Pages

Ads 468x60px

Friday 28 September 2018

ನೆಲ್ಲಿಕಾಯಿ ತಂಬುಳಿ





“ ನೆಲ್ಲಿಕಾಯಿ ಈಗಲೇ ಸಿಗಲಿಕ್ಕೆ ಶುರುವಾಯ್ತು… “ ನೆಲ್ಲಿಕಾಯಿಗಳು ಟೇಬಲ್ ಮೇಲೆ ಬಂದಿಳಿದುವು.
“ ಇದನ್ನು ಏನು ಮಾಡೂದು ಅಂತೀರಾ… “
“ ನೀನು ಏನೂ ಮಾಡುವುದು ಬ್ಯಾಡ, ಹಾಗೇ ತಿನ್ನುವುದು… “
“ ಅಷ್ಟೇನಾ, ಸರಿ… “

“ ನನಗೊಂದು ನಾಲಕ್ಕು ನೆಲ್ಲಿಕಾಯಿ ಬೇಯಿಸಿ ಕೊಡು. “ ಎಂದರು ಗೌರತ್ತೆ, ಅವರಿಗೂ ಹಲ್ಲು ಹೇಳಿದಂತೆ ಕೇಳುವದಿಲ್ಲ. “ ದಿನಕ್ಕೊಂದು ನೆಲ್ಲಿಕಾಯಿ ತಿನ್ನುತ್ತ ಇದ್ದರೆ ಆಯುಸ್ಸುವೃದ್ಧಿ ಆಗುತ್ತಂತೆ, ವಾತ ಕಫ ಪಿತ್ತ ಎಲ್ಲವೂ ಬ್ಯಾಲೆನ್್ಸ ಆಗಿ… “ ಗೌರತ್ತೆ ಹೇಳುತ್ತ ಹೋದಂತೆ ನೆಲ್ಲಿಕಾಯಿ ಬೆಂದಿತು.

“ ನೆಲ್ಲಿಕಾಯಿ ಬೇಯಿಸಿದ ನೀರು ಚೆಲ್ಲಬೇಡ, ಚಿಟಿಕೆ ಉಪ್ಪು ಹಾಕಿ ನೀನೇ ಕುಡಿ… “ ನನಗೂ ನೆಲ್ಲಿಕಾಯಿ ಶರಬತ್ತು ಕುಡಿಯುವ ಯೋಗ.

ನೆಲ್ಲಿಕಾಯಿ, ಟೊಮ್ಯಾಟೋ ಥರ ನಾಲ್ಕು ದಿನದಲ್ಲಿ ಕೊಳೆತು ಹೋಗುವ ಮಾಲಲ್ಲ. ದಿನ ಹದಿನೈದು ಕಳೆದರೂ ತಾಜಾ ಆಗಿ ಇರುತ್ತವೆ. ಅಂತಾದ್ರಲ್ಲಿ ನಮ್ಮ ನೆಲ್ಲಿಕಾಯಿಗಳೂ...

ಯಾಕೋ ಒಮ್ಮೆ ನಮ್ಮವರು ಮುಚ್ಚಿಟ್ಟಿದ್ದ ನೆಲ್ಲಿಕಾಯಿ ಜಾಡಿಯನ್ನು ತೆರೆದು ನೋಡಿದಾಗ, ಅರೆ! ನೆಲ್ಲಿಕಾಯಿಗಳು ತಣ್ಣಗೆ ಕುಳಿತಿವೆ. “ ಏನೂ ನಿಮ್ಮ ನೆಲ್ಲಿಕಾಯಿ ಮುಗಿದಿಲ್ಲ? “
“ನಂಗೆ ತಿನ್ನಲಿಕ್ಕೆ ನೆನಪೇ ಆಗೂದಿಲ್ಲ, ಏನಾದರೂ ಒಂದು ಅಡುಗೆ ಮಾಡಿ ಮುಗಿಸು… “
“ ಸರಿ ಹೋಯ್ತು, ಎಂತದ್ದು ಮಾಡುವುದು? “
ನನ್ನ ಚಿಂತೆಗೆ ಗೌರತ್ತೆ ತಂಬುಳಿ ಮಾಡುವ ಸುಲಭೋಪಾಯ ಸೂಚಿಸಿದರು.

ನೆಲ್ಲಿಕಾಯಿಗಳನ್ನು ಪುನಃ ಚೆನ್ನಾಗಿ ತೊಳೆದು, ಕುದಿಸಿ, ಬೇಯಿಸಿ, ರುಚಿಗೆ ಉಪ್ಪೂ…
ಮೂರು ಬೇಯಿಸಿದ ನೆಲ್ಲಿಕಾಯಿಗಳು, ಬೀಜ ತೆಗೆಯಿರಿ.
ಒಂದು ಹಿಡಿ ತೆಂಗಿನ ತುರಿ.
ನಾಲ್ಕಾರು ಕಾಳುಮೆಣಸು, ಹುರಿಯಿರಿ.
ಒಂದು ಹಸಿಮೆಣಸು.
ಒಂದು ಲೋಟ ಸಿಹಿ ಮಜ್ಜಿಗೆ.
ಎಲ್ಲವನ್ನೂ ಸಿಹಿ ಮಜ್ಜಿಗೆ ಎರೆದು ಅರೆಯಿರಿ, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ತುಪ್ಪ ಸಹಿತ ಒಗ್ಗರಣೆ ಕೊಡುವಲ್ಲಿಗೆ ನೆಲ್ಲಿಕಾಯಿಯ ತಂಬುಳಿ ಆಯಿತು. ದಪ್ಪ ಚಟ್ಣಿಯಂತಾಗಬಾರದು, ಸಾರಿನಂತೆ ತೆಳ್ಳಗೆ ಇರಬೇಕು.

ಜ್ವರ ಬಂದು ಬಾಯಿರುಚಿ ಕೆಟ್ಟಿರುವಾಗ, ಜೀರ್ಣಕ್ರಿಯೆ ಸರಿಯಿಲ್ಲದಿರುವಾಗ ಈ ತಂಬುಳಿ ಸೂಕ್ತ ಮನೆಮದ್ದು.

ಆಯುರ್ವೇದ ಗ್ರಂಥಗಳಲ್ಲಿ ದಿವ್ಯ ಔಷಧಿಯೆಂದು ಉಲ್ಲೇಖಿತವಾಗಿರುವ ನೆಲ್ಲಿಕಾಯಿ, ಮರದ ಎಲೆ, ಹೂ, ತೊಗಟೆ, ಬೇರು ಎಂಬಿತ್ಯಾದಿ ಸರ್ವಾಂಗಗಳೂ ಒಂದಲ್ಲ ಒಂದು ವಿಧವಾಗಿ ರೋಗ ಪರಿಹಾರಕ. ಕ್ಷೀರಸಾಗರ ಮಥನದ ಸಮಯದಲ್ಲಿ ಭೂಮಿಗೆ ಬಿದ್ದಂತಹ ಅಮೃತದ ಬಿಂದುವಿನಿಂದ ನೆಲ್ಲಿಯ ಉದ್ಭವ ಅಯಿತೆಂದು ಪುರಾಣವು ಹೇಳುತ್ತದೆ. ದೀರ್ಘಾಯುಸ್ಸನ್ನೂ, ತೇಜಸ್ಸನ್ನೂ ನೀಡುವುದೆಂಬ ಅರಿವು ನಮ್ಮ ಪ್ರಾಚೀನರಿಗೆ ಇತ್ತು.

ಸಸ್ಯಶಾಸ್ತ್ರವು Phyllanthus emblica ಹೆಸರಿನಿಂದ ಈ ಸಸ್ಯವನ್ನು ಗುರುತಿಸಿದೆ. ಆಂಗ್ಲ ಭಾಷಾ ಪ್ರಯೋಗದಲ್ಲಿ Indian gooseberry ಎಂದೆನ್ನಬೇಕಾಗಿದೆ.


        



Sunday 23 September 2018

ಮಳೆಗಾಲದ ಪತ್ರೊಡೆ




        

“ ಅಕ್ಕ, ಸೊಪ್ಪು ತುಂಬ ಉಂಟು… “ ಚೆನ್ನಪ್ಪ ಅಂದಿದ್ದು ಕೆಸುವಿನ ಸೊಪ್ಪನ್ನು, ಒಂದು ಪತ್ರೊಡೆ ಮಾಡಿ ತಿನ್ನುವುದಕ್ಕಿಲ್ಲವೇ ಎಂಬುದು ಅವನ ಉದ್ಗಾರದ ಆಂತರ್ಯ.

“ ಮಾಡೋಣ.. ನಾಳೆ. “
“ ನಾಳೆ ನಾನು ಬೇರೆ ಹೋಗೂದಿದೆ.. “
“ ಹಾಗಿದ್ದರೆ ಸೊಪ್ಪು ಕಿತ್ತು ತರಬೇಡ, ನಾಳೆ ಏನೋ ಒಂದು ಉಪ್ಪಿಟ್ಟು ಮಾಡಿದರಾಯ್ತು ಬಿಡು. “

ಮಾರನೇ ದಿನ ಸಂಜೆ ಹಿತ್ತಲಲ್ಲಿ ತಿರುಗಾಡುತ್ತಿರಬೇಕಾದರೆ ಕೆಸುವಿನ ಸೊಪ್ಪು ಕೈ ಬೀಸಿ ಕರೆಯಿತು. ಸೊಂಪಾಗಿ ಬೆಳೆದಿದ್ದ ಕಾಟ್ ಕೆಸು ತಾನೇ ತಾನಾಗಿ ಮೆರೆಯುತ್ತಿತ್ತು. ಮಳೆಗಾಲದಲ್ಲಿ ಮಾತ್ರ ಸಿಗುವ ಕಾಡು ಕೆಸುವಿನ ಅಡುಗೆ ಮಾಡದಿದ್ದರೆ ಹೇಗೆ? ಕೆಸುವಿನ ಸೊಪ್ಪಿನ ಆರೋಗ್ಯಲಾಭ ದಕ್ಕಿಸಿಕೊಳ್ಳಬೇಕಿದ್ದರೆ ಪತ್ರೊಡೆ ಮಾಡಿ ತಿನ್ನಲೇ ಬೇಕು.

ಅಂದಾಜು ಇಪ್ಪತ್ತು ಎಲೆಗಳನ್ನು ಚಿವುಟಿ ತಂದೆ.
ಆಗಲೇ 2 ಲೋಟ ನುಚ್ಚಕ್ಕಿಯೂ ನೀರಿಗೆ ಬಿತ್ತು.
ಒಂದು ಹಿಡಿ ಕುಚ್ಚುಲಕ್ಕಿಯನ್ನೂ ಪ್ರತ್ಯೇಕವಾಗಿ ನೆನೆಸಲಾಯಿತು.
ಬಾಳೆ ಎಲೆ ಆಗಬೇಕು, ಪುಟ್ಟದೊಂದು ಕತ್ತಿ ಹಿಡಿದು ತೋಟದಿಂದ ಏಳೆಂಟು ಕುಡಿ ಬಾಳೆಲೆಗಳನ್ನು ತಂದೂ ಆಯ್ತು.
ಚಿಕ್ಕದೊಂದು ತೆಂಗಿನಕಾಯಿ ಸುಲಿದು, ಒಡೆದು, ಅರ್ಧ ಕಡಿ ಕಾಯಿ ತುರಿಯಲಾಯಿತು.
ನಾಲ್ಕು ಒಣಮೆಣಸು,
ಪುಟ್ಟ ಚಮಚ ಅರಸಿಣ,
ಲಿಂಬೆ ಗಾತ್ರದ ಹುಣಸೆಹಣ್ಣು,
ರುಚಿಗೆ ಉಪ್ಪು ಹಾಗೂ ಬೆಲ್ಲ ಇದ್ದರಾಯಿತು,
 ಡಬ್ಬಿಯಲ್ಲಿ ಗರಂ ಮಸಾಲೆ ಹುಡಿ ಇದ್ದಿತು, ಎರಡು ಚಮಚ ಇರಲಿ, ಕೊತ್ತಂಬ್ರಿ ಜೀರಿಗೆ ಎಂದು ಒದ್ದಾಡುವುದು ಬೇಡ.
ಕಾಳುಮೆಣಸು ಪುಡಿ ಮಾಡಿಟ್ಟಿದ್ದೂ ಇತ್ತು, ಒಂದು ಚಮಚ ಇರಲಿ.

ಮೊದಲು ಕುಚ್ಚುಲಕ್ಕಿ ತೊಳೆದು ಮಿಕ್ಸಿಗೆ ಹಾಕಿ ತಿರುಗಿಸಿ, ಅರ್ಧಂಬರ್ಧ ಹುಡಿ ಆದಾಗ, ತೆಂಗಿನತುರಿ ಇತ್ಯಾದಿ ಮಸಾಲೆ ಸಾಮಗ್ರಿಗಳನ್ನು ಹಾಕಿ,
ದಪ್ಪ ಸಿಹಿ ಮಜ್ಜಿಗೆ ಎರೆದು ಅರೆಯಿರಿ.
ಇದೀಗ ನುಚ್ಚಕ್ಕಿಯ ಸರದಿ, ತೊಳೆದು ಅರೆಯುವುದು, ನುಚ್ಚಕ್ಕಿಯ ವಿಶೇಷ ಏನಪ್ಪಾ ಅಂದ್ರೆ ಎಷ್ಟೇ ಅರೆದರೂ ತರಿತರಿಯಾಗಿಯೇ ಇರುವ ಗುಣ. ಇಡ್ಲಿ ಮಾಡಲೂ ನುಚ್ಚಕ್ಕಿಯೇ ಹಿತ.
ಅರೆದ ಹಿಟ್ಟನ್ನು ಅಗಲವಾದ ತಪಲೆಗೆ ಹಾಕಿ ಇಡಬೇಕು.

ಕೆಸುವಿನೆಲೆಗಳನ್ನು ಶುಭ್ರವಾದ ಬಟ್ಟೆಯಲ್ಲಿ ಒರೆಸಿ, ತೊಟ್ಟಿನ ಭಾಗವನ್ನು ಕತ್ತರಿಸಿ ತೆಗೆದು, ಕೆಸುವಿನಲೆಗಳನ್ನು ಒಟ್ಟಿಗೆ ಚಿಕ್ಕದಾಗಿ ಚೂರಿಯಲ್ಲಿ ಚಕಚಕನೆ ಕತ್ತರಿಸಿ ಇಡಬೇಕು.

ಬಾಳೆ ಎಲೆಗಳನ್ನೂ ಒದ್ದೆ ಬಟ್ಟೆಯಲ್ಲಿ ಒರೆಸಿ, ಗ್ಯಾಸ್ ಜ್ವಾಲೆಗೆ ಹಿಡಿದು ಬಾಡಿಸಬೇಕು.
ಅಟ್ಟಿನಳಗೆ ಯಾ ಇಡ್ಲಿ ಪಾತ್ರೆ ಒಲೆಗೇರಲಿ,
ನೀರು ಕುದಿಯಲಿ,
ಹಿಟ್ಟು, ಮಸಾಲೆ ಹಾಗೂ ಕೆಸುವಿನ ಸೊಪ್ಪನ್ನು ಜೊತೆಗೂಡಿಸಿ, ಕೈಯಲ್ಲಿ ಬೆರೆಸಿ, ಹಿಟ್ಟು ಈಗ ಮುದ್ದೆಯಾಗಿ ಅಂಗೈಯಲ್ಲಿ ಹಿಡಿಯಲು ಬರುವಂತಿರಬೇಕು.


         


ನನ್ನ ಬರವಣಿಗೆ ಮುಂದುವರಿಯುತ್ತಿದ್ದಂತೆ ಗೌರತ್ತೆ, “ಈಗ ಯಾವ ಅಡಿಗೆ ಬರೆಯುತ್ತ ಇದ್ದೀ... “ ಎನ್ನುತ್ತ ಬಂದರು.

“ ಏನಿಲ್ಲ ಬಿಡಿ, ಅದೇ ನಿನ್ನೆ ಮಾಡಿದ ಪತ್ರೊಡೆ... “

“ ಅಚ್ಚುಕಟ್ಟಾಗಿ ಬಾಡಿಸಿದ ಬಾಳೆ ಎಲೆಯಲ್ಲಿ ಹಿಟ್ಟು ತುಂಬಿಸಿ... ಅಂತ ಬರೆದ್ರೆ ಮುಗೀತು, ಪೇಟೆಯಲ್ಲಿರುವವರಿಗೆ ಬಾಳೆ ಎಲೆ ಎಲ್ಲಿಂದ ಬರಬೇಕು? “

“ ತರ್ತಾರೆ ಬಿಡಿ, ಸೂಪರ್ ಮಾರ್ಕೆಟ್ಟೂ ಉಂಟಲ್ಲ.. “ ನನ್ನ ಸಮಜಾಯಿಷಿಗೆ ಗೌರತ್ತೆ ಬಗ್ಗಲಿಲ್ಲ, ಹಂಗೇನೆ ಅವರಿಂದ ಉದ್ಗರಿಸಲ್ಪಟ್ಟ ಸುಲಭೋಪಾಯಗಳು ಇಲ್ಲಿವೆ.

 ಬಾಳೆ ಎಲೆ ಇಲ್ಲದಿದ್ದರೆ ಹಿಟ್ಟಿನ ಮುದ್ದೆಯನ್ನು ಅಗಲವಾದ ತಟ್ಟೆಯಲ್ಲಿ ತುಂಬಿಸಿ ಅಟ್ಟಿನಳಗೆಯೊಳಗಿಟ್ಟು ಬೇಯಿಸಬಹುದಾಗಿದೆ.

ಇಡ್ಲಿ ಬೇಯಿಸುವ ಪುಟ್ಟ ಪುಟ್ಟ ತಟ್ಟೆಗಳಲ್ಲಿ ತುಂಬಿಸಿ ಬೇಯಿಸಿದರೆ ಸಮಯವೂ ಕಡಿಮೆ ಸಾಕು, ಮಾಮೂಲಿಯಾಗಿ ಇಡ್ಲಿ ಬೇಯಿಸುವ ಸಮಯವೇ ಸಾಕು, ಅರ್ಧ ಗಂಟೆ, ಮುಕ್ಕಾಲು ಗಂಟೆ ಅಂತ ಒದ್ದಾಡಬೇಕಿಲ್ಲ.

ಬಾಳೆ ಎಲೆಯ ಬದಲು ಉಪ್ಪಳಿಕನ ಎಲೆ, ಸಾಗುವಾನಿ ಎಲೆ, ಮುತ್ತುಗದ ಎಲೆ ಕೂಡಾ ಬಳಸಬಹುದು.

ಬಾಡಿಸಿದ ಬಾಳೆ ಎಲೆಯ ಯೋಗ್ಯತೆ ಇನ್ಯಾವುದೇ ಎಲೆಗೆ ಇಲ್ಲ, ಬಾಳೆ ಎಲೆಯೊಳಗೆ ಹಿಟ್ಟು ಇಟ್ಟು, ಅಚ್ಚುಕಟ್ಟಾಗಿ ಮಡಚಿ, ನೀರು ಕುದಿಯುತ್ತಿರುವ ಅಟ್ಟಿನಳಗೆಯೊಳಗಿಟ್ಟು, ಭದ್ರವಾಗಿ ಮುಚ್ಚಿ, ಅರ್ಧ ಗಂಟೆ ಬೇಯಿಸಿ.

ಬೆಂದಿದೆ ಎಂದು ತಿಳಿಯುವುದು ಹೇಗೆ?
ಒಂದು ಚಮಚವನ್ನು ಆಳವಾಗಿ ಚುಚ್ಚಿ ತೆಗೆದಾಗ ಚಮಚದಲ್ಲಿ ಹಿಟ್ಟು ಅಂಟಿಕೊಂಡಿರಬಾರದು, ಬೆಂದಿದೆ ಎಂದೇ ತಿಳಿಯಿರಿ.
ತೆಂಗಿನತುರಿ ಹಾಗೂ ದಪ್ಪ ಮಜ್ಜಿಗೆಯ ಬಳಕೆಯಿಂದ ಪತ್ರೊಡೆ ಮೃದುವಾಗಿ ಇಡ್ಲಿಯಂತೆ ಬರುವುದು.
ಕೆಸುವಿನ ಸೊಪ್ಪು ಜಾಸ್ತಿ ಇದ್ದಷ್ಟೂ ಪತ್ರೊಡೆ ಮೃದುವಾಗಿ ಬರುತ್ತದೆ. ಚಿಕ್ಕದಾಗಿ ಕತ್ತರಿಸಿದಷ್ಟೂ ಚೆನ್ನ.
ಬಾಳೆ ಎಲೆ ಯಾ ಇನ್ಯಾವುದೇ ಎಲೆ ಲಭ್ಯವಿಲ್ಲವೆಂದು ಚಿಂತಿಸದಿರಿ, ತಟ್ಟೆಯಲ್ಲಿ ತುಂಬಿಸಿ ಗುಜರಾತಿ ಧೋಕ್ಲಾ ಮಾದರಿಯಲ್ಲಿ ಬೇಯಿಸಿ. ಬೇಯಲು ನೀರು ಕುದಿದ ನಂತರ ಅಂದಾಜು ಅರ್ಧ ಗಂಟೆ ಬೇಕು.
ಮಳೆಗಾಲದ ಕಾಡು ಕೆಸುವಿನ ಎಲೆಗಳು ಇಪ್ಪತ್ತು - ಇಪ್ಪತೈದು ಬೇಕಾದೀತು, ಎಲೆಗಳ ಗಾತ್ರದ ಮೇಲೆ ಸಂಖ್ಯೆ ಅವಲಂಬಿಸಿದೆ.
ಕರಿ ಕೆಸುವಿನ ಎಲೆಗಳು ಗಾತ್ರದಲ್ಲಿ ದೊಡ್ಡದಾಗಿರುತ್ತವೆ, ಇಂತಹ ಎಲೆಗಳು ಮೂರು ಯಾ ನಾಲ್ಕು ಸಿಕ್ಕಿದರೂ ಸಾಕು, ಪತ್ರೊಡೆ ಮಾಡಬಹುದು.
ಕರಿಕೆಸು ಎಲೆಗಳನ್ನು ಕತ್ತರಿಸುವಾಗ ದಂಟುಗಳನ್ನು ತೆಗೆದು ಇಟ್ಟುಕೊಳ್ಳಿ, ಎರಡು ದಿನ ಬಿಟ್ಟು ಬೋಳು ಹುಳಿ ಮಾಡಬಹುದು.
ಕೆಸುವಿನೆಲೆ ಜಾಸ್ತಿ ಆಯ್ತೇನೋ ಎಂದು ಚಿಂತಿಸಬೇಕಿಲ್ಲ, ಮಿಕ್ಸಿಯಲ್ಲಿ ಚಿಕ್ಕದಾಗಿ ಪುಡಿ ಮಾಡ್ಬಿಟ್ಟು ಹಿಟ್ಟಿಗೆ ಸೇರಿಸಿ. ಹುಣಸೆಯ ಹುಳಿ ಹಾಗೂ ಮಜ್ಜಿಗೆ ಇರುವುದರಿಂದ ತುರಿಸುವ ಭಯವಿಲ್ಲ. ಗೌರತ್ತೆಯ ಸಲಹೆಯಂತೆ ನನ್ನ ಕೆಸುವಿನ ಸೊಪ್ಪು ಮಿಕ್ಸಿಯಲ್ಲಿ ಪುಡಿ ಪುಡಿ ಆಗ್ಬಿಟ್ಟು ಹಿಟ್ಟಿನೊಂದಿಗೆ ಸೇರಿದೆ. ಅರ್ಧಾಂಶ ಸೊಪ್ಪನ್ನು ಮಿಕ್ಸಿಗೆ ಹಾಕಿ, ಉಳಿದರ್ಧ ಚೂರಿಯಲ್ಲಿ ಕೊಚ್ಚಿಕೊಂಡು ಕೂಡಾ ಹಾಕಿದರೂ ಆದೀತು.

ಬೆಂದಿದೆ, ರಾತ್ರಿಯೂಟದ ಸಮಯ, ಒಂದೇ ಗಾತ್ರದಲ್ಲಿ ಕತ್ತರಿಸಿ, ಊಟದೊಂದಿಗೆ ಸವಿಯಿರಿ.
“ ರುಚಿಯಾಗಿದೆ… “ ಶಿಫಾರಸ್ ಸಿಕ್ಕಿತು.


        


ಮುಂಜಾನೆಯ ತಿಂಡಿಗಾಗಿ ನಮ್ಮ ಪತ್ರೊಡೆ ಹುಡಿ ಹುಡಿ ಆಯ್ತು, ಬಾಣಲೆಗೆ ನಾಲ್ಕು ಚಮಚ ಎಣ್ಣೆ ಎರೆದು, ಒಗ್ಗರಣೆ ಸಾಹಿತ್ಯಗಳನ್ನು ಉದುರಿಸಿ, ಬೆಲ್ಲದ ಹುಡಿ, ತುಸು ಉಪ್ಪು ನೀರಿನಲ್ಲಿ ಕರಗಿಸಿ ಎರೆದು, ಪತ್ರೊಡೆ ಹುಡಿಯನ್ನು ಹಾಕಿ, ಮೇಲಿಂದ ಕಾಯಿತುರಿ ಹಾಕಿ, ಸೌಟಾಡಿಸಿ ಸ್ವಲ್ಪ ಹೊತ್ತು ಮುಚ್ಚಿಟ್ಟು ಸ್ಟವ್ ಆರಿಸಿ, ಪತ್ರೊಡೆಯ ಸಿಹಿ ಉಪ್ಕರಿ ಸಿದ್ಧವಾಗಿದೆ.

ಪತ್ರೊಡೆ ಧೋಕ್ಲಾ

ಇದು ಸಂಜೆಯ ಚಹಾಕೂಟಕ್ಕಾಗಿ,
ಪತ್ರೊಡೆಯನ್ನು ಒಂದೇ ಗಾತ್ರದಲ್ಲಿ ಚೂರಿಯ ಸಹಾಯದಿಂದ ಕತ್ತರಿಸುವುದು.
ಬಾಣಲೆ ಬಿಸಿಗಿಟ್ಟು ಎಣ್ಣೆ ಯಾ ತುಪ್ಪ ಎರೆದು ಸಾಸಿವೆ ಸಿಡಿಸಿ ಪತ್ರೊಡೆ ಹೋಳುಗಳನ್ನು ಹಾಕಿ, ಒಂದೆರಡು ಚಮಚ ಸಕ್ಕರೆ ಉದುರಿಸಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಬಿಸಿ ಬಿಸಿಯಾಗಿ ತಿನ್ನಿರಿ. ಪತ್ರೊಡೆ ಧೋಕ್ಲಾ ಅನ್ನಿ.

         
ಪತ್ರೊಡೆಯ ತಿನಿಸನ್ನು ಚಹಾ ಜೊತೆ ಮೆಲ್ಲುತ್ತ “ ಹೌದೂ, ಇನ್ನೂ ಉಂಟಲ್ಲ ಪತ್ರೊಡೆ ಅಟ್ಟಿನಳಗೆಯಲ್ಲಿ? “ ಎಂದು ವಿಚಾರಿಸಿದ ಗೌರತ್ತೆ, “ ನಾಳೆ ಹೀಗೆ ಕಟ್ ಕಟ್ ಮಾಡಿ ಪತ್ರೊಡೆ ಸಾಂಬಾರ್ ಮಾಡಬಹುದಲ್ಲ… “

“ ಅದನ್ನೂ ಮಾಡುವ, ಮೇಲಾರ, ಜೀರಿಗೆ ಬೆಂದಿಯೂ ಆದೀತಲ್ಲ.. “

“ ಅದೆಲ್ಲ ಬೇಡ, ಸಾಂಬಾರ್ ಮಾಡು.. ತೊಗರಿಬೇಳೆ ಹಾಕಿ, ಸಾಂಬಾರ್ ಹುಡಿ ಉಂಟಲ್ಲ... ಬೆಳ್ಳುಳ್ಳಿ ಒಗ್ಗರಣೆ ಇರಲಿ. “

ಪತ್ರೊಡೆಯ ಪುಳಿ ಕೊಳಂಬು

ಮಾಡಿದ್ದು ಹೇಗೆ?
ಚೌಕಾಕೃತಿಯಲ್ಲಿ ಕತ್ತರಿಸಿದ ಪತ್ರೊಡೆ ತುಂಡುಗಳು, ಹತ್ತು - ಹನ್ನೆರಡು ಸಾಕು.
ಒಂದು ಹಿಡಿ ಬಟಾಣಿಕಾಳು ನೆನೆಸಿ, ತೊಗರಿಬೇಳೆಯೊಂದಿಗೆ ಬೇಯಿಸಿಕೊಳ್ಳುವುದು.
ಬೆಂದ ಬೇಳೆಗೆ ಹಿತವಾಗುವಷ್ಟು ಹುಣಸೆ ರಸ ಹಾಗೂ ಉಪ್ಪು ಮತ್ತು ಬೆಲ್ಲ ಹಾಕುವುದು.
ಒಂದು ಚಮಚ ಸಾಂಬಾರಿನ ಹುಡಿ ಹಾಕುವುದು.
ಅಗತ್ಯವಿದ್ದ ಹಾಗೆ ನೀರು ಎರೆದು ಕುದಿಯಲು ಇಡುವುದು.
ಕುದಿಯುತ್ತಿದ್ದ ಹಾಗೆ ಪತ್ರೊಡೆ ತುಂಡುಗಳನ್ನು ಹಾಕುವುದು.
ಜಜ್ಜಿದ ಬೆಳ್ಳುಳ್ಳಿಯ ಒಗ್ಗರಣೆ ತುಪ್ಪದಲ್ಲಿ ಕೊಡುವುದು.
ಕೊತ್ತಂಬರಿ ಸೊಪ್ಪು ಹಾಕಿ ಅಲಂಕರಿಸುವುದು.



ಪತ್ರೊಡೆಯ ಪೋಡಿ

ಕಡ್ಲೆ ಹಿಟ್ಟು ಹಾಗೂ ಅಕ್ಕಿಹಿಟ್ಟು ಬೆರೆಸಿ ನೀರೆರೆದು ಇಡ್ಲಿ ಹಿಟ್ಟಿನ ಸಾಂದ್ರತೆಗೆ ತಂದು, ರುಚಿಗೆ ಉಪ್ಪು, ಬೇಕಿದ್ದರೆ ಖಾರದ ಪುಡಿ ಯಾ ಗರಂ ಮಸಾಲೆ ಹಾಕಿ ಪರಿಮಳಯುಕ್ತವಾಗಿಸಿ, ಪತ್ರೊಡೆ ಹೋಳುಗಳನ್ನು ಈ ಹಿಟ್ಟಿನಲ್ಲಿ ಮುಳುಗಿಸಿ ಎಣ್ಣೆಯಲ್ಲಿ ಕರಿದರೆ ಪತ್ರೊಡೆ ಪೋಡಿ ಯಾ ಪಕೋಡ ಸಿದ್ಧ.

ವಿಟಮಿನ್ ಗಳ ಆಗರ, ಎ ಹಾಗೂ ಸಿ ವಿಟಮಿನ್ ಅಲ್ಲದೆ ಬಿ ಕಾಂಪ್ಲೆಕ್ಸ್ ಅಧಿಕವಾಗಿ ಹೊಂದಿರುವ ಎಲೆಗಳು.
ಮ್ಯಾಂಗನೀಸ್, ಕಾಪರ್, ಪೊಟಾಶಿಯಂ, ಕಬ್ಬಿಣದ ಧಾತುಗಳಿಂದ ಕೂಡಿವೆ ಕೆಸುವಿನ ಎಲೆ, ಕ್ಯಾಲ್ಸಿಯಂ ಕೂಡಾ ಪಡೆಯುವಿರಿ.
ಅತ್ಯಲ್ಪ ಪ್ರಮಾಣದಲ್ಲಿ ಕೊಬ್ಬು ಇರುವ ಈ ಎಲೆಗಳ ಸೇವನೆ ದೇಹತೂಕ ನಿವಾರಕವೂ ಹೌದು.
ವಿಟಮಿನ್ ಕೊರತೆ ಇಲ್ಲಿ ಇಲ್ಲ,
ರಕ್ತಹೀನತೆಯ ಬಳಲಿಕೆ ಬಾಧಿಸದು,
ಬೊಜ್ಜು ತುಂಬಿ, ಮೈಭಾರ ಇಳಿಸುವ ಸಾಹಸಕ್ಕೆ ಕೆಸುವಿನೆಲೆ ನಿಮಗೆ ನೆರವಾಗಲಿದೆ.
ನಾರುಯುಕ್ತ ಎಲೆಗಳು, ಮಲಬದ್ಧತೆಯ ಸಮಸ್ಯೆಗೆ ಪರಿಹಾರ.

ಸೊಪ್ಪನ್ನು ಹಸಿಹಸಿಯಾಗಿ ತಿನ್ನಲು ಬಾರದು, ಬೇಯಿಸಿದರೂ ಕೆಲವೊಂದು ಜಾತಿಯ ಎಲೆಗಳು ನಾಲಿಗೆ ತುರಿಕೆಯುಂಟು ಮಾಡುವಂತಹವು. ತುರಿಕೆ ಯಾ ನವೆ ಹೋಗಲಾಡಿಸಲು ನಾವು ಹುಣಸೆಹುಳಿ, ಮಜ್ಜಿಗೆ, ಬೀಂಬುಳಿ ಹಣ್ಣು ಇತ್ಯಾದಿ ಹುಳಿಯುಕ್ತ ಪದಾರ್ಥಗಳಿಂದಲೇ ಇದರ ಅಡುಗೆ ಮಾಡಬೇಕಾಗುತ್ತದೆ.

Colocasia escalenta ಹೆಸರಿನಿಂದ ಶೋಭಿಸುವ ಕೆಸು, ನೂರಾರು ಜಾತಿಗಳನ್ನೂ ಹೊಂದಿದೆ. ಗೆಡ್ಡೆಯೂ ಆಹಾರವಸ್ತು. ಕೈದೋಟದಲ್ಲಿ ಬೆಳೆಸಬಹುದಾದ ಒಂದು ಅಲಂಕಾರಿಕ ಸಸ್ಯ.

         





       
         

Saturday 15 September 2018

ಹಬ್ಬದ ಪಂಚಕಜ್ಜಾಯ




          


ಅಮ್ಮ, ಮುಂದಿನವಾರ ಚೌತಿ ಬರ್ತಾ ಇದೆ, ಗೊತ್ತಲ್ಲ.. “
“ ಗೊತ್ತೂ.. “
“ ನಾವ್ಯಾರೂ ಮನೆಯಲ್ಲಿಲ್ಲ, ಅದೂ ಗೊತ್ತಲ್ಲ... ಮೊದಲಿನ ಹಾಗೆ ಹಬ್ಬದ ಅಡುಗೆ ಮಾಡಿ ಒದ್ದಾಡಬೇಡ. “
“ ಏನೂ ಮಾಡದಿದ್ರೆ ಹೇಗೆ, ಒಂದ್ ಪಾಯಸ ಮಾಡಿ... “
“ ಹ್ಞಾ, ಸರಿ... ನನ್ನ ಮೆಟ್ರೋ ಸ್ಟೇಶನ್ ಬಂತು, ಸಂಜೆ ಮಾತಾಡೋಣ. “ ಎನ್ನುವಲ್ಲಿಗೆ ಮಧು ಹಾಗೂ ನನ್ನ ಮಾತುಕತೆಗೆ ಬ್ರೇಕ್ ಬಿತ್ತು.

ಸಂಜೆಯ ಚಹಾ ಆದ ನಂತರ ಹಾಲು ತರಲಿಕ್ಕೆ ಹೊರಟ ಮನೆ ಯಜಮಾನರ ಕೈಗೆ ನನ್ನ ಲಿಸ್ಟ್ ಬರೆದಿದ್ದನ್ನು ಕೊಟ್ಟೆ.
“ ಇದೇನು ದ್ರಾಕ್ಷಿ ಗೇರುಬೀಜ ಅಂತ ಬರೆದಿದ್ದೀಯಲ್ಲ... “
“ ಅದು ಚೌತಿಗೆ. “
“ ಹುರಿಗಡಲೆ ಬೇಡವೇ ? “
“ ಅದನ್ನೂ ತನ್ನೀ. “

ಮೊದಲಿನಿಂದಲೂ ನಮ್ಮ ಮನೆಯ ಚೌತಿಗೆ ಹುರಿಗಡಲೆಯ ಪಂಚಕಜ್ಜಾಯ ಆಗಲೇಬೇಕು. ಮಾವನವರು ಇದ್ದಾಗ ಕಿಲೋ ಲೆಕ್ಕದಲ್ಲಿ ಹುರಿಗಡಲೆ ಬರುತ್ತಿತ್ತು. ಪಂಚಕಜ್ಜಾಯವು ಮನೆಮಂದಿಗೆ ಮಾತ್ರವಲ್ಲದೆ ಆಳುಕಾಳುಗಳಿಗೂ, ಸಂಜೆಯ ಚಹಾಕೂಟಕ್ಕೆ ಬರುವ ಖಾಯಂ ಅತಿಥಿಗಳಿಗೂ ಹಂಚಲು ವಿನಿಯೋಗವಾಗುತ್ತಿತ್ತು.

ಈಗ ನಾವು ಒಂದು ಲೋಟ ಯಾ ಕುಡ್ತೆ ಅಳತೆಯಲ್ಲಿ ಹುರಿಗಡಲೆಯ ಪಂಚಕಜ್ಜಾಯ ಮಾಡುವವರಿದ್ದೇವೆ.
ಹೇಗೂ ಇದು ಹುರಿಗಡಲೆಯಾಗಿರುವುದರಿಂದ ಪುನಃ ಹುರಿಯಬೇಕಾಗಿಲ್ಲ. ಮಿಕ್ಸಿಯಲ್ಲಿ ತರಿತರಿಯಾಗಿ ಹುಡಿ ಮಾಡಿಕೊಳ್ಳುವುದು ಹಾಗೂ ಶುಭ್ರವಾದ ನೀರ ಹನಿಯೇನೂ ಇಲ್ಲದ ತಪಲೆಗೆ ಹಾಕಿಡುವುದು.
ಅಷ್ಟೇ ಪ್ರಮಾಣದ ಸಕ್ಕರೆ ಅಳೆದು ಹುಡಿ ಮಾಡುವುದು, ಅದೇ ತಪಲೆಗೆ ಹಾಕುವುದು.
ನಾನ್ ಸ್ಟಿಕ್ ಬಾಣಲೆಯಲ್ಲಿ ಒಂದು ಚಮಚ ಎಳ್ಳು ಹುರಿದು, ಗುಂಡುಕಲ್ಲಿನಲ್ಲಿ ಜಜ್ಜಿ ಹಾಕುವುದು.
ಒಂದು ಲೋಟ ತಾಜಾ ಅಂದರೆ ಆಗತಾನೇ ಒಡೆದ ಹಸಿ ತೆಂಗಿನಕಾಯಿಯ ತುರಿ, ಇದನ್ನು ಪರಿಮಳ ಬರುವಂತೆ ಬಾಣಲೆಯಲ್ಲಿ ಹುರಿಯಿರಿ, ತೆಂಗಿನತುರಿಯ ನೀರಿನಂಶವೆಲ್ಲ ಹೋಗಬೇಕು, ಹುರಿಯಲು ಎಣ್ಣೆ ಯಾ ತುಪ್ಪದ ಬಳಕೆ ಇಲ್ಲಿ ಇಲ್ಲ, ತೆಂಗಿನಕಾಯಿಯಲ್ಲಿ ಸ್ವಾಭಾವಿಕವಾಗಿ ಇರುವ ಜಿಡ್ಡು ಸಾಕಾಗುತ್ತದೆ. ಹುರಿದ ತೆಂಗಿನತುರಿಯನ್ನು ತಪಲೆಗೆ ಹಾಕಿಕೊಳ್ಳುವುದು.
ಅದೇ ಬಾಣಲೆಗೆ ಒಂದೆರಡು ಚಮಚ ತುಪ್ಪ ಎರೆದು, ಗೇರುಬೀಜವನ್ನು ಹುರಿದು, ಒಣದ್ರಾಕ್ಷಿ ಗೇರುಬೀಜಗಳಿಗೆ ಇಷ್ಟೇ ಹಾಕಬೇಕೆಂಬ ಲೆಕ್ಕಾಚಾರ ಇಲ್ಲಿಲ್ಲ, ಕೈಯಲ್ಲಿ ಬಂದಷ್ಟು ಹಾಕುವುದು.

ಈಗ ನಮ್ಮ ಪಂಚಕಜ್ಜಾಯದಲ್ಲಿ ಹುರಿಗಡಲೆ, ಸಕ್ಕರೆ, ಎಳ್ಳು, ತೆಂಗಿನತುರಿ ಹಾಗೂ ತುಪ್ಪ ಸೇರಿದಾಗ ಐದು ವಿಧ ವಸ್ತುಗಳು ಕೂಡಿವೆ.  
ಇದ್ದರೆ ಜೇನು ಒಂದೆರಡು ಚಮಚ ಎರೆಯಿರಿ.
 ಏಲಕ್ಕಿಯನ್ನೂ ಗುದ್ದಿ ಹಾಕಲಡ್ಡಿಯಿಲ್ಲ.
ಎಲ್ಲವನ್ನೂ ಮಿಶ್ರಗೊಳಿಸುವಲ್ಲಿಗೆ,
ದೇವರ ಮುಂದೆ ದೀಪ ಹಚ್ಚಿಟ್ಟು,
ನಮಸ್ಕರಿಸಿ,
ಪಂಚಕಜ್ಜಾಯ ತಿನ್ನಿರಿ.

        

ಅಡುಗೆಮನೆಯಲ್ಲಿ ಹುರಿಗಡಲೆ ಯಾವಾಗಲೂ ಇರಬೇಕು. ತೆಂಗಿನತುರಿಯೊಂದಿಗೆ ಹುರಿಗಡಲೆಯನ್ನೂ ಹಾಕಿಕೊಂಡು ಸಾರು, ರಸಂ, ಚಟ್ಣಿ. ಇತ್ಯಾದಿ ಅಡುಗೆಗೆ ಯೋಗ್ಯ ಸಿದ್ಧವಸ್ತು.
ನಿಧಾನಗತಿಯಲ್ಲಿ ಜೀರ್ಣವಾಗುವ ಹುರಿಗಡಲೆ ಡಯಾಬಿಟೀಸ್ ರೋಗಿಗಳಿಗೆ ಆದರ್ಶಪ್ರಾಯವಾದದ್ದು. ಡಯಟಿಂಗ್ ಮಾಡಿ ತೂಕ ಇಳಿಸುವ ಸಾಹಸಿಗಳಿಗೂ ಉತ್ತಮ.
ಕೊಬ್ಬುರಹಿತವಾದ ಹುರಿಗಡಲೆ, ಹೃದಯವ್ಯಾಧಿಯನ್ನೂ ದೂರ ತಳ್ಳುವುದು.
ಹುರಿಗಡಲೆ ತಿನ್ನುವುದರಿಂದ ಕ್ಯಾಲ್ಸಿಯಂ, ಪೊಟಾಶಿಯಂ, ಮ್ಯಾಗ್ನೇಶಿಯಂ ಎಂಬಂತಹ ಖನಿಜಗಳು ಉಚಿತವಾಗಿ ಲಭ್ಯ.
ಪ್ರೊಟೀನ್, ಫೈಬರ್ ಸಮೃಧ್ಧಿಯಿಂದ ದೇಹದ ಶಕ್ತಿವರ್ಧಕ ನಮ್ಮ ಹುರಿಗಡಲೆ.

“ ಅಮ್ಮ, ತಂದಿರೋದನ್ನೆಲ್ಲ ಪಂಚಕಜ್ಜಾಯ ಮಾಡಿ ಇಡಬೇಡ, ನಮಗೆ ಹಾಗೇ ತಿನ್ನಲಿಕ್ಕೂ ಸ್ವಲ್ಪ ಇಟ್ಟಿರು… “ ಮಧು ಚಿಕ್ಕವನಿದ್ದಾಗ ಹೇಳುತ್ತಿದ್ದ ಡಯಲಾಗ್ ಈಗ ನೆನಪಾಯ್ತು.




Saturday 8 September 2018

ಬೀಟ್ರೂಟು ಪಚ್ಚಡಿ




        



ಬೀಟ್ರೂಟ್ ಎಂಬ ಕೆಂಬಣ್ಣದ ಗೆಡ್ಡೆ ತರಕಾರಿ ತಂದಿದೆ, ಕಳೆದ ವಾರ ತರಕಾರಿ ತಂದಾಗಲೂ ಬಂದಿತ್ತು, ಅದನ್ನೇ ಅಡುಗೆ ಮಾಡಿ ಆಗಿಲ್ಲ, ತಂದಿದ್ದು ಹೆಚ್ಚಾಯ್ತು ಅನ್ನೋ ಹಾಗಿಲ್ಲ, ಬೀಟ್ರೂಟು ಅಷ್ಟು ಬೇಗನೆ ಕೆಡುವ ತರಕಾರಿಯೂ ಅಲ್ಲ, ಇರುತ್ತದೆ ಬಿಡಿ.

ದೋಸೆ ಇಡ್ಲಿ ಹಿಟ್ಟುಗಳಿಗೆ ಒಂದೆರಡು ಚಮಚ ಹಿಟ್ಟು ಮಾಡಿ ಹಾಕಿದ್ರೂನೂ ಬಣ್ಣದ ತಿಂಡಿ ಅಂತ ತಿನ್ನಬಹುದು. ಬಣ್ಣದ ರೊಟ್ಟಿ ಮಾಡುವ ವಿಧಾನವನ್ನು ಈ ಮೊದಲೇ ಬರೆದಿದ್ದೇನೆ, ಆಸಕ್ತರು ಹುಡುಕಿ ಓದಿರಿ.

ಈಗ ನಾವು ಬೀಟ್ರೂಟು ಪಚ್ಚಡಿ ಮಾಡೋಣ.
ಅರ್ಧ ಕಡಿ ತೆಂಗಿನತುರಿ,
ಎರಡು ಹಸಿಮೆಣಸು, ಗಾಂಧಾರಿ ಮೆಣಸು ಇದ್ದರೆ ಅದೂ ಆದೀತು.
ಒಂದು ತುಂಡು ಸಿಪ್ಪೆ ಹೆರೆದ ಶುಂಠಿ,
ನಾಲ್ಕಾರು ಕಾಳುಮೆಣಸು,
ಅರ್ಧ ಲೋಟ ಬೀಟ್ರೂಟು ಹೋಳುಗಳು, ಚಿಕ್ಕದಾಗಿ ಹೆಚ್ಚಿದರೆ ಉತ್ತಮ.
ರುಚಿಗೆ ಉಪ್ಪು,
 ರುಚಿಗೆ ತಕ್ಕಷ್ಟು ಹುಣಸೆಯ ಹಣ್ಣು, ನನ್ನ ಬಳಿ ಹಿತ್ತಲ ಬೆಳೆಯಾದ ಕರಂಡೆ ಹಣ್ಣು ( ಕವಳೇ ಹಣ್ಣು ) ಇದ್ದಿತು, ಎರಡು ಹಣ್ಣು ಸಾಕಾಯ್ತು. ಈಗ ಅಂಬಟೆಯ ಕಾಲ ಅಲ್ವೇ, ಇದ್ದರೆ ಅದನ್ನೇ ಹಾಕಬಹುದು.
ಎಲ್ಲವನ್ನೂ ಅಗತ್ಯಕ್ಕೆ ತಕ್ಕಂತೆ ನೀರು ಎರೆದು ಅರೆಯಿರಿ, ಕರಿಬೇವಿನ ಒಗ್ಗರಣೆ ಕೊಡುವಲ್ಲಿಗೆ ಬೀಟ್ರೂಟು ಪಚ್ಚಡಿ ಬಂದಿತು. ದೋಸೆ ಇಡ್ಲಿ ಚಪಾತಿಗಳಿಗೆ ಹೊಂದಿಸಿ ತಿನ್ನಬಹುದಾಗಿದೆ.

ಹುಳಿ ಹಾಕಲಿಲ್ಲವೇ, ಒಂದು ಲೋಟ ಸಿಹಿ ಮೊಸರು ಎರೆಯಿರಿ, ಬೀಟ್ರೂಟು ಗೊಜ್ಜು ಬಂದಿತು. ಅನ್ನದೊಂದಿಗೆ ಕಲಸಿ ತಿನ್ನಲು ಯೋಗ್ಯವಾದ ಈ ವ್ಯಂಜನ ಒಲೆಯನ್ನು ಬಯಸದ ಅಡುಗೆಯಾಗಿದೆ.

 88 ಶೇಕಡಾ ನೀರು ಹೊಂದಿರುವ ಈ ಗೆಡ್ಡೆ ತರಕಾರಿಯಲ್ಲಿ ಕೊಬ್ಬಿನಂಶ ಏನೇನೂ ಇಲ್ಲ. ಅಲ್ಪ ಪ್ರಮಾಣದಲ್ಲಿ ವಿಟಮಿನ್ B9, ಸೋಡಿಯಂ, ಮ್ಯಾಂಗನೀಸ್, ಕಾರ್ಬೋಹೈಡ್ರೇಟ್ ಹಾಗೂ ಇನ್ನಿತರ ಖನಿಜಾಂಶಗಳಿಂದ ಕೂಡಿದ ಬೀಟ್ರೂಟು ಎಂಬ Beta vulgaris ಸಸ್ಯಸಂಕುಲವು ಹರಿವೆಯ Amaranthaceae ಕುಟುಂಬವಾಸಿ. ಬೀಟ್ರೂಟು ಎಲೆಗಳನ್ನು ಪಾಲಕ್ ಸೊಪ್ಪಿನಂತೆ ಅಡುಗೆಗೆ ಬಳಸಬಹುದಾಗಿದೆ.