ಈ ಭಾನುವಾರ, ಹಿರಣ್ಯದ ನಾಗಬನದಲ್ಲಿ ಮುಂಜಾನೆ ಎಂಟರಿಂದ ಹತ್ತು ಗಂಟೆ ತನಕ ತಂಬಿಲಸೇವೆ ಇದ್ದಿತು. ಎಂದಿನಂತೆ ಸಡಗರ, ಭಕ್ತಾದಿಗಳ ಆಗಮನ, ಮನೆ ತುಂಬ ಬಂಧುಬಳಗ...
ಹತ್ತು ಗಂಟೆಗೆಲ್ಲ ದೇವತಾ ಪೂಜಾವಿಧಿಗಳು ಮುಗಿದುವು. ನೆರೆಕರೆಯ, ಊರ ಪರವೂರ ಮಂದಿ ಪಾನಕ, ಪ್ರಸಾದಸೇವೆ ಸ್ವೀಕರಿಸಿ ಹೋದರು. ಕೊನೆಯಲ್ಲಿ ಐದಾರು ಜನ ನೆಂಟರಿಷ್ಟರು ಮಾತುಕತೆಯಾಡುತ್ತ ಉಳಿದರು, ರಜಾದಿನ ಅಲ್ವೇ...
ನಾನೂ ಪಟ್ಟಾಂಗವಾಡುತ್ತ ಕೂತರಾದೀತೇ, ಊಟದ ತಯ್ಯಾರಿ ಆಗಬೇಡವೇ?
ಅನ್ನಕ್ಕಾಗಿ ಕುಕರ್ ಒಲೆಗೇರಿತು. ದೊಡ್ಡದಾದ ತೆಂಗಿನಕಾಯಿ ಒಡೆಯಲ್ಪಟ್ಟಿತು. ಸಾರೂ ಅನ್ನ ಮಾಡಿದ್ರೆ ಸಾಲದು, ಬಂಧುಬಳಗ ಸೇರಿರುವಾಗ ಪಾಯಸದೂಟ ಆಗಲೇಬೇಕು.
ಅಡುಗೆಮನೆಯ ಡಬ್ಬದಲ್ಲಿ ಏನಾದ್ರೂ ಇದೆಯಾ? ತಿಣುಕಾಡಿ ಪ್ರಯೋಜನವಿಲ್ಲ, ಪಾಯಸ ಮಾಡಬಹುದಾದ ಯಾವುದೇ ಬೇಳೆಕಾಳು ಯಾ ಶಾವಿಗೆ ಪ್ಯಾಕೆಟ್ ಕೂಡಾ ಇದ್ದಂತಿಲ್ಲ. " ಏನೂ ಇಲ್ಲ ಮಾರಾಯರೇ... " ಎಂದು ಹೊರಚಾವಡಿಗೆ ಕೇಳುವಂತೆ ಹೇಳುವ ಹಾಗೂ ಇಲ್ಲ. ಇಂತಹ ದ್ವಂದ್ವದಲ್ಲಿ ನಾನಿದ್ದಾಗ ತೆಂಗಿನಕಾಯಿ ತುರಿದಾಯ್ತು, ತರಕಾರಿ ತಂದಿಟ್ಟಿದ್ದು ಏನೇನಿದೆ ಎಂದು ಚೀಲ ಸುರುವಿ ತಪಾಸಿಸಲಾಗಿ ಹೊರಬಿದ್ದವು, ಬದನೆ, ನುಗ್ಗೆ, ಟೊಮ್ಯಾಟೋ, ಪುದಿನ, ಹಸಿಮೆಣಸು, ಬೀನ್ಸ್, ಮುಳ್ಳುಸೌತೆ, ಕ್ಯಾರೆಟ್ ....
" ವಾಹ್, ಮುಳ್ಳುಸೌತೆ ಇದ್ದರೆ ಸಾಕು, ಪಾಯಸ ಆದ ಹಾಗೇ, ಜೊತೆಗೊಂದು ಕ್ಯಾರೆಟ್ಟೂ ಹಾಕೋಣ. ಬಣ್ಣ ಬಣ್ಣ ಬರುತ್ತೆ.. "
" ಹೌದೂ, ಮುಳ್ಳುಸೌತೆ ಪಾಯಸಕ್ಕೆ ಅಕ್ಕಿ ಹಿಟ್ಟು ಬೇಕಲ್ವೇ.. "
" ಅಕ್ಕಿ ಕಡಿ ಇದೆ, ಅದನ್ನೇ ಹಾಕಿ ಬಿಡೋಣ. "
" ಕಡಿಯಕ್ಕಿ ಅಂದ್ರೆ... "
" ಒಂದು ಅಕ್ಕಿ ಕಾಳು ಏಳೆಂಟು ತುಂಡು ಆಗಿರುವಂತದ್ದು ಕಡಿಯಕ್ಕಿ, ಒಳ್ಳೆಯ ಗುಣಮಟ್ಟದ ಸೋನಾಮಸೂರಿ ಅಕ್ಕಿಯ ಕಡಿ ಕೂಡಾ ಮಾರುಕಟ್ಟೆಯಲ್ಲಿ ಇದೆ.
"ಓ, ಸರಿ ಹಾಗಿದ್ರೆ.. "
ಈಗ ಪಾಯಸ ಮಾಡಿದ ವಿಧಾನ:
ಒಂದು ಲೋಟ ಕಡಿಯಕ್ಕಿ
ಎರಡು ಮುಳ್ಳುಸೌತೆಯ ತುರಿ, ಪುಟ್ಟದಾಗಿದ್ರಿಂದ ಎರಡು ಬೇಕಾಯ್ತು.
ಒಂದು ಕ್ಯಾರೆಟ್ ತುರಿ
ಅಕ್ಕಿ ಕಡಿಯನ್ನು ಚೆನ್ನಾಗಿ ತೊಳೆಯಿರಿ. ಕಾಯಿ ತುರಿದಿದ್ದೇವೆ, ಸಾಂಬಾರಿಗೆ ಅವಶ್ಯವಿರುವ ಕಾಯಿತುರಿ ತೆಗೆದಿರಿಸಿ ಉಳಿದ ಕಾಯಿಯನ್ನು ನೀರು ಕೂಡಿಸಿ ಅರೆದು ದಪ್ಪ ಹಾಲು ತೆಗೆದಿರಿಸಿ, ಇನ್ನೊಂದಾವರ್ತಿ ನೀರೆರೆದು ತೆಳ್ಳಗಿನ ಕಾಯಿಹಾಲನ್ನು ಕೂಡಾ ಇಟ್ಟುಕೊಳ್ಳಿ.
ಅನ್ನ ಮಾಡಲು ಹಾಕುವ ಅಳತೆಯ ನೀರು ಎರೆದರೆ ಸಾಲದು, ಪಾಯಸಕ್ಕಾಗಿ ಬೆಂದ ಅಕ್ಕಿ ಗಂಜಿಯಂತಿರಬೇಕು. ಅದಕ್ಕಾಗಿ ಒಂದು ಲೋಟ ಅಕ್ಕಿಗೆ ಎರಡೂವರೆ ಲೋಟ ನೀರಿನೊಂದಿಗೆ ತೆಳ್ಳಗಿನ ಕಾಯಿಹಾಲನ್ನೂ ಎರೆಯಿರಿ. ತುರಿದಿಟ್ಟಿರುವ ಮುಳ್ಳುಸೌತೆ ಹಾಗೂ ಕ್ಯಾರೆಟ್ ಕೂಡಾ ಸೇರಿಕೊಂಡು ಬೇಯಲಿ. ಎರಡು ವಿಸಿಲ್ ಕೂಗಿದ್ರೆ ಸಾಕು, ಸ್ಟವ್ ನಂದಿಸಿ.
ಬೆಂದಿದೆ. ಎರಡು ಅಚ್ಚು ಬೆಲ್ಲ ಯಾ ಬೆಲ್ಲದ ಹುಡಿ ಹಾಕಿರಿ, ಕರಗುತ್ತಿರಲಿ. ಸಿಹಿ ಸಾಕಾಗದಿದ್ದರೆ ಕೊನೆಯಲ್ಲಿ ನೋಡಿಕೊಂಡು ಸಕ್ಕರೆ ಹಾಕುವುದು.
ಮಂದ ಉರಿಯಲ್ಲಿ ಬೇಯುತ್ತಿರುವ ಪಾಯಸದ ಮಿಶ್ರಣಕ್ಕೆ ಸೌಟು ಹಾಕಿ ಕದಡಿಸುತ್ತಿರಿ, ಬೆಲ್ಲ ಕರಗಿತೇ, ದಪ್ಪ ಕಾಯಿಹಾಲು ಎರೆದು ಕುದಿಸಿ, ಎರಡು ಚಮಚ ತುಪ್ಪ ಮೇಲಿಂದ ಎರೆಯಿರಿ. ನಾಲ್ಕು ಏಲಕ್ಕಿ ಗುದ್ದಿ ಹಾಕಿದಾಗ ಪಾಯಸ ಸಿದ್ಧವಾದಂತೆ. ದ್ರಾಕ್ಷಿ, ಗೇರುಬೀಜ ಇದ್ದವರು ಹಾಕಿಕೊಳ್ಳಿ. ಹಾಗೇ ಸುಮ್ಮನೆ ಹಾಕೋದಲ್ಲ, ಘಮಘಮಿಸುವ ತುಪ್ಪದಲ್ಲಿ ಹುರಿದು ಹಾಕಬೇಕು.
ಇದ್ಯಾವುದೂ ಬೇಡ, ಹಾಗೇ ಸುಮ್ಮನೆ ಅಕ್ಕಿ ಪಾಯಸ ಮಾಡಬಹುದಲ್ಲವೇ... ?
ಹೌದು, ಮಾಡೋಣ ಹೀಗೆ,
ಒಳ್ಳೆಯ ಗುಣಮಟ್ಟದ ಸೋನಾಮಸೂರಿ ಅಕ್ಕಿ
ತೆಂಗಿನಕಾಯಿ ಹಾಲು
ಬೆಲ್ಲ ಯಾ ಸಕ್ಕರೆ
ಏಲಕ್ಕಿ, ದ್ರಾಕ್ಷೀ, ಗೇರುಬೀಜ
ಮಾಡುವ ವಿಧಾನ ಈ ಹಿಂದೆ ಬರೆದಂತೆ, ಕಡಿಯಕ್ಕಿಯ ಬದಲು ಇಡಿಯಕ್ಕಿ, ಕ್ಯಾರೆಟ್, ಮುಳ್ಳುಸೌತೆ ಇಲ್ಲ.
0 comments:
Post a Comment