Pages

Ads 468x60px

Wednesday 12 September 2012

ಕಥನ ....ಕಾಲಹರಣ

 
ಲೇಖಕರು  ಸಾಮಾನ್ಯವಾಗಿ  ಒಂದು  ಬರಹವನ್ನು  ಸಿದ್ಧಪಡಿಸಿ ,  ನಂತರ  ಅದಕ್ಕೆ  ಸೂಕ್ತವಾದ ಚಿತ್ರಕ್ಕಾಗಿ  ತಡಕಾಡುತ್ತಾರೆ .   ಯಾರಿಂದಲಾದರೂ  ಚಿತ್ರ  ಬರೆಸುತ್ತಾರೆ .   ಇಲ್ಲಿ  ವಿಭಿನ್ನ  ಸ್ಥಿತಿ .   ಚಿತ್ರಗಳಿವೆ ,  ಒಂದೊಂದು  ಚಿತ್ರವೂ  ಒಂದೊಂದು  ವಿಷಯವನ್ನು  ಬಿಡಿಸುತ್ತಾ  ಹೋಗುತ್ತದೆ .   ಅದನ್ನು  ಅಕ್ಷರ  ರೂಪದಲ್ಲಿ ತರುವ  ಪ್ರಯತ್ನ .....

ನಮ್ಮ  ಬಾಲ್ಯವೆಲ್ಲವೂ  ಪುಸ್ತಕಗಳ  ಒಡನಾಟದಲ್ಲೇ ಕಳೆಯಿತು .   ಅಕ್ಷರ  ಕಲಿತ  ಕೂಡಲೇ ,  ಓದಲು  ಪ್ರಾರಂಭಿಸಿದ್ದು  ಮಕ್ಕಳ  ಕಥೆಗಳನ್ನು .   ನಮ್ಮಪ್ಪ  ಪ್ರತೀ  15  ದಿನಕ್ಕೊಮ್ಮೆ ಮಂಗಳೂರಿಗೆ ಹೋಗಿಯೇ ಹೋಗುತ್ತಿದ್ದರು .   ಅಡಿಕೆ ಮಾರುಕಟ್ಟೆ ಧಾರಣೆ  ತಿಳಿಯಲು ,  ಭಂಡಸಾಲೆಯಲ್ಲಿ ಹಾಕಿದ್ದ ಅಡಿಕೆ ಮಾರಾಟವಾಯಿತೇ , ಇತ್ಯಾದಿ ವ್ಯವಹಾರಗಳು .    ಅಡಿಕೆಯೆಂದರೆ  ಆ  ಕಾಲದಲ್ಲೇ ' ಝಣ ಝಣ ಕಾಂಚಾಣ ' ,  ಬರುವಾಗ ಮಕ್ಕಳಿಗೆ ಓದಲು ಕಥೆ  ಪುಸ್ತಕಗಳು .   ಈಗಲೂ  ನೆನೆದರೆ  ' ಹಾಯ್'.....


ಮಂಗಳೂರಿನ   ' ಬಾಲ ಸಾಹಿತ್ಯ ಮಂಡಲ ' ದಿಂದ ಪ್ರಕಟವಾಗುತ್ತಿದ್ದ  ಪಂಜೆ ಮಂಗೇಶ ರಾಯರ  ಶಿಶು ಸಾಹಿತ್ಯ ,  ' ತಟಪಟ ಹನಿಯಪ್ಪ ' ,  ' ಇಲಿಗಳ  ತಕ ಥೈ ' ,  ' ಕಾಗಕ್ಕ  ಗುಬ್ಬಕ್ಕನ  ಕಥೆ '  ಇವುಗಳನ್ನೆಲ್ಲ  ನಾವು  ಓದಿಯೇ  ಆನಂದಿಸಿದ್ದೇವೆ .   ತಿಂಗಳಿಗೊಮ್ಮೆ  ಬರುತ್ತಿದ್ದ  ' ಚಂದಮಾಮ '  ಹಿರಿಕಿರಿಯರೆಲ್ಲರಿಗೂ  ಪ್ರಿಯ  ಸಂಗಾತಿ .   ಅದರಲ್ಲಿ  ಮಕ್ಕಳ  ಕಥೆಗಳಲ್ಲದೆ  ಬಂಗಾಲೀ  ಕಾದಂಬರಿಗಳೂ ಅನುವಾದಿತವಾಗಿ  ಬರುತ್ತಿದ್ದವು .  ' ದುರ್ಗೆಶ ನಂದಿನಿ ' ,   ' ನವಾಬ ನಂದಿನಿ '  ಧಾರಾವಾಹಿ ರೂಪದಲ್ಲಿ  ,   ಮಹಾಭಾರತ  ವರ್ಣ ರಂಜಿತ  ಮುಖಪುಟದಲ್ಲಿ ,  ಬೇತಾಳ ಕಥೆಗಳು ,  ಪರೋಪಕಾರೀ ಪಾಪಣ್ಣ  ,... ಹೇಳಿದಷ್ಟೂ  ಮುಗಿಯದ  ಲಿಸ್ಟು  .

ಹೊಸ ಹೊಸ  ಮಕ್ಕಳ ಸಾಹಿತ್ಯ  ಪ್ರಕಟವಾಗುತ್ತಿದ್ದಂತೆ ,  ತಪ್ಪದೆ ಮನೆಗೆ ಬರುತ್ತಿತ್ತು .   ಅದರಲ್ಲಿ  ಒಂದು  ಭಾರತ ಭಾರತೀ  ಪುಸ್ತಕ ಮಾಲೆ .   ಹತ್ತು  ಪುಸ್ತಕಗಳ ಒಂದು  ಸಂಪುಟ ,  ಒಂದೇ ಬಾರಿಗೆ ಸಿಗುತ್ತಿತ್ತು .   ಮನೆಯ  ಮಕ್ಕಳೆಲ್ಲ  ಎಳೆದಾಡಿ  ಓದುವವರೇ .   ಅದರಲ್ಲಿ  ಒಂದು  ಪುಸ್ತಕ  ಕರ್ನಾಟಕದ  ಚಿತ್ರ ಕಲಾವಿದ  ಬಿ. ವೆಂಕಟಪ್ಪ ಅವರ  ಬಗ್ಗೆ  ಇತ್ತು .   ಬರೆದ  ಲೇಖಕರ  ಹೆಸರು  ನೆನಪಿಲ್ಲ ,  ಆದರೆ ಅದರ  ಮುಖಪುಟದ ಚಿತ್ರ  ಬಿಡಿಸಿದವರು  ಚಂದ್ರನಾಥ್ ಆಚಾರ್ಯ .   ಒಳಪುಟದ  ಬರಹಕ್ಕಿಂತ  ನನ್ನನ್ನು  ಆಕರ್ಷಿಸಿದ್ದು  ಮುಖಪುಟದ  ಚಿತ್ರ  .   ಅದನ್ನು. ಹಾಗೇ  ಪಡಿಮೂಡಿಸಲು  ಆಗ  ಪ್ರಯತ್ನಿಸಿದ್ದು ......



ಓದುವಿಕೆಯ  ವ್ಯಾಪ್ತಿ  ಹಿಗ್ಗಿದಂತೆ  ಮುಂದೆ  ಎನ್.  ನರಸಿಂಹಯ್ಯ ,  ತ್ರಿವೇಣಿ ,  ಅ ನ ಕೃ .  ಕೃಷ್ಣಮೂರ್ತಿ ಪುರಾಣಿಕರೆಲ್ಲ  ಆಪ್ತರಾದರು .   ಅಲ್ಲಿಂದ ಮುಂದೆ  ಶಿವರಾಮ ಕಾರಂತ  ದರ್ಶನ ,   ಹೀಗೇ  ಮುಂದುವರೆದು  ಎಸ್.  ಎಲ್.  ಭೈರಪ್ಪ  ಬಂದರು ,  ಇತ್ತೀಚೆಗಿನ  'ಕವಲು' ವರೆಗೆ .    ಭೈರಪ್ಪ  ಬರೆದ  ಕೃತಿಗಳ  ಹಿಂಭಾಗದ  ರಕ್ಷಕವಚದಲ್ಲಿ  ಒಂದು ಚಿಕ್ಕ ಸೈಜಿನ  ಕಪ್ಪು ಬಿಳುಪಿನ  ಚಿತ್ರ  ಇರುತ್ತಿತ್ತು .    ಆಗ  ಇಂದಿನಂತೆ   ದೃಶ್ಯ ಮಾಧ್ಯಮಗಳಿರಲಿಲ್ಲವಾಗಿ ,  ಆ  ಚಿತ್ರವೇ  ಲೇಖಕರ  ಪ್ರತಿಬಿಂಬವಾಗಿ ......



'ಉದಯವಾಣಿ '  ....ಹೊಸ  ದಿನಪತ್ರಿಕೆ  ಬಂದಿತು .   ಅದರೊಂದಿಗೆ  'ತುಷಾರ '  ಮಾಸ ಪತ್ರಿಕೆಯೂ .   ಅದರಲ್ಲಿ  ಜನಪ್ರಿಯವಾಗಿದ್ದ  ಒಂದು  ಲೇಖನಮಾಲೆ  ' ಸರಸ ' .    ಅದನ್ನು  ಓದಲು  ಅಕ್ಕಪಕ್ಕದ  ಮನೆಯ  ಯುವತಿಯರೆಲ್ಲ  ಓಡಿ  ಬರ್ತಿದ್ರು ,  ನಮ್ಮ  ಮನೆಗೆ . ಅದನ್ನು ಅಚ್ಚುಕಟ್ಟಾಗಿ  ಈಶ್ವರಯ್ಯ  ಬರೆಯುತ್ತಿದ್ದರು .    ಆ  ಅಂಕಣದಲ್ಲಿ  ಒಂದು  ಪುಟ್ಟ  ರೇಖಾ ಚಿತ್ರ ..... ನಾನೂ  ಬಿಡ್ತೇನಾ ,   ನೋಡಿಯೇ  ಬಿಟ್ಟೆ  ಒಂದು  ಕೈ ...



ಸಾಹಿತ್ಯವನ್ನು  ಓದುವಾಗ  ಕೇವಲ  ಕಥೆ ಕಾದಂಬರಿಗಳು  ಮಾತ್ರವಲ್ಲ ,   ಕಾವ್ಯ  ಕವಿತೆಗಳೂ  ಓದುವ  ವ್ಯಾಪ್ತಿಗೆ  ಬಂದೇ  ಬರುತ್ತವೆ .   ಕವಿ  ಮುದ್ದಣನ  ' ಅದ್ಭುತ ರಾಮಾಯಣಂ ',    ನಿಸ್ಸಾರ್  ಅಹಮದ್ ರ   ' ಸಂಜೆ  ಐದರ  ಮಳೆ ' ಯೂ  ಭೋರ್ಗರೆದು  ಸುರಿದೇ  ಬಿಟ್ಟಿತು ....



Posted via DraftCraft app






0 comments:

Post a Comment