ಹೊಸ ಸಂವತ್ಸರದ ಆಗಮನವೆಂದರೆ ಚೈತ್ರಮಾಸ, ಎಲೆ ಉದುರಿಸಿ ಬೋಳು ಬೋಳಾದ ನಮ್ಮ ಅಂಬಟೆ ಮರದಲ್ಲೂ ಚಿಗುರು ತುಂಬಿ, ಹೂವರಳಿ ನಳನಳಿಸುತ್ತಿರುವ ದೃಶ್ಯ. ಪ್ರತಿ ವರ್ಷವೂ ಮಾಮೂಲಿ ಅಂತೀರಾ, ಈ ಬಾರಿ ಮಾವಿನಕಾಯಿಗಳು ಸಾಕಷ್ಟು ಸಿಕ್ಕಿಲ್ಲ, " ಉಪ್ಪಿನಕಾಯಿಯ ಆಸೆ ಬಿಟ್ಬಿಡು. " ಅಂದಿದ್ದಾರೆ ನಮ್ಮೆಜಮಾನ್ರು. ಅಂಬಟೆ ಮಿಡಿಯಾಗಿ ಸಿಗಲಿಕ್ಕೆ ಇನ್ನೂ ಒಂದೆರಡು ತಿಂಗಳಾದ್ರೂ ಬೇಕು. ಅಲ್ಲಿಯವರೆಗೆ ಊಟದೊಂದಿಗೆ ನಂಜಿಕೊಳ್ಳಲು ಚಟ್ಣಿಯೇ ಗತಿ. ಹೇಗೂ ದಿನನಿತ್ಯ ತೆಂಗಿನಕಾಯಿ ಒಡೆದೇ ಸಿದ್ಧವಾಗುವ ಅಡುಗೆ ನಮ್ಮದು, ಅದರಲ್ಲೇ ಒಂದು ಚಟ್ಣಿ ಹೊಂದಿಸಲಿಕ್ಕೆ ಕಷ್ಟವೇನಿಲ್ಲ.
ಈ ದಿನ ಏನು ಚಟ್ಣಿ ಮಾಡಲೀ ಎಂಬ ಗಹನ ಚಿಂತನೆಯೊಂದಿಗೆ ತೊಂಡೆ ಚಪ್ಪರದಿಂದ ಸಿಕ್ಕಿದಷ್ಟು ತೊಂಡೆಕಾಯಿಗಳನ್ನು ಕೊಯ್ಯುತ್ತಿದ್ದಾಗ ನಾಲ್ಕಾರು ಕರಿಬೇವಿನೆಸಳು, ಗಾಂಧಾರಿ ಮೆಣಸುಗಳೂ ಬುಟ್ಟಿಯೊಳಗೆ ಬಿದ್ದವು. ಗಾಳಿ ಬೀಸಿದ್ರೆ ಸಾಕು, ನೆಲ ತುಂಬ ಅಂಬಟೆ ಮರದಿಂದ ಉದುರಿದ ಹೂಗಳು! ಚಿಕ್ಕ ಪುಟ್ಟ ಹೂಗೊಂಚಲುಗಳು... ಒಂದು ಹೂಗೊಂಚಲನ್ನು ಆರಿಸಿ ತೆಗೆದು ಬಾಯೊಳಗಿಟ್ರೆ ಅಂಬಟೆಯ ಸಿಹಿ-ಹುಳಿ ರುಚಿ, ವಾಹ್, ಅಂಬಟೆಯ ಪರಿಮಳ! ಅಲ್ಲೊಂದು ಪುಟ್ಟ ಅಂಬಟೆ ಸಸಿ ನೆಲದಿಂದ ಮೇಲೇಳುತ್ತಿದೆ. ಎಳೆಯ ಚಿಗುರೆಲೆಗಳು ಚಟ್ಣಿಗೆ ಲಾಯಕ್ಕು.
ತೆಂಗಿನ ತುರಿ, ಅಂಬಟೆಯ ಚಿಗುರೆಲೆಗಳು, ಗಾಂಧಾರಿ ಮೆಣಸು, ರುಚಿಗೆ ಉಪ್ಪು ಸಹಿತವಾಗಿ ಅರೆಯಲಾಗಿ, ಒಗ್ಗರಣೆಯೂ ಕೂಡಿಕೊಳ್ಳಲಾಗಿ ಚಟ್ಣಿ ಸಿದ್ಧವಾಯಿತು.
ಅಂಬಟೆಯ ಚಿಗುರೆಲೆಗಳು ತಂಬುಳಿಗೂ ಯೋಗ್ಯವಾಗಿವೆ. ರಣ ಬೇಸಿಗೆಯಲ್ವೇ, ಊಟದಲ್ಲಿ ವೈವಿಧ್ಯ ಇದ್ರೇನೇ ಸೊಗಸು.
" ಹೌದೂ, ತಂಬುಳಿಗೂ ಚಟ್ಣಿಗೂ ವ್ಯತ್ಯಾಸವೇನು? "
ತಂಬುಳಿಗೆ ಗಾಂಧಾರಿ ಮೆಣಸು ಹಾಕುವಂತಿಲ್ಲ, ಯಾತಕ್ಕೇಂದ್ರೆ ಇದು ತಂಪು ಹುಳಿ. ಚಿಗುರೆಲೆಗಳನ್ನು ತುಸು ತುಪ್ಪದ ಪಸೆಯಲ್ಲಿ ಹಸಿವಾಸನೆ ಹೋಗುವಂತೆ ಬಾಡಿಸಿಕೊಳ್ಳಬೇಕಾಗುತ್ತದೆ. ಸಿಹಿಮಜ್ಜಿಗೆ ಇಲ್ಲದೆ ತಂಬುಳಿ ಆಗದು. ತೆಂಗಿನ ತುರಿಯೊಂದಿಗೆ ಜೀರಿಗೆ ಯಾ ಕಾಳುಮೆಣಸು ಕೂಡಿ ಅರೆಯಬೇಕಾಗುತ್ತದೆ. ಕಾಳುಮೆಣಸು ಎಂಬ ಹೆಸರಿದ್ದರೂ ಈ ಮೆಣಸು ಶರೀರಕ್ಕೆ ತಂಪು. ತೆಳ್ಳಗೆ ಸಾರಿನಂತೆ ನೀರು ನೀರಾದ ತಂಬುಳಿ ಸೆಕೆಗಾಲದ ಊಟಕ್ಕೆ ಸೊಗಸು.
0 comments:
Post a Comment