ಇಂದೂ ಒಂದು ಔತಣಕೂಟಕ್ಕೆ ಹೋಗುವುದಿತ್ತು. ಮೊನ್ನೆಯೂ ಹೋಗಲಿದ್ದಿತು, ಆದರೆ ಹೋಗಿರಲಿಲ್ಲ. ದಿನವೂ ಪಾಯಸ ಹೋಳಿಗೆ ಲಡ್ಡುಗಳ ಔತಣದೂಟಕ್ಕೆ ಹೋಗುವುದೆಂದರೇನು?, ದೇಹಾಲಸ್ಯವಾದೀತು.
ಇಂದಿನದು ತಪ್ಪಿಸುವಂತಿಲ್ಲ, ಐಪ್ಯಾಡ್ ನಲ್ಲಿ ರಿಮೈಂಡರ್ ಆ್ಯಪ್ಸ್ ಇರುವಂತೆ ಸಂಬಂಧಿತರು ಮರೆಯದ ಹಾಗೆ ಎರಡು ದಿನ ಮುಂಚಿತವಾಗಿ ಫೋನ್ ಕಾಲ್ ಮಾಡಿ " ಕಾಗದ ತಲುಪಿದೆಯಾ..." ಎಂದೂ ವಿಚಾರಿಸಿದ್ದರು.
" ಇವತ್ತು ಬಾಯಾರು ದೇವಸ್ಥಾನದಲ್ಲಿಯೂ ಒಂದು ಉಪನಯನ ಇದೆ, ಅಲ್ಲಿಗೆ ಹಾಜರಿ ಹಾಕಿ ಬರ್ತೇನೆ, ನೀನು ಹೊರಟು ಕುಳಿತಿರು.." ನಮ್ಮೆಜಮಾನ್ರು ಅಂದಿದ್ದು.
ನಾವು ಹೋಗಬೇಕಾಗಿದ್ದ ವೇಣೂರು, ದೀರ್ಘಪ್ರಯಾಣವಾಗಿದ್ದರಿಂದ ಬೇಗನೇ ಎದ್ದು, ಲಘು ಉಪಹಾರವಾದ ಸಜ್ಜಿಗೆ ಉಪ್ಪಿಟ್ಟು ಮಾಡಿಟ್ಟು, ಜರತಾರೀ ಸೀರೆಯುಟ್ಟು ಸಿದ್ಧಳಾಗಿದ್ದೂ ಆಯ್ತು.
ಕಾಫಿ ಹೀರುತ್ತ, ತಿಂಡಿ ತಿನ್ನುತ್ತ " ನಿನ್ನದು ಆಗ್ಲೇ ಹೊರಟಾಯ್ತಾ, ಹಾಗಿದ್ರೆ ದೇವಸ್ಥಾನದ ಉಪನಯನಕ್ಕೂ ಒಟ್ಟಿಗೆ ಹೋಗ್ಬಿಟ್ಟು ಬರೋಣ. " ಅಂದಾಗ, ವ್ಯಾನಿಟಿ ಬ್ಯಾಗ್ ಹೆಗಲಿಗೇರಿಸಿ, ಚಪ್ಪಲಿ ಎಲ್ಲಿದೆಯೆಂದು ಹುಡುಕಾಡಿ ಧರಿಸಿದ್ದೂ ಆಯ್ತು.
ಬೆಳಗಿನ ಜಾವ ಅಲ್ವೇ, ದೇವಸ್ಥಾನದ ಸಮಾರಂಭ ಜನಸಂದಣಿ ಏನೂ ಇಲ್ಲದೆ ಬಿಕೋ ಅನ್ನುತ್ತಿತ್ತು.
ಒಂದು ಕಡೆ ಕಾಫಿ ತಿಂಡಿ ವ್ಯವಸ್ಥೆ, ಅಚ್ಚುಕಟ್ಟಾಗಿ ಇಡ್ಲಿ ವಡೆ, ಸಾಂಬಾರ್ ಚಟ್ಣಿ, ಮೊಸರು ಉಪ್ಪಿನಕಾಯಿಗಳ ಸಂಗಮ, ಚಹಾ ಕಾಫಿಗಳ ಮಿಲನ, ಶಿರಾ ಎಂಬ ಸಿಹಿ! ಆಹಹ...
ಸುಮ್ನೇ ಮನೆಯಲ್ಲಿ ತಿಂಡಿ ಮಾಡಿದ್ದು... ಅನ್ನಿಸದಿರದೇ, ಆದರೂ ಹೇಳುವಂತಿಲ್ಲ, ಈ ಭರ್ಜರಿ ಉಪಹಾರ ತಪ್ಪಿಸುವಂತಿಲ್ಲ. ಇನ್ನೊಂದು ದೂರ ಪ್ರಯಾಣದ ಔತಣಕೂಟಕ್ಕೆ ಹೋಗಲಿದೆಯೆಂದು ಹೇಳಿ ಅಲ್ಲಿಂದ ಹೊರಟೆವು. ವಿಟ್ಲ, ಪುತ್ತೂರು, ಉಪ್ಪಿನಂಗಡಿ, ಗುರುವಾಯನಕೆರೆ ರಸ್ತೆಯಲ್ಲಿ ನಾವು ವೇಣೂರು ತಲಪಿದಾಗ ಮಧ್ಯಾಹ್ನ ಗಂಟೆ ಹನ್ನೆರಡಾಗಿತ್ತು.
ಮಟಮಟ ಬಿಸಿಲು, ಶಾಮಿಯಾನ ಹಾಕಿದ್ದರು, ಅದರೊಳಗೆ ಮತ್ತೂ ಸೆಕೆ. ಉಪನಯನದ ಧಾರ್ಮಿಕ ವಿಧಿಗಳೆಲ್ಲ ಮುಗಿದಿವೆ, ವಟುವಿಗೆ ಆರತಿಯೆತ್ತುವುದೊಂದೇ ಬಾಕಿ.
ಒಂದು ಆಸರಿಗೆ ಕೇಳೋರು ಇಲ್ವೇ..., ಎಂದು ಚಡಪಡಿಸುತ್ತ ಕುಳಿತಿದ್ದಾಗ ಉಷಕ್ಕ ಓಡಿ ಬಂದು, " ಆಸರಿಗೆ ವ್ಯವಸ್ಥೆ ಎಲ್ಲ ಆ ಕಡೆ ಇದೆ, ಬೊಂಡ ನೀರಿನ ಶರಬತ್ತು, ಕಬ್ಬಿನಹಾಲು... ಯಾವ್ದು ಬೇಕೋ ಅದನ್ನು ಕುಡೀ... "
ಬಿಸಿಲಿಗೆ ಎಳನೀರು ಅತ್ಯುತ್ತಮ ಅಂದ್ಬಿಟ್ಟು ಮೊದಲು ಬೊಂಡ ಜ್ಯೂಸ್ ಕುಡಿದಾಯ್ತು. ನಿಂಬೆ ಹಣ್ಣು ಹಾಕಿದಂತಿತ್ತು, ಬೊಂಡದ ತಿರುಳನ್ನೂ ಅರೆದು ಸೇರಿಸಿದ ಹಾಗೂ ಇದ್ದಿತು, ಅಂತೂ ಚೆನ್ನಾಗಿಯೇ ಇತ್ತು, ಸಕ್ಕರೆಯನ್ನೂ ಹಾಕಿರಲೇಬೇಕು, ಐಸ್ ಕೂಡಾ ಬಿದ್ದಿತ್ತು.
ಇನ್ನು ಕಬ್ಬಿನಹಾಲಿನ ಸರದಿ, ಕಬ್ಬಿನ ರಸ ತೆಗೆಯುವ ಗಾಣವೇ ಬಂದಿತ್ತು. ಬೇಕೆನಿಸಿದಾಗ ಕಬ್ಬಿನಹಾಲು ಕುಡಿಯುವ ಯೋಗ. ಸುಧರಿಕೆಯವನು ಲೋಟಗಳನ್ನು ಅಚ್ಚುಕಟ್ಟಾಗಿ ತಟ್ಟೆಯಲ್ಲಿಡುತ್ತಿದ್ದಂತೆ, ಕಬ್ಬಿನಹಾಲು ಲೋಟಗಳಿಗೆ ತುಂಬುತ್ತಿದ್ದಂತೆ ನನ್ನ ಐಫೋನ್6 ಕ್ಲಿಕ್ಕೆಂದಿತು!
0 comments:
Post a Comment