ನೆರೆಮನೆಯ ಪ್ರೇಮಕ್ಕ ತನ್ನ ರಬ್ಬರು ತೋಟದ ಸರ್ವೇ ಮುಗಿಸಿ ನಮ್ಮ ಮನೆಯಂಗಳಕ್ಕೆ ಬಂದರು. ಅದೂ ಇದೂ ಮಾತನಾಡುತ್ತ, "ನಿನ್ನ ಹಾಗಲಬಳ್ಳಿಯಲ್ಲಿ ಹಾಗಲಕಾೖ ಉಂಟಲ್ಲ! "
" ಅಯ್ಯೋ, ಅದು ಇನ್ನೂ ಬೆಳೆದಿಲ್ಲ, ಚೆನ್ನಪ್ಪ ಬರಲಿ, ಕೊಯ್ದು ತರ್ತಾನೆ ಬಿಡು. "
" ಸರಿ, ಹಾಗೇ ಮಾಡು, ' ಉತ್ಥಾನ ' ಇದ್ರೆ ಕೊಡು. " ಉತ್ಥಾನ ಪತ್ರಿಕೆಯ ಪ್ರತಿಯೊಂದಿಗೆ ಪ್ರೇಮಕ್ಕನ ಸವಾರಿ ತೆರಳಿತು.
ಚೆನ್ನಪ್ಪ ಯಾಕೋ ನಾಲ್ಕಾರು ದಿನ ಬರಲಿಲ್ಲ, ನನಗೂ ಹಾಗಲಕಾಯಿ ಕೊಯ್ಯಲಿಕ್ಕೆ ನೆನಪಾಗಲಿಲ್ಲ. ಅವನು ಬಂದಾಗ ಹಣ್ಣು ಹಾಗಲ ಕೊಯ್ಯುವಂತಾಯಿತು.
" ಕಾಯಿ ಇದ್ದಾಗಲೇ ಕೊಯ್ಯಬೇಕಿತ್ತು.. "
" ತೊಂದರೆಯಿಲ್ಲ, ಹಣ್ಣು ಹಾಗಲವನ್ನೂ ಪದಾರ್ಥ ಮಾಡಲಿಕ್ಕೆ ಬರುತ್ತದೆ. "
ನಮ್ಮ ಈ ದಿನದ ಅಡುಗೆ ಹಣ್ಣು ಹಾಗಲದಿಂದ ಮಾಡುವವರಿದ್ದೇವೆ.
ಮುಂದಿನ ಬೆಳೆಗಾಗಿ ಹಾಗಲದ ಬೀಜಗಳನ್ನು ತೆಗೆದಿರಿಸಿದ್ದಾಯ್ತು.
ಹಾಗಲವನ್ನು ಚಿಕ್ಕದಾಗಿ ಕತ್ತರಿಸಿಟ್ಟು ತುಸು ಪುಡಿಯುಪ್ಪು ಬೆರೆಸಿ ಇಡುವುದು.
2 ನೀರುಳ್ಳಿ, 2 ಹಸಿಮೆಣಸು ಕೊಚ್ಚಿ ಇಟ್ಟು, ಉಪ್ಪು ನೀರಿನೊಂದಿಗೆ ಕಹಿಯೂ ಇಳಿದುಹೋಗುವಂತೆ ಹಾಗಲದ ಚೂರುಗಳನ್ನು ಅಂಗೈಯಲ್ಲಿ ಹಿಂಡುವುದು ಉತ್ತಮ. ತಪಲೆಗೆ ಈ ಎಲ್ಲ ಸಾಮಗ್ರಿಗಳನ್ನು ಹಾಕಿಕೊಂಡು ತುಸು ನೀರೆರೆದು ಬೇಯಿಸಿ.
ರುಚಿಕರವಾಗಲು ಹುಣಸೇ ಹಣ್ಣಿನ ರಸ, ಬೆಲ್ಲ ಹಾಗೂ ಉಪ್ಪು ಸೇರಿಸುವ ಅಗತ್ಯವಿದೆ. ಈಗ ಇದು ಹಾಗಲ ಗೊಜ್ಜು ಎನ್ನುವ ಹಂತಕ್ಕೆ ಬಂದಿದೆ, ಬೇಕಿದ್ದರೆ ಒಂದು ಒಗ್ಗರಣೆ ಕೊಟ್ಟರಾಯಿತು.
ಗೊಜ್ಜು ಆಯ್ತಲ್ಲ, ಈಗ ಇದನ್ನು ರಸಂ ಆಗಿ ಪರಿವರ್ತಿಸೋಣ.
ರಸಂ ಯಾ ಸಾಂಬಾರು ಅನ್ನಿಸಬೇಕಾದರೆ ತೊಗರಿಬೇಳೆ ಅವಶ್ಯ. ಒಂದು ಹಿಡಿ ತೊಗರಿಬೇಳೆ ಬೇಯಿಸಿ.
ಅರ್ಧ ಕಡಿ ಕಾಯಿ ತುರಿಯಿರಿ.
5 - 6 ಒಣಮೆಣಸು
2 ಚಮಚ ಕೊತ್ತಂಬರಿ
ಒಂದು ಚಮಚ ಉದ್ದಿನಬೇಳೆ
ಪುಟ್ಟ ಚಮಚದಲ್ಲಿ ಜೀರಿಗೆ ಹಾಗೂ ಮೆಂತೆ
ಕಡ್ಲೆಕಾಳಿನಷ್ಟು ಇಂಗು
ಒಂದೆಸಳು ಕರಿಬೇವು
ಎಣ್ಣೆಪಸೆಯಲ್ಲಿ ಮೇಲಿನ ಮಸಾಲಾ ಸಾಮಗ್ರಿಗಳನ್ನು ಹುರಿಯಿರಿ.
ತೆಂಗಿನತುರಿಯೊಂದಿಗೆ ಅರೆಯಿರಿ.
ಬೇಯಿಸಿದ ಹಾಗಲ ತರಕಾರಿ ಹಾಗೂ ತೊಗರಿಬೇಳೆಗಳನ್ನು ತೆಂಗಿನಕಾಯಿ ಮಸಾಲೆಯೊಂದಿಗೆ ಕೂಡಿರಿ. ಕುದಿಸಿ ಒಗ್ಗರಣೆ ಕೊಡುವಲ್ಲಿಗೆ ಹಾಗಲಕಾಯಿ ರಸಂ ಸಿದ್ಧ.
ನಾವು ಕರಾವಳಿಯ ಮಂದಿ ಸಾಂಬಾರು ಅಥವಾ ಕೊದಿಲು ಯಾ ಕೊದ್ದೆಲ್ ಮಾಡುವ ವಿಧಾನವೇ ಇಲ್ಲಿ ಬಂದಿದೆ. ನಿಮಗಿಷ್ಟವಾದ ಇನ್ಯಾವುದೇ ತರಕಾರಿಯಿಂದಲೂ ಈ ಮಾದರಿಯ ರಸಂ ಮಾಡಬಹುದಾಗಿದೆ.
ಹೀಗೇ ಸುಮ್ಮನೆ ಪಟ್ಟಾಂಗಕ್ಕೆಂದು ಬಂದಿದ್ದ ಪ್ರೇಮಕ್ಕ, " ಹಾಗಲಕಾಯಿ ಚಟ್ಣಿ ಗೊತ್ತಾ... ಮೆಣಸು ಎಳ್ಳು ಹುರಿದು, ಹಾಗಲಕಾಯನ್ನೂ ಹುರಿದು, ತೆಂಗಿನಕಾಯನ್ನೂ ಹುರಿದು, ಹುಳಿ ಬೆಲ್ಲ ಹಾಕಿ ಅರೆದು... "
" ಹೌದೂ, ಹುರಿಯುವಾಗ ಉದ್ದಿನಬೇಳೆ ಬೇಡವೇ..? "
" ಹ್ಞಾಂ, ಉದ್ದು ಹಾಕ್ಬೇಕು, ಅದನ್ನೂ ಹುರಿದು.. "
" ಹಾಗಿದ್ರೆ ಕೊತ್ತಂಬರಿ ?"
" ಅದೇನೂ ಬೇಡ, ಗಟ್ಟಿ ಚಟ್ಣಿ ಅರೆದು ಇಡು. ನೀರು ಮುಟ್ಟಿಸ್ಬೇಡಾ... ಎರಡ್ಮೂರು ದಿನ ಇಟ್ಕೋಬಹುದು. "
" ಇಲ್ಲೊಂದು ಪುಟ್ಟ ಹಾಗಲ ಇದೆ, ಹುಳ ಗಿಳ ಇದ್ಯೋ ನೋಡಿಕೋ. " ಎಂದು ಹಾಗಲಕಾಯನ್ನೂ ಕೊಯ್ದು ಇಟ್ಟ ಪ್ರೇಮಕ್ಕ ನನ್ನ ಚಹಾ ಪೇಯವನ್ನೂ ಸ್ವೀಕರಿಸಿ, ನಾಲ್ಕಾರು ಬಸಳೆ ಕುಡಿಗಳೊಂದಿಗೆ ಮನೆಗೆ ಹೋದರು.
ಪ್ರೇಮಕ್ಕ ಹೇಳಿಕೊಟ್ಟಂತೆ ಹಾಗಲದ ಚಟ್ಣಿ ತಯಾರಾಯಿತು. ಅನ್ನದೊಂದಿಗೆ ಕಲಸಿ ತಿನ್ನುವಾಗ, ಪ್ರೇಮಕ್ಕನಿಗೂ ಇಲ್ಲೇ ಊಟ ಮಾಡಿ ಹೋಗಲು ಹೇಳಬೇಕಾಗಿತ್ತು ಎಂದೆನ್ನಿಸದಿರಲಿಲ್ಲ.
ಉದುರುದುರಾದ ಅನ್ನದೊಂದಿಗೆ ಈ ಚಟ್ಣಿ ಕಲಸಿ, ಕಡ್ಲೆಬೀಜ ಹಾಗೂ ಕರಿಬೇವಿನ ಒಗ್ಗರಣೆ ಕೊಟ್ಟಿರಾ, ಹಾಗಲಕಾಯ್ ಚಿತ್ರಾನ್ನ ಅಥವಾ ಪುಳಿಯೋಗರೆ ಅಂದರೂ ನಡೆದೀತು.
ನಾವಂತೂ ಚೆನ್ನಾಗಿ ಸವಿದೆವು, ರಾತ್ರಿಯೂಟಕ್ಕೂ ಹಾಳಾಗದ ಚಟ್ಣಿ ನಮ್ಮದಾಯಿತು.
ನನ್ನ ಅಳತೆ ಪಟ್ಟಿ:
3 ಒಣಮೆಣಸು
3 ಚಮಚ ಬಿಳಿ ಎಳ್ಳು
1 ಚಮಚ ಉದ್ದಿನಬೇಳೆ
ಎಣ್ಣೆಪಸೆಯಲ್ಲಿ ಪರಿಮಳ ಬರುವಂತೆ ಹುರಿಯಿರಿ.
ಒಂದು ಕಡಿ ತೆಂಗಿನ ತುರಿ, ಇದನ್ನೂ ಹುರಿದುಕೊಳ್ಳುವುದು.
ರುಚಿಗೆ ಉಪ್ಪು, ಸಿಹಿಗೆ ಬೆಲ್ಲ, ಹುಣಸೆಹುಳಿ ಲಿಂಬೆ ಗಾತ್ರದಷ್ಟು ಇರಲಿ. ಸಿಹಿ ಹಾಗೂ ಖಾರವನ್ನು ಬಾಯಿರುಚಿಗನುಗುಣವಾಗಿ ಹಾಕಿಕೊಳ್ಳಿ.
ಹಾಗಲಕಾಯಿ ಇಲ್ಲವೇ, ಹಾಗಲಬಳ್ಳಿಯ ಕುಡಿ ಎಲೆಗಳಿದಲೂ ಈ ಮಾದರಿಯ ಚಟ್ಣಿ ಮಾಡಿಕೊಳ್ಳಬಹುದಾಗಿದೆ, ಎಲೆಗಳನ್ನು ತುಪ್ಪದ ಪಸೆಯಲ್ಲಿ ಹುರಿದುಕೊಂಡರಾಯಿತು.
ನಾನಂತೂ ಚಟ್ಣಿಯ ರುಚಿಗೆ ಮನಸೋತು ಕರಿಬೇವಿನ ಎಲೆಗಳನ್ನು ಇತರ ಮಸಾಲಾ ಸಾಮಗ್ರಿಗಳೊಂದಿಗೆ ಹುರಿದು ಇನ್ನೊಂದು ಚಟ್ಣಿ ಮಾಡಿಟ್ಕೊಂಡೆ. ಇದೂ ಡೈನಿಂಗ್ ಟೇಬಲ್ ಮೇಲೆ ಮೆರೆಯಿತು. ಹುರಿದ ಎಳ್ಳು ಉಂಟಲ್ಲ, ಅದರ ಸುವಾಸನೆ ಹಾಗೂ ರುಚಿಯೇ ಇದರ ಆಕರ್ಷಣೆಯೆಂದು ಎರಡನೇ ಪ್ರಯೋಗದಲ್ಲಿ ತಿಳಿಯಿತು. ತೆಂಗಿನತುರಿ ಮಿಕ್ಕಿದ್ದಾಗ ನಿರ್ಲಕ್ಷ್ಯ ಮಾಡದೆ ಈ ಥರ ಎಳ್ಳಿನಚಟ್ಣಿ ಮಾಡಿಕೊಳ್ಳಿ.
" ಮಂದಿನ ವಾರ ಬರುವುದಿದೆ, ಕರಿಬೇವಿನ ಚಟ್ಣಿ ಮಾಡಿಟ್ಟಿರು... " ಮಗಳು ಅಂದಿದ್ದು. ಮಾಮೂಲಿನ ಈ ಚಟ್ಣಿಗೆ ಮುಖ್ಯವಾಗಿ ಬೇಕಾಗಿರುವುದು ಕರಿಬೇವಿನೆಲೆಗಳು ಹಾಗೂ ಒಣ ಕೊಬ್ಬರಿ.
ನೀರಾಡದ ಗೋಟುಕಾಯಿಯನ್ನು ಚೆನ್ನಪ್ಪ ಅಟ್ಟದಿಂದ ತಂದು ಸುಲಿದು ಒಡೆದೂ ಕೊಟ್ಟ, ಒಣಕಲು ಕಾಯಿ ಆದರೂ ಕೆಟ್ಟು ವಾಸನೆ ಬರಬಾರದು.
ಕರಿಬೇವಿನೆಲೆಗಳನ್ನು ನಿನ್ನೆಯೇ ತೋಟದಿಂದ ತಂದಿಟ್ಕೊಂಡಿದ್ದೆ, ಅಂದಾಜು ಇಪ್ಪತೈದು ಎಸಳು ಸಾಕು. ಬೇವಿನೆಲೆಗಳನ್ನು ಕಡ್ಡಿಯಿಂದ ಬೇರ್ಪಡಿಸಿ ಪರಪರಾ ಅನ್ನೋ ಹಾಗೆ ಹುರಿದೂ ಆಯಿತು. ಹುಳ ತಿಂದ ಕೆಟ್ಟು ಎಲೆಗಳನ್ನು ಆಯ್ದು ಬೇರ್ಪಡಿಸುವ ಅಗತ್ಯವೂ ಇದೆ.
ಒಣ ಕೊಬ್ಬರಿಯನ್ನು ತುರಿಯುವುದು. ಹೆಚ್ಚು ದಿನ ಬಾಳ್ವಿಕೆ ಬರಲು ಇದನ್ನೂ ಪರಿಮಳ ಬರುವಂತೆ ಹುರಿಯಿರಿ.
ಮಸಾಲೆ ಏನೇನು?
7 - 8 ಒಣಮೆಣಸು
ಒಂದು ದೊಡ್ಡ ಚಮಚ ಉದ್ದಿನಬೇಳೆ
3 ದೊಡ್ಡ ಚಮಚ ಬಿಳಿ ಎಳ್ಳು
ಎಲ್ಲವನ್ನೂ ಎಣ್ಣೆಪಸೆಯಲ್ಲಿ ಹುರಿಯಿರಿ.
ಮಿಕ್ಸಿಯ ಜಾರ್, ಶುಭ್ರವೂ ಒಣಗಿಯೂ ಇದೆ ತಾನೇ, ಇನ್ನೊಮ್ಮೆ ಚೆನ್ನಾಗಿ ಒರೆಸಿಕೊಳ್ಳಿ.
ಮೊದಲಾಗಿ, ತೆಂಗಿನತುರಿ ಹಾಗೂ ಕರಿಬೇವು ತಿರುಗಿಸಿಕೊಳ್ಳಿ. ಕರಿಬೇವು ತೆಂಗಿನತುರಿಯೊಂದಿಗೆ ಬೇಗನೆ ಪುಡಿಯಾಗುತ್ತದೆ, ಇದು ನನ್ನ ಅನುಭವಕ್ಕೆ ಬಂದ ವಿಷಯ.
ನಂತರ ಮಸಾಲಾ ಸಾಮಗ್ರಿಗಳನ್ನು ಹಾಕಿ ತಿರುಗಿಸಿ. ಕೊನೆಯದಾಗಿ ರುಚಿಗೆ ಉಪ್ಪು, ಲಿಂಬೆಗಾತ್ರದ ಹುಣಸೆಹುಳಿ ಹಾಗೂ ಬೆಲ್ಲ ಕೂಡಿಕೊಂಡು ಅರೆಯಿರಿ. ಸಿಹಿ ಬೇಕಿಲ್ಲವೆಂದಾರೆ ಬೆಲ್ಲ ಯಾ ಸಕ್ಕರೆ ಹಾಕೋದು ಬೇಡ. ಒಂದು ಬಾರಿ ಸೌಟಿನಲ್ಲಿ ತಿರುವಿ, ಪುಡಿಯ ಮಿಶ್ರಣ ಏಕಪ್ರಕಾರವಾಗಲು ಇನ್ನೊಮ್ಮೆ ಮಿಕ್ಸಿ ಟುರ್ರ ಟುರೆ್ರನಿಸಿದರಾಯಿತು. ಕರಿಬೇವಿನ ಚಟ್ಣಿ ಬೆಂಗಳೂರು ಪಯಣಕ್ಕೆ ಸಿದ್ಧವಾಗಿದೆ.
0 comments:
Post a Comment