಯನ್ನು ನಾಡತಳಿಯಾಗಿಸಿದ್ದು ಯಾರು? ನಾವೇ ಅಲ್ಲವೇ, ಗುಳ್ಳಬದನೆಯ ಆವಿಷ್ಕಾರ ನಮ್ಮ ಯತಿಶ್ರೇಷ್ಠರದ್ದೇ. ಯಾರು ಏನೇ ಅನ್ನಲಿ, ನಾವು ಬದನೇ ಹುಳಿ ತಿನ್ನೋಣ.




Posted via DraftCraft app

0 comments:

Post a Comment