Pages

Ads 468x60px

Saturday 24 February 2018

ಹುಣಸೆ ಹಣ್ಣಿನ ಬಾತ್





ಹೊಸ ಹುಣಸೆ ಹಣ್ಣು ನಮ್ಮ ಮುಂದಿದೆ, ಏನಾದರೂ ಹೊಸತನದಲ್ಲಿ ತಿಂಡಿ ಮಾಡಲೇಬೇಕು.
ಮುಂಜಾನೆಗೊಂದು ಚಿತ್ರಾನ್ನ ಮಾಡೋಣ.
“ ಏನೂ ನಿನ್ನೆಯ ತಂಗಳನ್ನದ್ದೇ! “

ಶ್ರೀಕೃಷ್ಣ ಪರಮಾತ್ಮ ಭಗವದ್ಗೀತೆಯಲ್ಲಿ ಹೇಳಿರುವ ತತ್ವದಂತೆ ನಿನ್ನೆಯ ಉಳಿಕೆಯನ್ನು ನಾಳೆಗೆ ಬಳಸುವ ಪದ್ಧತಿ ನಮ್ಮದಲ್ಲ, ತಂಗಳನ್ನದ ಪೆಟ್ಟಿಗೆಯೂ ಭಾರತೀಯರ ಅವಿಷ್ಕಾರವಲ್ಲ.

ಒಂದು ಲೋಟ ಅಕ್ಕಿಯಿಂದ ಅನ್ನ ಉದುರುದುರಾಗಿ ಮಾಡಿಟ್ಟು ಬಿಸಿ ಆರಲು ಬಿಡಬೇಕು.

ಅದ್ಸರೀ, ಅನ್ನ ಮಾಡುವುದು ಹೇಗೆ?

ಒಂದು ಲೋಟ ಸೋನಾ ಮಸೂರಿ ಅಕ್ಕಿಯನ್ನು ಐದಾರು ಸರ್ತಿ ತೊಳೆಯಿರಿ, ನೀರು ಬಸಿಯಿರಿ.
ಮೂರು ಲೋಟ ನೀರು ಕುಕ್ಕರಿಗೆ ಎರೆದು ಸ್ಟವ್ ಮೇಲೇರಿಸಿ,
ತೊಳೆದ ಅಕ್ಕಿಯನ್ನು ಹಾಕಿ ಬೇಯಿಸಿ.  
ಮೊದಲ ಸೀಟಿ ಬಂದೊಡನೆ ಉರಿ ತಗ್ಗಿಸಿ,
 10 ನಿಮಿಷ ಬಿಟ್ಟು ಸ್ಟವ್ ಆರಿಸಿ,
ಪ್ರೆಶರ್ ಇಳಿದ ನಂತರವೇ ಮುಚ್ಚಳ ತೆರೆದು ಆರಲು ಬಿಡಬೇಕು, ಅನ್ನ ಆಯ್ತು.

ಅನ್ನ ಸಿದ್ಧವಾಗುವ ಮೊದಲೇ ತೆಂಗಿನ ಮಸಾಲೆ ತಯಾರು ಮಾಡಬೇಕಾಗಿದೆ.

ಒಂದು ಕಡಿ ತೆಂಗಿನಕಾಯಿ ತುರಿಯಿರಿ.
ನಾಲ್ಕು ಒಣಮೆಣಸು,
ಒಂದು ಚಮಚ ಸಾಸಿವೆ,
ರುಚಿಗೆ ತಕ್ಕಷ್ಟು ಉಪ್ಪು,
ಲಿಂಬೆ ಗಾತ್ರದ ಬೆಲ್ಲ, ಪುಡಿ ಮಾಡಿದ್ದು,
ಹೊಸ ಹುಣಸೆಹಣ್ಣು ಬಂದಿದೆ, ನೆಲ್ಲಿಕಾಯಿ ಗಾತ್ರದ ಹುಣಸೆಹಣ್ಣು,
ಚಿಕ್ಕ ಚಮಚ ಅರಸಿಣ,
ಇಷ್ಟೂ ಸಾಮಗ್ರಿಗಳನ್ನು ನೀರು ಹಾಕದೆ ತೆಂಗಿನತುರಿಯೊಂದಿಗೆ ಅರೆಯಿರಿ.

ಒಂದು ಕಟ್ಟು ಕೊತ್ತಂಬರಿ ಸೊಪ್ಪು ಹೆಚ್ಚಿಟ್ಟು,
ಒಂದು ದೊಡ್ಡ ನೀರುಳ್ಳಿ ಹೆಚ್ಚಿಟ್ಟು,
ಪುನಃ ಮಿಕ್ಸಿಗೆ ಹಾಕಿ, ಈಗಾಗಲೇ ಅರೆದಿರುವ ಸಾಮಗ್ರಿಗಳ ಕೂಡಾ ಎರಡು ಸುತ್ತು ತಿರುಗಿಸಿ,
ತೆಂಗಿನ ಅರಪ್ಪು ಮಿಕ್ಸಿಯಿಂದ ಹೊರಗೆ ಬರಲಿ.



ಇನ್ನು,
ಬಾಣಲೆಗೆ ನಾಲ್ಕು ಚಮಚ ಶುದ್ಧವಾದ ತೆಂಗಿನೆಣ್ಣೆ ಎರೆದು,
2 ಚಮಚ ಸಾಸಿವೆ,
1 ಚಮಚ ಉದ್ದಿನಬೇಳೆ,
2 ಚೂರು ಒಣಮೆಣಸು,
ಸಾಸಿವೆ ಸಿಡಿದ ನಂತರ ಒಂದೆಸಳು ಕರಿಬೇವು ಹಾಕಿ,
ತೆಂಗಿನ ಅರಪ್ಪನ್ನು ಬೀಳಿಸಿ,
ಸೌಟಾಡಿಸಿ,
ಉರಿ ತಗ್ಗಿಸಿ,
ಮಾಡಿಟ್ಟ ಅನ್ನ ತಣಿದಿದೆ,
ಅವಶ್ಯವಿರುವಷ್ಟು ಅನ್ನ ಸೇರಿಸಿ,
ಸೌಟಿನಲ್ಲಿ ಕೆದಕಿ,
ಮೇಲಿನಿಂದ ತುಸು ನೀರು ಸಿಡಿಸಿದಂತೆ ಎರೆದು,
ಒಂದರೆಗಳಿಗೆ ಮುಚ್ಚಿ ಇಟ್ಟು ಸ್ಟವ್ ನಂದಿಸಿ.

ಇದೀಗ ಚಿತ್ರಾನ್ನವೆಂಬ ಹೆಸರಿನ ಕೊತ್ತಂಬರಿ ಸೊಪ್ಪಿನ ಬಾತ್/ ಹುಣಸೆ ಹಣ್ಣಿನ ಬಾತ್/ ನೀರುಳ್ಳಿಬಾತ್ ನಮ್ಮ ಮುಂದಿದೆ.



ಹುಣಸೆಯು tamarindus indica ಎಂಬ ಹೆಸರಿನಲ್ಲಿ ಸಸ್ಯಲೋಕದಲ್ಲಿ ಖ್ಯಾತಿ ಪಡೆಡಿದೆ. ಜಾಗತಿಕ ಮಟ್ಟದಲ್ಲಿ ಭಾರತವೇ ಹೆಚ್ಚು ಹುಣಸೆ ಹಣ್ಣಿನ ಉತ್ಪಾದಕ ರಾಷ್ಟ್ರವಾಗಿದೆ. ಅಡುಗೆ ಉಪಯೋಗದಲ್ಲಿ ಹಾಗೂ ಔಷಧಿಯಾಗಿ ಬಳಸುವಲ್ಲಿಯೂ ನಾವೇ ಮುಂದು.

 ಕ್ಯಾಲ್ಸಿಯಂ ಸಮೃದ್ಧಿಯ ಹುಣಸೆ ಹಣ್ಣು ಪಿತ್ತಶಾಮಕ. ಹಳೆಯ ಹುಳಿ ಆದಷ್ಟೂ ಉತ್ತಮ. ಹಳೆಯ ಹುಣಸೆ ಹುಳಿಗೆ ಕೂಡಾ ಬೇಡಿಕೆ ಇದೆ. ಲೋಹದ ಪಾತ್ರೆ ಉಪಕರಣಗಳನ್ನು ತೊಳೆದು ಝಗಮಗಿಸುವ ಹೊಳಪು ನೀಡುವ ಶಕ್ತಿ ಈ ಹಣ್ಣಿನಲ್ಲಿದೆ.

ಹಳೆಯ ಹುಣಸೆ ಹಣ್ಣಿನ ಪಾನಕ, ಬೇಸಿಗೆಯ ದಾಹ ನಿವಾರಕ. ಇದನ್ನು ಮಾಡುವುದು ಹೇಗೆ?

ಲಿಂಬೆ ಗಾತ್ರದ ಹುಳಿ
ಮೂರು ಅಚ್ಚು ಬೆಲ್ಲ
2 ಚಮಚ ಕಾಳುಮೆಣಸು
1 ಚಮಚ ಜೀರಿಗೆ

ಹುಳಿಯನ್ನು ನೀರೆರೆದು ಚೆನ್ನಾಗಿ ಕಿವುಚಿ, ನಿರುಪಯುಕ್ತ ಚರಟವನ್ನು ಶೋಧಿಸಿ,
ಬೆಲ್ಲವನ್ನು ನೀರೆರೆದು ಕುದಿಸಿ ಕರಗಿಸಿ,
ಹುಣಸೆ ರಸವನ್ನು ಎರೆದು,
ಸಾಂದ್ರವಾದ ಈ ದ್ರಾವಣಕ್ಕೆ ಹುಡಿ ಮಾಡಿದ ಕಾಳುಮೆಣಸು ಹಾಗೂ ಜೀರಿಗೆ ಹಾಕಿ ಕುದಿಸಿ.
ಪಾನಕದಂತೆ ಕುಡಿಯಲು ಸೂಕ್ತವಾಗುವಂತೆ ನೀರು ಎರೆಯಿರಿ.
ಉಪ್ಪು ಹಾಕದೇ ರುಚಿಯಿಲ್ಲ ಎಂಬ ಸೂಕ್ತಿಯಂತೆ ತುಸು ಉಪ್ಪು ಹಾಕುವಲ್ಲಿಗೆ ಪಾನಕ ತಯಾರಾಗಿದೆ.
ಬಿಸಿ ಇರುವಾಗಲೂ ಕುಡಿಯಿರಿ, ಆರಿದ ನಂತರವೂ ಕುಡಿಯಿರಿ, ಮನೆಗೆ ಬರುವ ಅತಿಥಿಗಳನ್ನು ಇದೇ ಪಾನಕದಿಂದ ಸತ್ಕರಿಸಿ.




0 comments:

Post a Comment