ದೊಡ್ಡದೊಂದು ಹಲಸಿನ ಹಣ್ಣು.
" ಕೊಟ್ಟಿಗೆ ಮಾಡಿದ್ರೂ ಮುಗಿಯುವುದಿಲ್ಲ.. ಸುಮ್ಮನೇ ಯಾಕೆ? "
" ಮೊದಲೆಲ್ಲ ಹಣ್ಣುತುಪ್ಪ ಮಾಡ್ತಿದ್ರು.." ಗೌರತ್ತೆ.
" ನಂಗೆ ಹಣ್ಣುತುಪ್ಪ ತಿಂದು ಗೊತ್ತೇ ಇಲ್ಲ.. ಹೇಗೋ.. "
" ಉಂಟಲ್ಲ ಅಡಿಗೆ ಪುಸ್ತಕ, ನೋಡು. "
ಗೌರತ್ತೆ ಹೇಳಿದಂತೆ ಕಡಂಬಿಲ ಸರಸ್ವತಿ ಬರೆದ ಪ್ರಸಿದ್ಧ ಅಡಿಗೆ ಪುಸ್ತಕ ನೋಡಿ...
ಸಿಹಿಯಾದ ಬಕ್ಕೆ ಹಲಸಿನ ಹಣ್ಣು ಮತ್ತು ನೀರು.
ಇಷ್ಟೇ, ಬೇರೇನೂ ಬೇಡ.
ಮಾಡೋಣ.
ಹಣ್ಣಿನ ಸೊಳೆಗಳ ಬೇಳೆ ತೆಗೆದು ಬೇರೆ ಇಟ್ಟು,
ಅಟ್ಟಿನಳಗೆಯಲ್ಲಿ ತುಂಬಿಸಿ,
ಮುಳುಗುವಷ್ಟು ನೀರೆರೆದು,
ಅಟ್ಟಿನಳಗೆಯೆಂದರೆ ಇಡ್ಲಿ ಪಾತ್ರೆ ಎಂದು ತಿಳಿದಿರಲಿ.
ಒಲೆಗೇರಿಸಲಾಯಿತು.
“ ಮೊದಲಿಗೆ ಕಟ್ಟಿಗೆ ಒಲೆಯಲ್ಲಿ ಮಾಡ್ತಿದ್ರು, ಅದು ಗಳ ಗಳ ಕುದಿದು ಕುದಿದೂ.. “
“ ಹೌದ.. “
“ ಆ ಕಾಲದಲ್ಲಿ ಮಳೆಗಾಲದಲ್ಲಿ ಕೆಲಸದಾಳುಗಳಿಗೆ ಏನೋ ಒಂದು ಕೆಲ್ಸ ಅಂತ ಆಗ್ಬೇಕಲ್ಲ.. ಹೀಗೆ ಹಲಸಿನಕಾಯಿ ಕೆಲ್ಸ ಮಾಡಲುಹೇಳಿದರಾಯಿತು.. “
“ತೋಟದಿಂದ ಹಣ್ಣು ತರುವುದು, ಆಯ್ದು ಇಡುವುದು, ಆ ಮೇಲೆ ಮನೆಯಿಂದ ಹೊರಗೆ ಇರುವ ಕೊಟ್ಟಗೆಯಲ್ಲಿ ಒಲೆ ಉರಿಸಿ, ದೊಡ್ಡ ಕಟಾರ ಇಟ್ಟು, ಅದರೊಳಗೆ ಹಲಸಿನ ಹಣ್ಣು ತುಂಬಿಸಿ.. "
" ಸರಿ ಸರಿ, ಗೊತ್ತಾಯ್ತು ಬಿಡಿ.. "
" ಅದಕ್ಕೆ ಬಾವಿಯಿಂದ ನೀರೆಳೆದು ತುಂಬಿಸಿ, ಅದು ಕುದಿದೂ ಕುದಿದು, ಬೆಂದ ಸೊಳೆಗಳನ್ನು ತೆಗೆದೂ ತೆಗೆದು.. ಹಟ್ಟಿಯಲ್ಲಿರುವ ದನಗಳ ಅಕ್ಕಚ್ಚಿನ ಬಾಲ್ದಿಗೆ ಹಾಕಿ ಇಡೂದು. "
" ಹ್ಞಾ.. "
" ದನಕರುಗಳೂ ಖುಷಿಯಾಗಿ ಈ ಬೇಯಿಸಿದ ಸೊಳೆ ತಿಂತಾವೇ... ಕರೆಯುವ ದನಕ್ಕೆ ಹಾಲೂ ಜಾಸ್ತಿ ಆಗುತ್ತೆ.. "
ಇದೆಲ್ಲ ನನಗೆ ಗೊತ್ತಿಲ್ಲದಿಲ್ಲ, ಆದರೂ ಗೌರತ್ತೆ ಹೇಳೋ ಹಳೇ ಕತೆ ಕೇಳಲು ಒಂಥರಾ ಖುಷಿ.
" ಈಗ ಏನಾಯ್ತು ನಿನ್ನ ಹಣ್ಣು? "
" ಕುದಿಯುತ್ತಾ ಇದೆ. "
" ಚೆನ್ನಾಗಿ ಬೇಯಲಿ.. ಆರಿದ ನಂತರ ನೀರು ಬಸಿಯುವುದು. "
ಈಗಲೇ ರಾತ್ರಿ ಆಗಿ ಹೋಯಿತು. ಸ್ಟವ್ ನಂದಿಸಿ, ಏನಿದ್ದರೂ ನಾಳೆಗಾಯಿತು.
ಮಂಜಾನೆಯ ತಿಂಡಿತೀರ್ಥ ಆದಾಗಲೇ ಗಂಟೆ ಒಂಭತ್ತಾಗಿತ್ತು.
ಹಲಸಿನಹಣ್ಣು ತುಂಬಿದ ಅಟ್ಟಿನಳಗೆಯ ಬಾಯಿ ತೆರೆಯಿತು.
ಹಣ್ಣಿನ ಸೊಳೆ, ನೀರು ಎಲ್ಲವೂ ಒಂದಾಗಿ ಮುದ್ದೆಯಂತಾಗಿತ್ತು.
" ಹಾ.. ಹೀಗಾಯ್ತ? ಇನ್ನು ನೀರು ಬಸಿಯುವುದು ಹೇಗೆ? ಹಣ್ತುಪ್ಪದ ಆಸೆ ಹೋಯ್ತು.. " ಗೌರತ್ತೆಯೂ ಬಗ್ಗಿ ನೋಡಿ ಅಂದ್ರು. " ನೀ ಚಿಂತೆ ಮಾಡಬೇಡ, ಸೊಳೆ ಗಿವುಚಿ ತೆಗೆದು ಉಳಿದ ರಸಕ್ಕೆ ಬೆಲ್ಲ ಹಾಕಿ ಕುದಿಸಿ ಇಟ್ಕೊಳ್ಳೋಣ. "
ಗಿವುಚಿ ಗಿವುಚಿ ಸೊಳೆ ಹೊರ ಹಾಕಲಿಕ್ಕೆ ಗೌರತ್ತೆಯೂ ನೆರವು ನೀಡಿದರು. " ಈ ಸೊಳೆ ಬಿಸಾಡೂದು ಬೇಡ, ನಾಯಿಗೆ ಹಾಕಲಿಕ್ಕೆಇರಲಿ."
ನಮ್ಮ ನಾಯಿಗೂ ಹಲಸಿನ ಹಣ್ಣು ಅಂದ್ರೆ ಪಂಚಪ್ರಾಣ. ಸೊಳೆಗಳನ್ನು ಇನ್ನೊಂದು ನಾನ್ ಸ್ಟಿಕ್ ಕಡಾಯಿಯಲ್ಲಿ ತುಂಬಿ, ಒಂದುಅಚ್ಚು ಬೆಲ್ಲವನ್ನೂ ಹಾಕಿ ಒಲೆಯ ಮೇಲಿಟ್ಟೆವು. ಅದರಲ್ಲಿರುವ ನೀರನ್ನು ಇಂಗಿಸದಿದ್ದರೆ ನಾಳೆ ಬಿಸಾಡಬೇಕಾದೀತು, ನಾಯಿಯಾದರೂ ತಿನ್ನಲಿ.
ಇಂಡಕ್ಷನ್ ಒಲೆಯ ಮೇಲೆ ಹಲಸಿನ ಹಣ್ಣಿನ ರಸ, ಇದು ಏನೇ ರಸಗಟ್ಟಿಯಾದರೂ ಹಣ್ಣುತುಪ್ಪ ಅನ್ನುವಂತಿಲ್ಲ, ಹಣ್ಣಿನಲ್ಲಿರುವಹಿಟ್ಟಿನಂಶವೂ ಕೂಡಿದ ರಸ, ಬೆಲ್ಲವನ್ನೂ ಬೆರೆಸಿಕೊಂಡು ಕುದಿಯತೊಡಗಿತು. ಇದಕ್ಕೂ ಒಂದು ಅಚ್ಚು ಬೆಲ್ಲ ಬಿದ್ದಿತು.
ಹಣ್ಣಿನ ರಸ ಕುದಿಸುವ ವ್ಯವಹಾರವನ್ನು ಗೌರತ್ತೆಯ ಸುಪರ್ದಿಗೆ ಬಿಟ್ಟು, ನನ್ನ ಇನ್ನಿತರ ಕೆಲಸಕಾರ್ಯಗಳೂ, ಜೊತೆಗೇ ಫೇಸ್ ಬುಕ್, ವಾಟ್ಸಾಪ್ ಗಳೂ, ಹಾಗೂ ನನ್ನಲ್ಲಿದ್ದ ಹಳೆಯ ಅಡುಗೆ ಪುಸ್ತಕಗಳನ್ನು ತಿರುವಿ ಹಾಕಿದಾಗ...
ಜಯಾ ಶೆಣೈ ಬರೆದಂತಹ ಪುಸ್ತಕದ ಕೊನೆಯ ಪುಟಗಳಲ್ಲಿ ಹಲಸಿನ ಹಣ್ಣಿನ ಮುರಬ್ಬ ಎಂಬ ಹೆಸರು ಹೊತ್ತಂತಹ ಅಡುಗೆಯೊಂದುಕಾಣಬೇಕೇ...
ಈಗ ನಾನು ಮಾಡಿದಂತಹ ಎಡವಟ್ಟು ರಸಪಾಕಕ್ಕೂ ಈ ಮುರಬ್ಬಕ್ಕೂ ತಾಳಮೇಳ ಸರಿ ಹೊಂದಿತು!
" ಆಯಿತು ನೋಡು, ಎರಡೆಳೆ ಪಾಕ ಬಂತು. " ಎನ್ನುತ್ತ ಗೌರತ್ತೆ ಅಡುಗೆಮನೆಯಿಂದ ಹೊರ ಬಂದರು.
“ ನಾಯಿಗೇಂತ ಇಟ್ಟ ಸೊಳೆ ಏನಾಯ್ತು? "
" ಅದೂ ಆಯ್ತು, ಆರಿದ ಮೇಲೆ ಜಾಡಿಯಲ್ಲಿ ತುಂಬಿಸಿ ಇಡು, ನಾಯಿಗೆ ದಿನಕ್ಕೊಂದು ಸೌಟು ಹಾಕಿ ಮುಗಿಸುವುದು.."
ಮೊದಲಿಗೆ ಮುರಬ್ಬದಿಂದ ಸುಟ್ಟವು ಮಾಡಲಾಯಿತು.
1 ಕುಡ್ತೆ ಅಕ್ಕಿ ಹುಡಿ,
ಸ್ವಲ್ಪ ಕಾಯಿತುರಿ, ಮಿಕ್ಸಿಯಲ್ಲಿ ನೀರು ಹಾಕದೆ ಹುಡಿ ಮಾಡುವುದು.
1 ಚಮಚ ಎಳ್ಳು, ಎಣ್ಣೆ ಹಾಕದೆ ಹುರಿದು ಜಜ್ಜಿ ಇಡುವುದು.
2 ಸೌಟು ಹಣ್ಣಿನ ಮುರಬ್ಬ
ರುಚಿಗೆ ಉಪ್ಪಿನ ಹುಡಿ
ಎಲ್ಲವನ್ನೂ ಬೆರೆಸಿ, ಸೂಕ್ತವಾಗುವಷ್ಟು ನೀರು ಎರೆದು ಕಲಸುವುದು.
ಕಲಸಿದ ಹಿಟ್ಟು ಚಪಾತಿ ಲಟ್ಟಿಸುವಂತಿರಬಾರದು, ಇಡ್ಲಿ ಹಿಟ್ಟಿನ ಸಾಂದ್ರತೆಯಿದ್ದರೆ ಸರಿ.
ತೆಂಗಿನೆಣ್ಣೆ ನಮ್ಮ ಆಯ್ಕೆ, ಬಾಣಲೆಯಲ್ಲಿ ಎಣ್ಣೆ ಬಿಸಿ ಆದ ನಂತರ ಕೈಯಲ್ಲಿ ಹಿಟ್ಟು ತೆಗೆದುಕೊಂಡು ಚಿಕ್ಕ ಚಿಕ್ಕ ಗಾತ್ರದ ಉಂಡೆಯಂತೆಎಣ್ಣೆಗಿಳಿಸಿ.
ಎರಡೂ ಬದಿ ಕೆಂಪಾದೊಡನೆ ತೆಗೆಯಿರಿ.
ಚಹಾದೊಂದಿಗೆ ಸವಿಯಿರಿ.
ಸಂಜೆಯ ಹೊತ್ತು ತಿನ್ನಲು ಸೂಕ್ತ ತಿನಿಸು.
ಇದೇ ರೀತಿ ಪಾಯಸ, ಕೊಟ್ಟಿಗೆ, ಗೆಣಸಲೆ, ದೋಸೆ ತಯಾರಿಸಿ ತಿನ್ನುವುದು.
ಬಿಸಿ ಹಾಲು ಹಾಗೂ ಮುರಬ್ಬ ಬೆರೆಸಿ, ಮಿಲ್ಕ್ ಶೇಕ್ ಆನಂದಿಸುವುದು.
ನೀರು ಎರೆದು ಶರಬತ್ ಕುಡಿಯುವುದು.
ಬೇಕಿದ್ದರೆ ಐಸ್ ಕ್ರೀಮೂ.. ಮಳೆಗಾಲ ಅಲ್ವೇ, ಅದು ಬೇಡ.
ಹಲಸಿನ ಹಣ್ಣಿನ ಮುರಬ್ಬ ದೀರ್ಘ ಕಾಲ ಇರಿಸತಕ್ಕದ್ದಲ್ಲ. ತಂಪು ಪೆಟ್ಟಿಗೆಯಲ್ಲಿಟ್ಟು ದಿನವೂ ಉಪಯೋಗಿಸಿ ಮುಗಿಸುವುದುಜಾಣತನ ಎಂಬ ಉತ್ತಮ ಸಲಹೆ ಗೌರತ್ತೆ ಕೊಟ್ಟರು.
0 comments:
Post a Comment