Tuesday 10 September 2013
ವೃಕ್ಷ ಸಲ್ಲಾಪ
ನೆನಪಿನ ಭಿತ್ತಿಯಳಗೆ
ಮಲಗಿದ್ದ, ಮೆಲ್ಲಗೆದ್ದ ವೃಕ್ಷ
ವಟವೃಕ್ಷವಲ್ಲ
ಬೋಧಿವೃಕ್ಷವೂ ಅಲ್ಲ
ಕಾಸರಗೋಡಿನ ಮಹಾತ್ಮಾ ಗಾಂಧಿ ರಸ್ತೆ ಪಕ್ಕ
ನೆರಳು ನೀಡುತ್ತಿತ್ತೇನು
ವರ್ಷಕ್ಕೊಂದಾವರ್ತಿ ಭಾರೀ ಗಾತ್ರದ ಫಲ
ನೀಡುತ್ತಿತ್ತೇನು ಈ ಹಲಸು
ಆದರೇನು
ರಸ್ತೆಪಕ್ಕದ ಮರ
ವಿದ್ಯುತ್ ವಯರು, ರಸ್ತೆ ಅಗಲೀಕರಣ
ಏನೇನೋ ಕುಂಟು ನೆವನ
ಮಹಾನಗರಪಾಲಿಕೆ
ಕಡಿದು ಕೆಳಗುರುಳಿಸಿತೇನು
ಹೋಗಲಿ ಬಿಡು,
ಇರುವೆಯಲ್ಲ ಮನದಾಳದೊಳಗೆ
ಸದಾ ಹಸಿರು ಹಸಿರಾಗಿ |
ಯಾರಿಗಾಗಿ ಈ ಅರಣ್ಯರೋದನ
ಸಹಚರ ವಟವೃಕ್ಷ
ಮೊನ್ನೆ ಮೊನ್ನೆಯವರೆಗೆ
ಇದ್ದನಲ್ಲ
ಏನೇನೋ ವ್ಯಾಪಾರ ವಹಿವಾಟು
ಆಸರೆಯಾಗಿದ್ದನಲ್ಲ |
ಪತ್ರಿಕೆಗಳಲ್ಲಿ ದೀರ್ಘಲೇಖನ
ಬಂದಿತ್ತೇನು ಏನು ಕತೆ
ತಲೆಯೆತ್ತಿವೆಯಲ್ಲ ಗಗನಚುಂಬಿಗಳು
ನಾಗರೀಕ ಜಗತ್ತಿನ ಸೋಪಾನಗಳು
ಪರಿಸರ ರಕ್ಷಣೆಯ ಪ್ರಲಾಪ
ನಗರ ಸೌಂದರ್ಯದ ಆಲಾಪ
ಓ ಹಲಸೇ
ವಟವೃಕ್ಷವೇ ಬೇಡವಾಗಿರುವಲ್ಲಿ
ನೀನ್ಯಾವ ಲೆಕ್ಕ ಹೇಳು
ಮಾರ್ಜಾಲ ಹಿಡಿತದಲ್ಲಿ ನರಳಿದ
ಇಲಿಯಂತೆ
ಇರಬೇಕು ಇಲ್ಲದಿರಬೇಕು
ಆಟವಾಡಿಸಿದವರಾರ್
ನೆಲೆ - ಬೆಲೆಯಿಲ್ಲದಾಯಿತೇ ಪಶುಪಕ್ಷಿಗಳಿಗೆ
ಹೋಗಲಿ ಬಿಡು
ಇಂದು ಇದ್ದದ್ದು ನಾಳೆ ಇಲ್ಲಿಲ್ಲ
ಅದೋ ಅಲ್ಲಿ ನಮ್ಮನೆ
ಇತ್ತ ಹಾಗಿತ್ತಲ್ಲ
ಎಲ್ಲವೂ ಸುಮ್ಮನೆ |
ಟಿಪ್ಪಣಿ: ಇದು ಹೈಸ್ಕೂಲ್ ವಿದ್ಯಾಭ್ಯಾಸದ ದಿನಗಳಲ್ಲಿ ಕಾಸರಗೋಡಿನ ಮನೆಯ ಹಿತ್ತಿಲಲ್ಲಿ ಕುಳಿತು ರಸ್ತೆಪಕ್ಕದ ಮರವನ್ನು ಜಲವರ್ಣದಲ್ಲಿ ಬಿಡಿಸಿದ್ದಾಗಿದೆ. ಇಸವಿ 1972 - 73.
Posted via DraftCraft app
Subscribe to:
Post Comments (Atom)
0 comments:
Post a Comment