Pages

Ads 468x60px

Sunday 30 June 2019

ಕುಟಜಾ ಸಾರು











" ಮಳೆಗಾಲದ ಮಾವಿನಹಣ್ಣು ತಿನ್ನಲು ಇನ್ನೊಂದು ಉಪಾಯ ಉಂಟು.. " ಎಂದರು ಗೌರತ್ತೆ.

 ಮಳೆಗಾಲದ ಮಾವಿನಹಣ್ಣು ಅಂದರೆ ಅದೂ ಮರದಿಂದ ನೆಲಕ್ಕೆ ಉದುರಿ ಬಿದ್ದುದನ್ನು ಹೆಚ್ಚಿನವರು ತಿನ್ನಲು ಹಿಂಜರಿಯುತ್ತಾರೆ. ಹುಳಹುಪ್ಪಟಿಗಳ ಕಾಟ, ಕ್ರಿಮಿಕೀಟಗಳ ಬಾಧೆ, ಕಾಡುಪ್ರಾಣಿಗಳ ಧಾಳಿ... ಇವೆಲ್ಲ ಹಳ್ಳಿಯಲ್ಲಿ ವಾಸವಾಗಿರುವವರಿಗೆ ಮಾತ್ರ ಗೊತ್ತು. ಅನಾರೋಗ್ಯಕರ ಎಂದು ತಿನ್ನದಿರಲು ಆದೀತೇ.. ಅದಕ್ಕಾಗಿ ಗೌರತ್ತೆಯ ಮಾರ್ಗದರ್ಶನ ಇಲ್ಲಿ ಬಂದಿದೆ.

ಹಿರಣ್ಯದ ನಾಗಬನದ ಸಮೀಪ ಶ್ರೀದೇವಿ ಆಲಯದ ನಿರ್ಮಾಣ ಇತ್ತೀಚೆಗೆ ಆಯಿತು. ಕಾಡು ಗಿಡಗಂಟಿಗಳೂ, ಪೊದರುಗಳಿಂದಲೂ ಆವೃತವಾಗಿದ್ದ ಪ್ರದೇಶ ಸಮತಟ್ಟಾಗಿ ಮನುಷ್ಯ ಸಂಚಾರ ಯೋಗ್ಯವಾಗಿ ಪರಿವರ್ತಿತವಾಗಿದೆ. ಇಲ್ಲಿಯೇ ನಮ್ಮ ಸೊನೆ ಮಿಡಿಯ ಮಾವಿನ ಮರ ಇದೆ.        

" ದೇವರ ದರ್ಶನವೂ ಆಯ್ತು, ಮಾವಿನಹಣ್ಣು ಹೆಕ್ಕಿದ ಹಾಗೂ ಆಯ್ತು " ಎಂದು ಭಕ್ತ ಮಹನೀಯರೆಲ್ಲ ಮಾವಿನಹಣ್ಣು ಹೆಕ್ಕುವವರು. ಈ ವರ್ಷ ಮಾವಿನ ಮರದ ಬುಡದಲ್ಲಿ ಹುಳಕೀಟಗಳ ಬಾಧೆಯಿಲ್ಲ,. ಒಂದೇ ಒಂದು ಮಾವಿನ ವಾಟೆಯೂ ಮರದ ಬುಡದಲ್ಲಿ ಸಿಗಬೇಕಲ್ಲ!

" ಯಾರ ಕಣ್ಣಿಗೂ ಗೋಚರವಾಗದ ಈ ಮರ ದೈವಸಾನ್ನಿಧ್ಯದಿಂದ ಕೃತಾರ್ಥವಾಯಿತು.. " ಇದು ದೇವಾಲಯದ ರೂವಾರಿಯಾದ ನಮ್ಮೆಜಮಾನ್ರ ಅಂಬೋಣ.

 "...ಉಪಾಯ ಉಂಟು. " ಎನ್ನುತ್ತ ಬಂದ ಗೌರತ್ತೆ ಸೀರೆಯ ಸೆರಗಿನ ಕಟ್ಟು ಬಿಡಿಸಿ ಬೆಳ್ಳಗಿನ ಹೂವುಗಳನ್ನು ಟೇಬಲ್ ಮೇಲೆ ಹರವಿದರು.

"ಕೊಡಗಸನ ಹೂ ತಂದ್ರಾ.. ತಂಬುಳಿ ಮಾಡೂದ ಹೇಗೆ? "

" ಹೇಗೂ ಮಾವಿನಹಣ್ಣಿನ ಗೊಜ್ಜು ಮಾಡ್ತೀಯಲ್ಲ, ಈ ಅರಳಿದ ಹೂ, ಒಗ್ಗರಣೆ ಸಟ್ಟುಗದಲ್ಲಿ ಬಾಡಿಸಿ, ಬರೇ ಬಾಡಿಸಿದ್ರೆ ಸಾಲದು, ಹುರಿಯಬೇಕು... ಆ ಮೇಲೆ ನಿನ್ನ ಗೊಜ್ಜಿಗೆ ಹಾಕಿ ಅಲಂಕರಿಸುವುದು. "
" ಓ, ಸಾರು ಮಾಡೂದಾ, ತಂಬ್ಳಿ ಬೇಡ ಹಂಗಿದ್ರೆ.. "
" ಹೀಗೂ ಆಗುತ್ತೆ, ಕೊಡಗಸನ ಸಾರು ಅಂತ ಹೆಸರಿಟ್ಟರಾಯ್ತು. "

ಅಂತೂ ನನ್ನ ಬರವಣಿಗೆಯ ಥೀಮ್, ಡಯಲಾಗ್ ಎಲ್ಲವನ್ನೂ ಗೌರತ್ತೆಯೇ ಹೊಸೆದು ಕೊಟ್ಟರು.

ಮದ್ಯಾಹ್ನ ಉಣ್ಣುವ ಮೊದಲು ಗೊಜ್ಜು ಫೋಟೋ ತೆಗೆದೂ ಆಯಿತು.

ಗೊಜ್ಜು ಮಾಡಿದ್ದು ಹೇಗೆ?

ಎರಡು ಮಾವಿನಹಣ್ಣುಗಳನ್ನು ತೊಳೆದು,
ತೊಟ್ಟು ಸಿಪ್ಪೆ ತೆಗೆದು,
ಸಿಪ್ಪೆ ಹಾಗೂ ಗೊರಟು ಸಹಿತವಾಗಿ,
ಎರಡು ಲೋಟ ನೀರೆರೆದು,
ಗಿವುಚುವುದೇನೂ ಬೇಡ,
ರುಚಿಗೆ ಉಪ್ಪು ಮತ್ತು ಒಂದು ಅಚ್ಚು ಬೆಲ್ಲ ಇರಲಿ,
ಕುದಿಸಿ ಕೆಳಗಿಳಿಸುವುದು.

ಸಿಪ್ಪೆಯೂ ಆರೋಗ್ಯಕರ ಹಾಗೂ ಬೇಯಿಸಿದ ಕಾಟ್ ಮಾವಿನ ಸಿಪ್ಪೆಯೂ ರುಚಿಕರ.

ಒಗ್ಗರಣೆಗೆ ತುಪ್ಪ, ಸಾಸಿವೆ, ಒಣಮೆಣಸು.
ಸಾಸಿವೆ ಸಿಡಿಯಲುಆರಂಭವಾದಾಗ ಕೊಡಗಸನ ಹೂಗಳನ್ನು ಹಾಕಿ, ಚೆನ್ನಾಗಿ ಕಂದು ಬಣ್ಣ ಬರುವ ತನಕ ಹುರಿದು ಹಾಕುವುದು.

ಈ ಸಾರು/ಗೊಜ್ಜು ರಾತ್ರಿಯೂಟಕ್ಕೆ ಉಳಿಯಲಿಲ್ಲವೆಂದು ಬೇರೆ ಹೇಳಬೇಕಾಗಿಲ್ಲ.

ಕೊಡಸಿಗೆ, ಕೊಡಗಸನ, ಎಂದು ರೂಢಿಯಾಗಿ ಕರೆಯಲ್ಪಡುವ ಈ ಸಸ್ಯ ವರ್ಗ ನಂದಿಬಟ್ಟಲು ಹೂವಿನ ಕುಟುಂಬಕ್ಕೆ ಸೇರಿದುದಾಗಿದೆ. ಬೆಟ್ಟಗುಡ್ಡಗಳಲ್ಲಿ ಕಾಣಸಿಗುವ ಕುಟಜ ವೃಕ್ಷವನ್ನು ಸಂಸ್ಕೃತದ ಕಾವ್ಯಭಾಷೆ ಗಿರಿಮಲ್ಲಿಕಾ ಎಂದಿದೆ. ನಮ್ಮೂರಿನ ಆಡುಮಾತು ತುಳುವಿನಲ್ಲಿ ಕೊಡಂಚಿ. ಕುಟಜವನ್ನು ಆಯುರ್ವೇದವು ಔಷಧೀಯ ಸಸ್ಯವೆಂದು ಪರಿಗಣಿಸಿದೆ, ಕುಟಜಾ ತಂಬುಳಿ ಎಂಬ ಬ್ಲಾಗ್ ಬರಹದಲ್ಲಿ ಸಾಕಷ್ಟು ವಿವರಣೆಗಳನ್ನು ಬರೆದಿದ್ದೇನೆ.
 ಹೊಟ್ಟೆಯುಬ್ಬರಿಸುವಿಕೆ, ಹುಳಿತೇಗು, ಜೀರ್ಣಕ್ರಿಯೆ ಸರಿಯಿಲ್ಲದಿರುವಿಕೆ ಇತ್ಯಾದಿ ಜಠರ ಸಂಬಂಧಿ ತೊಂದರೆಗಳಿಗೆ ಕುಟಜಾರಿಷ್ಠವನ್ನು ಮನೆಯಲ್ಲಿ ತಂದಿಟ್ಟುಕೊಳ್ಳದವರಿಲ್ಲ.

ಸಸ್ಯವಿಜ್ಞಾನವೂ ಕುಟಜ ವೃಕ್ಷವನ್ನು ಆ್ಯಂಟಿಡೀಸೆಂಟ್ರಿಕಾ ಎಂದು ಕೊಂಡಾಡುತ್ತ Holarrhena antidysenterica ಎಂಬ ಹೆಸರನ್ನೂ ಕೊಟ್ಟಿರುತ್ತದೆ.



0 comments:

Post a Comment