Pages

Ads 468x60px

Saturday 29 September 2012

ಸಾಂಬ್ರಾಣಿಯ ವರ್ಣಮಯ ರಸಾಯನ ಶಾಸ್ತ್ರವು !

ಅಡುಗೆ  ಕೆಲಸವೆಲ್ಲ  ಮುಗಿದಿತ್ತು .   ಊಟಕ್ಕೆ  ಇನ್ನೂ  ಬೇಕಾದಷ್ಟು  ಸಮಯವಿತ್ತು .   
" ಒಂದು  ದಿಢೀರ್  ಸಾರು ಮಾಡೋಣ  "   ಅನ್ನಿಸಿದ್ದೇ  ತಡ ,   ನಾಲ್ಕಾರು  ಪುನರ್ಪುಳಿ  ಹಣ್ಣಿನ  ಒಣ  ಸಿಪ್ಪೆಗಳು  ಡಬ್ಬದಿಂದ  ನೀರಿಗೆ  ಬಿದ್ದುವು .
ಹತ್ತಾರು  ಬೆಳ್ಳುಳ್ಳಿ  ಎಸಳುಗಳು  ಸಿಪ್ಪೆ  ಬಿಚ್ಚಿ  ತಯಾರಾಗಿ  ಒಗ್ಗರಣೆ  ಸಟ್ಟುಗ  ಏರಿದುವು .
ನೀರಿನಲ್ಲಿ  ಪುನರ್ಪುಳಿ  ಬಣ್ಣ  ಬಿಡುತ್ತ  ಕೆಂಪಾಯಿತು .   ಕುದಿ ಕುದಿದು  ಇನ್ನಷ್ಟು  ಕೆಂಪಾಯಿತು .
ಒಗ್ಗರಣೆ  ಸೌಟನ್ನು  ಉರಿಯಲ್ಲಿಟ್ಟು  ಬೆಳ್ಳುಳ್ಳಿ ' ಘಂ ' ಅನ್ನಿಸಿ ಸಾಸಿವೆ  ಚಟ ಚಟ  ಸದ್ದು  ಮಾಡುತ್ತಾ  ಸಾರಿನೊಳಗೆ  ಬಿದ್ದಾಯಿತು .
 " ಒಹ್ , ಬೆಲ್ಲ  ಹಾಕಿಲ್ಲ "  ಬೆಲ್ಲ  ಪುಡಿ ಪುಡಿಯಾಗಿ  ಸಾರಿನೊಳಗೆ  ಬಿದ್ದಿತು .
ಅಷ್ಟಾಗುವಾಗ  ತಲೆಯಲ್ಲೊಂದು  ಹೊಸ  ಯೋಚನೆ  ಬಂದಿತು .
" ಇದಕ್ಕೆ  ಸಾಂಬ್ರಾಣಿ  ಸೊಪ್ಪು  ಹಾಕಿದರೆ  ಹೇಗೆ  "
ಸರಿ ,   ಅಂಗಳಕ್ಕಿಳಿದು  ಒಂದ್ಹತ್ತು  ಎಲೆಗಳನ್ನು  ಚಿವುಟಿ  ತಂದು ,   ಸಣ್ಣಗೆ  ತುಂಡರಿಸಿ ,   ತುಪ್ಪದಲ್ಲಿ  ಬಾಡಿಸಿ ,   ಮಿಕ್ಸಿಯಲ್ಲಿ  ತಿರುಗಿಸಿ  ಪುನಃ  ಸಾರಿಗೆ  ಸೇರಿಸಿ  ಕುದಿಸಬೇಕಾಯಿತು .    
ಕುದಿಯುತ್ತಿದ್ದಂತೆ    " ಏನಾಗ್ಹೋಯ್ತು " ,  ಪುನರ್ಪುಳಿಯ   ಗಾಢ  ಬಣ್ಣವೆಲ್ಲ  ಮಾಯ  !  ಸಾರಿನ  ಮಾಸಲು  ವರ್ಣ  ನೋಡಿ    " ಛೆ ,  ಏನ್ಮಾಡ್ಬಿಟ್ಟೆ "   ಪರಿತಪಿಸುವ  ಸರದಿ .
" ನೋಡೋಣ "  ಒಂದು  ಸೌಟು  ಸಾರನ್ನು  ತೆಗೆದು  ಚಿಕ್ಕ  ತಟ್ಟೆಗೆ  ಎರೆದು  ಕುಡಿಯಬೇಕಾಯಿತು ,    " ಆಹ್,  ಏನು  ಸುವಾಸನೆ  !  ಅದೇನೇನೋ  ಅಡುಗೆ  ಮಾಡಿ  ತೋರಿಸ್ತಾರಲ್ಲ  ಟೀವಿ  ಅಡುಗೆ  ಕಾರ್ಯಕ್ರಮಗಳಲ್ಲಿ ,   ಇದೇ  ಚೆನ್ನಾಗಿದೆ ",  ಊಟದ  ಸಿದ್ಧತೆ   ನಡೆಯಿತು .


ದೊಡ್ಡಪತ್ರೆ  ಎಂದೂ  ಹೆಸರಿರುವ  ಈ  ಎಲೆಯನ್ನು  ಅಡುಗೆಯಲ್ಲಿ  ವೈವಿಧ್ಯಮಯವಾಗಿ  ಬಳಸಲು  ಮಹಿಳೆಯರು  ತಿಳಿದಿದ್ದಾರೆ .  ಬೋಂಡಾ ,  ಬಜ್ಜಿ , ಪಕೋಡಾ ,  ಇತ್ಯಾದಿ .  ದೋಸೆಯನ್ನೂ  ಮಾಡಬಹುದು .   ಎಲ್ಲವೂ  ಅವರವರ  ಪಾಕ ಪ್ರಾವೀಣ್ಯತೆಗೆ  ಬಿಟ್ಟಿದ್ದು .    ಗಾಢ  ಸುವಾಸನೆಯಿಂದಾಗಿ  ನಾನ್ ವೆಜ್  ಅಡುಗೆಯಲ್ಲೂ ಬಳಸುತ್ತಾರೆ .

ಶೀತ ,  ಕೆಮ್ಮು ,  ಜ್ವರಗಳಿಗೆ  ಉಪಶಮನಕಾರಿಯಾಗಿ  ಇದು  ಮನೆಮದ್ದಾಗಿ  ಉಪಯೋಗದಲ್ಲಿದೆ .   ಎಳೆಯ  ಹಾಲುಹಸುಳೆ  ಏನೇ  ತೊಂದರೆಯಾದರೂ  ಅಳುವಿನಲ್ಲಿ  ತೋರ್ಪಡಿಸುತ್ತದೆ .   ಅನುಭವಸ್ಥ  ಅಜ್ಜಿಯಂದಿರು  ಕೂಡಲೇ  ಮಗುವಿನ  ಸಮಸ್ಯೆಯನ್ನು  ಗುರ್ತಿಸಿ ,   ಹಿತ್ತಿಲಿನಿಂದ  ಸಾಂಬ್ರಾಣಿ  ಸೊಪ್ಪು  ತಂದು ,  ಒಲೆಯ  ಕೆಂಡದ  ಮೇಲಿಟ್ಟು  ಬಾಡಿಸಿ ,   ರಸ  ಹಿಂಡಿ  ಜೇನಿನೊಂದಿಗೆ  ಕುಡಿಸಿ ಬಿಡುತ್ತಾರೆ .  ಮಗುವಿಗೆ  ಹೊಟ್ಟೆ  ಕಟ್ಟಿದ್ದರೆ ,   ವಾಯು ತೊಂದರೆಯಾಗಿದ್ದರೆ ,  ಕಫ ತುಂಬಿ  ಬಾಧೆ  
 ಪಡುತ್ತಿದ್ದರೆ ,   ಸಾಂಬ್ರಾಣಿ ಜೇನಿನ  ರಸವನ್ನು  ಕುಡಿಸಿದಂತೆ  ಮಲವಿಸರ್ಜನೆಯಾಗಿ  ಮಗು  ನಿರಾತಂಕವಾಗಿ  ಆಟ  ಪ್ರಾರಂಭಿಸುವುದು .   ಹೀಗೆ  ಎರಡು  ದಿನಕ್ಕೊಮ್ಮೆ  ಈ ರಸ  ಕುಡಿಸುತ್ತಾ  ಬಂದಲ್ಲಿ  ಆರೋಗ್ಯದಲ್ಲಿ  ಯಾವ  ವ್ಯತ್ಯಯವೂ  ಆಗುವುದಿಲ್ಲ .    " ಮಗು  ಮೈ  ಹುಷಾರಿಲ್ಲ "  ಎಂದು  ವೈದ್ಯರಲ್ಲಿಗೆ  ಹೋಗಬೇಕಾಗುವುದೂ  ಇಲ್ಲ .     " ಒಲೆಯೆಲ್ಲಿದೆ ,   ಕೆಂಡವೆಲ್ಲಿದೆ ? "  ಅನ್ನದಿರಿ .   ಮೈಕ್ರೋವೇವ್  ಅವೆನ್  ಒಳಗಿಟ್ಟು  ತೆಗೆಯಿರಿ .



ಚಿಕ್ಕ ಮಕ್ಕಳಲ್ಲಿ  ಕಾಣಿಸಿಕೊಳ್ಳುವ  ನರಗಳ  ಸೆಡವು  ಅಥವಾ  ' ಬಾಲಗ್ರಹ '  ಇನ್ನೊಂದು  ಪೀಡೆ .   ಈ  ಸಮಸ್ಯೆಗೂ  ಪರಿಣಾಮಕಾರೀ  ಔಷಧಿಯಾಗಿ  ಸಾಂಬ್ರಾಣಿ  ನಮ್ಮ  ನಾಟೀ  ವೈದ್ಯ  ಪದ್ಧತಿಯಲ್ಲಿದೆ .

ಜೀರ್ಣ ಶಕ್ತಿ  ಚುರುಕಾಗುವುದು .   ಯಾವಾಗ  ತಿಂದ  ಆಹಾರ  ಸರಿಯಾಗಿ  ಪಚನವಾಗುವುದಿಲ್ಲವೋ  ಆಗಲೇ  ಶರೀರದ  ಅಂಗಾಂಗಗಳು ಮುಷ್ಕರ  ಹೂಡಲು  ಪ್ರಾರಂಭ  ಎಂದೇ  ತಿಳಿಯಿರಿ .   ಹೀಗಾಗದಂತಿರಲು  ನಿಯಮಿತವಾಗಿ  ಸಾಂಬ್ರಾಣಿಯ  ಬಳಕೆ  ಮಾಡುವುದು  ಸೂಕ್ತ .    ಗ್ರಾಮೀಣ  ಪ್ರದೇಶದ  ರೈತಾಪಿ  ಹೆಂಗಸರು  ಆಸ್ಪತ್ರೆಗೆ  ಹೋಗುವುದು  ತೀರಾ  ಕಡಿಮೆ .   ಇಂತಹ    ಔಷಧಯುಕ್ತ  ವನ್ಯಸಸ್ಯಗಳ  ಬಳಕೆಯಲ್ಲಿ  ಅವರು  ನಿಷ್ಣಾತರಾಗಿದ್ದಾರೆ ,  ತಮಗೆ  ತಿಳಿದಿರುವ  ಗುಟ್ಟುಗಳನ್ನು  ಅಷ್ಟು  ಸುಲಭವಾಗಿ  ಬಿಟ್ಟು  ಕೊಡುವವರೂ  ಅಲ್ಲ .   ಪಂಡಿತರಂತೆ  ವಿವರಿಸಿ  ಹೇಳಲೂ  ಅವರಿಗೆ  ತಿಳಿದಿರುವುದೂ  ಇಲ್ಲ .   ವಿವರಿಸಿ  ಹೇಳುತ್ತೇನೆ  ಕೇಳಿ ,   ನಮ್ಮ  ತೋಟದಲ್ಲಿ  ಅಶೋಕ  ವೃಕ್ಷಗಳು  ಬೇಕಾದಷ್ಟು  ಇವೆ .   ಊರಿನ  ನಾಟೀ ವೈದ್ಯರೊಬ್ಬರು  ವಾರಕ್ಕೊಮ್ಮೆ   ಬಂದು  ಆ  ಮರಗಳ  ತೊಗಟೆಯನ್ನು  ಕೆತ್ತಿ  ತೆಗೆದು  ಕೊಂಡೊಯ್ಯುತ್ತಿದ್ದರು .   " ಯಾಕೆ ,  ಯಾರಿಗೆ ?"  ಎಂದು ಪ್ರಶ್ನಿಸುವವರಿಲ್ಲ .   ಕೇಳಿದರೆ  ಅವರು  ಹೇಳುವವರೂ  ಅಲ್ಲ .   ಆ  ವೈದ್ಯರಿಗೆ  ಗೊತ್ತಿದ್ದ  ಆ  ನಾಟೀ ಮದ್ದು  ಅವರ  ತಲೆಮಾರಿಗೇ  ಮುಕ್ತಾಯವಾಗಿಬಿಟ್ಟಿದೆ .

ಕೇವಲ  ನೆಗಡಿ ,  ಕೆಮ್ಮುಗಳಿಗೆ  ಮಾತ್ರವಲ್ಲ ,   ಶರೀರದ  ಒಳಾಂಗಗಳಾದ  ಲಿವರ್ ,  ಕಿಡ್ನಿಗಳ  ತೊಂದರೆಗೂ  ಇದು  ಔಷಧಿಯಂತೆ .  ಪಿತ್ತಜನಕಾಂಗದಲ್ಲಿ  ಕಲ್ಲುಗಳು  ಸಾಮಾನ್ಯವಾಗಿ  ಮಹಿಳೆಯರಲ್ಲಿ  ಕಂಡು ಬರುವ ಖಾಯಿಲೆ .  ಅದಕ್ಕೂ  ಇದು ಔಷಧವಂತೆ .   ಆಸ್ಪತ್ರೆಗೆ  ಹೋಗಿ  ಆಪರೇಶನ್  ಮಾಡಿಸುವ   ಆಂಗಾಂಗಗಳನ್ನು  ಕತ್ತರಿಸುವ  ತಂತ್ರವೊಂದೇ  ನಮಗೆ  ತಿಳಿದಿದೆ .    ಆಸ್ಪತ್ರೆಗಳೂ  ಅಷ್ಟೇ ,  ಆಪರೇಷನ್  ಮಾಡಿ  ಬಡಪಾಯಿ  ರೋಗಿ  ಜೀವನ್ಮರಣದಲ್ಲಿ  ಹೋರಾಟ  ನಡೆಸುತ್ತಿದ್ದಾನೊ  ಎಂಬಂತೆ  ಕೃತಕ  ಯಂತ್ರೋಪಕರಣಗಳನ್ನು  ಜೋಡಿಸಿ ,  ಕೊನೆಗೊಮ್ಮೆ  " ಈ  ಕೇಸು  ಪ್ರಯೋಜನವಿಲ್ಲ "  ಎಂದು  ಕೈ  ಚೆಲ್ಲಿ  ಬಿಡುತ್ತಾರೆ .   ಆ  ಹೊತ್ತಿಗೆ  ಲಕ್ಷಗಟ್ಟಲೆ  ಸುಲಿಗೆಯಂತೂ  ಆಗಿರುತ್ತದೆ .



  ಹಿಂದಿನಿಂದಲೂ ಇದು ಜನಸಾಮಾನ್ಯರ ಔಷಧೀಯ ಸಸ್ಯವಾಗಿತ್ತು .   ಇದರ ಮರ್ಮಗಳನ್ನು ತಿಳಿದು ಉಪಯೋಗಿಸುವ ಪಂಡಿತೋತ್ತಮರು ನಮ್ಮ ನಡುವೆ ಬಹಳಷ್ಟಿಲ್ಲ .    ಪರಂಪರಾಗತ  ಔಷಧವಿಜ್ಞಾನದಲ್ಲಿ  ನಾವು  ನಂಬಿಕೆ ಕಳಕೊಳ್ಳಲು  ಇದೂ  ಒಂದು  ಕಾರಣವಿರಬಹುದೇನೋ..    ಸರಿಯಾದ   ಮಾನದಂಡವಿಲ್ಲದೆ   ಅದ್ಭುತ ವೈದ್ಯಕೀಯ  ಸಸ್ಯಗಳನ್ನು  ಬೇಕಾಬಿಟ್ಟಿ  ಉಪಯೋಗಿಸಿ,   ಕೊನೆಗೆ  ಈ  ' ಅಣಲೆಕಾಯಿ ಮದ್ದು ' ಗಳು  ನಿರರ್ಥಕ  ಎಂಬ  ತೀರ್ಮಾನಕ್ಕೆ  ಬರುವುದರಿಂದ  ನಮ್ಮ  ಪ್ರಾಚೀನ  ಔಷಧ ಶಾಸ್ತ್ರ  ಯಾರಿಗೂ  ಬೇಡವಾದ  ಜ್ಞಾನವಾಗಿ ಹೋದೀತು .

ಚೇಳು  ಕಡಿತ ,   ಚರ್ಮದ  ಅಲರ್ಜಿ ,   ಹುಣ್ಣುಗಳು ,  ಗಾಯಗಳು ,  ಜ್ವರ ,  ಅತಿಸಾರಗಳಲ್ಲಿ  ಪರಿಣಾಮಕಾರಿಯಾಗಿ  ಉಪಯೋಗ .   ಆಂಟಿ ಸೆಪ್ಟಿಕ್ ,  ಸೋಂಕು ನಿವಾರಕ .
ಏನೇ  ತಲೆನೋವು  ಬರಲಿ ,   " ಒಂದು  ಮಾತ್ರೆ  ತಿಂದರಾಯ್ತು "   ಅಂದ್ಕೊಂಡು  ವರ್ಷಪೂರ್ತಿ   ಪಾರಾಸಿಟಾಮಾಲ್  ಮಾತ್ರೆಗಳನ್ನು  ನುಂಗುತ್ತ  ದಿನ  ನೂಕುವವರಿದ್ದಾರೆ .   ಇದು  ಮಿತಿ  ಮೀರಿದಲ್ಲಿ  ಅಪಾಯ ಕಟ್ಟಿಟ್ಟ  ಬುತ್ತಿ .   ಈ  ಮದ್ದುಗಳ  ಸೇವನಾನಂತರ  ಶರೀರದ  ಪಚನಾಂಗಗಳು ಉಳಿದ ಶೇಷವನ್ನು  ಹೊರ ಹಾಕುತ್ತವೆಯೇ ,  ಖಂಡಿತ ಇಲ್ಲ .   ಲಿವರ್ ,  ಕಿಡ್ನಿ ,  ಗಾಲ್ ಬ್ಲಾಡರ್,  ಪ್ಯಾಂಕ್ರಿಯಾಸ್ ....ಎಲ್ಲವೂ  ಹಾನಿಗೊಳಗಾಗುತ್ತವೆ .   ನಿಯಮಿತವಾಗಿ  ಸಾಂಬ್ರಾಣಿಯ  ಬಳಕೆ  ಮಾಡುತ್ತಿದ್ದಲ್ಲಿ  ಇಂತಹ  ತೊಂದರೆಗಳನ್ನು  ತಡೆಯಬಹುದೆಂದು ಈಗಿನ  ವೈದ್ಯಕೀಯ  ಸಂಶೋಧನೆಗಳು  ಹೇಳುತ್ತವೆ .

ಆಡುನುಡಿಯಲ್ಲಿ  ' ಸಾಂಬ್ರಾಣಿ ' ಯಾಗಿರುವ  ಈ  ಸಸ್ಯ  ಶಿಷ್ಟ ಕನ್ನಡದಲ್ಲಿ ' ದೊಡ್ಡಪತ್ರೆ '  ಯಾಗಿದೆ.  
ಮಲಯಾಳಂ ನಲ್ಲಿ  പനിക്കൂർക്ക  ಎಂದೂ ,  ತಮಿಳು ಭಾಷೆಯಲ್ಲಿ  கற்பூரவள்ளி  ಎಂದೂ ಹೆಸರಿರಿಸಿದ್ದಾರೆ .    ಸಸ್ಯಶಾಸ್ತ್ರೀಯವಾಗಿ  ಇದು  Plectranthus amboinicus ,  ಹಾಗೂ  Lamiaceae  ಕುಟುಂಬಕ್ಕೆ  ಸೇರಿದೆ .    ಇದು ಒಂದು ಅಪ್ಪಟ  ಭಾರತೀಯ ಸಸ್ಯ .  

ಕೈದೋಟದಲ್ಲಿ  ಅಲಂಕಾರಿಕ  ಸಸ್ಯ .  ಕ್ರೋಟನ್ ಗಿಡಗಳಂತೆ  ಬೇರೆ ಬೇರೆ  ವರ್ಣಗಳಲ್ಲಿ  ಲಭ್ಯ .   ವಿಪರೀತ  ಬಿಸಿಲು  ಇದರ  ಸೌಂದರ್ಯವನ್ನು  ಮಂಕಾಗಿಸುತ್ತದೆ .  ಒಳಾಂಗಣದ  ಕುಂಡಗಳಲ್ಲಿಯೂ    ಬೆಳೆಸಬಹುದು .


Posted via DraftCraft app

0 comments:

Post a Comment