Pages

Ads 468x60px

Friday 9 February 2018

ಹರಿವಾಣ ತತ್ವ



ಹಿರಣ್ಯದ ನಾಗಬನದ ಸಾನ್ನಿಧ್ಯದಲ್ಲಿ ಇನ್ನೊಂದು ದೈವಪ್ರಶ್ನೆಯ ಕಾರ್ಯಕ್ರಮ ಇಟ್ಟುಕೊಂಡಿದ್ದರು. ಆಗಮಿಸುವ ಭಕ್ತಾದಿಗಳಿಗೆ, ದೈವಜ್ಞರಿಗೆ ಆದರದ ಸತ್ಕಾರದ ವ್ಯವಸ್ಥೆಯೂ ಇದ್ದಿತು. ಆ ಸಮಯದಲ್ಲಿ ಉಳಿಕೆಯಾದ ಹಾಲನ್ನು     ‘ ಅಮೃತಫಲ ‘ ವಾಗಿಸಿ ಬ್ಲಾಗಿನಲ್ಲಿ ಬರೆದೂ ಇದ್ದೇನೆ.

ಈಗೇನಪ್ಪಾ ವಿಷಯ ಅಂದರೆ, ದೈವಸನ್ನಿಧಿಯಲ್ಲವೇ, ಎಲೆ ಅಡಿಕೆ, ಹೂ, ಗಂಧ, ಕುಂಕುಮ, ಆರತಿ, ದೀಪ ಇತ್ಯಾದಿಯಾಗಿ ಹಲವು ಹಿತ್ತಾಳೆಯ ಹರಿವಾಣ, ಗಿಂಡಿ, ಸಕ್ಕಣಗಳೂ ಒಯ್ಯಲ್ಪಟ್ಟವು.

ಸಮಾರಂಭ ಮುಗಿದೊಡನೆ ಮನೆಯ ಒಳಗೆ ತಂದಿಟ್ಟ ಸಾಮಗ್ರಿಗಳನ್ನು ತೆಗೆದಿರಿಸುತ್ತಿದ್ದಂತೆ,   “ ಅರೆ, ಒಂದು ಹರಿವಾಣ ಇಲ್ಲ! “  ಎಂದು ಗೋಚರವಾಯಿತು.

ಆದರೂ ಸಾವಧಾನವಾಗಿ ಹುಡುಕಿದರಾಯ್ತು ಎಂದು ಸುಮ್ಮನಿದ್ದರಾಗದು, “ ಚೆನ್ನಪ್ಪ, ಇನ್ನೊಮ್ಮೆ ಹೋಗಿ ಆ ಜಾಗದಲ್ಲಿ ಹುಡುಕಿ ಬಾ, ಹರಿವಾಣ ಸಿಕ್ಕಬೇಕಲ್ಲ. “

ಅವನೂ ತಿರುಗಾ ಹೋಗಿ ಬಂದ, “ ಅಲ್ಲೇನೂ ಇಲ್ಲ ಅಕ್ಕ… “

ಛೇ, ಚಿಂತೆಗಿಟ್ಟುಕೊಂಡಿತು, ಅದು ಸೊಗಸಾದ ವಿವ್ಯಾಸವುಳ್ಳ ಹರಿವಾಣ, ಬಳ್ಳಿಯಂತಹ ಚಿತ್ತಾರವೂ ಅದರ ಮೇಲೆ ಇತ್ತು. ಮಗನ ಉಪನಯನದಲ್ಲಿ ಬಂಧುಗಳು ಕೊಟ್ಟಂತಹ ಉಡುಗೊರೆಯೂ ಆಗಿದ್ದ ಆ ಹರಿವಾಣವು ನನ್ನ ಅಚ್ಚುಮೆಚ್ಚಿನದು. ಏನೇ ವಿಶೇಷ ಖಾದ್ಯ ವಸ್ತುಗಳಿದ್ದರೂ ಅದೇ ಹರಿವಾಣದಲ್ಲಿಟ್ಟು ಫೊಟೋ ತೆಗೆದು ಇನ್ ಸ್ಟಾಗ್ರಾಮ್ ಗೆ ಅಪ್ ಲೋಡ್ ಮಾಡುವ ಹವ್ಯಾಸ ನನ್ನದಾಗಿತ್ತು. ಹೆಚ್ಚಾಗಿ ಬಳಸಲ್ಪಡುತ್ತಿದ್ದುದರಿಂದ ಫಳಫಳಾ ಅಂತಿತ್ತು. ಮೂಲೆಯಲ್ಲಿಟ್ಟಂತಹ ಓಬೀರಾಯನ ಕಾಲದ ಹರಿವಾಣಗಳು ಅದೆಷ್ಟೇ ಇದ್ದರೂ, ಕಿಲುಬು ಹಿಡಿದಂತಹ ಹಳೆಯ ಹರಿವಾಣಗಳ ಉಪಯೋಗ ಇಲ್ಲ.

ನಮ್ಮೆಜಮಾನ್ರ ತನಕ ದೂರು ಹೋಯಿತು.
“ ಕಾಣೆಯಾಗಿದೆ ಅಂತ ಅನ್ಬೇಡ. “ ಎಂದು ಸುಮ್ಮನಾದರು.

ಆಯಿತು. ನಾನು ಬಾಯಿ ಮುಚ್ಚಲೇಬೇಕಾಯ್ತು, ದಿನಗಳು ಕಳೆದಂತೆ ನನ್ನ ತಲೆಯಿಂದಲೂ ಹರಿವಾಣ ಕಣ್ಮರೆ ಆಯ್ತು.




ನಿನ್ನೆ ಸಂಜೆ ನಮ್ಮವರನ್ನು ಭೇಟಿಯಾಗಲು ಬಾಲಕೃಷ್ಣ ಶೆಟ್ಟಿ ಬಂದದ್ದು ಧ್ವನಿಯಿಂದಲೇ ತಿಳಿಯಿತು. ಹೊರಚಾವಡಿಗೆ ಬಂದು “ ಆಸರಿಗೆ ತರಲೇ… “ ಕೇಳಿದಾಗ, ನಮ್ಮವರು ಟೇಬಲ್ ಮೇಲೆ ಕೈಯಿಟ್ಟು ಸನ್ನೆ ಮಾಡಿದಾಗ,

ಹರಿವಾಣ ಬೆಚ್ಚಗೆ ಪ್ಲಾಸ್ಟಿಕ್ ಕವರಿನ ಹೊದಿಕೆಯೊಳಗೆ ಕುಳಿತಿತ್ತು!

“ ಅದೇನಾಯ್ತಕ್ಕಾ ಅಂದರೆ, ನಾವು ಎಲ್ಲಾ ಪ್ಯಾಕ್ ಮಾಡಿಕೊಂಡು ಹೋದೆವಾ…. ಮನೆ ತಲಪಿದ ನಂತರವೇ ತಿಳಿದದ್ದು ಹರಿವಾಣ ಹೂ ಕುಂಕುಮದ ಒಟ್ಟಿಗೆ…. ಬಂದದ್ದು. ಅದೂ ನಮ್ಮ ಮಾವ ಇದಾರಲ್ಲ ವೆಕಪ್ಪ ಶೆಟ್ರು, ಯಾವ ಪ್ರಸಾದವನ್ನೂ ಬಿಡಬಾರದೂ ಅಂತ ಹಿಡ್ಕೊಂಡು ಬಂದಿದಾರೆ, ನಾನೂ ಆವತ್ತೇ ಹೇಳ್ಬೇಕಿತ್ತು, ದಿನಾ ಮೊಬೈಲಲ್ಲಿ ಮಾತಾಡ್ತೇವೆ, ಆದ್ರೂ ನೆನಪಾಗಬೇಕಲ್ಲ, ಹೇಗೂ ಇಲ್ಲಿಗೆ ಬರುವುದೂ ಉಂಟಲ್ಲ… “

“ ಅದೇ ವಿಷಯ, ಇವರೂ ಏನಂದ್ರು ಗೊತ್ತಾ, ಕಾಣೆಯಾಗಿದೆ ಅಂತ ಹೇಳ್ಬೇಡ… “ ನಾನೂ ಮಾತು ಮುಗಿಸಿ, ಚಹಾ ಪಾನೀಯದೊಂದಿಗೆ ‘ ಸರಳ ಅಡುಗೆಗಳು ‘ ಪುಸ್ತಕದ ಕೊಡುಗೆಯೂ ಬಾಲಕೃಷ್ಣ ಶೆಟ್ಟರಿಗೆ ಸಂದಿತು.

ಹೌದೂ, ಈ ಕಾಣೆಯಾಗುವುದೆಂದರೇನು, ಹರಿವಾಣ ಇಟ್ಟಲ್ಲಿ ಇದ್ದೀತು, ಮನುಷ್ಯ ಶರೀರ ಒಂದು ದಿನ ಕಣ್ಮರೆಯಾಗುವುದಂತೂ ನಿಜ ಅಲ್ವೇ, ಏನಂತೀರ?






0 comments:

Post a Comment