Pages

Ads 468x60px

Friday 15 March 2019

ಗೌರತ್ತೆಯ ಉಪವಾಸ




“ ಇವತ್ತು ಶಿವರಾತ್ರಿ ಅಲ್ವಾ, ಭಜನಾಮಂದಿರದಲ್ಲಿ ರಾತ್ರಿ ಬೆಳಗಾಗೂ ತನಕ ಭಜನೆ ಉಂಟಂತೆ, ನಾನು ಹಾಗೇ ವಾಕಿಂಗ್ ಹೋಗ್ಬಿಟ್ಟು ಭಜನೆ ಕೇಳ್ಬಿಟ್ಟು ಬರ್ತೇನೆ. " ಎಂದರು ಗೌರತ್ತೆ.

" ಸರಿ, ಆರಾಮವಾಗಿ ಹೋಗಿ.. " ಜಪಸರ ಆಡಿಸುತ್ತ ಸಹಸ್ರನಾಮಾವಳಿ ಲೆಕ್ಕ ಮಾಡುತ್ತ ಇರುವ ಗೌರತ್ತೆ ಹೊರಟಿದ್ದು ನನಗೂ ಸಂತಸ.

ದೂರವೇನಿಲ್ಲ, ಭಜನೆ ಮನೆವರೆಗೂ ಕೇಳಿಸುತ್ತಿದೆ, ಆದ್ರೂ ಅಲ್ಲಿ ಕುಳಿತು ಹತ್ತೂ ಮಂದಿಯೊಂದಿಗೆ ಪಟ್ಟಾಂಗ ಹೊಡೆದು ಆಸರಿಗೆ ಕುಡಿದು ಬರುವ ಖುಷಿಯೇ ಬೇರೆ, ನಾನೂ ಹೊರಟೆ.

ಅಲಂಕೃತ ಗಣೇಶ, ಬೆಳಗುತ್ತಿರುವ ದೀಪ, ಹೂವು ಹಣ್ಣುಕಾಯಿ, ಊದುಬತ್ತಿ ಕರ್ಪೂರಗಳ ಸುಗಂಧ. ಭಜನೆಯೆಂದರೆ ಹಾರ್ಮೋನಿಯಂ, ಖಂಜಿರ, ತಬಲಾ ಮೃದಂಗ ವಾದ್ಯಗಳೂ, ತಾಳ ತಂಬೂರಿಗಳೂ, ಮೈಕ್ ಸೆಟ್ಚೂ, ಕೊರತೆಯಿಲ್ಲದಷ್ಟು ಗಾಯಕರೂ ತುಂಬಿದ ಸಭೆ.

ಚಕ್ಕಮಕ್ಕ ಕುಳಿತುಕೊಳ್ಳಲು ಸಾಧ್ಯವಾಗದವರಿಗೆ ಪ್ಲಾಸ್ಟಿಕ್ ಕುರ್ಚಿಗಳೂ ಸಾಲಾಗಿ ಇತ್ತೂ ಅನ್ನಿ, ನಾವು ಭಕ್ತಿಭಾವದಿಂದ ಚಾಪೆಯಲ್ಲಿ ಆಸೀನರಾದೆವು. ಬಂದವರಿಗೆ ಫಲಾಹಾರದ ವ್ಯವಸ್ಥೆಯೂ ಇದೆಯೆಂದು ತಿಳಿಯಿತು.





ಭಜನೆಹಾಡುಗಳ ನಾದಕ್ಕೆ ದನಿಗೂಡಿಸುತ್ತ ಈ ಗಾಯನ ಸಾಹಿತ್ಯಗಳ ರಚಯಿತರು ಯಾರಾಗಿಬಹುದೆಂಬ ಗಾಢ ಚಿಂತನೆಯೂ ಕೂಡಿ ಸಮಯ ಕಳೆದಿದ್ದು ತಿಳಿಯದಂತಿರಲು, " ಅಲ್ಲಿ ಬಾಳೆ ಎಲೆ ಹಾಕ್ತಿದಾರೆ, ಗೌರತ್ತೆ ಎದ್ದು ಆ ಕಡೆ ಹೋದರು. ನಾನು ಹಿಂಬಾಲಕಿ, ಬಾಳೆ ಎಲೆ ಮುಂದೆ ಕುಳಿತುಕೊಳ್ಳುವ ಯೋಗ.

ಮೊದಲಾಗಿ ಇಡ್ಲಿ, ಫಳಾರ ಅಲ್ವೇ, ರವಾ ಇಡ್ಲಿ, ಚಟ್ನಿ... ತೊಂದ್ರೆ ಇಲ್ಲ, ತಿನ್ನೋಣ.

ವಡಾ ಬಂದಿತು, ಅದೂ ಉದ್ದಿನ ವಡೇ.. " ವಾಹ್! ಬೇಕಾದಷ್ಟಾಯ್ತು. " ಕೂರ್ಮಾ, ತರಕಾರಿಗಳ ಕೂಟು ಬಾಳೆ ತುಂಬಿತು. ಇನ್ನೇನು ಚೆನ್ನಾಗಿ ಹೊಡೆಯೋದೇ ಬಾಕಿ.

" ಇಡ್ಲಿ ಬೇಕೇ, ವಡೆ ಬೇಕೇ.. " ಎನ್ನುತ್ತ ಸುಧರಿಕೆ ಮಾಡುವವರಿರುವಾಗ, " ಸಾಕೋ ಇನ್ನೂ ಬೇಕೋ.. " ಕೇಳುವವರಿರುವಾಗ ನಾವು ಇನ್ನಷ್ಟು ಬಾಳೆಗೆ ಹಾಕಿಸ್ಕೊಂಡು ತಿಂದೆವು.

ಹೆಸ್ರು ಪಾಯಸ ಬಂದಿತು, " ಶಿವರಾತ್ರಿ ಪ್ರಯುಕ್ತ ಪಾಯಸ ತಿನ್ನಬೇಡವೇ.. "
ಪಾಯಸದೊಂದಿಗೆ ಬಾಳೆಹಣ್ಣು ರಸಾಯನ ಸೇರಿಕೊಂಡಿತು.
ಸಿಹಿಭಕ್ಷ್ಯವೆಂದು ಜಿಲೇಬಿಯೂ ಉದರದೊಳಗಿಳಿಯಿತು.

ಮೊಸರು, ಉಪ್ಪಿನಕಾಯಿ ಇಲ್ಲದೆ ಆದೀತೇ, ರಸಬಾಳೆಹಣ್ಣು ತಿನ್ನುವಲ್ಲಿಗೆ ಫಲಾಹಾರದ ಸಾರ್ಥಕ್ಯ.

ಬಾದಾಮಿ ಹಾಲು ಕುಡಿದು ಏಳುವಲ್ಲಿಗೆ ಶಿವರಾತ್ರಿಯ ಫಳಾರ ಸಂಪನ್ನಗೊಂಡಿತು.


0 comments:

Post a Comment