Pages

Ads 468x60px

Saturday 21 September 2013

ಅಡುಗೆ ~~~ ಒಗ್ಗರಣೆ




ಮನೆಯ ಮುಂದೆ ತುಳಸೀ ಇರಬೇಕು, ಹಿತ್ತಿಲಲ್ಲಿ ಕರಿಬೇವು ಇರಬೇಕು, ಹೌದು ತಾನೇ. ಅಡುಗೆ ಆಗಿ ಒಗ್ಗರಣೆ ಕೊಡುವ ಹೊತ್ತಿಗೆ ಕರಿಬೇವಿನೆಲೆ ನೆನಪಾಗಿ, ಹಿತ್ತಿಲಿಗೆ ಹೋಗಿ ಎರಡೆಸಳು ಕೊಯ್ದು, ಮಾಡಿಟ್ಟ ಅಡುಗೆ ಘಮಘಮಾ ಮಾಡುತ್ತಲ್ಲ, ಅದು ಕರಿಬೇವು.

ನಮ್ಮ ಪಕ್ಕದ ಮನೆಯಾಕೆ ದಿನ ಬಿಟ್ಟು ದಿನ ಬೇವಿನೆಲೆಗಾಗಿ ನಮ್ಮ ಮನೆಗೇ ಬರೋರು. ಗಿಡವೇನೋ ಅವರಲ್ಲೂ ಇದೆ, ಅದರ ಎಸಳು ಕೀಳಲು ಏನೋ ಆಸೆ. ನಾನೂ ಒಂದಿನಾ ಹೋಗಿ ನೋಡ್ದೆ. ಎಲೆಗಳನ್ನು ಚಿವುಟದೇ ಇಟ್ಟಿದ್ರಿಂದಾಂತ ಕಾಣ್ಸುತ್ತೆ, ಎಲೆಗಳು ನಮ್ಮನ್ಯಾರೂ ಕೇಳೋರಿಲ್ಲ ಅನ್ನುವಂತೆ ಕಳಾವಿಹೀನವಾಗಿದ್ದುವು.

" ನೀವು ಹೀಗೆ ಮಾಡಿ ಹೇಮಕ್ಕ, ಈ ಗಿಡದ ಎಲೆ ಎಲ್ಲಾ ಚಿವುಟುತ್ತಾ ಬನ್ನಿ, ಹೇಗೂ ಮಳೆ ಬರ್ತಾ ಇದೆ, ಚಿಗುರು ಬಂದು ಪೊದೆ ಥರ ಆಗಲು ಏನೂ ತೊಂದರೆಯಿಲ್ಲ " ಅಂದೆ.

" ಹೌದೇ, ಹಾಗೇ ಮಾಡ್ತೇನೆ " ಅಂದ ಹೇಮಕ್ಕ ಏನು ಮಾಡಿದ್ರು ಅಂತ ಪುನಃ ತನಿಖೆಗೆ ನಾನು ಹೋಗಿಲ್ಲ.

ಬೇವಿನೆಲೆಯಲ್ಲಿ ದೊಡ್ಡ ಎಲೇದು, ಪುಟ್ಟ ಎಲೇದು ಅಂತ ವೈವಿಧ್ಯಗಳೇನೋ ಇವೆ. ಆದರೂ ಸಸ್ಯಶಾಸ್ತ್ರೀಯ ವರ್ಗೀಕರಣವೇನೂ ಇಲ್ಲ. ಆಂಗ್ಲ ಭಾಷೆಯಲ್ಲಿ curry leaf plant ಅನ್ನಿಸಿಕೊಂಡಿರುವ ಈ ಸಸ್ಯ Rutaceae ಕುಟುಂಬದಲ್ಲಿದೆ. ಭಾರತ ಹಾಗೂ ಶ್ರೀಲಂಕಾಗಳಲ್ಲಿ ಒಂದು ಸಾಮಾನ್ಯ ಸಸ್ಯವಾಗಿರುವ ಕರಿಬೇವಿನ ಗಿಡವನ್ನು ಸಸ್ಯವಿಜ್ಞಾನಿಗಳು Murraya koenigii ಎಂದು ಹೆಸರಿಸಿದ್ದಾರೆ. ಪುಟ್ಟ ಎಲೆಯ ಕರಿಬೇವು ತುಂಬಾ ಪರಿಮಳ ಎಂದು ನನ್ನಮ್ಮ ಹೇಳೋರು. ಅಮ್ಮ ಸಾಕಿದ ಪುಟ್ಟ ಎಲೆಯ ಕರಿಬೇವಿನ ಗಿಡ ಮರವಾಗಿ ಬೆಳೆದಿದೆ. ಊರಿನ ಹತ್ತೂ ಮಂದಿ ಕೀಳಲು ಬರುತ್ತಿರುತ್ತಾರೆ. ನಮ್ಮ ತೋಟದಲ್ಲಿ ಹೆಜ್ಜೆಗೊಂದರಂತೆ ಕರಿಬೇವಿನ ಗಿಡಗಳಿದ್ದರೂ ಅಮ್ಮನ ಮನೆಯ ಕರಿಬೇವಿನ ಮರದ ಬೇರಿನಿಂದ ಮೇಲೆದ್ದು ಬಂದ ಸಸಿಯನ್ನು ಕಿತ್ತು ತಂದು ನಮ್ಮ ಹಿರಣ್ಯದಲ್ಲೂ ನೆಟ್ಟು ಬೆಳೆಸುವ ಪ್ರಯತ್ನ ಮಾಡಿದ್ದೇನೆ.





ಬೇವಿನಸೊಪ್ಪಿನ ಚಟ್ನಿಹುಡಿ ಮಾಡಿಯೇ ಬಿಡೋಣ. ಇದನ್ನು ಈ ಆಧುನಿಕ ಯುಗದಲ್ಲಿ ಪರಿಶ್ರಮವಿಲ್ಲದೆ ಮಾಡಿಕೊಳ್ಳಬಹುದು. ಯಾಕೆ ಹೀಗೆ ಅನ್ನುತ್ತಿದ್ದೇನೆಂದರೆ ನನ್ನಜ್ಜಿ ಹಾಗೂ ನನ್ನಮ್ಮ ಮಕ್ಕಳಿಗಾಗಿ ಶ್ರಮ ಪಟ್ಟು ಮಾಡುತ್ತಿದ್ದ ಖಾದ್ಯಗಳಲ್ಲಿ ಚಟ್ನೀಪುಡಿಯೂ ಒಂದಾಗಿತ್ತು. ಒರಳು ಕಲ್ಲನ್ನು ಸ್ವಚ್ಛಗೊಳಿಸಿ, ಒಣಗಿಸಿ, ಹುರಿದ ಮಸಾಲೆಗಳನ್ನು ಹುಡಿ ಮಾಡಿಕೊಡಲು ಕೆಲಸಗಿತ್ತಿಯ ಸಹಕಾರವೂ ಅನಿವಾರ್ಯವಾಗಿತ್ತು.

ಒಂದು ತೆಂಗಿನಕಾಯಿ, ನೀರು ಆರಿದ ಗೋಟುಕಾಯಿಯಾಗಿರಬೇಕು. ತುರಿದು ಇಟ್ಟುಕೊಳ್ಳಿ.
ಬೇವಿನ ಸೊಪ್ಪು, 25 ಎಸಳು
ಕೊತ್ತಂಬರಿ, 3 ಚಮಚ
ಜೀರಿಗೆ, ಒಂದು ಚಮಚ
ಇಂಗು, ಕಡ್ಲೇ ಕಾಳಿನಷ್ಟು
ರುಚಿಗೆ ಉಪ್ಪು, ಹುಳಿ, ಬೆಲ್ಲ

ತೆಂಗಿನಕಾಯಿ ತುರಿಯನ್ನು ಬಾಣಲೆಯಲ್ಲಿ ಪರಿಮಳ ಬರುವತೆ ಹುರಿಯಿರಿ, ತಣಿಯಲು ತೆಗೆದಿರಿಸಿ.
ಅದೇ ಬಾಣಲೆಯಲ್ಲಿ ಉಳಿದ ಮಸಾಲಾ ಸಾಮಗ್ರಿಗಳನ್ನು ಘಮ್ ಘಮಾ ಎಂಬಂತೆ ಹುರಿದು ಕೆಳಗಿಳಿಸಿ.
ಬೇವಿನಸೊಪ್ಪನ್ನೂ ಬಾಣಲೆಗೆ ಹಾಕಿ ಕೈಯಲ್ಲಿ ಮುಟ್ಟುವಾಗ ಪುಡಿಯಾಗುವಷ್ಟು ಬಾಡಿಸಿ.
ಈ ಹುರಿಯುವ ಕ್ರಿಯೆಗಳನ್ನು ಮೈಕ್ರೋವೇವ್ ಒವನ್ ನಲ್ಲೂ ಮಾಡಿಕೊಳ್ಳಬಹುದು, ಎಣ್ಣೆ ಪಸೆ ಮಾಡುವ ಅವಶ್ಯಕತೆಯಿಲ್ಲ, ಸೊಪ್ಪು ತನ್ನ ತಾಜಾ ಹಸಿರು ಬಣ್ಣವನ್ನು ಸ್ವಲ್ಪವೂ ಕಳೆದುಕೊಳ್ಳುವುದಿಲ್ಲ.
ಇಷ್ಟೂ ಸಿದ್ಧತೆ ಆಯಿತೇ, ಮಿಕ್ಸಿಯ ಜಾರ್ ಸ್ವಚ್ಛಗೊಳಿಸಿ, ನೀರಪಸೆ ಇದ್ದಲ್ಲಿ ಒಣಗಿಸಿ.
ಒಂದೊಂದಾಗಿ ಹುಡಿ ಮಾಡಿ. ಕೊನೆಗೆ ಎಲ್ಲವನ್ನೂ ಜತೆಯಾಗಿ ಉಪ್ಪು, ಹುಳಿ, ಬೆಲ್ಲ ಸೇರಿಸಿ ಎರಡು ಸುತ್ತು ತಿರುಡಿಸಿ ತೆಗೆಯುವಲ್ಲಿಗೆ ಚಟ್ನಿಪುಡಿ ಸಿದ್ಧ.





ಎಲ್ಲರಿಗೂ ತಾಜಾ ಬೇವಿನೆಲೆ ಸಿಗುವುದಿಲ್ಲ. ಸಿಕ್ಕ ಮೇಲೆ ಕೆಲವು ದಿನ ಇಟ್ಟುಕೊಳ್ಳುವುದು ಹೇಗೆ ಎಂಬ ಪ್ರಶ್ನೆ ಬರುತ್ತದೆ. ಎಲೆಗಳನ್ನು ಇದ್ದ ಹಾಗೆ ಜಾಡಿಯಲ್ಲಿ ತುಂಬಿಡುವುದಕ್ಕಿಂತ ಸ್ವಲ್ಪ ಹುರಿದು ಜಾಡಿಯಲ್ಲಿ ತುಂಬಿಟ್ಟುಕೊಂಡಲ್ಲಿ ಉಪಯೋಗಕ್ಕೆ ಅನುಕೂಲ, ಹೆಚ್ಚು ದಿನ ಉಪಯೋಗಿಸಬಹುದು.

" ಮನೆಯ ಹಿಂದೆ ಹಿತ್ತಿಲೇ ಇಲ್ಲ, ನೆಡೋದೆಲ್ಲಿಂದ " ಎಂದು ಪೇಚಾಡಬೇಕಾಗಿಲ್ಲ. ಕುಂಡದಲ್ಲಿ ನೆಟ್ಟು ಬೆಳೆಸಿ, ಬಾಲ್ಕನಿಯ ಸೊಬಗನ್ನು ಹೆಚ್ಚಿಸಿ, ಶುದ್ಧವಾದ ಗಾಳಿಯನ್ನು ಪಡೆಯಿರಿ.


ಬೇವಿನೆಲೆಯ ಹಸಿ ಚಟ್ನಿ:

ಒಂದು ಕಡಿ ತೆಂಗಿನ ತುರಿ
2 ಹಸಿ ಮೆಣಸು
4 ಎಳೆಯ ಬೇವಿನೆಸಳು
ಉಪ್ಪು
ಎಲ್ಲವನ್ನೂ ರುಬ್ಬಿಕೊಂಡು ಒಗ್ಗರಣೆ ಕೊಟ್ಟರಾಯಿತು.
ಈ ಚಟ್ನಿಗೆ ಎರಡು ಸೌಟು ಮೊಸರು ಅಥವಾ ದಪ್ಪ ಮಜ್ಜಿಗೆ ಎರೆದು ಗೊಜ್ಜು ಅನ್ನಿ.


ಬೇವಿನ ಹೂ ಗೊಜ್ಜು:

ಬೇವಿನ ಹೂಗಳನ್ನು ತುಪ್ಪದಲ್ಲಿ ಹುರಿದು ಕೊಳ್ಳಿ.
ಉಪ್ಪು, ಹುಳಿ, ಬೆಲ್ಲ ಹಾಗೂ ನೀರು ಕುದಿಸಿ.
ಬೇವಿನ ಹೂ ಹಾಕಿಕೊಳ್ಳಿ, ಬೇಕಿದ್ದರೆ ಈರುಳ್ಳಿ ಚಿಕ್ಕದಾಗಿ ಹಚ್ಚಿ ಹಾಕಿ.
ಬೆಳ್ಳುಳ್ಳಿ ಒಗ್ಗರಣೆ ಕೊಡಿ.

ಮಹಾನಗರಗಳಲ್ಲಿ ವಾಸಿಸುವ ಮಂದಿಗೆ ತಲೆಕೂದಲನ್ನು ಉಳಿಸಿಕೊಳ್ಳುವುದೇ ದೊಡ್ಡ ಸಮಸ್ಯೆ ಆಗ್ಬಿಟ್ಟಿದೆ. ಅದಕ್ಕೆ ಕಾರಣಗಳೇನೇ ಇರಲಿ, ನಿಯಮಿತವಾಗಿ ಕರಿಬೇವಿನೆಲೆಯ ಖಾದ್ಯಗಳನ್ನು ತಿನ್ನಿ, ಕೂದಲನ್ನು ಉಳಿಸಿಕೊಳ್ಳಿ. ಒಗ್ಗರಣೆಯ ಕರಿಬೇವನ್ನೂ ಪಕ್ಕಕ್ಕೆ ತಳ್ಳಬೇಡಿ.

ಕರಿಬೇವಿನ ಚಟ್ನಿಹುಡಿ ಮಾಡಿಕೊಳ್ಳಲು ಔದಾಸೀನ್ಯವೇ, ಹೀಗೆ ಮಾಡಿ. ಮೈಕ್ರೋವೇವ್ ಒವನ್ ನಲ್ಲಿ ಬೇವಿನೆಲೆಗಳನ್ನು ಪರಪರ ಆಗುವಷ್ಟು ಬಾಡಿಸಿ. ಉಪ್ಪು ಹಾಕಿಕೊಂಡು ಕೈಯಲ್ಲೇ ಪುಡಿಪುಡಿ ಮಾಡಿಟ್ಟು ಜಾಡಿಯಲ್ಲಿ ತುಂಬಿಸಿ. ಅನ್ನದೊಂದಿಗೆ ಕಲಸಿ ತಿನ್ನಿ. ಮೊಸರಿನೊಂದಿಗೂ ಆದೀತು.





ವಸಂತಕಾಲದಲ್ಲಿ ಕರಿಬೇವಿನ ಮರವೂ ಬಿಳಿ ಹೂಗೊಂಚಲುಗಳಿಂದ ಶೋಭಿಸುವುದು. ಈ ಹೂಗಳನ್ನು ಸಲಾಡ್, ಕೋಸಂಬರಿಗಳಿಗೆ ಅಲಂಕಾರಿಕವಾಗಿ ಬಳಸಬಹುದು. ಹೂಗಳನ್ನು ತಂಬುಳಿ ಕೂಡಾ ಮಾಡಬಹುದು. ಹೂಗಳು ಕೊನೆಗೆ ಕಪ್ಪನೆಯ ಹಣ್ಣಾಗಿ ಪರಿವರ್ತಿತವಾಗುತ್ತವೆ. ಈ ಹಣ್ಣುಗಳಿಂದ ಹೊಸ ಗಿಡಗಳನ್ನು ಪಡೆಯಬಹುದಾಗಿದೆ.

ಬೇವು ಎಂದು ಖ್ಯಾತಿ ಪಡೆದಿರುವುದು ಔಷಧೀಯ ವೃಕ್ಷವಾಗಿರುವ ಕಹಿಬೇವು. ಕರಿ ಎಂಬ ಶಬ್ದವು ಸಾಮಾನ್ಯವಾಗಿ ಅಡುಗೆಯ ಯಾವುದೇ ರಸಭರಿತ ವ್ಯಂಜನಕ್ಕೆ ಅನ್ವಯವಾಗುವಂತಹುದು. ಅಡುಗೆಯಲ್ಲಿ ಒಗ್ಗರಣೆಗೆ ಬಳಕೆಯಾಗುವ ಇದರ ಎಲೆಗಳಿಂದಾಗಿ ಇದು ಕರಿಬೇವು. ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿಯೂ ಇದು ಕರಿವೆಪ್ಪಿಲೈ ಆಗಿದೆ, ಇಲೈ ಎಂದರೆ ಎಲೆ. ಅಡುಗೆಯಲ್ಲಿ ಉಪಯೋಗಿಸಲ್ಪಡುವ ಸಿಹಿಬೇವು ಎಂದೇ ಹೇಳಬೇಕಾಗುತ್ತದೆ.

ಕರಿಬೇವಿನೆಲೆ ಒಗ್ಗರಣೆಯೊಂದಿಗೆ " ಅಡುಗೆ ಆಯ್ತು " ಎಂಬ ಸಂದೇಶ. ಆಹ್ಲಾದಕರ ಸುವಾಸನೆಯೊಂದಿಗೆ ಊಟದ ಮನೆಗೆ ಸ್ವಾಗತ ನೀಡುವ ಈ ಎಲೆಯ ಜೀವದ್ರವ್ಯಗಳೇನೇನಿವೆ ಎಂಬುದನ್ನೂ ತಿಳಿಯೋಣ. ವಿಟಮಿನ್ ಎ ಹಾಗೂ ಖನಿಜಾಂಶಗಳು ಹೇರಳವಾಗಿವೆ, ಕ್ಯಾಲ್ಸಿಯಂ ಹಾಗೂ ವಿಟಮಿನ್ ಸಿ ಕೂಡಾ ಎಲೆಗಳಲ್ಲಿವೆ. ನೈಸರ್ಗಿಕವಾಗಿ ಲಭಿಸುವ ಈ ಸಂಪತ್ತನ್ನು ತುತ್ತು ಅನ್ನದೊಂದಿಗೆ ಕಲಸಿ ತಿನ್ನುವ ಭಾಗ್ಯ ನಮ್ಮದಾಗಿದೆ.

Posted via DraftCraft app

0 comments:

Post a Comment