Pages

Ads 468x60px

Friday 18 May 2018

ಹಪ್ಪಳದ ಸಂಪುಟ

   


 

ಒಂದೆರಡು ಮಳೆ ಬಂದ ನಂತರ ತೋಟದೊಳಗೆ ಕೆಲಸ ಕಡಿಮೆ, ಚೆನ್ನಪ್ಪ ಕಳೆದ ನಾಲ್ಕಾರು ದಿನಗಳಿಂದ ನಾಪತ್ತೆಯಾಗಿದ್ದವನು ಇಂದು ಹತ್ತು ಗಂಟೆಗೆ ಬಂದ. ಎಲ್ಲೋ ತಿರುಗಾಟಕ್ಕೆ ಹೋಗಿದ್ದಾಂತ ಕಾಣುತ್ತೆ, ಬೆಳ್ಳಗಿನ ಪೋಷಾಕು ಧರಿಸಿದ್ದ.

“ ಕೆಲ್ಸಕ್ಕೆ ಬಂದಿದ್ದೋ, ಹೀಗೇ ಸುಮ್ಮನೆ ಬಂದಿದ್ದೋ? “ ನನ್ನ ಪ್ರಶ್ನೆ.
“ ಯಾನ್ ಇಂಚನೇ ಬತ್ತುನೆ… “ (ಸುಮ್ಮನೆ ಬಂದದ್ದು ) ಅಂದವನು ತೋಟದಲ್ಲಿ ತೆಂಗಿನಕಾಯಿ ಬಿದ್ದಿರುವುದನ್ನು ತರಲು ಹೊರಟ.
“ ಒಂದು ಚಾ ಕುಡಿದು ಹೋಗು, ಹಲಸಿನ ಹಣ್ಣಿನ ಕೊಟ್ಟಿಗೆ ಇದೆ… “
“ ಹ್ಞೂ… “ ಅನ್ನುತ್ತ ಅವನೂ ಚಹಾ ಸೇವನೆಗೆ ಸಿದ್ಧನಾದ.
“ ಹಲಸಿನಕಾಯಿ ಬೆಳೆದದ್ದು ಇದ್ದರೆ ತಾ. “
ಬರುವಾಗ ಮೂರು ಫನ ಗಾತ್ರದ ಹಲಸಿನ ಕಾಯಿಗಳು ಬಂದವು.
“ ಇದನ್ನು ಏನು ಮಾಡೋದು ಅಂತೀಯ? “
“ ಒಂದು ಹಣ್ಣಿಗಿರಲಿ, ಬೇಕಿದ್ರೆ ಹಪ್ಪಳ ಮಾಡುವ… “
“ ಈಗ ಊಟಕ್ಕಾಯ್ತು, ಹಪ್ಪಳದ ಸಂಗತಿ ನಾಳೆಗಾಯ್ತು... “
“ ಹಪ್ಪಳದ ಸಾಹಿತ್ಯ ಹುಡುಕಿ ಆಗಬೇಕಷ್ಟೆ, ಕಡೆಯುವ ಕಲ್ಲು ತೊಳೆದು ಕ್ಲೀನು ಆಗಬೇಕು, ಗುದ್ದಲಿಕ್ಕೆ ಒನಕೆ ಎಲ್ಲಿದೇಂತ ನೋಡಬೇಕು, ಹಲಸಿನಕಾಯಿ ಬೇಯಿಸುವ ವ್ಯವಸ್ಥೆ ಎಲ್ಲಿ? ಗ್ಯಾಸ್ ಒಲೆ, ಕುಕರ್ ಆಗಲಿಕ್ಕಿಲ್ಲ, ಆ ಪೇರಳೆ ಮರದ ಬುಡದಲ್ಲಿ ಒಂದು ಕಲ್ಲಿನ ಒಲೆ ತಯಾರು ಮಾಡಬೇಕು, ಸೌದೆ ಆಗಬೇಕು, ಹಿತ್ತಾಳೆಯ ದೊಡ್ಡ ಅಟ್ಟಿನಳಗೆ ಉಪ್ಪರಿಗೆಯಿಂದ ತಂದು ತೊಳೆದು ಇಡಬೇಕು… “

“ ನಾಳೆ ಬೆಳಗ್ಗೆ ಬೇಗ ಬರುತ್ತೇನೆ. “

          


ಮುಂಜಾನೆ ಎಂಟೂವರೆಗೆ ಹಲಸಿನ ಸೊಳೆ ಬಿಡಿಸಲು ಮೆಟ್ಟುಗತ್ತಿಯೊಂದಿಗೆ ಗುದ್ದಾಡುತ್ತ ಆರಂಭ. ಚೆನ್ನಪ್ಪ 'ಹಲಸಿನಕಾಯಿ ಕಾಳಗದಲ್ಲಿ ಮಗ್ನನಾಗಿದ್ದಂತೆ ಉಪ್ಪರಿಗೆಯ ಮೂಲೆಯಲ್ಲಿದ್ದಂತಹ ದೊಡ್ಡ ಹಿತ್ತಾಳೆಯ ಅಟ್ಟಿನಳಗೆಯನ್ನು { ಉಗಿಪಾತ್ರೆ ಯಾ steam cooker ) ಹಾಗೂ ಒನಕೆಯನ್ನು ನಾನು ಕೆಳಗಿಳಿಸಿದೆ. ಹಪ್ಪಳ ಒತ್ತುಮಣೆ ( ರೊಟ್ಟಿಮಣೆ ), ಆಗಾಗ್ಗೆ ಬಳಸುತ್ತಿರುವುದರಿಂದ ಅಡುಗೆಮನೆಯಲ್ಲಿ ಇದ್ದಿತು, ಅದನ್ನೂ ಚೆನ್ನಪ್ಪನ ಉಪಯೋಗಕ್ಕಾಗಿ ಹೊರಗಿಡಲಾಯಿತು.

“ ಹಲಸಿನಕಾಯಿ ಸೊಳೆ ಬಿಡಿಸಿ ಆಯ್ತು. “
“ ಈ ಅಟ್ಟಿನಳಗೆಯನ್ನು ತೊಳೆದು ಒಲೆಯ ಮೇಲೆ ಇಡು. “
ಪೇರಳೆಯ ಮರದ ಬುಡದಲ್ಲಿ ತಾತ್ಕಾಲಿಕ ನಿರ್ಮಾಣದ ಒಲೆಯ ಮೇಲೇರಿದ ಅಟ್ಟಿನಳಗೆ, ಹಲಸಿನ ಸೊಳೆಗಳನ್ನು ತುಂಬಿ ಬೇಯಲು ಇಟ್ಟಾಯ್ತು.
ಹಳ್ಳಿ ಮನೆಯ ಆವರಣದಲ್ಲಿ ಕಟ್ಟಿಗೆಗೆ ಕೊರತೆಯಿಲ್ಲ.
ಅರೆಯುವ ಕಲ್ಲು ತೊಳೆಯಲ್ಪಟ್ಟಿತು. ಮೂಲೆ ಸೇರಿರುವ ಅರೆಯುವ ಕಲ್ಲು ಇಂತಹ ವಿಶೇಷ ಸಂದರ್ಭದಲ್ಲಿ “ನಾನಿಲ್ಲದೆ ಹಪ್ಪಳವಾಗದು” ಅಂದಿತು.
“ ಅಕ್ಕ, ಹಪ್ಪಳಕ್ಕೆ ಉಪ್ಪು ಖಾರ ಎಲ್ಲುಂಟು? “.
“ ಉಪ್ಪು, ಮೆಣಸಿನಹುಡಿ, ಎಳ್ಳು... ಸಾಕು. “ ಬೇಕಿದ್ದಷ್ಟು ತಟ್ಟೆಯಲ್ಲಿ ಜೋಡಿಸಿ ಕೊಟ್ಟಾಯ್ತು.
“ ಹಲಸಿನಕಾಯಿ ಚೆನ್ನಾಗಿ ಬೇಯಬೇಕು, ಇಲ್ಲಾಂದ್ರೆ ಹಪ್ಪಳಕ್ಕೆ ರುಚಿಯಿಲ್ಲ, ಒನಕೆಯಲ್ಲಿ ಗುದ್ದುವಾಗಲೂ ಅಷ್ಟೇ, ಬರೇ ನಾಲ್ಕು ಪೆಟ್ಟು ಹಾಕಿ ತೆಗಿಯೂದಲ್ಲ, ಮೆತ್ತಗೆ ಆಗಬೇಕು… “ ನನ್ನ ರನ್ನಿಂಗ್ ಕಮೆಂಟರಿ.

ಅಡಿಕೆಹಾಳೆಯಲ್ಲಿ ತುಂಬಿ, ಉಪ್ಪುಖಾರ ಕೂಡಿದ ಹಲಸಿನಸೊಳೆ ಮುದ್ದೆಯಂತಾಗಿ ನನ್ನೆದುರು ಬಂದಿತು.
ಪುಟ್ಟ ಬಟ್ಟಲಲ್ಲಿ ತೆಂಗಿನೆಣ್ಣೆ ಇಟ್ಟು,
ಅಂಗೈಗಳಿಗೆ ಎಣ್ಣೆ ಸವರಿ,
ಲಿಂಬೆಗಾತ್ರದ ಉಂಡೆ ಮಾಡಿಟ್ಟು,
ಪುನಃ ಚೆನ್ನಪ್ಪನೆಡೆಗೆ ಪಯಣ.

ಹಪ್ಪಳದ ಮಣೆಗೆ ಎರಡು ಪ್ಲಾಸ್ಟಿಕ್ ಶೀಟುಗಳನ್ನು ಸಿದ್ಧಪಡಿಸಿ,
ಅದಕ್ಕೂ ಎಣ್ಣೆ ಸವರಿ,
ಒಂದೊಂದೇ ಉಂಡೆಯನ್ನು ಒತ್ತಿದಾಗ ಮಟ ಮಟ ಮಧ್ಯಾಹ್ನ.
ಒಣಗಿಸುವುದು.
ಎರಡು ದಿನ ಒಣಗಲು ಬೇಕು.

ನಂತರ ಹತ್ತು ಹಪ್ಪಳಗಳನ್ನು ಜೋಡಿಸಿ ಕಟ್ಟಿ ಇಡುವುದು.
ಕಟ್ಟಿ ಇಟ್ಟಂತಹ ಹಪ್ಪಳಗಳನ್ನು ಪುನಃ ಬಿಸಿಲಿಗಿರಿಸುವುದು.
ಏಳು ಯಾ ಎಂಟು ಬಿಸಿಲು ಸಿಕ್ಕರೆ ಸಾಕು.
 ಹಪ್ಪಳದ ಕಟ್ಟು ದಾಸ್ತಾನು ಡಬ್ಬಿಯಲ್ಲಿ ತುಂಬಿಸಿ ಇಡುವುದು.
ದಿನವೂ ಸಂಜೆ ಮರೆಯದೆ ಹಪ್ಪಳ ಕರಿದು ತಿನ್ನುವುದು.
ಬೆಲ್ಲವೂ ಜೊತೆಗಿದ್ದರೆ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ ಕೇಳಾ,
ಸ್ನೇಹಿತರು ಬಂದಾಗ ಚಹಾಪಾನವೂ, ಹಪ್ಪಳದ ಸತ್ಕಾರ,
ನೆಂಟರಿಷ್ಟರು ಬಂದಾಗ ಮರೆಯದೇ ಅವರ ಕೈಗೆ ಹಪ್ಪಳದ ಪೊಟ್ಟಣ,
ಇರಿಸುವುದು ನಮ್ಮ ಆದ್ಯ ಕರ್ತವ್ಯ…. ಭೂಪತಿ ಕೇಳೆಂದ.


          









0 comments:

Post a Comment