Pages

Ads 468x60px

Tuesday 25 December 2018

ಶ್ಯಾವಿಗೆ ಪೊಂಗಲ್




ನಾಗಬನದ ಪರಿಸರದಲ್ಲಿ ಅಷ್ಟಮಂಗಲ ಸ್ವರ್ಣಪ್ರಶ್ನೆಯ ವೇಳೆ ದೈವಸಾನ್ನಿಧ್ಯದ ಕುರುಹುಗಳ ಕುರಿತು ತಿಳಿದಾಗಿನಿಂದ ಧಾರ್ಮಿಕ ವಿಧಿವಿಧಾನಗಳೂ, ಹೋಮಹವನಗಳೂ, ಭಕ್ತಾದಿಗಳ ಜನಜಾತ್ರೆಯೂ ಸೇರಿ ಆಗ್ಗಿಂದಾಗ್ಗೆ ಅನ್ನಸಂತರ್ಪಣೆಯ ಸಂಭ್ರಮಕಾಲ. ಆದಷ್ಟು ಬೇಗ ದೇವಾಲಯ ನಿರ್ಮಾಣದ ಸಂಕಲ್ಪದೊಂದಿಗೆ ದುರ್ಗಾಮಾತೆಗೆ ತಾತ್ಕಾಲಿಕ ನೆಲೆ ಒದಗಿಸಿ ಕೊಟ್ಟು ಬಾಲಾಲಯ ಪ್ರತಿಷ್ಠೆಯೂ ನಡೆಯಿತು. ವ್ಯವಸ್ಥಿತವಾಗಿ ಕಾರ್ಯಕ್ರಮಗಳು ನಡೆದ ನಂತರ ದೇವಿಯ ಆಲಯ ನಿರ್ಮಾಣ ಆಗುವ ತನಕ ಪ್ರತಿ ತಿಂಗಳೂ ಸಂಕ್ರಾಂತಿಯ ದಿವಸ, ಸಂಧ್ಯಾಕಾಲದಲ್ಲಿ ದುರ್ಗಾಪೂಜೆ, ಹೂವಿನಪೂಜೆ, ಕುಂಕುಮಾರ್ಚನೆ, ಭಜನೆಗಳನ್ನು ಭಕ್ತ ಸಮುದಾಯ ಹಮ್ಮಿಕೊಂಡಿದೆ.

ಊಟೋಪಚಾರದ ವ್ಯವಸ್ಥೆಗಾಗಿ ತಂದಿದ್ದ ಅಡುಗೆ ಸಾಮಗ್ರಿಗಳೂ, ತರಕಾರಿಗಳೂ, ಮಜ್ಜಿಗೆ, ಹಾಲು ಇತ್ಯಾದಿ ಉಳಿದಿವೆ. ಉಳಿಕೆಯಾಗಿದ್ದನ್ನು ಪುನಃ ಜಗ್ಗಣ್ಣನ ಅಂಗಡಿಗೆ ವಾಪಸ್ ಮಾಡುವ ವ್ಯವಸ್ಥೆ, ಬಾಲಕೃಷ್ಣ ಶೆಟ್ಟಿಯ ನೇತೃತ್ವದಲ್ಲಿ ನಡೆಯುತ್ತ ಇದ್ದಾಗ, ಅಡುಗೆ ಮನೆಯೊಳಗೆ ಇದ್ದಂತಹ ಪ್ಯಾಕೇಟುಗಳು, ಎಣ್ಣೆ, ಮೆಣಸಿನ ಹುಡಿ, ಅವಲಕ್ಕಿ, ಸಕ್ಕರೆ ಇತ್ಯಾದಿಗಳು ಹೊರ ನಡೆದುವು. ತರಕಾರಿ, ಮಜ್ಜಿಗೆ ವಗೈರೆ ಹಂಚಿಕೊಂಡಿದ್ದಾಯ್ತು, ನನಗೂ ಒಂದು ಕುಂಬಳಕಾಯಿ ದೊರೆಯಿತು.

“ ದಾಸಪ್ಪ, ಈ ಬಕೇಟ್ ಒಳಗೆ ನಾಲ್ಕು ಶಾವಿಗೆ ಪ್ಯಾಕೇಟು ಉಂಟಲ್ಲ… “
“ ಇದನ್ನು ಪಾಯಸ ಮಾಡದೇ ಇಟ್ಟಿದ್ದು ಯಾಕೆ? “
“ ಈ ಅಡುಗೆಯವರಿಗೆ ಶಾವಿಗೆ ಪ್ಯಾಕಟ್ಟು ಕೊಟ್ರೆ ಏನೋ ಮಾಡಿ ಹಾಕ್ತಾರೆ.. ಬಂದವರಿಗೆ ಪಾಯಸ ಸುರಿದು ಉಂಡ ಹಾಗೆ ಆಗಬೇಕಲ್ಲ. ಶಾವಿಗೆ ಪಾಯಸಕ್ಕೆ ಸಕ್ಕರೆ ಹಾಕ್ಬೇಕು. ಪಾಯಸದ ಖುಷಿ ಸಿಗಬೇಕಾದ್ರೆ ಕಡ್ಲೆಬೇಳೆಯದ್ದೇ ಆಗ್ಬೇಕು, ಅದೂ ದಪ್ಪ ದಪ್ಪ ಇರಬೇಕು, ಹೆಸ್ರುಬೇಳೆ ಆಗ್ತದೆ, ಅದನ್ನು ಹುರಿಯಬೇಕು, ಹುರಿದದ್ದು ಹೆಚ್ಚುಕಮ್ಮಿ ಆದ್ರೂ ಮೋಸವೇ... “ ಬಾಲಕೃಷ್ಣನ ವಾಗ್ಝರಿ ಮುಂದುವರಿಯುತ್ತಿದ್ದ ಹಾಗೆ, “ ಹ್ಞಾ, ಸರಿ ಸರಿ.. “ ಎಂದು ಒಪ್ಪಲೇ ಬೇಕು.

ಅಂತೂ ನಾಲ್ಕೂ ಶ್ಯಾವಿಗೆ ಪ್ಯಾಕೇಟುಗಳನ್ನು ನನ್ನ ಅಡುಗೆ ಪ್ರಯೋಗಶಾಲೆಗೆ ಒಪ್ಪಿಸಲಾಯಿತು.
“ ಏನ್ಮಾಡ್ಲೀ… “
ಏನೋ ಒಂದು ಹೊಸ ರುಚಿ ಮಾಡೋಣ.

ಶ್ಯಾವಿಗೆಯನ್ನು ಹುರಿಯಬೇಕಿಲ್ಲವೆಂಬ ಸೂಚನೆ ಪ್ಯಾಕೇಟಿನಲ್ಲಿ ಇದ್ದಿತು.
ಒಂದು ಲೋಟ ತುಂಬ ಶ್ಯಾವಿಗೆ,
ಎರಡು ಲೋಟ ನೀರು ತುಂಬಿ,
ಚಿಟಿಕೆ ಉಪ್ಪು ಹಾಕಿ ಕುಕ್ಕರಿನಲ್ಲಿ ಒಂದು ಸೀಟಿ ಕೂಗಿಸಿ,
ಕೆಳಗಿಳಿಸಿ,
ಒತ್ತಡ ಇಳಿದ ನಂತರ ಮುಚ್ಚಳ ತೆರೆದು,
ಬೆಂದಿದೆ,
ಧೊಡ್ಡ ಅಚ್ಚು ಬೆಲ್ಲ ಹಾಕಿರಿಸುವುದು, ಕರಗುತ್ತಿರಲಿ. ಬೆಲ್ಲವನ್ನು ನೀರಿನಲ್ಲಿ ಕರಗಿಸಿ ಎರೆದಿರಾದರೆ, ನೀರನ್ನು ಇಂಗಿಸಲು ವೃಥಾ ಶ್ರಮ ಪಡಬೇಕಾದೀತು. ಸಮಯವೂ ಹಾಳು.
2 ಚಮಚ ತುಪ್ಪ ಎರೆಯಿರಿ.
ಒಂದು ಹಿಡಿ ತೆಂಗಿನತುರಿ ಹಾಕುವುದು.
ಪುನಃ ಕುಕರ್ ಒಲೆಗೇರಲಿ, ಸಟ್ಟುಗದಲ್ಲಿ ಆಡಿಸುತ್ತ ಇದ್ದ ಹಾಗೆ ಬೆಲ್ಲ ಕರಗಿ ಶ್ಯಾವಿಗೆಯೊಂದಿಗೆ ಬೆರೆತು ಬಂದಾಗ ಹುಡಿ ಮಾಡಿದ ಏಲಕ್ಕಿ, ತುಪ್ಪದಲ್ಲಿ ಹುರಿದ ಗೇರುಬೀಜ, ದ್ರಾಕ್ಷಿ ಹಾಕುವುದು.

ಬಹಳ ಬೇಗನೇ ಆಗುವ ಈ ಸಿಹಿ ತಿನಿಸನ್ನು ನಮ್ಮ ಮನೆಯವರು ಇಷ್ಟಪಟ್ಟು ತಿಂದರು.
ಸಂಜೆವೇಳೆ ಬಾಲಕೃಷ್ಣ ಬಂದ, ಖುಷಿಖುಷಿಯಾಗಿ ತಿಂದ್ಬಿಟ್ಟು, “ ಹೌದೂ, ಇದೇನು ಹಲ್ವದ ಹಂಗಾಯ್ತಲ್ಲ… “ ಅಂದ.
“ ಧನುರ್ಮಾಸ ಬಂತಲ್ಲ, ಇದೂ ಶ್ಯಾವಿಗೆ ಪೊಂಗಲ್… “

               




0 comments:

Post a Comment