Pages

Ads 468x60px

Thursday 27 March 2014

ತಾಪವೇಕೆ, ಆಹಾ! ಸೆಕೆ ಸೆಕೆ......







ಹಣ್ಣುಹಂಪಲು,  ಹಸಿ ತರಕಾರಿ,  ಮಜ್ಜಿಗೆನೀರು ಇತ್ಯಾದಿಗಳನ್ನು ಧಾರಾಳವಾಗಿ ಸೇವಿಸುವುದರಿಂದ ಸೆಕೆಯ ತಾಪ ಕಡಿಮೆ ಮಾಡಿಕೊಳ್ಳಬಹುದು.
ಊಟದ ಮೊದಲು ಗಂಜಿನೀರಿಗೆ ಉಪ್ಪು ಸೇರಿಸಿ,  ಮಜ್ಜಿಗೆ ಎರೆದು ಕುಡಿಯಿರಿ.
ಬಚ್ಚಂಗಾಯಿ ಜ್ಯೂಸ್ ಕುಡಿಯಿರಿ.   ಬಿಸಿಲಿಗೆ ಚರ್ಮದ ಕಾಂತಿ ಕುಂದದಂತೆ ತಡೆಗಟ್ಟಿರಿ.   ದೇಹ ನಿರ್ಜಲೀಕೃತವಾಗದಿರಲು ತಾಜಾ ಹಣ್ಣುಗಳ ರಸ ಅತ್ಯುತ್ತಮ,  ರಕ್ತದೊತ್ತಡ ನಿಯಂತ್ರಣ,  ಕಿಡ್ನಿಯ ರಕ್ಷಣೆ ಇತ್ಯಾದಿ ಆರೋಗ್ಯ ಸಂಬಂಧಿ ಪ್ರಯೋಜನಗಳ ಲಾಭ ಪಡೆಯಿರಿ.
ಕಾಫಿ,  ಚಹಾಗಳನ್ನು ಬೇಸಗೆಯಲ್ಲಿ ದೂರವಿರಿಸುವುದು ಉತ್ತಮ.
ಕಬ್ಬಿನ ಹಾಲು ಕುಡಿಯಿರಿ,  ಲಿಂಬೆ ಹಾಗೂ ಶುಂಠಿ ಸೇರಿಸಿದ್ದು ಅತ್ಯುತ್ತಮ.   ಉರಿಉಷ್ಣದಿಂದ ಮೂತ್ರ ವಿಸರ್ಜಿಸಲೂ ಪ್ರಯಾಸವಾಗುತ್ತಿದ್ದರೆ ಈ ಕಬ್ಬಿನ ಹಾಲು ಕೂಡಲೇ ಪರಿಣಾಮಕಾರೀ ಗುಣ ಕೊಡುವುದು.  
ಅನಾನಸ್ ರಸಭರಿತ ಹಣ್ಣು,  ಧಾರಾಳವಾಗಿ ತಿನ್ನಿ.
 ಎಳನೀರು ಅಂದರೆ ಬೊಂಡ ಕುಡಿಯಿರಿ,   ದಿನವೂ ಕುಡಿದರೂ ಒಳ್ಳೆಯದೇ.
ತಾಜಾ ಹಣ್ಣುಗಳನ್ನು ಕೊಂಡು ತಂದು ಮನೆಯಲ್ಲೇ ಜ್ಯೂಸ್ ತಯಾರಿಸಿ ಕುಡಿಯಿರಿ.   ಸಕ್ಕರೆ ಹೆಚ್ಚು ಹಾಕುವ ಅಗತ್ಯವಿಲ್ಲ.   
ತಾಜಾ ತರಿಕಾರಿಗಳು,   ಹಸಿಯಾಗಿ ಸೇವಿಸಲು ಯೋಗ್ಯವಾದಂತಹ ಟೊಮ್ಯಾಟೋ,  ಜ್ಯೂಸ್ ಚೆನ್ನಾಗಿರುತ್ತದೆ. 
ಮುಳ್ಳುಸೌತೆಯನ್ನು ಊಟದೊಂದಿಗೆ ಸಲಾಡ್ ಮಾಡಿಟ್ಟು ತಿನ್ನಿ.
ಮೊಳಕೆ ಕಾಳುಗಳು,  ಪಚ್ಚೆಹಸ್ರು ತುಂಬಾ ತಂಪು. ಮೊಳಕೆ ಬರಿಸಿ ಬೇಯಿಸಿ ತಿನ್ನಬಹುದು,   ಹಸಿಯೂ ಆದೀತು.   ಆದರೆ ಹಸಿಕಾಳುಗಳನ್ನು ಹೆಚ್ಚು ತಿನ್ನಲಾಗುವುದಿಲ್ಲ.
ಹಸಿರು ಸೊಪ್ಪು ತರಕಾರಿಗಳಾದ ಹರಿವೆ, ಬಸಳೆಗಳನ್ನು ಮರೆಯದಿರಿ.
ರಾಗಿ ಅಂಬಲಿ ಕುಡಿಯುವ ಅಭ್ಯಾಸ ರೂಢಿಸಿಕೊಳ್ಳಿ.  
ಕೃತಕ ರಾಸಾಯನಿಕಗಳಿಂದ ತುಂಬಿದ ಲಘು ಪಾನೀಯಗಳಿಂದ ದೂರವಿರಿ.

ದಿನದಲ್ಲಿ ಕನಿಷ್ಠ ಒದು ತಂಬಿಗೆ ನೀರು ಅಂದರೆ ಏಳೆಂಟು ಲೋಟಾ ನೀರು ಕುಡಿಯಲೇಬೇಕು.   ದೇಹದಿಂದ ಸತತವಾಗಿ ಬೆವರು,  ಮೂತ್ರಗಳೆಂದು ನೀರು ನಷ್ಟವಾಗುತ್ತಿರುತ್ತದೆ.   ಯಾವಾಗ ನೀರು ಸಾಕಷ್ಟು ಪ್ರಮಾಣದಲ್ಲಿ ಉದರವನ್ನು ಸೇರುವುದಿಲ್ಲವೋ ಆಗಲೇ ಶರೀರದಲ್ಲಿ ಡಿಹೈಡ್ರೇಶನ್ ಪ್ರಾರಂಭ ಎಂಬುದನ್ನು ತಿಳಿಯಿರಿ.   ನೀರಿನ ಕೊರತೆ ಬಂದಾಗ ಅಂಗೋಪಾಂಗಗಳಲ್ಲಿ ತೊಂದರೆ ಕಾಣಿಸುವುದು ನಿಶ್ಚಿತ.   ಶುದ್ಧವಾದ ನೀರು ಕುಡಿಯುತ್ತಾ ಇರುವುದು ಅತ್ಯಾವಶ್ಯಕ.   ನೀರು ಕುಡಿಯುವ ಕ್ರಿಯೆಯನ್ನೂ ಆನಂದಿಸುತ್ತಾ ಕುಡಿಯಿರಿ.

ತಾಮ್ರದ ಬಿಂದಿಗೆಯಲ್ಲಿ ನೀರು ತುಂಬಿಸಿಟ್ಟು 7 -8 ಗಂಟೆ ಬಿಟ್ಟು ಕುಡಿಯಿರಿ.  ಇದು ನಮ್ಮ ಪರಂಪರಾಗತ ಮಿನರಲ್ ವಾಟರ್ ಎಂಬುದು ತಿಳಿದಿರಲಿ.   

ಬೇಸಿಗೆಯ ದೈಹಿಕ ತೊಂದರೆಗಳಾದ ಬೆವರುಸಾಲೆ,   ಮೈ ತುರಿಕೆ ಬಾಧೆಗೊಳಗಾಗಲು ಆಸ್ಪದ ಕೊಡಬೇಡಿ,   ನಿಯಮಿತವಾಗಿ ದಿನಕ್ಕೆರಡು ಬಾರಿ ತಣ್ಣೀರ ಸ್ನಾನ ತಪ್ಪಿಸದಿರಿ.  ಹತ್ತಿಯ ಬಟ್ಟೆಗಳನ್ನೇ ಧರಿಸಿರಿ.

ಸೆಕೆಯನ್ನು ಓಡಿಸಲು ಆಧುನಿಕ ಸವಲತ್ತುಗಳು ಏನೇನೋ ಇವೆ.   ವಿಜ್ಞಾನ ಬಹಳ ಮುಂದುವರಿದಿದೆ ದಿಟ,   ಆದರೆ ನಮ್ಮ ಪರಿಸರದ ರಕ್ಷಣೆಯೂ ನಮ್ಮ ಕೈಯಲ್ಲೇ ಇರುತ್ತದೆ ಎಂಬುದನ್ನೂ ಕಡೆಗಣಿಸದಿರಿ.   ಸುತ್ತಮುತ್ತ ಹಸಿರು ಸಸ್ಯಗಳನ್ನು ಉಳಿಸಿ ಹಾಗೂ ಬೆಳೆಸಿ.   ಮನೆಯ ಮುಂದೆ ಪುಟ್ಟ ಉದ್ಯಾನವಿರಲಿ,   ದಿನವೂ ಗಿಡಸಸ್ಯಗಳಿಗೆ ನೀರುಣಿಸುವ ಆನಂದದಲ್ಲಿ ಭಾಗಿಯಾಗಿ ಸಂತಸ ಪಡೆಯಿರಿ.


Posted via DraftCraft app

0 comments:

Post a Comment