Saturday 29 November 2014
ಬೆಳೆ ಹೇರಳ, ಇದು ಪೇರಳೆ...
ಪೇರಳೆ ಮರ ಅಡಿಕೆ ತೋಟದೊಳಗೆ ಸಾಮಾನ್ಯವಾಗಿ ಇದ್ದೇ ಇರುತ್ತದೆ. ಅದೇನೂ ನಾವು ಬಿತ್ತಿ ನೆಟ್ಟಿದ್ದೂ ಅಲ್ಲ. ಹಕ್ಕಿಪಕ್ಷಿಗಳು ಎಲ್ಲಿಂದಲೋ ಹೊತ್ತು ತರುತ್ತವೆ. ಯಾವಾಗಲೂ ತೇವಾಂಶವಿರುವ ತೋಟದಲ್ಲಿ ಬೀಜ ಮೊಳೆತು ಸಸಿಯಾಗಲು ತಡವಿಲ್ಲ. ಹಾಗೇ ಸುಮ್ಮನೆ ಮೇಲೆದ್ದು ಮರವಾದ ಈ ಪೇರಳೆಯಲ್ಲಿ ಜಾತಿಗಳೆಷ್ಟು, ಬಣ್ಣಗಳ ಸೊಗಸೇನು, ರುಚಿಯಲ್ಲಿರುವ ಭಿನ್ನತೆ ಇವುಗಳನ್ನೆಲ್ಲ ತಿಳಿಯಬೇಕಾದರೆ ತೋಟದ ಸುತ್ತ ತಿರುಗಾಡಿ, ಕಂಡ ಪೇರಳೆಗಳನ್ನು ಕೊಯ್ದು, ಅಲ್ಲೇ ಕಚ್ಚಿ ತಿಂದು ಸವಿದರೇನೇ ತಿಳಿದೀತು.
ಕೃಷಿಕರ ಬದುಕಿಗೆ ಸಮೀಪವರ್ತಿ ಸಸ್ಯ ಇದು. ಬೆಳೆಸಲು ಕಷ್ಟವಿಲ್ಲ, ರೆಂಬೆಕೊಂಬೆಗಳು ಬಲು ಗಟ್ಟಿಯಾಗಿರುವ ಪೇರಳೆ ಮರಕ್ಕೆ ರೋಗಬಾಧೆಯಿಲ್ಲ. ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಹಾಗೂ ಬೇಡಿಕೆ ಇರುವ ಪೇರಳೆ ಹಣ್ಣಿನ ಕೃಷಿಯಲ್ಲಿ ನಮ್ಮ ಕೃಷಿಕರು ಆಸಕ್ತಿ ವಹಿಸಿದಂತಿಲ್ಲ. ಸದಾ ಕಾಲವೂ ಹಸಿರೆಲೆಗಳಿಂದ ನಳನಳಿಸುತ್ತಿರುತ್ತದೆ ಪೇರಳೆ ಮರ.
ಬೇರು ಕಸಿಯಿಂದ ಪೇರಳೆ ಗಿಡಗಳನ್ನು ಅಭಿವೃದ್ಧಿ ಪಡಿಸಬಹುದು. ಇದು ನನಗೆ ತಾನಾಗಿಯೇ ತಿಳಿಯಿತು. ಹೇಗೇ ಅಂತೀರಾ?
ವರ್ಷಗಳ ಹಿಂದೆ ತೋಟದೊಳಗೆ ಇದ್ದ ಕೆಂಪು ಪೇರಳೆ ಮರವನ್ನು ಕಾರ್ಮಿಕರ ಕೊಡಲಿಯೇಟಿನಿಂದ ಸಂಹರಿಸಲಾಯಿತು. ಮನೆಯ ಹಿಂಭಾಗದಲ್ಲಿ ಏನೇನೋ ಕೃಷಿ ಸಲಕರಣೆಗಳನ್ನು ಇಟ್ಟುಕೊಳ್ಳುವುದಿದೆ. ಮಳೆಗಾಲದಲ್ಲಿ ಅದಕ್ಕೂ ರಕ್ಷಣೆ ಬೇಕಲ್ಲ, ಒಂದು ಗೂಡಿನಂತಹ ಮನೆ ಪೇರಳೆಯ ಮರದ ಕತ್ತರಿಸಲ್ಪಟ್ಟ ಕಾಂಡದಿಂದಲೇ ಸಿದ್ಧವಾಯಿತು. ಅಡಿಕೆ ಮರದ ಕಾಂಡ ಸಾಮಾನ್ಯವಾಗಿ ಎಲ್ಲರೂ ಉಪಯೋಗಿಸುತ್ತಾರೆ, ಆದರೆ ಅದನ್ನು ಪ್ರತಿವರ್ಷವೂ ಬದಲಿಸಬೇಕಾಗುತ್ತದೆ. ಗಟ್ಟಿಮುಟ್ಟಾದ ಪೇರಳೆಯ ಕಾಂಡಕ್ಕೆ ಆ ಸಮಸ್ಯೆಯಿಲ್ಲ.
ಕೆಂಪು ತಿರುಳಿನ ಪೇರಳೆ ಹಣ್ಣುಗಳು ತಿನ್ನಲು ಸಿಗುತ್ತಿರಲಿಲ್ಲ, ಕಾರಣ ಮರವೂ ಅಡಿಕೆ ಮರಕ್ಕೆ ಸವಾಲೊಡ್ಡುವಂತೆ ಎತ್ತರ ಬೆಳೆದಿತ್ತು. ಮರ ಹೋದರೇನಂತೆ, ತೋಟದೊಳಗಿನ ತೇವಾಂಶದಿಂದಲೇ ಬೇರಿನಿಂದ ಅಸಂಖ್ಯ ಗಿಡಗಳು ಮೇಲೆದ್ದಿವೆ. ಎಲ್ಲವೂ ಇರಲಿ.
ತುಸು ಗಟ್ಟಿಯಾಗಿರುವ ಕಾಯಿಯನ್ನೇ ಮಕ್ಕಳು ಇಷ್ಟ ಪಟ್ಟು ತಿನ್ನುವಂತಹುದು. ಅದಕ್ಕೆ ಉಪ್ಪಿನ ಹುಡಿ ಉದುರಿಸಿ ತಿಂದಾಗ ಸ್ವರ್ಗಕ್ಕೆ ಮೂರೇ ಗೇಣು! ಹಣ್ಣಾದಾಗ ಹಸಿರಿನಿಂದ ಹಳದಿ ಬಣ್ಣಕ್ಕೆ ತಿರುಗುವ ಪೇರಳೆ ಮೆತ್ತಗಾಗಿ ಬಿಡುತ್ತದೆ. ಸಿಹಿ ರುಚಿಯೂ, ಸುವಾಸನೆಯೂ ಈ ಹಂತದಲ್ಲಿ ಅಧಿಕ. ಹಣ್ಣಿನ ಜ್ಯೂಸ್, ಮಿಲ್ಕ್ ಶೇಕ್, ಜಾಮ್ ಹೀಗೆ ಏನೇನೋ ಮಾಡಿ ಸವಿಯಬಹುದು. ಐಸ್ ಕ್ರೀಂ, ಫ್ರುಟ್ ಸಲಾಡ್ ಗಳಿಗೂ ಪೇರಳೆ ಹಣ್ಣು ಉಪಯುಕ್ತ. ಸಂಸ್ಕರಿಸಿ ಒಣಗಿಸಲಾದ ಪೇರಳೆ ಹಣ್ಣಿನ ಹುಡಿಯನ್ನು ಐಸ್ ಕ್ರೀಂ ಉದ್ಯಮದಲ್ಲಿ ಬಳಸಲಾಗುತ್ತಿದೆ. ಈ ಐಸ್ ಕ್ರೀಂ ಸ್ವಾದಭರಿತವೂ ಸುವಾಸನಾಯುಕ್ತವೂ ಆಗಿರುತ್ತದೆ. ಏನೇ ಮಾಡುವುದಿದ್ದರೂ ಬೀಜಗಳನ್ನೂ, ಸಿಪ್ಪೆಯನ್ನೂ ತೆಗೆಯುವ ಅವಶ್ಯಕತೆ ಇದೆ.
ಚಿಗುರೆಲೆಗಳ ಕಷಾಯ ಶರೀರದ ನಿತ್ರಾಣವನ್ನು ತೊಲಗಿಸುವುದು. ಮಹಿಳೆಯರ ಮಾಸಿಕ ರಜಸ್ರಾವದ ಏರುಪೇರುಗಳನ್ನು ಸುಸ್ಥಿತಿಗೆ ತರುವುದು. ಪ್ರಸವಾನಂತರ ಶರೀರ ಸುಸ್ಥಿತಿಗೆ ಮರಳಲು ಸಹಾಯಕ, ಇದನ್ನು ಹಿಂದಿನ ಕಾಲದ ಸೊಲಗಿತ್ತಿಯರು ಅರಿತಿದ್ದರು.
ಅತಿಸಾರದಿಂದ ಬಳಲುತ್ತಿದ್ದರೂ ಈ ಕಷಾಯದಿಂದ ಪರಿಹಾರ. ಕಾಲೆರಾ ಎಂಬಂತಹ ವಾಂತಿಭೇದಿ ಖಾಯಿಲೆ ಇದೆಯಲ್ಲ, ಪೇರಳೆ ಕಷಾಯದಿಂದಲೇ ನಿಯಂತ್ರಣ ಸಾಧ್ಯವಿದೆ. ಚಿಗುರೆಲೆಗಳನ್ನು ಅಗಿಯುವುದರಿಂದ ಗಂಟಲ ಕಿರಿಕಿರಿ, ಬಾಯಿಯ ದುರ್ವಾಸನೆಯನ್ನೂ ಹೋಗಲಾಡಿಸಬಹುದಲ್ಲದೆ, ಹಲ್ಲಿನ ವಸಡುಗಳ ರಕ್ತಸ್ರಾವ, ಬಾಯಿಹುಣ್ಣು ಇತ್ಯಾದಿಗಳನ್ನೂ ಸಮರ್ಥವಾಗಿ ತಡೆಗಟ್ಟಬಹುದಾಗಿದೆ. ಎಲೆಗಳನ್ನು ಹಾಕಿ ಕುದಿಸಿದ ನೀರಿನಲ್ಲಿ ಬಾಯಿ ಮುಕ್ಕುಳಿಸುತ್ತಿದ್ದರೂ ನಡೆದೀತು.
ಕಷಾಯ ಹೇಗೆ ಮಾಡ್ತೀರಾ ?
ಪೇರಳೆಯ ಚಿಗುರೆಲೆಗಳನ್ನು ಕಾಂಡ ಸಹಿತವಾಗಿ ಚಿವುಟಿ ತಂದಿರಾ ?
ತಪಲೆಗೆ 3 ಲೋಟ ನೀರೆರೆದು ಸೊಪ್ಪುಗಳನ್ನು ಕುದಿಸಿ, ಕಾಂಡದ ಭಾಗವನ್ನು ಗುಂಡುಕಲ್ಲಿನಲ್ಲಿ ಜಜ್ಜಿದರೆ ಉತ್ತಮ. ಕುದಿದ ನೀರು ಆರುತ್ತಾ ಬರುವಾಗ ನಾಲ್ಕು ಕಾಳು ಜೀರಿಗೆ , ರುಚಿಗೆ ಬೆಲ್ಲ ಹಾಕಿಕೊಳ್ಳಿ. ಸಕ್ಕರೆ ಬೇಡ. ಬತ್ತಿದ ನೀರು ಒಂದು ಲೋಟದಷ್ಟು ಆದಾಗ ಕಷಾಯ ಕುಡಿಯಲು ಹಿತವಾಗುವಂತೆ ಹಾಲು ಎರೆದು ಇನ್ನೊಂದು ಕುದಿ ಬಂದಾಗ ಕೆಳಗಿಳಿಸಿ. ಜಾಲರಿ ಸೌಟಿನಲ್ಲಿ ಕಷಾಯ ಶೋಧಿಸಿ ಕುಡಿಯಬೇಕಾದವರಿಗೆ ಕೊಡಿ.
ತಂಬುಳಿ:
ಬೇಯಿಸಿದ ಚಿಗುರೆಲೆ, ಚಿಕ್ಕದಾಗಿ ಕತ್ತರಿಸಿ ತುಪ್ಪದಲ್ಲಿ ಬಾಡಿಸಿದರೂ ಆದೀತು. ತೆಂಗಿನ ತುರಿ, ಸಿಹಿ ಮಜ್ಜಿಗೆ, ತುಸು ಜೀರಿಗೆ, ರುಚಿಗೆ ಉಪ್ಪು, ಬೆಲ್ಲ ಕೂಡಿಸಿ ನುಣ್ಣಗೆ ಅರೆಯಿರಿ. ಸಾಕಷ್ಟು ತೆಳ್ಳಗಾಗಿಸಿ ಅನ್ನದೊಂದಿಗೆ ಸವಿಯಿರಿ.
ಈ ಪೇರಳೆಯು ಸಸ್ಯಶಾಸ್ತ್ರೀಯವಾಗಿ Psidium guajava ಅನ್ನಿಸಿಕೊಂಡಿದೆ. Myrtaceae ಕುಟುಂಬವಾಸಿ ಸಸ್ಯ. ದಕ್ಷಿಣ ಅಮೆರಿಕಾ ಮೂಲದ ಉಷ್ಣ ವಲಯದ ಬೆಳೆಯಾಗಿರುವ ಪೇರಳೆ ನಮ್ಮ ದೇಶದ ಹವಾಮಾನಕ್ಕೆ ಸೂಕ್ತವಾಗಿಯೇ ಹೊಂದಿಕೊಂಡಿದೆ ಎಂದರೂ ತಪ್ಪಾಗಲಾರದು.
Friday 21 November 2014
ದೋಸೆ ಎರೆಯೋಣ...
ಮಗಳು ಮನೆಯಲ್ಲಿದ್ದಳು. ಅವಳಿಗೆ ಹಿತವಾಗುವಂತಹ ಅಡುಗೆಯನ್ನೇ ಮಾಡಿ, ಬಿಡುವಾದಾಗ ಇಂಟರ್ನೆಟ್ ವ್ಯವಹಾರಗಳು, ನನಗೆ ತಿಳಿಯಬೇಕಾಗಿರುವುದನ್ನು ಅಂಗಲಾಚಿ ಕಲಿಯುವ ವಿಧಿ ನನ್ನದು. ಹಾಗೇ ಸಂಜೆಯಾಗುತ್ತಾ ಬಂದಿತ್ತು. ನಾಳೆಯೂ ಮನೆಯಲ್ಲಿರ್ತಾಳೆ ಅಂದ್ಕೊಂಡಿದ್ದೆ, ಬೆಳ್ಳಂಬೆಳಗ್ಗೆ ಹೊರಡುವವಳು ಎಂದು ತಿಳಿದಾಗ ಬೇಗನೇ ಅಡುಗೆಕೋಣೆಗೆ ದೌಡಾಯಿಸಿ ದೋಸೆಗೆ ಅಕ್ಕಿ, ಉದ್ದು ನೆನೆ ಹಾಕಿದೆನಾ... ಬಿಡುವಿಲ್ಲದ ಕೆಲಸ ಅಡುಗೆಮನೆಯಲ್ಲಿ ಕಾದಿತ್ತು. ಅತ್ತಇತ್ತ ಚದುರಿದ್ದ ಪಾತ್ರೆಪರಿಕರಗಳು, ತೊಳೆಯದಿದ್ದ ಚಹಾ ಬಟ್ಟಲುಗಳು ಒಂದೇ ಎರಡೇ, ಅಂತೂ ಇವನ್ನೆಲ್ಲ ಸುಧರಿಸಿ, ಊಟದ ತಯ್ಯಾರಿಯೂ, ರಾತ್ರಿ ಪಾಳಿಯ ಸ್ನಾನವೂ, ದೇವರಮನೆಯಲ್ಲಿ ಜ್ಯೋತಿ ಬೆಳಗಿ, ಉಂಡು ಎದ್ದು ದೋಸೆಗೆ ಅರೆಯಲು ಹೊರಟಾಗ ಕಂಡಿದ್ದೇನು ?
ನೆನೆ ಹಾಕಿದ ಒಂದು ಕಪ್ ಉದ್ದು, ಮೆಂತೆ. ಹ್ಞೂ, ಚೆನ್ನಾಗಿ ನೆನೆದಿದೆ. 2 ಕಪ್ ಬೆಳ್ತಿಗೆ ಅಕ್ಕಿ , ಇದೂ ನೆನೆದಿದೆ, ಆದ್ರೆ ಒಂದು ಕಪ್ ಕುಚ್ಚುಲಕ್ಕಿ, " ನೀರು ಬಿದ್ದೇ ಇಲ್ಲ ನನ್ಮೇಲೆ " ಎಂದು ಅಣಕಿಸಿತು. ಅದೂ ರೇಷನ್ ಅಕ್ಕಿ, ಓಣಂ ಬಾಬ್ತು ಬಂದಿತ್ತು. ದೋಸೆ ಚೆನ್ನಾಗಿ ಬರಲಿ ಅಂತ ನಾನಿದ್ರೆ ಈಗ ಏನು ಮಾಡಲಿ ? ಇಡ್ಲಿ ಮಾಡಬಹುದಿತ್ತು, ಬೇಗ ಹೋಗಬೇಕಾದವಳಿಗೆ ದೋಸೆಯೇ ಚೆನ್ನ ಎಂಬ ನಿರ್ಧಾರಕ್ಕೆ ಬಂದು ದೋಸೆ ಹಿಟ್ಟು ತಯಾರಾಯಿತು.
ಅರೆದ ಹಿಟ್ಟು ಎಲ್ಲರಿಗೂ ಸಾಕಾಗುವಂತಿಲ್ಲ, ಮೈದಾ ಸೇರಿಸುವಂತಿಲ್ಲ, ಮಗಳಿಗಾಗದು ಮೈದಾ. ರಾಗೀ ಹುಡಿ, ಅದೂ ಮುಗಿದಿದೆ. ಉಸ್ಸಪ್ಪ ... ಇಲ್ಲೊಂದು ಸಜ್ಜಿಗೆಯ ಪ್ಯಾಕ್ ಇದೆ. ಅಳೆದು ನೋಡೂದೇನೂ ಬೇಡ, ಒಂದು ಕಪ್ ಇದ್ದೀತು. ಸಜ್ಜಿಗೆಯನ್ನು ತಪಲೆಗೆ ಸುರಿದು ನೆನೆಯುವಂತೆ ನೀರೆರೆದು ಇಟ್ಟಾಯ್ತು.
ಬೆಳ್ಳಂಜಾವ ಎಬ್ಬಿಸಿದ್ದು ಮಗಳು. ದೋಸೆಗೊಂದು ಚಟ್ನಿ, ತೆಂಗಿನತುರಿಯಿಂದ ಸಿದ್ಧವಾಯಿತು. ದೋಸೆ ಹಿಟ್ಟಿಗೆ ನೆನೆದ ಸಜ್ಜೆಗೆಯೂ ಬೆರೆಯಿತು. ಗರಿಗರಿ ದೋಸೆ ಎದ್ದು ಬಂದಿತು. ಮುಂಜಾನೆಗೊಂದು ತಿಂಡಿ ತಿಂದು ಮಗಳು ಹೊರಟಳು, ಮೂಡಬಿದ್ರೆ ತಲಪಲು ಮೂರು ಬಸ್ ಬದಲಿಸಬೇಕಾಗಿದೆ. ಏನೇ ಆದ್ರೂ ಬೆಳಗಿನ ಆಹಾರ ಲಘುವಾಗಿರಕೂಡದು, ಪುಷ್ಟಿದಾಯಕವಾಗಿರಬೇಕು.
ಆಯಾಸವಾಗಿದೆ, ಆದರೂ ನಾಳೆಗೊಂದು ತಿಂಡಿಯ ವ್ಯವಸ್ಥೆ ಆಗಲೇಬೇಕಾಗಿದೆ. ದೋಸೆಯನ್ನೇ ಬಯಸುವವರಿಗೆ ಹೀಗೊಂದು ಪೇಪರ್ ದೋಸೆ ತಯಾರಿಸೋಣ.
ಒಂದೂವರೆ ಕಪ್ ಬೆಳ್ತಿಗೆ ಅಕ್ಕಿ
ಒಂದು ಕಪ್ ಚಿರೋಟಿ ರವೆ ( ಬಾಂಬೇ ಸಜ್ಜಿಗೆ )
ಒದು ಕಪ್ ಅವಲಕ್ಕಿ
ಒಂದು ಲೋಟ ಸಿಹಿ ಮಜ್ಜಿಗೆ
ರುಚಿಗೆ ಉಪ್ಪು
ಎಲ್ಲವನ್ನೂ ಪ್ರತ್ಯಪ್ರತೇಕವಾಗಿ ನೀರಿನಲ್ಲಿ ನೆನೆಸಿಡಿ.
ಸಂಜೆಯಾಗುತ್ತಲೇ ಅಕ್ಕಿಯನ್ನು ಚೆನ್ನಾಗಿ ತೊಳೆದು ಮಜ್ಜಿಗೆ ಎರೆದು ಅರೆಯಿರಿ.
ನೆನೆದ ಚಿರೋಟಿರವೆಯನ್ನು ಪುನಃ ಅರೆಯುವ ಅವಶ್ಯಕತೆಯಿಲ್ಲ, ನೆನೆದ ಅವಲಕ್ಕಿಯನ್ನು ನುಣ್ಣಗಾದ ಅಕ್ಕಿ ಹಿಟ್ಟಿಗೆ ಸೇರಿಸಿ ಇನ್ನೊಮ್ಮೆ ಅರೆದು ತೆಗೆಯಿರಿ. ಹಿಟ್ಟುಗಳನ್ನು ಒಟ್ಟಿಗೆ ಕೂಡಿಸಿ ಉಪ್ಪು ಬೆರೆಸಿ ಮುಚ್ಚಿಡಿ, ಮುಂಜಾನೆ ದೋಸೆ ಹೀಗೆ ಎರೆಯಿರಿ, " ವಾರೆವ್ಹಾ.... ಮಸಾಲೆ ದೋಸೆ ನಾಚಿ ಓಡಿತು " ಅನ್ನಿರಿ.
ಚಳಿಹವೆ ಇದ್ದಾಗ ಇಂತಹ ದೋಸೆ ಮಾಡಬಹುದು. ಸೆಕೆ ಸಮಯದಲ್ಲಿ ಮಜ್ಜಿಗೆ ಎರೆದ ಹಿಟ್ಟು ಹುಳಿಹುಳಿಯಾಗಿ ತಿನ್ನಲು ಪ್ರಯಾಸ ಪಡಬೇಕಾದೀತು. ಹವಾಮಾನ, ಸಮಯದ ಹೊಂದಾಣಿಕೆ ತಿಳಿದಿದ್ದರೆ ಮಾತ್ರ ಇಂತಹ ದೋಸೆ ತಯಾರಿಸಲು ಸಾಧ್ಯ. ಮನೆಯ ದೋಸೆ ತಿನ್ನಬೇಕೆಂಬ ಆಸೆಯಾದಾಗ ಬ್ರಹ್ಮಚಾರಿಗಳ ಬಿಡಾರದಲ್ಲೂ ಈ ದೋಸೆ ಮಾಡಿಕೊಳ್ಳಲು ಸಾಧ್ಯವಿದೆ, ಅಕ್ಕಿ ಅರೆಯುವ ಯಂತ್ರ ಇಲ್ವೇ, ಅಕ್ಕಿಹುಡಿ ತನ್ನಿ, ಮಾಡಿಕೊಂಡು ತಿನ್ನಿ.
ನಿಮ್ಮ ಮಜ್ಜಿಗೆ ಫ್ರಿಜ್ ಎಂಬ ಶೀತಲಪೆಟ್ಟಿಗೆಯಲ್ಲಿರುವಂತಾದ್ದೇ ಆಗಿದ್ದರೆ ದೋಸೆಗೆ ಬಳಸುವ ಮೊದಲು ಕೋಣೆಯ ತಾಪಮಾನಕ್ಕೆ (room temperature ) ಬಂದಿಳಿದಿರಬೇಕು. ಇಲ್ಲದಿದ್ದರೆ ಮಜ್ಜಿಗೆ ಬಳಸಿ ಮಾಡುವ ತಿಂಡಿಗಳು ಚೆನ್ನಾಗಿ ಬರುವ ಸಾಧ್ಯತೆ ಕಡಿಮೆ.
Thursday 13 November 2014
ಮುದ್ದಿನ ಕಂದ
ಅಜ್ಜ ಅಜ್ಜಿಯ ಮುದ್ದಿನ ಕಂದ
ಪುಟ್ಟನಿಗೆಂದು
ಕಾಶೀಯಾತ್ರೆಗೆ ಹೋಗಿ ತಂದ
ಬಣ್ಣ ಬಣ್ಣದ ಜೋಕಾಲಿ|
" ಏನೋ ಪುಟ್ಟಾ,
ಇದೇನು ನಿನ್ನ ಉಚ್ಚಾಲು ?"|
" ಹೋಗೇ ಅತ್ತೇ,
ಇದು ಉಚ್ಚಾಲು ಅಲ್ಲ
ಅನ್ನೀ ಜೋಕಾಲಿ "|
" ಉಯ್ಯಾಲೆ ಆಡೋಣ ಬನ್ನಿ
ತೂಗು ತೊಟ್ಟಿಲ ಅನ್ನಿ "|
Posted via DraftCraft app
Saturday 8 November 2014
ಒಡೆದ ಹಾಲು
ಹಾಲು ಕಾಯಿಸಲಿಟ್ಟು, ಅಡುಗೆಮನೆಯ ಒಳಗೆ ಅತ್ತಿತ್ತ ಹರಡಿದ್ದ ಪಾತ್ರೆಪರಡಿಗಳನ್ನು ಯಥಾಸ್ಥಾನದಲ್ಲಿಟ್ಟು, ತೊಳೆಯಬೇಕಾಗಿದ್ದ ಲೋಟ, ತಟ್ಟೆಗಳನ್ನು ಸಿಂಕಿಗೆ ಹಾಕಿ, ಒದ್ದೆಬಟ್ಟೆಯಲ್ಲಿ ಚೆಲ್ಲಿದ್ದ ನೀರು, ಇನ್ನೂ ಏನೇನೋ ಇರ್ತವೆ, ಎಲ್ಲವನ್ನೂ ಒರೆಸುತ್ತಾ ಬಂದಂತೆ ಹಾಲು ಕುದಿಯಲಾರಂಭಿಸಿತು. ಎಷ್ಟಾದ್ರೂ ಪ್ಯಾಕೆಟ್ ಹಾಲು, ತಂದ ಕೂಡಲೇ ಕಾಯಿಸಿ ಇಡುವ ಪದ್ಧತಿ. ಹಾಲನ್ನು ಒಲೆ ಮೇಲೆ ಇಟ್ಟು ಅತ್ತಿತ್ತ ಹೋಗೋ ಹಾಗಿಲ್ಲ. ಟೀವಿ ನೋಡ್ತಾ ಕೂತ್ಬಿಟ್ರೆ ಮುಗೀತು, ಮತ್ತೆ ಇಹಲೋಕದ ಪರಿವೆಯೇ ಇಲ್ಲ, ಅಲ್ಲಿಂದ ಹಾಲು ಸೀದ ವಾಸನೆ ಬಂದಾಗಲೇ ಭೂಮಿಗಿಳಿದು ಬರ್ತೀವಿ, ಏನು ಮಡೋದು, ನಮ್ಮ ಜೀವನಶೈಲಿಯೇ ಹಾಗಾಗಿದೆ.
" ಹ್ಞಾ, ಹಾಲು ಕುದಿ ಬಂದಿದೆ, ಚಿಕ್ಕ ಉರಿಯಲ್ಲಿರಲಿ. ದಪ್ಪ ಕೆನೆಕಟ್ಟದಿದ್ದರೆ ಬೆಣ್ಣೆ ಬರಬೇಕಲ್ಲ " ಅಂದುಕೊಳ್ಳುತ್ತ ತಟ್ಟೆ ಲೋಟಗಳನ್ನು ತೊಳೆದಿರಿಸಿ ಆಯ್ತು. ಇನ್ನು ಅನ್ನ ಬಿಸಿ ಮಾಡಿಕೊಳ್ಳೋಣ ಅಂತ ನೋಡಿದ್ರೆ ಒಲೆಯಲ್ಲಿದ್ದ ಹಾಲು ಒಡೆದು ಹೋಗಿದೆ. ಭರ್ತಿ ಒಂದು ಲೀಟರಿತ್ತು. ನಾಳೆ ರಜಾದಿನ, ಮಕ್ಕಳಿಬ್ಬರೂ ಮನೆಯಲ್ಲಿರ್ತಾರೆ ಅಂತಿದ್ರೆ ಕಾಫಿಗೇನ್ಮಾಡ್ಲಿ, ಮೊಸರಿನ ಕಥೆಯೇನು ಚಿಂತೆ ಒಂದೆಡೆಯಾದರೆ, ಈ ಒಡೆದ ಹಾಲನ್ನೇನ್ಮಾಡ್ಲಿ ಎಂಬ ಚಿಂತೆ ಇನ್ನೊಂದೆಡೆ.
" ಪ್ಯಾಕೆಟ್ ಬಿಚ್ಚೋ ಮೊದಲು ನೋಡ್ಬೇಕಾಗಿತ್ತು... ವಾಪಸ್ ಮಾಡಿ ಬೇರೆ ತರ್ತಿದ್ದೆ, ಈಗ ರಾತ್ರಿ ಪುನಃ ಹೋಗಿ ಬೇರೆ ಹಾಲು ತರಲು ನನ್ನಿಂದಾಗದು "
" ಹಾಗಿದ್ರೆ ಈ ಹಾಲನ್ನೇ ಕುಡಿಯೋಣ ಅಂತೀರಾ "
" ನಂಗೆ ಬೇಡ, ನೀನೇ ಕುಡಿ "
ನಾವು ಚಿಕ್ಕವರಿದ್ದಾಗ ಯಾರಿಗೆ ಏನೇ ಕಾಯಿಲೆಕಸಾಲೆ ಬರಲಿ, ನನ್ನಮ್ಮ ಹಾಲನ್ನು ಹಾಗೇ ಕುಡಿಯಲು ಕೊಡ್ತಿರಲಿಲ್ಲ. ಬಿಸಿಹಾಲಿಗೆ ಲಿಂಬೆರಸ ಹಿಂಡಿ ಅದರ ತಿಳಿನೀರಿಗೆ ಗ್ಲುಕೋಸ್ ಹಾಕಿ ಕೊಡ್ತಾ ಇದ್ದರು, ಹಾಲಿನ ಕಣಗಳು ಲ್ಯಾಕ್ಟೋಸ್ ಆಗಿ ಪರಿವರ್ತಿತವಾಗುವುದರಿಂದ ಜೀರ್ಣ ಆಗಲು ಸುಲಭ ವಿಧಾನ. ಇದೂ ಈಗ ಹಾಗೇನೇ ಅಲ್ವೇ, ಲಿಂಬೆರಸ ಹಾಕದೇ ಹಾಲು ಒಡೆದಿದೆ ಅಷ್ಟೇ ಅಂದ್ಕೊಂಡು ನಾನೇ ವೇ ನೀರು ( whey water ) ಕುಡಿದಾಯ್ತು. ಎಲ್ಲವನ್ನೂ ಗುಳುಂಕರಿಸಲು ಸಾಧ್ಯವಿಲ್ಲ, ಉಳಿದ ವೇ ನೀರು ಒಂದು ಬಾಟ್ಲಿಯೊಳಗೆ ಭದ್ರವಾಯಿತು. ನಾಳೆ ಕಾಫಿ, ಚಹಾ ಬದಲಾಗಿ ವೇ ನೀರನ್ನೇ ಕುಡಿದರಾಯಿತು. ಬೇಕಿದ್ರೆ ಸಕ್ರೆ ಹಾಕೋಣಾ...
ಒಂದು ಶುಭ್ರವಾದ ಬಟ್ಟೆಯಲ್ಲಿ ಒಡೆದ ಹಾಲನ್ನು ಸೋಸಿ, ವೇ ನೀರು ತೆಗೆದಿರಿಸಿ, ಬಟ್ಟೆಯನ್ನು ಗಂಟು ಕಟ್ಟಿ ನೇತಾಡಿಸಿ, " ಉಸ್ಸಪ್ಪಾ... ಒಂದ್ಕೆಲ್ಸ ಮುಗೀತು, ನಾಳೆ ಶ್ರೀಖಂಡ ಮಾಡಿ ದೋಸೆ ಜೊತೆ ತಿನ್ನೂದು...."
ಬೆಳಗ್ಗೆ ದೋಸೆ ಎರೆಯುವ ಮೊದಲೇ ಗಂಟು ಬಿಡಿಸಿದಾಗ, ಪನೀರ್ ಸಿದ್ಧವಾಗಿತ್ತು. ತೆಗೆದು ಒಂದು ತಟ್ಟೆಗೆ ಹಾಕಿ ಆಯ್ತು. ಅದಕ್ಕೆ ರುಚಿಗೆ ಬೇಕಾದ ಸಕ್ಕರೆಯನ್ನು ಮಿಕ್ಸಿಯಲ್ಲಿ ಪುಡಿ ಮಾಡಿ, ಪರಿಮಳ ಹಾಗೂ ಬಣ್ಣ ಬರಲು ಬಾದಾಮ್ ಮಾಲ್ಟ್ ಕೂಡಿಸಿ, ಚೆನ್ನಾಗಿ ಚಮಚಾದಲ್ಲಿ ಕಲಸಿ....." ವ್ಹಾವ್, ವ್ಹಾವ್ ದೋಸೆ ಜೊತೆ ನಾನೂ ರೆಡಿ " ಅನ್ನೋದೇ ಈ ಶ್ರೀಖಂಡ!
ಪನೀರ್ ಬಳಸಿಕೊಂಡು ರಸಗುಲ್ಲಾ, ಜಾಮೂನ್, ಜಿಲೇಬಿಗಳನ್ನೂ ಮಾಡಬಹುದಾಗಿದೆ. ಜಿಲೇಬಿಯನ್ನು ಹಿಂದೊಮ್ಮೆ ಟೀವಿ ಮಾಧ್ಯಮದಲ್ಲಿ ನೋಡಿಕೊಂಡು ಮಾಡಿದ್ದು, ಚೆನ್ನಾಗಿಯೇ ಬಂದಿತ್ತು. ಇನ್ನೂ ಏನೇನೋ ತಿಂಡಿಗಳನ್ನು ಮಾಡಬಹುದು. ಉತ್ತರ ಭಾರತೀಯರು ಪನೀರ್ ಖಾದ್ಯ ತಯಾರಿಯಲ್ಲಿ ಪ್ರವೀಣರು.
ಸೂಚನೆ: ಒಡೆದ ಹಾಲು ಕೆಟ್ಟ ವಾಸನೆ ಬರುತ್ತಿದೆಯಾದರೆ ಯಾವ ಸಿಹಿಯನ್ನೂ ಮಾಡಲಾಗದು. ಚೆಲ್ಲುವುದೊಂದೇ ದಾರಿ.
Posted via DraftCraft app
Subscribe to:
Posts (Atom)