Pages

Ads 468x60px

Friday 15 March 2019

ಗೌರತ್ತೆಯ ಉಪವಾಸ




“ ಇವತ್ತು ಶಿವರಾತ್ರಿ ಅಲ್ವಾ, ಭಜನಾಮಂದಿರದಲ್ಲಿ ರಾತ್ರಿ ಬೆಳಗಾಗೂ ತನಕ ಭಜನೆ ಉಂಟಂತೆ, ನಾನು ಹಾಗೇ ವಾಕಿಂಗ್ ಹೋಗ್ಬಿಟ್ಟು ಭಜನೆ ಕೇಳ್ಬಿಟ್ಟು ಬರ್ತೇನೆ. " ಎಂದರು ಗೌರತ್ತೆ.

" ಸರಿ, ಆರಾಮವಾಗಿ ಹೋಗಿ.. " ಜಪಸರ ಆಡಿಸುತ್ತ ಸಹಸ್ರನಾಮಾವಳಿ ಲೆಕ್ಕ ಮಾಡುತ್ತ ಇರುವ ಗೌರತ್ತೆ ಹೊರಟಿದ್ದು ನನಗೂ ಸಂತಸ.

ದೂರವೇನಿಲ್ಲ, ಭಜನೆ ಮನೆವರೆಗೂ ಕೇಳಿಸುತ್ತಿದೆ, ಆದ್ರೂ ಅಲ್ಲಿ ಕುಳಿತು ಹತ್ತೂ ಮಂದಿಯೊಂದಿಗೆ ಪಟ್ಟಾಂಗ ಹೊಡೆದು ಆಸರಿಗೆ ಕುಡಿದು ಬರುವ ಖುಷಿಯೇ ಬೇರೆ, ನಾನೂ ಹೊರಟೆ.

ಅಲಂಕೃತ ಗಣೇಶ, ಬೆಳಗುತ್ತಿರುವ ದೀಪ, ಹೂವು ಹಣ್ಣುಕಾಯಿ, ಊದುಬತ್ತಿ ಕರ್ಪೂರಗಳ ಸುಗಂಧ. ಭಜನೆಯೆಂದರೆ ಹಾರ್ಮೋನಿಯಂ, ಖಂಜಿರ, ತಬಲಾ ಮೃದಂಗ ವಾದ್ಯಗಳೂ, ತಾಳ ತಂಬೂರಿಗಳೂ, ಮೈಕ್ ಸೆಟ್ಚೂ, ಕೊರತೆಯಿಲ್ಲದಷ್ಟು ಗಾಯಕರೂ ತುಂಬಿದ ಸಭೆ.

ಚಕ್ಕಮಕ್ಕ ಕುಳಿತುಕೊಳ್ಳಲು ಸಾಧ್ಯವಾಗದವರಿಗೆ ಪ್ಲಾಸ್ಟಿಕ್ ಕುರ್ಚಿಗಳೂ ಸಾಲಾಗಿ ಇತ್ತೂ ಅನ್ನಿ, ನಾವು ಭಕ್ತಿಭಾವದಿಂದ ಚಾಪೆಯಲ್ಲಿ ಆಸೀನರಾದೆವು. ಬಂದವರಿಗೆ ಫಲಾಹಾರದ ವ್ಯವಸ್ಥೆಯೂ ಇದೆಯೆಂದು ತಿಳಿಯಿತು.





ಭಜನೆಹಾಡುಗಳ ನಾದಕ್ಕೆ ದನಿಗೂಡಿಸುತ್ತ ಈ ಗಾಯನ ಸಾಹಿತ್ಯಗಳ ರಚಯಿತರು ಯಾರಾಗಿಬಹುದೆಂಬ ಗಾಢ ಚಿಂತನೆಯೂ ಕೂಡಿ ಸಮಯ ಕಳೆದಿದ್ದು ತಿಳಿಯದಂತಿರಲು, " ಅಲ್ಲಿ ಬಾಳೆ ಎಲೆ ಹಾಕ್ತಿದಾರೆ, ಗೌರತ್ತೆ ಎದ್ದು ಆ ಕಡೆ ಹೋದರು. ನಾನು ಹಿಂಬಾಲಕಿ, ಬಾಳೆ ಎಲೆ ಮುಂದೆ ಕುಳಿತುಕೊಳ್ಳುವ ಯೋಗ.

ಮೊದಲಾಗಿ ಇಡ್ಲಿ, ಫಳಾರ ಅಲ್ವೇ, ರವಾ ಇಡ್ಲಿ, ಚಟ್ನಿ... ತೊಂದ್ರೆ ಇಲ್ಲ, ತಿನ್ನೋಣ.

ವಡಾ ಬಂದಿತು, ಅದೂ ಉದ್ದಿನ ವಡೇ.. " ವಾಹ್! ಬೇಕಾದಷ್ಟಾಯ್ತು. " ಕೂರ್ಮಾ, ತರಕಾರಿಗಳ ಕೂಟು ಬಾಳೆ ತುಂಬಿತು. ಇನ್ನೇನು ಚೆನ್ನಾಗಿ ಹೊಡೆಯೋದೇ ಬಾಕಿ.

" ಇಡ್ಲಿ ಬೇಕೇ, ವಡೆ ಬೇಕೇ.. " ಎನ್ನುತ್ತ ಸುಧರಿಕೆ ಮಾಡುವವರಿರುವಾಗ, " ಸಾಕೋ ಇನ್ನೂ ಬೇಕೋ.. " ಕೇಳುವವರಿರುವಾಗ ನಾವು ಇನ್ನಷ್ಟು ಬಾಳೆಗೆ ಹಾಕಿಸ್ಕೊಂಡು ತಿಂದೆವು.

ಹೆಸ್ರು ಪಾಯಸ ಬಂದಿತು, " ಶಿವರಾತ್ರಿ ಪ್ರಯುಕ್ತ ಪಾಯಸ ತಿನ್ನಬೇಡವೇ.. "
ಪಾಯಸದೊಂದಿಗೆ ಬಾಳೆಹಣ್ಣು ರಸಾಯನ ಸೇರಿಕೊಂಡಿತು.
ಸಿಹಿಭಕ್ಷ್ಯವೆಂದು ಜಿಲೇಬಿಯೂ ಉದರದೊಳಗಿಳಿಯಿತು.

ಮೊಸರು, ಉಪ್ಪಿನಕಾಯಿ ಇಲ್ಲದೆ ಆದೀತೇ, ರಸಬಾಳೆಹಣ್ಣು ತಿನ್ನುವಲ್ಲಿಗೆ ಫಲಾಹಾರದ ಸಾರ್ಥಕ್ಯ.

ಬಾದಾಮಿ ಹಾಲು ಕುಡಿದು ಏಳುವಲ್ಲಿಗೆ ಶಿವರಾತ್ರಿಯ ಫಳಾರ ಸಂಪನ್ನಗೊಂಡಿತು.


Saturday 2 March 2019

ಕೋಕನಟ್ ಹಲ್ವಾ





“ ತೆಂಗಿನಕಾಯೀ ಹಲ್ವ ಆಗುತ್ತ? ಲಡ್ಡೂ ಬರ್ಫೀ ಗೊತ್ತು, ಕಾಯಿ ಹೋಳಿಗೆ ತಿಂದೂ ಗೊತ್ತು… “
“ ಇದು ಅಡುಗೆಮನೆಯಲ್ಲಿ ಕುಟುಕುಟು ಮಾಡ್ತಿರಬೇಕಾದ್ರೆ ಅಗಿ ಹೋಯ್ತು, ನಂಗೇ ಗೊತ್ತಿರಲಿಲ್ಲ ಕಣ್ರೀ, ಈ ಸವಿರುಚಿಗೆ ಏನೋ ಒಂದು ನಾಮಕರಣ ಆಗಬೇಕಲ್ಲ. “

ಮುಂಜಾನೆ ಚಪಾತಿ, ಅದಕ್ಕೊಂದು ಕೂಟು ಆಗಬೇಕು. ಬಾಳೆಹಣ್ಣು ಕಾಯಿಸಿದ್ದು ಇದ್ದರೆ ನಾನು ಕೂಟು ಕರಿ್ರಗಳ ಉಸಾಬರಿಗೇ ಹೋಗಲಿಕ್ಕಿಲ್ಲ, ತುಪ್ಪ, ಬಾಳೆಹಣ್ಣು ಸಕ್ಕರೆಗಳ ಮಿಶ್ರಣದ ಕೂಟು ನಮಗಿಬ್ಬರಿಗೂ ಇಷ್ಟ. ಇವತ್ತು ಬಾಳೆಹಣ್ಣು ಕಾಯಿಸಿಟ್ಟಿದ್ದು ಇರಲಿಲ್ಲ, ಬಾಳೆ ಹಣ್ನು ಇದೆ, ದಿಢೀರ್ ಎಂದು ಸಿದ್ಧಪಡಿಸಬೇಕಾಗಿದೆ.

ನಾಲ್ಕು ಬಾಳೆಹಣ್ಣುಗಳನ್ನು ಚಿಕ್ಕದಾಗಿ ಕತ್ತರಿಸಿ,
ಒಂದು ಹಿಡಿ ಕಾಯಿತುರಿ ಸಿದ್ದಪಡಿಸಿ,
ಒಂದು ಸೌಟು ಸಕ್ಕರೆ ತೆಗೆದಿರಿಸಿ,
ಎರಡು ಚಮಚ ತುಪ್ಪ ಬಾಣಲೆಗೆರೆದು,
ಬಾಳೆಹಣ್ಣುಗಳನ್ನು ತುಪ್ಪದಲ್ಲಿ ಹುರಿದು,
ಕಾಯಿತುರಿಯನ್ನೂ ಜೊತೆಗೆ ಹುರಿದು
ಸಕ್ಕರೆಯೂ ಈ ಘನಪಾಕಕ್ಕೆ ಬಿದ್ದು,
ಸಟ್ಟುಗದಲ್ಲಿ ರಪರಪನೆ ಬಾರಿಸಿದಾಗ,
ಬಾಳೆಹಣ್ಣಿನ ಕೂಟು ಸಿದ್ಧವಾಯಿತು
ಎಳ್ಳು ಹುರಿದು, ಗುದ್ದಿ ಹಾಕಿದಾಗ
ಪರಿಮಳವೂ ಬಂದಿತು.

ಚಪಾತಿಯೊಂದಿಗೆ ಈ ಹೊಸ ತಿನಿಸನ್ನು ಸವಿಯುತ್ತಿದ್ದಾಗ ಬಾಳೆಗೊನೆಯಲ್ಲಿ ಇನ್ನೂ ಇರುವ ಹಣ್ಣುಗಳಿಗೊಂದು ಗತಿಗಾಣಿಸಲು ನಿರ್ಧರಿಸಿದ್ದಾಯಿತು.

ನಮ್ಮ ಅಳತೆ ಪಟ್ಟಿ ಹೀಗಿರಲಿ.
2 ಲೋಟ ಹೆಚ್ಚಿಟ್ಟ ಬಾಳೆಹಣ್ಣು
ಒಂದು ಲೋಟ ಕಾಯಿತುರಿ, ಮಿಕ್ಸಿಯಲ್ಲಿ ನೀರು ಹಾಕದೆ ಹುಡಿ ಮಾಡಿಕೊಳ್ಳಿ
ಒಂದು ಲೋಟ ಸಕ್ಕರೆ
4 ಚಮಚ ತುಪ್ಪ
2 ಏಲಕ್ಕಿ ಹಾಗೂ ಗೋಡಂಬಿ ಚೂರುಗಳು

ಬಾಣಲೆಗೆ ತುಪ್ಪ ಎರೆದು ಬಾಳೆಹಣ್ಣುಗಳನ್ನು ಹುರಿಯಿರಿ.
ಸುವಾಸನೆ ಬರುತ್ಕಿದ್ದಂತೆ ತೆಂಗಿನ ತುರಿ ಹಾಕಿ ಸೌಟಾಡಿಸಿ, ತೆಂಗಿನತುರಿ ಹಾಗೂ ಬಾಳೆಹಣ್ಣುಗಳ ಮಿಶ್ರಣ ಹೊಂದಿಕೊಂಡು ಬಂದಾಗ ಸಕ್ಕರೆ ಹಾಕಿ ಸೌಟಾಡಿಸಿ, ನಮ್ಮ ಅಳತೆ ಪ್ರಮಾಣ ಪುಟ್ಟದು, ಬೇಗನೇ ತಳ ಬಿಟ್ಟು ಬರುವಾಗ, ಗೋಡಂಬಿ ಹುರಿದು, ಏಲಕ್ಕಿ ಗುದ್ದಿ ಹಾಕಿರಿ. ಇಂತಹ ಸಿಹಿತಿನಿಸುಗಳನ್ನು ಮಾಡುತ್ತಿರುವಾಗ ನಮ್ಮ ಗಮನ ಬೇರೆಡೆ ಹೋಗದಂತೆ ಜಾಗ್ರತೆ ವಹಿಸುವ ಅಗತ್ಯವೂ ಇದೆ. ಬಾಣಲೆಯೂ ದಪ್ಪ ತಳವುಳ್ಳದ್ದೂ, ಒಲೆಯ ಉರಿಯೂ ಒಂದು ಹದದಲ್ಲಿ ಇರಬೇಕು.